ಭಾನುವಾರ, ಡಿಸೆಂಬರ್ 2, 2012

ಭೈರವನ ಲಾಕ್ಷಣಿಕ ಸ್ವರೂಪಗಳು




ಭೈರವನ ಅಷ್ಟರೂಪಗಳು

ಈ ಹಿಂದಿನ ಸಂಚಿಕೆಗಳಲ್ಲಿ ಭೈರವನ ಅಷ್ಟರೂಪಗಳ ಬಗ್ಗೆ ಬರೆದಿದ್ದೆ. ಈಗ ಅವುಗಳ ಲಾಕ್ಷಣಿಕ ಸ್ವರೂಪಗಳನ್ನು ವಿವರಿಸುವ ಸಾಹಿತ್ಯ ದೊರಕಿದೆಯಾಗಿ ಅದನ್ನು ಇಲ್ಲಿ ನೀಡಿದ್ದೇನೆ. ಇದೇಕೆ ಮುಖ್ಯವಾಗುತ್ತದೆಯೆಂದರೆ, ಯಾವದೇ ದೇವತೆಯ ಮೂರ್ತಿಗಳನ್ನು ಕಡೆಯುವಾಗ ಶಿಲ್ಪಿಗೆ ಒಂದು ಸರಿಯಾದ ಆಧಾರ ಬೇಕಾಗುತ್ತದೆ. ಅಂಥ ವ್ಯವಸ್ಥೆಯನ್ನು ಪೂರ್ವಿಕರು ಧ್ಯಾನಶ್ಲೋಕವೆಂಬ ಕ್ರಮದಲ್ಲಿ ಒದಗಿಸಿರುತ್ತಾರೆ. ಅವುಗಳನ್ನು ಆಧರಿಸಿ ನಿರ್ಮಿಸಿದ ಮೂರ್ತಿಯು ಸರ್ವಾಂಗ ಸುಂದರವಾಗಿ ಮೂಡಿಬರಲು, ಆಯಾ ದೇವತೆಯ ಲಕ್ಷಣ, ಸ್ವರೂಪಗಳನ್ನು ಸವಿವರವಾಗಿ ಅವುಗಳಲ್ಲಿ ನೀಡಿರುತ್ತಾರೆ. ಇಂಥ ಒಂದು ಉತ್ತಮ ವ್ಯವಸ್ಥೆಯಿರುವ ಕಾರಣದಿಂದಲೇ, ದೇವ ವಿಗ್ರಹಗಳು ವಿರೂಪವಾಗದೇ, ಶಿಲ್ಪಿಯು ತನ್ನ ವೈಯುಕ್ತಿಕ ಅಭಿಪ್ರಾಯಗಳನ್ನು ಅದರಲ್ಲಿ ಮೂಡಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಗಣಪತಿಯ ವಿಗ್ರಹಗಳು ಇತ್ತೀಚೆಗೆ ತಳೆಯುತ್ತಿರುವ ಅವತಾರಗಳ ಹಿನ್ನೆಲೆಯಲ್ಲಿ ಈ ಪುರಾತನ ಕ್ರಮವನ್ನು ಪರಿಶೀಲಿಸಿದರೆ ಅದರ ಮಹತ್ವ ಅರಿವಾಗುತ್ತದೆ.

ಭೈರವನ ಮೂಲರೂಪವಾದ ಕ್ಷೇತ್ರಪಾಲ ಭೈರವನ ಲಕ್ಷಣಗಳೊಂದಿಗೆ ಆರಂಭವಾಗುವ ಈ ಸಾಹಿತ್ಯದಲ್ಲಿ ಆತನ ಇನ್ನಿತರ ಎಂಟು ರೂಪಗಳ ವಿವರಗಳಿವೆ. ಅದೇ ರೀತಿ, ಭೈರವನ ಆರಾಧನೆಯು ಆತನ ಸ್ತ್ರೀಪಾಲುದಾರರಿಲ್ಲದೆ ಪರಿಪೂರ್ಣವಾಗದು ಎಂಬ ಹಿನ್ನೆಲೆಯಲ್ಲಿ ಗಮನಿಸಿದರೆ, ಇಲ್ಲಿ ವಾರಾಹಿ, ಚಾಮುಂಡಾದಿ ಸಪ್ತ ಮಾತೃಕೆಯರ ಶಕ್ತಿ ಸಹಿತನಾಗಿರುವಂತೆ ಭೈರವನನ್ನು ವರ್ಣಿಸಲಾಗಿದೆ. 

