ಮಂಗಳವಾರ, ಜನವರಿ 1, 2013

ಹೀಗೊಬ್ಬ ಭೈರವ ಭಕ್ತ


ಆತ್ಮೀಯ ಓದುಗರೆಲ್ಲರಿಗೂ ನೂತನ ವರ್ಷದ ಶುಭಾಶಯಗಳು 


ಸಿದ್ಧರಾಮಪುರದ ಕಾಲಭೈರವ ಮಂದಿರ



ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಬುಕ್ಕರಾಯಸಮುದ್ರ ಮಂಡಲದಲ್ಲಿ ಒಂದು ಪುಟ್ಟ ಗ್ರಾಮವಿದೆ. ಅದರ ಹೆಸರು ಸಿದ್ಧರಾಮಪುರ. ಅಲ್ಲಿ ಒಂದು ಭೈರವನ ಚಿಕ್ಕ ದೇವಾಲಯವಿದೆ. ಅದು ತನ್ನ ಐತಿಹಾಸಿಕತೆಯಿಂದಲಾಗಲೀ, ಶಿಲ್ಪಕಲಾವೈಭವದಿಂದಾಗಲೀ ಪ್ರಸಿದ್ಧವಾಗಲಿಲ್ಲ. ಬದಲಾಗಿ ಭೈರವನ ಪರಮ ಭಕ್ತನೊಬ್ಬ ಮಾಡಿದ ಸಾಧನೆ ಮತ್ತು ಅವರ ಜನೋಪಯೋಗೀ ಕೆಲಸಗಳಿಂದ ಅದೀಗ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಇದರ ನಿರ್ಮಾತೃ ಇದೇ ಗ್ರಾಮದ ನಿವಾಸಿಯಾಗಿದ್ದ ಶ್ರೀ ತಿಪ್ಪಲೂರು ಪೆದ್ದ ವೆಂಕಟರೆಡ್ಡಿ. ಅವರು ಭೈರವನ ಪರಮಭಕ್ತರಾಗಿದ್ದರು. ಭೈರವನ ಸಾಧಕರು ಪಡೆದ ಫಲಗಳು ಸಾಮಾಜಿಕವಾಗಿ ಮಾತ್ರವಲ್ಲದೆ, ಮೂಕಪಶುಗಳ ನೆರವಿಗೆ ಹೇಗೆ ಒದಗಿ ಬಂದಿತೆನ್ನುವುದನ್ನು ಹೇಳುವ ಉದ್ದೇಶದಿಂದ ಇಲ್ಲಿ ಆ ಬಗ್ಗೆ ಒಂದು ಪ್ರಸ್ತಾಪವಿದೆ. ಭೈರವನ ಬಗ್ಗೆ ಅಪಾರ ಶ್ರದ್ಧೆ ಗೌರವಗಳನ್ನು ಹೊಂದಿದ್ದ ಅವರಿಗೆ ಭೈರವನ ಕೃಪೆಯಾಗಿತ್ತೆಂದು ಇಲ್ಲಿನ ಹಲವು ನಿವಾಸಿಗಳು ನಂಬಿದ್ದಾರೆ. ಅದರಂತೆ ಪೆದ್ದ ವೆಂಕಟರೆಡ್ಡಿಯವರ ಜೀವನದಲ್ಲಿ ನಡೆದ ಅನೇಕ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ. 


ರೆಡ್ಡಿಯವರು ಪಶುವೈದ್ಯವನ್ನು ಅರಿತಿದ್ದರು. ಅವರದು ಆಯುರ್ವೇದ ಪದ್ಧತಿ. ತಮ್ಮ ಗ್ರಾಮದ ಆಸುಪಾಸಿನಲ್ಲಿ ಯಾವುದೇ ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದರೂ, ಅವುಗಳನ್ನು ಸೂಕ್ತವಾಗಿ ಉಪಚರಿಸುತ್ತಿದ್ದರು. ಇದಕ್ಕೆಂದು ಅವರು ಪಡೆಯುತ್ತಿದ್ದ ಸಂಭಾವನೆಯೆಂದರೆ ಒಂದು ತೆಂಗಿನ ಕಾಯಿಯ ಬೆಲೆ ಮಾತ್ರ. ಅದನ್ನೂ ಅವರು ಭೈರವನ ನಿವೇದನೆಗೆಂದೇ ಬಳಸುತ್ತಿದ್ದರು. ತಮ್ಮ ಅಲೌಕಿಕ ಸಾಧನೆಯಿಂದಾಗಿ ಅವರಿಗೆ ಎಲ್ಲ ಪಶುಗಳ ರೋಗಗಳು ತಾನಾಗಿಯೇ ತಿಳಿಯುತ್ತಿತ್ತು. ಅವುಗಳ ವೇದನೆಯನ್ನು ನಿವಾರಿಸಲು ಗಂಟೆಗಟ್ಟಲೆ ಸಾಧನೆ ಮಾಡಿ ಶಕ್ತಿಯನ್ನು ಪಡೆಯುತ್ತಿದ್ದರು. ಅದೆಲ್ಲದರ ಮೂಲ ಶಕ್ತಿ ಭೈರವನೇ ಎಂದು ನಂಬಿದ್ದರು. ಶ್ರೀ ರೆಡ್ಡಿಯವರು ತಮ್ಮ ತೊಂಭತ್ತನೆಯ ವಯಸ್ಸಿನಲ್ಲಿ ತೀರಿಕೊಂಡರು. ಅವರ ಸಮಾಧಿಯನ್ನು ದೇವಾಲಯದ ಸಮೀಪವೇ ನಿರ್ಮಿಸಿ, ಯೋಗಿಗಳು, ಸನ್ಯಾಸಿಗಳಿಗೆ ನಡೆಸುವ ಮರಣೋತ್ತರ ವಿಧಿಗಳನ್ನು ಆಚರಿಸಿ, ಗೌರವ ಸಲ್ಲಿಸಲಾಯಿತು. ಗ್ರಾಮದ ಹೊರವಲಯದಲ್ಲಿ ಕಳೆದ ೨೯ರ ಏಪ್ರಿಲ್‌ನಲ್ಲಿ ಇಲ್ಲಿದ್ದ ಭೈರವನ ಚಿಕ್ಕ ಗುಡಿಯನ್ನು ಪುನರ್ ನಿರ್ಮಾಣಗೊಳಿಸಿ ಲೋಕಾರ್ಪಣೆ ಮಾಡಲಾಯಿತು. 

* * * * * * *

ಭಾನುವಾರ, ಡಿಸೆಂಬರ್ 2, 2012

ಭೈರವನ ಲಾಕ್ಷಣಿಕ ಸ್ವರೂಪಗಳು




ಭೈರವನ ಅಷ್ಟರೂಪಗಳು

ಈ ಹಿಂದಿನ ಸಂಚಿಕೆಗಳಲ್ಲಿ ಭೈರವನ ಅಷ್ಟರೂಪಗಳ ಬಗ್ಗೆ ಬರೆದಿದ್ದೆ. ಈಗ ಅವುಗಳ ಲಾಕ್ಷಣಿಕ ಸ್ವರೂಪಗಳನ್ನು ವಿವರಿಸುವ ಸಾಹಿತ್ಯ ದೊರಕಿದೆಯಾಗಿ ಅದನ್ನು ಇಲ್ಲಿ ನೀಡಿದ್ದೇನೆ. ಇದೇಕೆ ಮುಖ್ಯವಾಗುತ್ತದೆಯೆಂದರೆ, ಯಾವದೇ ದೇವತೆಯ ಮೂರ್ತಿಗಳನ್ನು ಕಡೆಯುವಾಗ ಶಿಲ್ಪಿಗೆ ಒಂದು ಸರಿಯಾದ ಆಧಾರ ಬೇಕಾಗುತ್ತದೆ. ಅಂಥ ವ್ಯವಸ್ಥೆಯನ್ನು ಪೂರ್ವಿಕರು ಧ್ಯಾನಶ್ಲೋಕವೆಂಬ ಕ್ರಮದಲ್ಲಿ ಒದಗಿಸಿರುತ್ತಾರೆ. ಅವುಗಳನ್ನು ಆಧರಿಸಿ ನಿರ್ಮಿಸಿದ ಮೂರ್ತಿಯು ಸರ್ವಾಂಗ ಸುಂದರವಾಗಿ ಮೂಡಿಬರಲು, ಆಯಾ ದೇವತೆಯ ಲಕ್ಷಣ, ಸ್ವರೂಪಗಳನ್ನು ಸವಿವರವಾಗಿ ಅವುಗಳಲ್ಲಿ ನೀಡಿರುತ್ತಾರೆ. ಇಂಥ ಒಂದು ಉತ್ತಮ ವ್ಯವಸ್ಥೆಯಿರುವ ಕಾರಣದಿಂದಲೇ, ದೇವ ವಿಗ್ರಹಗಳು ವಿರೂಪವಾಗದೇ, ಶಿಲ್ಪಿಯು ತನ್ನ ವೈಯುಕ್ತಿಕ ಅಭಿಪ್ರಾಯಗಳನ್ನು ಅದರಲ್ಲಿ ಮೂಡಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಗಣಪತಿಯ ವಿಗ್ರಹಗಳು ಇತ್ತೀಚೆಗೆ ತಳೆಯುತ್ತಿರುವ ಅವತಾರಗಳ ಹಿನ್ನೆಲೆಯಲ್ಲಿ ಈ ಪುರಾತನ ಕ್ರಮವನ್ನು ಪರಿಶೀಲಿಸಿದರೆ ಅದರ ಮಹತ್ವ ಅರಿವಾಗುತ್ತದೆ.