ಈ ಶ್ಲೋಕಗಳು ಶೈವ, ವೈಷ್ಣವ ಪಾರಮ್ಯಗಳನ್ನು ಬಿಂಬಿಸುವ ಪರಿಪಾಠವಿದ್ದ ಕಾಲಕ್ಕಿಂತ ಹಿಂದಿನದು ಅಥವಾ ಆ ನಂತರದ ಸುಧಾರಣೆಯ ದಿನಗಳ ನಂತರ ಬಂದಿರಬಹುದೆಂದು ಊಹಿಸಲು ಸಮಾನ ಅವಕಾಶಗಳಿವೆ. ಏಕೆಂದರೆ ಈ ರಚನೆಯಲ್ಲಿ ಲಕ್ಷ್ಮೀ, ಗರುಡ, ಶಂಖ, ಚಕ್ರಗಳ ಪ್ರಸ್ತಾಪವಿದೆ. ಶೈವ ಪಾರಮ್ಯವನ್ನೇ ಬಿಂಬಿಸುವ ಇನ್ನೊಂದು ಭೈರವ ಸಹಸ್ರನಾಮದ ಪಠ್ಯವಿದೆ. ಅದನ್ನು ಅನುವಾದಿಸುತ್ತಿರುವಾಗ ಮೂಡಿದ ಭಾವಗಳನ್ನು ಪ್ರತ್ಯೇಕವಾಗಿ ಇನ್ನೊಂದು ಲೇಖನದಲ್ಲಿ ಮುಂದೆ ವಿವರಿಸುತ್ತೇನೆ. 


ಕ್ಷೇತ್ರಪಾಲ ಭೈರವ

      ರಕ್ತಜ್ವಾಲಾ ಜಟಾಧರಂ ಶಶಿ ಧಾರಣ ರಕ್ತಾಂಗ ತೇಜೋಮಯಂ |
      ಢಕ್ಕಾ ಶೂಲ ಕಪಾಲ ಪಾಶ ಗದಾ ಧಾರಣಂ ಭೈರವಂ ||
      ನಿರ್ವಾಣಂ ಗತವಾಹನಂ ತ್ರಿನಯನಂ ಚ ಆನಂದ ಕೋಲಾಹಲಂ |
      ವಂದೇ ಭೂತ ಪಿಶಾಚನಾಥ ವಟುಕಂ ಕ್ಷೇತ್ರಸ್ಯ ಪಾಲಂ ಶುಭಮ್ 

1. ಅಸಿತಾಂಗ ಭೈರವ

    ತ್ರಿನೇತ್ರಂ ವರದಂ ಶಾಂತಂ ಮುಂಡಮಾಲಾ ವಿಭೂಷಿತಮ್ |
    ಶ್ವೇತವರ್ಣಂ ಕೃಪಾಮೂರ್ತಿಂ ಭೈರವಂ ಕುಂಡಲೋಜ್ವಲಂ ||
    ಗದಾ ಕಪಾಲ ಸಂಯುಕ್ತಂ ಕುಮಾರಸ್ಯ ದಿಗಂಬರಂ |
    ಬಾಣಪಾತ್ರಂ ಚ ಶಂಖಂ ಚ ಅಕ್ಷಮಾಲಾಂ ಚ ಕುಂಡಲಂ |
    ನಾಗಯಜ್ಞೋಪವೀತಂ ಚ ಧಾರಿಣಂ ಸುವಿಭೂಷಿತಂ ||
    ಬ್ರಹ್ಮಣಿ ಶಕ್ತಿಸಹಿತಂ ಹಂಸಾರೂಢಂ ಸುರೂಪಿತಮ್ |
    ಸರ್ವಾಭೀಷ್ಟದಾತಂ ನಿತ್ಯಂ ಅಸಿತಾಂಗ ಭೈರವಂ ಭಜಾಮ್ಯಹಂ ||

2. ಕ್ರೋಧ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಗದಂ ಶಂಖಂ ಚ ಚಕ್ರಂ ಚ ಕಪಾಲ ಪಾತ್ರಂ ಚ ಧಾರಿಣಂ ||
    ಲಕ್ಷ್ಶಾ ಚ ಸಹಿತಂ ವಾಮೇ ಗರುಡಾಸನ ಸುಸ್ಥಿತಂ |
   ನೀಲವರ್ಣಂ ಮಹಾದೇವಂ ವಂದೇ ಶ್ರೀ ಕ್ರೋಧ ಭೈರವಂ ||

3. ಉನ್ಮತ್ತ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಹೇಮವರ್ಣಂ ಮಹಾದೇವಂ ಹಸ್ತಿವಾಹನ ಸುಸ್ಥಿತಮ್ ||
    ಗದಂ, ಕಪಾಲಂ, ಮುಸಲಂ ದಧಂತಂ ಖಡ್ಗಂ ತಥಾ |
    ವಾರಾಹೀ ಶಕ್ತಿ ಸಹಿತಂ ವಂದೇ ಉನ್ಮತ್ತ ಭೈರವಂ  ||