ಭೈರವನ ಮೂಲರೂಪವಾದ ಕ್ಷೇತ್ರಪಾಲ ಭೈರವನ ಲಕ್ಷಣಗಳೊಂದಿಗೆ ಆರಂಭವಾಗುವ ಈ ಸಾಹಿತ್ಯದಲ್ಲಿ ಆತನ ಇನ್ನಿತರ ಎಂಟು ರೂಪಗಳ ವಿವರಗಳಿವೆ. ಅದೇ ರೀತಿ, ಭೈರವನ ಆರಾಧನೆಯು ಆತನ ಸ್ತ್ರೀಪಾಲುದಾರರಿಲ್ಲದೆ ಪರಿಪೂರ್ಣವಾಗದು ಎಂಬ ಹಿನ್ನೆಲೆಯಲ್ಲಿ ಗಮನಿಸಿದರೆ, ಇಲ್ಲಿ ವಾರಾಹಿ, ಚಾಮುಂಡಾದಿ ಸಪ್ತ ಮಾತೃಕೆಯರ ಶಕ್ತಿ ಸಹಿತನಾಗಿರುವಂತೆ ಭೈರವನನ್ನು ವರ್ಣಿಸಲಾಗಿದೆ. 

ಈ ಶ್ಲೋಕಗಳು ಶೈವ, ವೈಷ್ಣವ ಪಾರಮ್ಯಗಳನ್ನು ಬಿಂಬಿಸುವ ಪರಿಪಾಠವಿದ್ದ ಕಾಲಕ್ಕಿಂತ ಹಿಂದಿನದು ಅಥವಾ ಆ ನಂತರದ ಸುಧಾರಣೆಯ ದಿನಗಳ ನಂತರ ಬಂದಿರಬಹುದೆಂದು ಊಹಿಸಲು ಸಮಾನ ಅವಕಾಶಗಳಿವೆ. ಏಕೆಂದರೆ ಈ ರಚನೆಯಲ್ಲಿ ಲಕ್ಷ್ಮೀ, ಗರುಡ, ಶಂಖ, ಚಕ್ರಗಳ ಪ್ರಸ್ತಾಪವಿದೆ. ಶೈವ ಪಾರಮ್ಯವನ್ನೇ ಬಿಂಬಿಸುವ ಇನ್ನೊಂದು ಭೈರವ ಸಹಸ್ರನಾಮದ ಪಠ್ಯವಿದೆ. ಅದನ್ನು ಅನುವಾದಿಸುತ್ತಿರುವಾಗ ಮೂಡಿದ ಭಾವಗಳನ್ನು ಪ್ರತ್ಯೇಕವಾಗಿ ಇನ್ನೊಂದು ಲೇಖನದಲ್ಲಿ ಮುಂದೆ ವಿವರಿಸುತ್ತೇನೆ. 


ಕ್ಷೇತ್ರಪಾಲ ಭೈರವ

      ರಕ್ತಜ್ವಾಲಾ ಜಟಾಧರಂ ಶಶಿ ಧಾರಣ ರಕ್ತಾಂಗ ತೇಜೋಮಯಂ |
      ಢಕ್ಕಾ ಶೂಲ ಕಪಾಲ ಪಾಶ ಗದಾ ಧಾರಣಂ ಭೈರವಂ ||
      ನಿರ್ವಾಣಂ ಗತವಾಹನಂ ತ್ರಿನಯನಂ ಚ ಆನಂದ ಕೋಲಾಹಲಂ |
      ವಂದೇ ಭೂತ ಪಿಶಾಚನಾಥ ವಟುಕಂ ಕ್ಷೇತ್ರಸ್ಯ ಪಾಲಂ ಶುಭಮ್ 

1. ಅಸಿತಾಂಗ ಭೈರವ

    ತ್ರಿನೇತ್ರಂ ವರದಂ ಶಾಂತಂ ಮುಂಡಮಾಲಾ ವಿಭೂಷಿತಮ್ |
    ಶ್ವೇತವರ್ಣಂ ಕೃಪಾಮೂರ್ತಿಂ ಭೈರವಂ ಕುಂಡಲೋಜ್ವಲಂ ||
    ಗದಾ ಕಪಾಲ ಸಂಯುಕ್ತಂ ಕುಮಾರಸ್ಯ ದಿಗಂಬರಂ |
    ಬಾಣಪಾತ್ರಂ ಚ ಶಂಖಂ ಚ ಅಕ್ಷಮಾಲಾಂ ಚ ಕುಂಡಲಂ |
    ನಾಗಯಜ್ಞೋಪವೀತಂ ಚ ಧಾರಿಣಂ ಸುವಿಭೂಷಿತಂ ||
    ಬ್ರಹ್ಮಣಿ ಶಕ್ತಿಸಹಿತಂ ಹಂಸಾರೂಢಂ ಸುರೂಪಿತಮ್ |
    ಸರ್ವಾಭೀಷ್ಟದಾತಂ ನಿತ್ಯಂ ಅಸಿತಾಂಗ ಭೈರವಂ ಭಜಾಮ್ಯಹಂ ||

2. ಕ್ರೋಧ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಗದಂ ಶಂಖಂ ಚ ಚಕ್ರಂ ಚ ಕಪಾಲ ಪಾತ್ರಂ ಚ ಧಾರಿಣಂ ||
    ಲಕ್ಷ್ಶಾ ಚ ಸಹಿತಂ ವಾಮೇ ಗರುಡಾಸನ ಸುಸ್ಥಿತಂ |
   ನೀಲವರ್ಣಂ ಮಹಾದೇವಂ ವಂದೇ ಶ್ರೀ ಕ್ರೋಧ ಭೈರವಂ ||

3. ಉನ್ಮತ್ತ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಹೇಮವರ್ಣಂ ಮಹಾದೇವಂ ಹಸ್ತಿವಾಹನ ಸುಸ್ಥಿತಮ್ ||
    ಗದಂ, ಕಪಾಲಂ, ಮುಸಲಂ ದಧಂತಂ ಖಡ್ಗಂ ತಥಾ |
    ವಾರಾಹೀ ಶಕ್ತಿ ಸಹಿತಂ ವಂದೇ ಉನ್ಮತ್ತ ಭೈರವಂ  ||

4. ರುರು (ಗುರು) ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ದಂಡಂ ಕೃಷ್ಣ ಮೃಗಂ ಪಾತ್ರಂ ಬಿಭ್ರಾಣಂ ಚಕ್ರಪಾನಕಮ್ ||
    ಮಾಹೇಶ್ವರ್ಯಾಯುಧಂ ದೇವಂ ವೃಷಾರೂಢ ಸ್ಥಿತವಾಹನಮ್ |
    ಶುದ್ಧ ಸ್ಫಟಿಕಂ ಶಂಕರಮ್ ತಂ ನಮಾಮಿ ರುರು ಭೈರವಮ್ ||

5. ಕಪಾಲ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಪಾಶಂ, ವಜ್ರಂ  ತಥಾ ಗದಾ ಪಾನ ಪಾತ್ರಂ ಚ ಧಾರಿಣಮ್ ||
    ಇಂದ್ರಾಣೀ ಶಕ್ತಿ ಸಹಿತಂ ಗಜವಾಹನ ಸಂಸ್ಥಿತಂ |
    ಕಪಾಲ ಭೈರವಂ ವಂದೇ ಪದ್ಮರಾಗ ಪ್ರಭಾಂ ಶುಭಮ್ ||

6. ಚಂಡ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಧನುರ್ಬಾಣಂ ಚ ಬಿಭ್ರಾಣಂ ಗದಾ ಪಾತ್ರಂ ತಥೈವ ಚ ||
    ಕೌಮಾರೀ ಶಕ್ತಿ ಸಹಿತಂ ಶಿಖಿ ವಾಹನ ಸುಸ್ಥಿತಮ್ ||
    ಗೌರೀವರ್ಣಾಯುಧಂ ದೇವಂ ವಂದೇ ಶ್ರೀ ಚಂಡ ಭೈರವಮ್ ||

7. ಭೀಷಣ ಬೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಗದಾ ಶೂಲಂ ಕಪಾಲಂ ಚ ಧಾರಿಣಂ ಮುಸಲಮ್ ತಥಾ ||
    ಚಾಮುಂಡಾ ಶಕ್ತಿ ಸಹಿತಂ ಪ್ರೇತವಾಹನ ಸಂಸ್ಥಿತಮ್ ||
    ರಕ್ತವರ್ಣಂ ಮಹಾದೇವಂ ವಂದೇ ಭೀಷಣ ಭೈರವಮ್ ||

8. ಸಂಹಾರ ಭೈರವ

    ದಶಬಾಹುಂ ತ್ರಿನೇತ್ರಂ ಚ ಸರ್ಪಯಜ್ಞೋಪವೀತಿನಂ |
    ದಂಷ್ಟ್ರ ಕರಾಳವದನಂ ಅಷ್ಟೈಶ್ವರ್ಯ ಪ್ರದಾಯಕಮ್ || 
    ದಿಗಂಬರಂ ಕುಮಾರಂ ಚ ಸಿಂಹವಾಹನ ಸಂಸ್ಥಿತಮ್ |
    ಶೂಲಂ ಡಮರುಗಂ ಶಂಖಂ ಗದಾ ಚಕ್ರಾಂ ಚ ಧಾರಿಣಮ್ ||
    ಪಾನ ಪಾತ್ರಂ ಚ ಖಟ್ವಾಂಗಂ ಪಾಶಮಂಕುಶಮೇವ  ಚ |
    ಉಗ್ರರೂಪಂ ಮದೋನ್ಮತ್ತಂ ಶಿರೋಮಾಲಾ ವಿಭೂಷಿತಮ್ ||
    ಚಂಡಿಕಾ ಶಕ್ತಿ ಸಹಿತಂ ಧ್ಯಾಯೇತ್ ಸಂಹಾರ ಭೈರವಮ್ ||

* * * * * * *


ಶುಕ್ರವಾರ, ನವೆಂಬರ್ 2, 2012

ಅಧಿಯಮನ್ ಕೋಟೆಯ ಕಾಲಭೈರವ ಮಂದಿರ


ಅಧಿಯಮನ್ ಕೋಟೆಯ ಕಾಲಭೈರವ ಮಂದಿರ

ಆತ್ಮೀಯ ಓದುಗರೆಲ್ಲರಿಗೂ ಐವತ್ತೇಳನೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಕಾಲಭೈರವನ ಮಂದಿರಗಳು ದಕ್ಷಿಣ ಭಾರತದಲ್ಲಿ ತೀರ ಅಪರೂಪವೆನ್ನಬೇಕು. ಏಕೆಂದರೆ ಬಹುತೇಕ ಶಿವದೇವಾಲಯಗಳ ಈಶಾನ್ಯದಲ್ಲಿ ಚಂಡೇಶ್ವರ ಅಥವಾ ಕಾಲಭೈರವನನ್ನು ಸ್ಥಾಪಿಸಿ, ಆತನು ಕ್ಷೇತ್ರರಕ್ಷಕನಾಗಿರಬೇಕೆಂಬುದೇ ಮುಖ್ಯ ಆಶಯ. ಆದರೆ ಕಾಲಭೈರವನಿಗೆಂದೇ ಪ್ರತ್ಯೇಕ ದೇವಾಲಯವು ಬೆಂಗಳೂರಿಗೆ ಸಮೀಪದಲ್ಲಿದೆ. ಬೆಂಗಳೂರಿಗೆ ೧೨೦ ಕಿ.ಮೀ ದೂರದಲ್ಲಿದೆ ಧರ್ಮಪುರಿ. ಇಲ್ಲಿಂದ ಏಳು ಕಿ.ಮೀ. ದೂರದಲ್ಲಿರುವುದು ಅಧಿಯಮನ ಕೋಟೆ. ಇದು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯವೆಂಬುದು ಸ್ಥಳೀಯ ಐತಿಹ್ಯ. 

ತಮಿಳುನಾಡಿನ ಅನೇಕ ಬೃಹತ್ ದೇಗುಲಗಳಂತೆ ಇದೇನೂ ಶಿಲ್ಪಕಲೆಯಿಂದ ಜನರನ್ನು ಸೆಳೆದುದಲ್ಲ. ಬದಲಾಗಿ ಜನರ ನಂಬಿಕೆ ಮತ್ತು ಅಲ್ಲಿ ನಡೆಯುವ ವಿಶಿಷ್ಟ ಪೂಜಾವಿಧಾನಗಳಿಂದ ಸ್ಥಳೀಯರಿಗಿಂತ ಹೊರರಾಜ್ಯದವರನ್ನು ಆಕರ್ಷಿಸುತ್ತಿದೆ. ವಿಶೇಷತಃ ಬೆಂಗಳೂರು ಮತ್ತು ಆಂಧ್ರ ಪ್ರದೇಶಗಳ ಭಕ್ತರು ಇಲ್ಲಿನ ಕಾಲಭೈರವನಿಗೆ ನಡೆದುಕೊಳ್ಳುವರು. ಈ ಊರನ್ನು ಹಿಂದೆ ಅಧಿಯಮನೆಂಬ ಅರಸನು ಆಳುತ್ತಿದ್ದನಂತೆ. ಆತನ ಕಾಲಭೈರವನ ಪರಮಭಕ್ತ. ಅವನು ಯುದ್ಧಕ್ಕೆ ಹೊರಡುವ ಮೊದಲು ಮತ್ತು ವಿಜಯಶಾಲಿಯಾಗಿ ಬಂದನಂತರ ಭೈರವನ ದರ್ಶನ ಪಡೆಯುತ್ತಿದ್ದನಂತೆ. ತನ್ನ ಆಯುಧಗಳನ್ನು ಭೈರವನ ಮಂದಿರದಲ್ಲಿ ಇರಿಸುತ್ತಿದ್ದನಂತೆ. ಭೈರವನ ಎಲ್ಲ ವಿಗ್ರಹಗಳಲ್ಲಿ ತ್ರಿಶೂಲವು ಅವನ ಆಯುಧವಾಗಿರುವುದನ್ನು ಕಾಣಬಹುದಾದರೆ, ಇಲ್ಲಿ ಮಾತ್ರ ತ್ರಿಶೂಲದ ಬದಲು ನೀಳವಾದ ಕತ್ತಿಯನ್ನು ಇರಿಸಲಾಗಿದೆ. ಈ ಖಡ್ಗವನ್ನು ಅಧಿಯಮನ್ ರಾಜನು ಅರ್ಪಿಸಿದ್ದಾದುದರಿಂದ ಇಂದಿಗೂ ಅದಕ್ಕೆ ಅಲ್ಲಿ ಪೂಜೆ ಸಲ್ಲುತ್ತಿದೆ. 

ಪ್ರತಿ ತಿಂಗಳ ಬಹುಳ ಅಷ್ಟಮಿಯು ಅಧಿಯಮನ್ ಕೋಟೆಯ ಕಾಲಭೈರವನ ಪೂಜೆಗೆ ಪ್ರಶಸ್ತವೆಂದು ಹೇಳಲಾಗುತ್ತದೆ. ಆ ಸಂದರ್ಭಗಳಲ್ಲಿ ಅಲ್ಲಿ ಕುಂಬಳಕಾಯಿನ ವ್ಯಾಪಾರಿಗಳು ಹೆಚ್ಚು ಸೇರುತ್ತಾರೆ. ಭರಪೂರ ವ್ಯಾಪಾರ ನಡೆಸುತ್ತಾರೆ.  ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ರಾಹುಕಾಲದ ಪೂಜೆಯೆಂಬ ವಿಶಿಷ್ಠ ಪದ್ಧತಿಯಿದೆ. ರಾಹುಕಾಲವಿರುವಾಗ ನಿಂಬೆಹಣ್ಣುಗಳನ್ನು ಅರ್ಧಕ್ಕೆ ಕತ್ತರಿಸಿ, ಅದರ ರಸವನ್ನು ಹೊರತೆಗೆದು, ಸಿಪ್ಪೆಯನ್ನು ಹಿಂದಕ್ಕೆ ಮಡಿಸಿ, ಅದರಲ್ಲಿ ಎಣ್ಣೆ ಬತ್ತಿಗಳನ್ನು ಬಳಸಿ ದೀಪಾರಾಧನೆ ಮಾಡುವರು. 

ಅಧಿಯಮನಕೋಟೆಯಲ್ಲಿ ಇದೇ ಪದ್ಧತಿ ಇನ್ನೊಂದು ರೂಪ ತಳೆದಿದೆ. ಅದೆಂದರೆ, ಇಲ್ಲಿ ಬೂದುಕುಂಬಳಕಾಯಿಯನ್ನು ಅರ್ಧಕ್ಕೆ ಕತ್ತರಿಸಿ, ಅದನ್ನು ತೊಳೆದು ಶುಚಿಗೊಳಿಸಿ, ಅದನ್ನು ಅರಿಶಿನ-ಕುಂಕುಮದಿಂದ ಅಲಂಕರಿಸುವರು.   ಮಧ್ಯಭಾಗದ ತಿರುಳನ್ನು ಸ್ವಲ್ಪತೆಗೆದು, ಹಣತೆಯಂತಾಗಿಸಿ, ಅದರಲ್ಲಿ ಎಳ್ಳೆಣ್ಣೆಯಲ್ಲಿ  ಕೆಂಪು ಬತ್ತಿಯನ್ನು ಇಟ್ಟು ದೀಪದಂತೆ ಹಚ್ಚುವರು. ಇದಲ್ಲದೆ ಇದರ ಜತೆಗೆ ತೆಂಗಿನಕಾಯಿ ಮತ್ತು ನಿಂಬೆಹಣ್ಣುಗಳನ್ನು ದೀಪದಂತೆ ಬಳಸುವರು. ಈ ಪದ್ಧತಿಯಲ್ಲಿ ಬಳಸಲಾಗುವ ಮೂರು ವಿಧದ ದೀಪಗಳಿಗೆ ಮೂರು ಮಹತ್ವಗಳಿವೆಯೆಂದು ಅಲ್ಲಿನ ಸ್ಥಳೀಕರು ಹೇಳುತ್ತಾರೆ. ಅದೆಂದರೆ ಕುಂಬಳಕಾಯಿನ ದೀಪಾರಾಧನೆಯಿಂದ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ತೆಂಗಿನಕಾಯಿನ ದೀಪದಿಂದ ವೈವಾಹಿಕ ಸಮಸ್ಯೆಗಳು, ವಿವಾಹದಲ್ಲಿ ವಿಳಂಬ ಮುಂತಾದ ಸಮಸ್ಯೆಗಳಿಗೆ ಪರಿಹಾರವಿರುವಂತೆಯೇ, ನಿಂಬೆ ಹಣ್ಣಿನಿಂದ ಹಚ್ಚಲಾಗುವ ದೀಪವು ಮಕ್ಕಳಲ್ಲಿ ವಿದ್ಯಾಭ್ಯಾಸದ ಕೊರತೆಗಳನ್ನು ನೀಗಿಸುವುದೆಂದು ನಂಬಿಕೆ. 

ಭೈರವನ ಹಲವು ರೂಪಗಳಲ್ಲಿ ಸ್ವರ್ಣಾಕರ್ಷಣ ಭೈರವನೆನ್ನುವುದೂ ಒಂದು ರೂಪ. ಇದರ ಮಹತ್ವವೆಂದರೆ, ಲೌಕಿಕ ಸಂಪತ್ತುಗಳಿಗೆ ಸಾಧನವಾದ ಬಂಗಾರವನ್ನು ಭೈರವನು ದಯಪಾಲಿಸುವನು. ಅದರ ಮೂರ್ತಸ್ವರೂಪವನ್ನು ಅಧಿಯಮನಕೋಟೆಯ ದೇಗುಲದಲ್ಲಿ ಕಾಣಬಹುದು. ಕೃಷ್ಣ ಅಷ್ಟಮಿಯಂದು ಪ್ರತಿ ತಿಂಗಳೂ ಜರುಗುವ ಪೂಜೆಯಲ್ಲಿ,  ಹಣಕಾಸು ವಿಷಯ ಸಂಬಂಧವಾಗಿ ಭೈರವನ ಕೃಪೆಗೆಂದು ಅಲ್ಲಿ ಭಕ್ತರು ಸೇರುತ್ತಾರೆ. ದೀಪಗಳನ್ನು ಹಿಡಿದು ಪ್ರದಕ್ಷಿಣೆ ಬರುವರು. ದೇವಾಲಯದ ಒಳ ಭಾಗದ ಪ್ರಾಂಗಣ ಅಷ್ಟೇನೂ ವಿಶಾಲವಾಗಿಲ್ಲವಾದ್ದರಿಂದ, ಹಾಗೂ ಬರುವ ಭಕ್ತರ ಸಂಖ್ಯೆ ಅಧಿಕವಾಗುತ್ತ ನಡೆದಿರುವುದರಿಂದ, ಹೊರ ಭಾಗದ ಅಂಗಳದಲ್ಲಿ ಭೈರವನಿಗೆ ಭಕ್ತರ ಸಾಮೂಹಿಕ ಆರತಿಯ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸೇರಿದ ಭಕ್ತರು ನಿಗದಿತ ಸಮಯದಲ್ಲಿ ಒಂದು ತಟ್ಟೆಯಲ್ಲಿಟ್ಟುಕೊಂಡ ಬೂದುಕುಂಬಳಕಾಯಿಯ ದೀಪ, ನಿಂಬೆಹಣ್ಣು ಮತ್ತು ತೆಂಗಿನಕಾಯಿಗಳ ದೀಪಗಳನ್ನು ಹಿಡಿದು, ಮನದಲ್ಲೇ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತ, ಭೈರವನಿಗೆ ಆರತಿ ಬೆಳಗುವರು. ಜತೆಯಲ್ಲೇ ದೃಷ್ಟಿ ಪರಿಹಾರಕ್ಕೆಂದು ಮೆಣಸಿನಕಾಯಿಗಳನ್ನೂ ಅರ್ಪಿಸುವರು. ದೇವಾಲಯದ ನಾಲ್ಕು ದಿಕ್ಕುಗಳೂ ದೀಪಗಳ ತಟ್ಟೆಗಳಿಂದ ತುಂಬಿಹೋಗಿರುತ್ತದೆ. ಸ್ಥಳೀಯ ಜ್ಯೋತಿಷಿಗಳು ಹೇಳುವಂತೆ ರವಿದಶೆಯ ಚಂದ್ರ ಭುಕ್ತಿಯಲ್ಲಿ, ರಾಹುದಶೆಯ ಕೇತು ಭುಕ್ತಿಯಲ್ಲಿ ಇಲ್ಲಿ ನಡೆಸುವ ದೀಪಾರಾಧನೆ ತುಂಬ ಫಲಕೊಡುತ್ತದೆ. ಏಕೆಂದರೆ ಇಲ್ಲಿ ೨೭ ನಕ್ಷತ್ರಗಳು, ೧೨ ರಾಶಿಗಳು ಮತ್ತು ನವಗ್ರಹಗಳು ಈ ಭೈರವನಲ್ಲಿ ಸನ್ನಿಹಿತವಾಗಿರುವುದು ವಿಶೇಷತೆಯೆನ್ನಲಾಗಿದೆ. 

ಮದರಾಸು, ಕೊಯಮತ್ತೂರು, ಪಾಂಡಿಚೇರಿ, ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರು ಮತ್ತು ಆಂಧ್ರಪ್ರದೇಶಗಳ ಭಕ್ತರು ಪ್ರತಿ ತಿಂಗಳೂ ಹೆಚ್ಚು ಹೆಚ್ಚಿಗೆ ಬರುತ್ತಿರುವುದರಿಂದ ದೇವಾಲಯ ಆಡಳಿತ ಮಂಡಲಿಯು  ಅವರ ವಸತಿಗೆಂದು ಇತ್ತೀಚೆಗೆ ವ್ಯವಸ್ಥೆಮಾಡುತ್ತಿದೆ. ಹಣ ಎಲ್ಲರಿಗೂ ಅವಶ್ಯವೇ ಸರಿ. ಅದರ ಅಧಿದೇವತೆ ಲಕ್ಷ್ಮಿಯೆಂದಾದರೂ, ಭೈರವನ ಸ್ವರ್ಣಾಕರ್ಷಣ ಶಕ್ತಿಯ ಪ್ರತೀಕವಿಲ್ಲಿದೆ. ಅದರ ಆರಾಧಕರು ತಮ್ಮ ನಂಬಿಕೆಯಿಂದ ಫಲಪಡೆದಿದ್ದೇವೆಂದು ಹೇಳುವ ಅನೇಕ ಉದಾಹರಣೆಗಳು ಅಲ್ಲಿ ಕಾಣಸಿಗುತ್ತವೆ. ಹೆಣ್ಣುದೇವರಲ್ಲಿ ಭದ್ರಕಾಳಿಗೆ ಇರುವ ಶಕ್ತಿ, ಸಾಮರ್ಥ್ಯಗಳು ಭೈರವನಿಗೆ ಈ ಕ್ಷೇತ್ರದಲ್ಲಿದೆಯೆಂದು ಹೇಳಲಾಗುತ್ತದೆ.  

* * * * * * *

ಬುಧವಾರ, ಅಕ್ಟೋಬರ್ 3, 2012

ಕಾಲಭೈರವ ಅಷ್ಟೋತ್ತರ ಶತನಾಮಾವಳಿ


ಶ್ರೀ ಕಾಲಭೈರವ ಅಷ್ಟೋತ್ತರ ಶತನಾಮಾವಳಿಯ ಸ್ತೋತ್ರ ರೂಪ ಮತ್ತು ಪದ

 ರೂಪಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಇದೇ ರೀತಿ ಮುಂದೆ, ಲಭ್ಯವಿರುವ ಇತರ

 ಸ್ತೋತ್ರ ಮತ್ತು ಸಹಸ್ರನಾಮಗಳನ್ನೂ ಪ್ರಕಟಿಸುವೆ. ಈ ಎಲ್ಲ ಸಾಹಿತ್ಯಗಳನ್ನು 

ಒದಗಿಸಿದವರು ಈ ಹಿಂದಿನ ಸಂಚಿಕೆಗಳಲ್ಲಿ ಪ್ರಸ್ತಾಪಿಸಲಾಗಿರುವ ಶ್ರೀಮತಿ ಕರೈನ್ 

ಲ್ಯಾಡ್ರೆಕ್‌ ರವರು. ಅವರು ರೋಮನ್ ಇಂಗ್ಲಿಷ್ ಲಿಪಿಯಲ್ಲಿ ಒದಗಿಸಿದ 

ಸಾಹಿತ್ಯವನ್ನು ಕನ್ನಡ ಲಿಪಿಗೆ ಪರಿವರ್ತನೆ ಮಾಡಿ ಪ್ರಕಟಿಸಿರುವೆ. ಇವುಗಳನ್ನು 

ಪೂಜಾ  ಕಾಲದಲ್ಲಿ ದಲ್ಲಿ ಯಥೋಚಿತವಾಗಿ ಬಳಸಬಹುದು.



ಬುಧವಾರ, ಆಗಸ್ಟ್ 1, 2012


ಕಾಶಿಯ ಕೊತ್ವಾಲ :  ಕಾಲಭೈರವ


ಭೈರವನನ್ನು ಕಾಶಿಯ ಕೊತ್ವಾಲನೆಂದು ಕರೆಯುವರಷ್ಟೆ.  ಆ ಪದದ ನಿಷ್ಪತ್ತಿ ಹೀಗಿದೆ. ಈ ಪದವು ಉರ್ದುಮೂಲದ್ದಾಗಿದ್ದರೂ, ಸಂಸ್ಕೃತದಲ್ಲಿ ಕೋಟ ಅಥವಾ ಕೋಷ್ಠ, ಪಾಲ ಎಂದರೆ ರಕ್ಷಕ ಎಂದಾಗುತ್ತದೆ. ಎಂದರೆ ಕೋಷ್ಠ - ಧನ ಕೋಶವನ್ನು ಪಾಲನೆಮಾಡುವವನು ಎಂದು ಅರ್ಥ. ಇದಕ್ಕೆ ಸಂವಾದಿಯಾಗಿ ಕೊತ್ವಾಲನೆಂಬ ಪದಕ್ಕೆ, ನಗರ ರಕ್ಷಕ ಅಥವಾ ನಗರ ನ್ಯಾಯಾಧೀಶ ಎಂದೂ ಅರ್ಥವಿದೆ. ಕಾಲಭೈರವನ ಈ ಕೊತ್ವಾಲ ಸ್ವರೂಪವನ್ನು ಆರಾಧಿಸುವ ಸಂತರನ್ನು ದಶನಾಮಿ ಸನ್ಯಾಸಿಗಳು ಮತ್ತು ಅವರ ಗುಂಪನ್ನು ಅಖಾಡಾ ಎಂದು ಕರೆಯಲಾಗುತ್ತದೆ. ಕಾಶಿಯಲ್ಲಿ ಕಾಲಭೈರವನು ಈಗಿರುವ ನೆಲೆಯನ್ನು ಕೊತ್ವಾಲ್‌ಪುರಿ ಎಂದು ಹೆಸರಿಸಲಾಗಿದೆ. ಇದಕ್ಕೆ ಪೂರಕವಾಗಿ ಕಾಲಭೈರವನ ಅಷ್ಟೋತ್ತರದಲ್ಲಿ ಆತನನ್ನು ದಂಡಪಾಣೀ ಎಂದು ಹೆಸರಿಸಿರುವುದನ್ನು ಸ್ಮರಿಸಿದರೆ, ದಂಡಧಾರಿಯೇ ಕೊತ್ವಾಲನೆಂದು ಅರ್ಥವಾಗುತ್ತದೆ ಮತ್ತು ಆತನು ಕಾಶೀ ಕ್ಷೇತ್ರಾಧಿಪತಿ ವಿಶ್ವನಾಥನಿಂದ ನಿಯುಕ್ತನಾದ ದೈವ ಸ್ವರೂಪ. ಹೀಗೆ ವಿಶ್ವನಾಥನಿಂದ ತನಗೊದಗಿದ ಪದವಿಯನ್ನು ಒಪ್ಪಿಕೊಂಡ ಭೈರವನಿಗೆ ಇಡೀ ಕಾಶೀನಗರವೇ ಬೃಹತ್ತಾದ ಶಿವಲಿಂಗದಂತೆ ಗೋಚರಿಸಿತು. ಎತ್ತ ಸಂಚರಿಸಬೇಕೆಂದು ತಿಳಿಯದಾದ ಭೈರವನು ಒಂದು ನಾಯಿಯನ್ನು ತನ್ನ ವಾಹನವಾಗಿ ಮಾಡಿಕೊಂಡು ಹೊರಟನು. 

ಇದೆಲ್ಲ ಏನಿದ್ದರೂ ೧೬ನೇ ಶತಮಾನದಲ್ಲಿ ವಿಶ್ವನಾಥನಿಗೆಂದು ನಿರ್ಮಿತವಾದ ದೇವಾಲಯದ ಅಷ್ಟದಿಕ್ಪಾಲಕರಲ್ಲಿ ಭೈರವನಿಗೆ ಒಬ್ಬನಾಗಿ ಮೆರೆಯುವ ಗೌರವವಂತೂ ದಕ್ಕಿತು. ವಿಶ್ವನಾಥನು ಮೃದು ಸ್ವಭಾವದವನೆಂದೂ, ಭೈರವನು ಉಗ್ರರೂಪಿಯೆಂದೂ, ಅವರ ಗುಣಸ್ವಭಾವಗಳಿಂದ ತಿಳಿಯಬಹುದಾದರೆ, ಭೈರವನ ಆರಾಧಕರು ಉಗ್ರತೆಯನ್ನು ಮೆಚ್ಚುವವರು ಎಂದು ಅದರ ಅರ್ಥವಲ್ಲ. ಭೈರವನು ಕೇವಲ ದಿಕ್ಪಾಲಕರಲ್ಲಿ ಓರ್ವನಾದುದರಿಂದ ಆತನ ಮಹತ್ವವೇನೂ ಕಡಿಮೆಯಾಗಿದೆ ಎಂದು ಭಾವಿಸುವವರಿಗೆ ಆತನ ಹೆಸರಿನಲ್ಲಿ ದೇಶಾದ್ಯಂತ ಸ್ಥಾಪಿತವಾಗಿರುವ ದೇವಾಲಯಗಳೇ ಸಾಕ್ಷಿಯಾಗಿವೆ. 

ಕಾಶಿಯಲ್ಲಿ ಪಚಾಲಿ ಭೈರವನೆಂಬ ರಾಜನಿದ್ದನು. ಭಾಗಮತಿ ಅಥವಾ ಗಂಗಾನದಿಯ ತೀರದ ಸ್ಮಶಾನಗಳಿಗೆ ಆತನೇ ಅಧಿಪತಿ. ಕಾಲಭೈರವ ಅಥವಾ ಕಾಶೀ ವಿಶ್ವನಾಥನು ವಾರಾಣಸಿಯಲ್ಲಿ ನಡಯುವ ಭಕ್ತಪುರದ ಜಾತ್ರೆಯನ್ನು ವೀಕ್ಷಿಸಲು ಕುತೂಹಲದಿಂದ ಗುಪ್ತವಾಗಿ ಬರುತ್ತಿದ್ದನೆಂದು ಐತಿಹ್ಯ. ಆದರೆ ಅಲ್ಲಿನ ತಾಂತ್ರಿಕ ಪೂಜಾರಿಯೊಬ್ಬನು ಆತನನ್ನು ಗುರುತಿಸಿ, ಅವನ ತಲೆಯನ್ನು ಕತ್ತರಿಸಿ, ಕಾಶಿಗೆ ಓಡಿಹೋಗುವ ಹವಣಿಕೆಯಲ್ಲಿದ್ದನು. ಆಕಾಶ ಭೈರವನೆನ್ನುವವನು ಭೈರವನ ಸಹಚರ. ಯಾವಾಗಲೂ ಆತನೊಡನೇ ಇರುತ್ತಿದ್ದವನು. ಈಗಲೂ ಈ ಉತ್ಸವದಲ್ಲಿ ಶಿರವೊಂದನ್ನು ಪ್ರದರ್ಶಿಸಿ, ಅದು ಕಾಲಭೈರವನದು ಎಂದು ಭಕ್ತಪುರದ ಮಂದಿ ಈಗಲೂ ಹೇಳಿಕೊಳ್ಳುತ್ತಾರಾದರೂ, ಅದು ನಿಜವಾಗಿ ಕಾಲಭೈರವನಿಗೆ ಸಂಬಂಧಿಸಿದ್ದಲ್ಲ. 

ಇದಲ್ಲದೆ ಆತನನ್ನು ಕ್ಷೇತ್ರಪಾಲಕನೆಂದೂ ಕರೆದಿರುವುದರಿಂದ ಆಯಾ ಶಿವ ದೇವಾಲಯಗಳಿಗೆ ಸಂರಕ್ಷಕನಾಗಿ ಭೈರವನಿಗೆ ಪ್ರಾಶಸ್ತ್ಯವನ್ನೂ ನೀಡಲಾಗಿದೆ.  ಭೈರವನ ದೇವಾಲಯಗಳು ಮಹಾರಾಷ್ಟ್ರದ ಜಾವಳಿ, ಬೋರ್ಬಾನ್, ಸೋನಾರಿ ಮುಂತಾದ ಸ್ಥಳಗಳಲ್ಲಿ ಸ್ಥಾಪಿತವಾಗಿತ್ತು.

ಕಾಶೀ ವಿಶ್ವನಾಥ ದೇವಾಲಯ
 ಉಜ್ಜಯನಿ, ವೀರ್ ಮುಂತಾದ ಸ್ಥಳಗಳಲ್ಲೂ ಅವುಗಳ ಕುರುಹುಗಳಿವೆ. ಕಾಶೀಕ್ಷೇತ್ರವು ತೀರ್ಥವೆಂದೇ ಪ್ರಸಿದ್ಧಿಯಾಗಿದ್ದು, ಇಲ್ಲಿಯೇ ಕಾಲಭೈರವನು ಬ್ರಹ್ಮಹತ್ಯಾದೋಷದಿಂದ ವಿಮುಕ್ತನಾದನೆಂದು ಹೇಳಲಾಗುತ್ತದೆ. ಇಂತಹ ಮಹತ್ವವು ಉಜ್ಜಯನಿಗೆ ಅನ್ವಯಿಸುವುದಿಲ್ಲ. ಕಾಶೀ ವಿಶ್ವನಾಥನಿಗೆ ಸಾತ್ವಿಕ ಆಹಾರವನ್ನು ನಿವೇದನೆ ಮಾಡಿದರೆ, ಭೈರವ ಅಥವಾ ಚಂಡ ಇವರಿಗೆ ಅರ್ಪಿಸುವ ನೈವೇದ್ಯವು ತಾಮಸಿಕ ಸ್ವರೂಪದ್ದಾಗಿರುತ್ತದೆ. ಆದ್ದರಿಂದಲೇ ಭೈರವ ಅಷ್ಟೋತ್ತರ ಶತನಾಮದಲ್ಲಿ ಆತನನ್ನು ಸ್ಮಶಾನ ವಾಸೀ, ಮಾಂಸಾಶೀ, ರಕ್ತಪಃ ಪಾನಪಃ ಎಂದೆಲ್ಲ ವರ್ಣಿಸಲಾಗಿದೆ. 

ಉಜ್ಜಯನಿ ಕಾಲಭೈರವ ದೇಗುಲ

ಆಧುನಿಕ ಪೂರ್ವ ಕಾಶೀ ಮತ್ತು ಮೈದಾಗಿನ್ ಪಾರ್ಕ್ ಇವುಗಳ ನಡುವಣ ಚೌಖಂಬಾ ಓಣಿಯಲ್ಲಿರುವ ಕಾಲಭೈರವನನ್ನು ಭೈರೋನಾಥ್ ಎಂದು ಕರೆಯುವರು. ಪೂರ್ವಕಾಲದಲ್ಲಿ ಕಾಶಿಯ ಈ ಸ್ಧಳವು ಶೈವ ಸಂತರು ಮತ್ತು ಉಗ್ರ ಕಾಪಾಲಿಕರ ಅಧ್ಯಾತ್ಮಕೇಂದ್ರವಾಗಿತ್ತು. ಇವರ ಮುಂದಿನ ಸಂತತಿಯನ್ನು ಗೋರಖನಾಥ್ ಮತ್ತು ಗಾಣಾಪತ್ಯ ಯೋಗಿಗಳೆಂದು ಗುರ್ತಿಸುತ್ತಾರೆ.  ಇವರಿಗೆ ಸಾಂಪ್ರದಾಯಕ ಜಾತಿ ಮತಗಳ ಯಾವುದೇ ಹಂಗು ಇರುವುದಿಲ್ಲ. ಇಂದು ಭೈರವನ ದೇಗುಲಗಳು ಇಂಥ ಉಗ್ರ ಧಾರ್ಮಿಕ ವಾದಿಗಳ ನೆಲೆಯಾಗಿಲ್ಲವಾದರೂ, ಸಾಧಾರಣ ಗೃಹಸ್ಥರು ಈ ದೇವನನ್ನು ಒಪ್ಪಿಕೊಂಡು ಸಾತ್ವಿಕ ಆಹಾರದ ನಿವೇದನೆಯನ್ನು ಮಾಡುತ್ತಾರೆ. ಇದೇ ಪರಂಪರೆಯು ಮುಂದುವರೆದು ಭಾರತ ಉಪಖಂಡದಲ್ಲಿ ವಿಶ್ವನಾಥನ ದೇವಾಲಯಗಳಿಗಿಂತಲೂ ಭೈರವನ ದೇವಾಲಯಗಳೇ ಅಧಿಕವಾಗಲು ಕಾರಣವಾಯಿತು. 

* * * * * * *



ಸೋಮವಾರ, ಜುಲೈ 2, 2012

ಭೈರವ - ಪದ ನಿಷ್ಪತ್ತಿ



ಭೈರ, ಭೈರವ ಇತ್ಯಾದಿ..........

ಪದಗಳ ನಿಷ್ಪತ್ತಿಯನ್ನು ತಿಳಿಯುವುದೆಂದರೆ, ಅವುಗಳ ಮೂಲವನ್ನು ಅರಸಿದಂತೆ. ಇಂತಹ ಕುತೂಹಲಗಳು ಶೋಧಕನಿಗೆ ಆ ಪದದ ಹಲವು ಮಗ್ಗುಲುಗಳನ್ನು ಪರಿಚಯಿಸುತ್ತದೆ. ಐತಿಹಾಸಿಕ ದೃಷ್ಟಿಯಿಂದ ಪದದ ಮೂಲವನ್ನು ಅರಸಿ ಹೋದವನಿಗೆ ಇದಕ್ಕೆ ಇಷ್ಟೊಂದು ದೀರ್ಘ ಇತಿಹಾಸವಿದೆಯೇ ಎಂದು ಬೆರಗು ಹುಟ್ಟಿಸುವುದರ ಮೂಲಕ, ಆ ಪದವು ಸಂಸ್ಕೃತಿಯಲ್ಲಿ ಬೆರೆತು ಹೋದ ಬಗೆಯನ್ನೂ ತಿಳಿಸುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯಾಗಿ ಪಾವೆಂ ಆಚಾರ್ಯರ ಪದಾರ್ಥ ಚಿಂತಾಮಣಿಯನ್ನು ಹೆಸರಿಸಬಹುದು. 

ಇದರ ಪ್ರಸ್ತಾಪವೇಕೆಂದರೆ, ಪ್ರಸ್ತುತ ಬ್ಲಾಗಿನ ವಿಷಯವಾದ ಕಾಲಭೈರವನ ಅರಸಾಟದಲ್ಲಿ ಆ ಶಬ್ದದ ಮೂಲ ಮತ್ತು ಅದರ ವ್ಯಾಪ್ತಿಗಳನ್ನು ನೋಡಬೇಕೆನಿಸಿತು. ಇದಕ್ಕೆ ಪೂರಕವಾಗಿ ಮಿತ್ರರಾದ ಕಡೂರಿನ ಕುಮಾರಸ್ವಾಮಿಯವರು, ಭೈರವ ಶಬ್ದವು ಜಾತಿಸೂಚಕವಾಗಿ ಬಳಕೆಯಾಗುತ್ತಿರುವುದರ ಬಗ್ಗೆ ಗಮನ ಸೆಳೆದಿದ್ದರು. ಇದನ್ನೇ ಅವಲೋಕಿಸುತ್ತಿದ್ದಾಗ, ಭೈರ, ಬೈರ ಮುಂತಾದ ಹೆಸರುಗಳು ಆ ದೇವರನ್ನು ಕುರಿತಾದ ಆರಾಧನಾ ಸಂಪ್ರದಾಯದ ಮುಂದುವರಿಕೆಯಾಗಿ ಬಂದಿರಬೇಕು ಎನ್ನಿಸಿತು. ಬೈರವನ ಆರಾಧನೆಯು ಉತ್ತರ ಭಾರತದಲ್ಲಿರುವಂತೆ, ದಕ್ಷಿಣದಲ್ಲೂ ಪ್ರಚಲಿತವಿದೆ. ವಿಶೇಷತಃ ಕರಾವಳಿ ಪ್ರದೇಶದಲ್ಲಿ, ಪಂಜುರ್ಲಿ, ಬೊಬ್ಬರ್ಯಗಳಂತೆಯೇ ತುಳುನಾಡಿನಲ್ಲಿ ಭೈರವನ ಹೆಸರಿನ ಒಂದು ಭೂತವಿದೆ. ಇದರ ಆರಾಧನೆಯು ಮುಂದೆ ಪ್ರಚಲಿತವಾದಂತೆಲ್ಲ, ಆದಿರುವ ನೆಲೆಯಲ್ಲಿ ತ್ರಿಶೂಲ, ವಿಭೂತಿ, ಡಮರು ಮುಂತಾದ ಶೈವ ಸಂಕೇತಗಳನ್ನು ಸ್ಥಾಪಿಸಿ ತಮ್ಮ ಶೈವ ಸಂಪ್ರದಾಯವನ್ನು ಬಲಗೊಳಿಸಿಕೊಂಡಿದ್ದಾರೆ. “ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ-ಗಿರಿಜನ ಸಾಮಾಜಿಕ ಇತಿಹಾಸ” ಎಂಬ ಕೃತಿಯಲ್ಲಿ, ಪಿ.ಕಮಲಾಕ್ಷ ಅವರುಭೈರವರಾರಾಧನೆಯ ವಿಷಯವನ್ನು ತಿಳಿಸುತ್ತಾ, ಪೂರ್ವದಲ್ಲಿ ಶಿವನು ಕಾಲಭೈರವನ ರೂಪತಾಳಿ ಅವತಾರಕ್ಕೆ ಬಂದು ಜನತೆಯಲ್ಲಿ ದೈವಭಕ್ತಿಯನ್ನು ಹಾಗೂ ದೇವರ ಭಯವನ್ನು, ಧರ್ಮವನ್ನು ಸ್ಥಾಪಿಸುವ ಕಾಲದಲ್ಲಿ ಈ ವರ್ಗದ ಜನರು ಶಿವನ, ಕಾಲಭೈರವ ಅವತಾರದ ದೈವಿಕಶಕ್ತಿಗೆ ಬೆರಗಾಗಿ ಕಾಲಭೈರವನ ದೈವಿಕಶಕ್ತಿಯನ್ನು ನಂಬಿ, ಪೂಜೆ-ಪುನಸ್ಕಾರ ಕೊಟ್ಟು ಆರಾಧನೆ ಮಾಡಿಕೊಂಡು ಬಂದ ಕಾರಣ ಕಾಲಭೈರವನ ಆರಾಧಕರಾದ ಇವರನ್ನು “ಭೈರವರು” ಎಂಬುದಾಗಿಯೂ ಕರೆಯತೊಡಗಿದರು ಎಂಬ ಹಿರಿಯರ ಮಾತಿದೆ, ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೆ ಕೆಲವರು ಭೈರ ಅರಸರ ಪಾಳೆಯಗಾರರಾದ ಕಾರಣ ತಮಗೆ ಭೈರರೆಂದು ಕರೆಯಲಾಯಿತು ಎಂಬ ಅಭಿಪ್ರಾಯ ವನ್ನೂ ವ್ಯಕ್ತಪಡಿಸುತ್ತಾರೆ.

 ಭೈರವ ಪದವು "ಭೇರಿ" ಯಿಂದ ಬಂದಿರಬಹುದೆಂದು ಊಹಿಸಲಾಗಿದೆ. ಸಿ.ಡಿ. ಮ್ಯಾಕ್ಲನ್ ಯೆಂಬ ಆಂಗ್ಲ  ವಿದ್ವಾಂಸರು ತಮ್ಮ ಗ್ಲೋಸರಿ ಆಫ್ ದಿ ಮದ್ರಾಸ್ ಪ್ರೆಸಿಡೆನ್ಸಿ ಎಂಬ ನಿಘಂಟನ್ನು ರಚಿಸಿದ್ದಾರೆ. ಅದರಲ್ಲಿ ಕೆಳಜಾತಿಯ ಜನರು ದೇವಾಲಯಗಳಲ್ಲಿ ಭೇರಿಯನ್ನು ಬಡಿಯುವ ಸೇವೆಗೆಂದು ನಿಯುಕ್ತರಾಗಿದ್ದರು. ಅವರಿಗೆ ದೇವಾಲಯದ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸಂಬಳವಾಗಿ ನೀಡಲಾಗುತ್ತಿತ್ತು. ಇದಲ್ಲದೆ ಅವರು ವೃತ್ತಿಯಿಂದ ಸೈನಿಕರಾಗಿದ್ದರು. ಅಲ್ಲಿಯೂ ಭೇರಿ ಬಡಿಯುವ ಕೆಲಸ ಅವರಿಗೆ ಇರುತ್ತಿತ್ತು. ಹೀಗಾಗಿ ತಮ್ಮ ಪರಿಣತಿಯಿಂದ ಅವರು ದೇವಾಲಯದ ಸೇವೆಗೂ ನಿಯುಕ್ತರಾಗಿರಬಹುದು ಮತ್ತು ಭೇರಿ ಬಾರಿಸುವವನನ್ನು ಭೇರ ಅಥವಾ ಭೈರ ಎಂದು ಕರೆಯಲಾಗುತ್ತಿತ್ತು. 

ನಮ್ಮ ಜಾನಪದ ಸಾಹಿತ್ಯದಲ್ಲಿ ಭೈರವನನ್ನು ಭೈರುವ, ಭೈರೂವ, ಭೈಯರೂಪ ಎಂದೆಲ್ಲ ಹೆಸರಿಸಲಾಗಿದೆ. ಇವರೆಲ್ಲರೂ ಶಿವನ ಭಯಕಂರ ರೂಪವಾದ ಭೈರವ ಆರಾಧಕರೇ ಆಗಿದ್ದಾರೆ. ಬೋರಯ್ಯ ಎನ್ನುವ ಹೆಸರು ಕೂಡ ಭೈರವಯ್ಯ ಎಂಬ ಹೆಸರಿನ ಅಪಭ್ರಂಶ ಅಥವಾ ಗ್ರಾಮೀಣ ರೂಪವೇ ಸರಿ. 

ಹಿಂದಿದ್ದ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಜಾತಿ ಅಂತಸ್ಥುಗಳ ಆಧಾರದ ಮೇಲೆ ತಮ್ಮ ತಮ್ಮ ಕೇರಿ, ಬೀದಿಗಳಲ್ಲಿ ವಾಸಿಸುತ್ತಿದ್ದರು. ಅಥವಾ  ಬಹುಸಂಖ್ಯಾತ ಜಾತಿಯ ಜನರ ಒಕ್ಕಲನ್ನು ಆಯಾ ಜಾತಿಯ ಹೆಸರಿನಿಂದಲೇ ಗುರುತಿಸುವ ಪದ್ಧತಿಯಿತ್ತು. ಬ್ರಾಹ್ಮಣರು ಹೆಚ್ಚಾಗಿರುವ ಸ್ಥಳವು ಅಗ್ರಹಾರವಾದರೆ, ಕುರುಬರ ಎಡೆಯನ್ನು ಕುರುಬರ ಹಟ್ಟಿ ಎಂದು ಕರೆಯಲಾಗುತ್ತಿತ್ತು. ಭೈರರು ವಾಸಿಸುವ ನೆಲೆಗಳಲ್ಲಿನ ಬ್ರಾಹ್ಮಣರು ನೀಡಿದ ನಿಷ್ಪತ್ತಿಯು  ವ್ಯಾಕರಣಾತ್ಮಕವಾಗಿ ಸರಿಯಿದ್ದೀತು ಎಂದೆನಿಸುತ್ತದೆ. ಏಕೆಂದರೆ ಈ ವರ್ಗದ ಜನ, ಊರ ಹೊರಗಿರುತ್ತಿದ್ದರು, ಅವರನ್ನು ಬಾಹಿರರು ಎಂದು ಕರೆಯುತ್ತಿದ್ದರು. ಅದೇ ಮುಂದೆ ಬಹಿರರು, ಬಯಿರ, ಬೈರ ಮುಂತಾಗಿ ಆಡುಮಾತಿನ ಪರಿವರ್ತಗೆ ಒಳಗಾಗಿ, ಕೊನೆಗೆ ಬೈರರೆಂಬ ಪದವೇ ಉಳಿದುಕೊಂಡಿತು. ನಮ್ಮ ಅನೇಕ ಪದಗಳು ತಮ್ಮ ಮೂಲರೂಪವನ್ನು ಕಳೆದುಕೊಂಡಿರುವ ಬಗೆ ಇಂತಹುದೇ ಆದ್ದರಿಂದ  ತಾರ್ಕಿಕವಾಗಿಯೂ ಇದು ಸರಿಯಾಗಿ ಕಾಣುತ್ತದೆ. 

* * * * * * * 

ಶುಕ್ರವಾರ, ಜೂನ್ 1, 2012






ಕಾಲ ಕಾಲಂ...................


ಹಿಂದೆಲ್ಲ ಭೌತವಸ್ತುಗಳ ಪರಿಮಾಣಗಳನ್ನು ಹೇಳುವಾಗ ಮೂರು ಆಯಾಮಗಳನ್ನು ಮಾತ್ರ ಪರಿಗಣಿಸುತ್ತಿದ್ದರು. ಆಲ್ಬರ್ಟ್ ಐನ್ಸ್‌ಟೈನ್ ಅದಕ್ಕೆ ನಾಲ್ಕು ಆಯಾಮಗಳಿವೆ ಎಂದು ನಿರೂಪಿಸಿದರು. ಈ ನಾಲ್ಕನೇ ಆಯಾಮವೇ ಕಾಲ. ಈ ವಿಷಯದಲ್ಲಿ ಸಿದ್ಧರು ಇನ್ನೂ ಹೆಚ್ಚಿನ ಕೆಲಸಮಾಡಿದ್ದರು. ಅವರ ಅಧ್ಯಯನಗಳಲ್ಲಿ ಬೇರೆ ಬೇರೆ ಗ್ರಹಗಳಿಗೆ ಬೇರೆ ಬೇರೆ ಸಮಯದ ಅನ್ವಯವಿದೆಯೆಂದು ಅವರು ಅರಿತಿದ್ದರು. ಕಾಲದ ಚಲನೆಯು ಭೂಮಿಯ ಮೇಲೆ ನಿಧಾನ, ಆದರೆ ಇತರ ಗ್ರಹಗಳಲ್ಲಿ ಅದರ ವೇಗ ಹೆಚ್ಚು. ಕಾಲವು ಅಮೂರ್ತವಾಗಿರಬಹುದು. ಆದರೆ ಅದನ್ನು ಸೇರಿಸಿ ಲೆಕ್ಕಹಾಕುವುದರಿಂದ ವಸ್ತುವಿನ ಬಳಕೆ, ತಾಳಿಕೆಗಳ ಬಗ್ಗೆ ಅದರ ಅಸ್ತಿತ್ವವನ್ನು ನಿರ್ಧರಿಸಬಹುದು. ಆಧ್ಯಾತ್ಮದ ಅಧ್ಯಯನದಲ್ಲಿ ಭೌತಶಾಸ್ತ್ರದ ತತ್ವಗಳನ್ನೂ ಗ್ರಹಿಸಬೇಕಾಗುತ್ತದೆ. ಅಮೂರ್ತ ಅಸ್ತಿತ್ವಗಳಾದ ಗಾಳಿ, ವಾಸನೆಗಳಂಥವುಗಳ ಬಗ್ಗೆ ಅವು ಅಮೂರ್ತವೆನ್ನುವ ಕಾರಣಕ್ಕೆ ಅವುಗಳ ಅಸ್ತಿತ್ವವನ್ನು ಅಲ್ಲಗಳೆಯಲಾಗದು. ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಮೇಲಿಂದ ಮೇಲೆ ಪ್ರಸ್ತಾಪವಾಗುವ ಅಗ್ನಿ, ವಾಯು, ಜಲ, ಪೃಥಿವಿ ಮತ್ತು ತೇಜಸ್‌ಗಳನ್ನು ಸಂಕ್ಷಿಪ್ತವಾಗಿ ಪಂಚಭೂತಗಳೆಂದು ಹೆಸರಿಸುತ್ತೇವೆ. ಇವೆಲ್ಲಕ್ಕೂ ಅಭಿಮಾನಿ ದೇವತೆಗಳು, ಪ್ರತ್ಯಧಿದೇವತೆಗಳನ್ನೂ ಕಲ್ಪಿಸಲಾಗಿದೆ. ಇವೆಲ್ಲಕ್ಕೂ ಹೊರತಾದ ಕಾಲಕ್ಕೂ ಓರ್ವ ಅಭಿಮಾನಿ ದೇವತೆಯಿದ್ದಾನೆ. ಆತನೇ ಕಾಲಭೈರವ. ಇವೆಲ್ಲವನ್ನೂ ಸರಿತೂಗಿಸಿಕೊಂಡು ನಡೆಸುವಾತನೇ ಕಾಲಭೈರವನೆನ್ನುವುದು ಸಿದ್ಧರ ಮತ. 

ಕಾಲಭೈರವನ ಭೌತಿಕ ಸ್ವರೂಪಗಳನ್ನು ಕುರಿತಂತೆ ಹಿಂದಿನ ಲೇಖನಗಳಲ್ಲಿ ಅನೇಕ ಶ್ಲೋಕಗಳು, ಸ್ತುತಿಗಳನ್ನು ನೀಡಲಾಗಿದೆ. ಈ ಲೇಖನದಲ್ಲಿ, ಕಾಲವೆಂಬ ಅಮೂರ್ತಕ್ಕೆ ರೂಪ ನೀಡಿ ಅದನ್ನು ಹೇಗೆ ಸಮರ್ಥವಾಗಿ, ಅರ್ಥಪೂರ್ಣವಾಗಿ ಬಳಸಲಾಗಿದೆ ಎಂಬ ಬಗ್ಗೆ ವಿವರಗಳಿವೆ. ಸಮಯ ಪರಿಪಾಲನೆಯ ಅಗತ್ಯ ಮತ್ತು ಮಹತ್ವಗಳನ್ನು ನಾವೆಲ್ಲರೂ ಚೆನ್ನಾಗಿ ತಿಳಿದಿದ್ದೇವೆ. ಸಮಯದ ಸದುಪಯೋಗ ಮತ್ತು ದುರುಪಯೋಗಗಳು ನಮ್ಮೆಲ್ಲರ ಅನುಭವದಲ್ಲಿದೆ. ಕಾಲಭೈರವನ ಜನನ ವೃತ್ತಾಂತದಲ್ಲಿ ತಿಳಿದುಬರುವಂತೆ, ಬ್ರಹ್ಮನ ಅಹಂಕಾರವನ್ನು ಅಡಗಿಸಲೆಂದು ಆತನ ಆವಿರ್ಭಾವವಾಯಿತಲ್ಲವೆ. ಇದೇ ಕಾಲಭೈರವನು ಮುಂದೆ ಬ್ರಹ್ಮಹತ್ಯಾ ದೋಷದ ನಿವೃತ್ತಿಗೆಂದು ಎಲ್ಲೆಡೆ ಅಲೆದಾಡಿ, ಕಾಶಿಯ ಕಪಾಲಮೋಚನ ಕ್ಷೇತ್ರದಲ್ಲಿ ಅದರಿಂದ ವಿಮುಕ್ತಿ ಪಡೆದನು. ಇಲ್ಲಿ ಗಮನಿಸಬಹುದಾದ ತಾತ್ವಿಕ ಅಂಶವೆಂದರೆ, ಒಳ್ಳೆಯ ಕಾಲ ಅಥವಾ ಕೆಟ್ಟ ಕಾಲಗಳ ಪ್ರಭಾವವು ಮಾನವರಂತೆಯೆ ದೇವರನ್ನೂ ಬಿಟ್ಟದ್ದಲ್ಲ. ವಿವೇಚನೆಯು ಒಂದೆಡೆ ಕೆಲಸಮಾಡಿದರೂ, ಆ ಸಮಯದಲ್ಲಿ ಹಾರಿಹೋಗುವ ವಿವೇಚನಾ ರಹಿತ ವರ್ತನೆಯ ಪ್ರಭಾವಗಳನ್ನು ಈ ಕತೆಯಲ್ಲಿ ಸಂಕೇತಿಕವಾಗಿ ನಿರೂಪಿಸಲಾಗಿದೆ.

ಕಾಲ ಕಾಲಂ ಅಂಬುಜಾಕ್ಷಂ ಎಂಬ  ಪ್ರಯೋಗವು ಶ್ರೀ ಶಂಕರಾಚಾರ್ಯರ ಕಾಲಭೈರವಾಷ್ಟಕದಲ್ಲಿ ಇದೆ. ಆದರೆ ಇಲ್ಲಿನ ಕಾಲನು ಸಮಯವಲ್ಲ, ಬದಲಾಗಿ ಕಾಲ ಅಥವಾ ಮೃತ್ಯು. ಇನ್ನೊಂದು ರೀತಿಯಲ್ಲಿ ಇದಕ್ಕೊಂದು ವಿಶೇಷ ಅರ್ಥವೂ ಇದೆ. ಮೃತ್ಯು ಸಂಭವಿಸಿದ ನಂತರ ವ್ಯಕ್ತಿ/ಜೀವಿಯ ಬಾಹ್ಯ ಅಸ್ತಿತ್ವ ನಷ್ಟಗೊಳ್ಳುತ್ತದೆ. ಅದು ವರ್ತಮಾನ ಕಾಲದಲ್ಲಿ ಕಾಣಿಸದು. ಭೂತಕಾಲಕ್ಕೆ ಸರಿಯುತ್ತದೆ. ಸಮಯದ ವಿವಿಧ ಆಯಾಮಗಳನ್ನು ಕನ್ನಡದ ಪ್ರೇಮಕವಿ ಕೆ.ಎಸ್. ನರಸಿಂಹ ಸ್ವಾಮಿಯವರು ತಮ್ಮ ಗಡಿಯಾರದ ಅಂಗಡಿಯಲ್ಲಿ ಎಂಬ ಕವಿತೆಯಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಅಲ್ಲಿನ ಒಳನೋಟವು ಕಾಲಭೈರವನೆಂಬ ಸಮಯದ ಅಧಿದೇವತೆಯನ್ನು ಕಾಣಿಸಲು ಸಹಾಯಕವಾಗಿದೆ.

ಭೈರವನ ಕುರಿತಾದ ಸಾಹಿತ್ಯವನ್ನು ಓದಿದವರಿಗೆ ಆತನ ಎಂಟು ರೂಪಗಳ ಪರಿಚಯವಿರುತ್ತದೆ. ಅವೆಂದರೆ, ೧. ಅಸಿತಾಂಗ ಭೈರವ, ೨. ರುರು ಭೈರವ, ೩. ಚಂಡ ಭೈರವ, ೪. ಕ್ರೋಧ ಭೈರವ, ಉನ್ಮತ್ತ ಭೈರವ, ೫. ಕಪಾಲ ಭೈರವ, ೬. ಭೀಷಣ ಭೈರವ ಮತ್ತು ೮. ಸಂಹಾರ ಭೈರವ. ಈ ಹೆಸರುಗಳನ್ನು ಓದುವಾಗ, ಮೇಲ್ನೋಟಕ್ಕೆ ಅವು ಭಯಾನಕತೆಯ ಇನ್ನೊಂದು ರೂಪದಂತೆ ಕಾಣುತ್ತದೆಯಾದರೂ, ಇವೆಲ್ಲವೂ ಯಾವನೇ ಮನುಷ್ಯ ತಳೆಯಬಹುದಾದ ರೂಪಗಳೇ ಸರಿ. ಅವನ ವರ್ತನೆಯೂ ಹಾಗಿದ್ದೀತು.  ಆದರೆ ಅವುಗಳಲ್ಲಿ ತಾತ್ವಿಕ ಅಂಶಗಳಿವೆ. ಆ ದೃಷ್ಟಿಯಲ್ಲಿ ಕಾಣುವ ಅಂಶಗಳ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ. ಮುಂದೆ ಪ್ರತಿಯೊಂದು ರೂಪಕ್ಕೆ ೮ ರೂಪಗಳಂತೆ ಒಟ್ಟು ೬೪ ರೂಪಗಳಿವೆ. ಈ ಅರವತ್ನಾಲ್ಕು ರೂಪಗಳನ್ನು ಆದಿಚುಂಚನಗಿರಿಯ ಶ್ರೀ ಕಾಲಭೈರವ ಮಂದಿರದಲ್ಲಿ ಸುಂದರವಾಗಿ, ಅವುಗಳ ಹೆಸರುಗಳ ಹೆಸರುಗಳ ಸಹಿತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಅದರ ಕೆಲವು ಚಿತ್ರಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ. 

೧. ಅಸಿತಾಂಗ ಭೈರವ - ಸೃಷ್ಟಿ ಸಾಮರ್ಥ್ಯವನ್ನು ನೀಡಬಲ್ಲವ



೨.ರುರು ಭೈರವ - ಗುರು ಸ್ವರೂಪನಾದವನು



೩. ಚಂಡಭೈರವ - ಸ್ಪರ್ಧೆಗಳು ಮತ್ತು ಪ್ರತಿಸ್ಪರ್ಧಿಗಳನ್ನು ಗೆಲ್ಲುವ ಸತ್ವವನ್ನು   ನೀಡುವವನು


೪. ಕ್ರೋಧ ಭೈರವ - ಬೃಹತ್ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಣೆ ನೀಡುವವನು


೫. ಉನ್ಮತ್ತ ಭೈರವ - ಋಣಾತ್ಮಕ ಅಹಂಕಾರ ಮತ್ತು ವಿನಾಶಕರ ಸ್ವಪ್ರಶಂಸೆಗಳನ್ನು ಹತ್ತಿಕ್ಕುವವನು


೬. ಕಪಾಲ ಭೈರವ - ಎಲ್ಲ ಅಪ್ರಯೋಜಕವಾದ ಕಾರ್ಯಗಳಿಗೆ ಅಂತ್ಯ ಹಾಡುವವನು


೭. ಭೀಷಣ ಭೈರವ - ದುಷ್ಟ ಶಕ್ತಿಗಳು ಮತ್ತು ಋಣಾತ್ಮಕ ಭಾವಗಳಿಂದ ಮುಕ್ತಿ ನೀಡುವವನು


8. ಸಂಹಾರ ಭೈರವ - ಪುರಾತನ ಕರ್ಮಭಾರಗಳ ಪರಿಹಾರಕ.


* * * * * * *