4. ರುರು (ಗುರು) ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ದಂಡಂ ಕೃಷ್ಣ ಮೃಗಂ ಪಾತ್ರಂ ಬಿಭ್ರಾಣಂ ಚಕ್ರಪಾನಕಮ್ ||
    ಮಾಹೇಶ್ವರ್ಯಾಯುಧಂ ದೇವಂ ವೃಷಾರೂಢ ಸ್ಥಿತವಾಹನಮ್ |
    ಶುದ್ಧ ಸ್ಫಟಿಕಂ ಶಂಕರಮ್ ತಂ ನಮಾಮಿ ರುರು ಭೈರವಮ್ ||

5. ಕಪಾಲ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಪಾಶಂ, ವಜ್ರಂ  ತಥಾ ಗದಾ ಪಾನ ಪಾತ್ರಂ ಚ ಧಾರಿಣಮ್ ||
    ಇಂದ್ರಾಣೀ ಶಕ್ತಿ ಸಹಿತಂ ಗಜವಾಹನ ಸಂಸ್ಥಿತಂ |
    ಕಪಾಲ ಭೈರವಂ ವಂದೇ ಪದ್ಮರಾಗ ಪ್ರಭಾಂ ಶುಭಮ್ ||

6. ಚಂಡ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಧನುರ್ಬಾಣಂ ಚ ಬಿಭ್ರಾಣಂ ಗದಾ ಪಾತ್ರಂ ತಥೈವ ಚ ||
    ಕೌಮಾರೀ ಶಕ್ತಿ ಸಹಿತಂ ಶಿಖಿ ವಾಹನ ಸುಸ್ಥಿತಮ್ ||
    ಗೌರೀವರ್ಣಾಯುಧಂ ದೇವಂ ವಂದೇ ಶ್ರೀ ಚಂಡ ಭೈರವಮ್ ||

7. ಭೀಷಣ ಬೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಗದಾ ಶೂಲಂ ಕಪಾಲಂ ಚ ಧಾರಿಣಂ ಮುಸಲಮ್ ತಥಾ ||
    ಚಾಮುಂಡಾ ಶಕ್ತಿ ಸಹಿತಂ ಪ್ರೇತವಾಹನ ಸಂಸ್ಥಿತಮ್ ||
    ರಕ್ತವರ್ಣಂ ಮಹಾದೇವಂ ವಂದೇ ಭೀಷಣ ಭೈರವಮ್ ||

8. ಸಂಹಾರ ಭೈರವ

    ದಶಬಾಹುಂ ತ್ರಿನೇತ್ರಂ ಚ ಸರ್ಪಯಜ್ಞೋಪವೀತಿನಂ |
    ದಂಷ್ಟ್ರ ಕರಾಳವದನಂ ಅಷ್ಟೈಶ್ವರ್ಯ ಪ್ರದಾಯಕಮ್ || 
    ದಿಗಂಬರಂ ಕುಮಾರಂ ಚ ಸಿಂಹವಾಹನ ಸಂಸ್ಥಿತಮ್ |
    ಶೂಲಂ ಡಮರುಗಂ ಶಂಖಂ ಗದಾ ಚಕ್ರಾಂ ಚ ಧಾರಿಣಮ್ ||
    ಪಾನ ಪಾತ್ರಂ ಚ ಖಟ್ವಾಂಗಂ ಪಾಶಮಂಕುಶಮೇವ  ಚ |
    ಉಗ್ರರೂಪಂ ಮದೋನ್ಮತ್ತಂ ಶಿರೋಮಾಲಾ ವಿಭೂಷಿತಮ್ ||
    ಚಂಡಿಕಾ ಶಕ್ತಿ ಸಹಿತಂ ಧ್ಯಾಯೇತ್ ಸಂಹಾರ ಭೈರವಮ್ ||

* * * * * * *


ಶುಕ್ರವಾರ, ನವೆಂಬರ್ 2, 2012

ಅಧಿಯಮನ್ ಕೋಟೆಯ ಕಾಲಭೈರವ ಮಂದಿರ


ಅಧಿಯಮನ್ ಕೋಟೆಯ ಕಾಲಭೈರವ ಮಂದಿರ

ಆತ್ಮೀಯ ಓದುಗರೆಲ್ಲರಿಗೂ ಐವತ್ತೇಳನೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಕಾಲಭೈರವನ ಮಂದಿರಗಳು ದಕ್ಷಿಣ ಭಾರತದಲ್ಲಿ ತೀರ ಅಪರೂಪವೆನ್ನಬೇಕು. ಏಕೆಂದರೆ ಬಹುತೇಕ ಶಿವದೇವಾಲಯಗಳ ಈಶಾನ್ಯದಲ್ಲಿ ಚಂಡೇಶ್ವರ ಅಥವಾ ಕಾಲಭೈರವನನ್ನು ಸ್ಥಾಪಿಸಿ, ಆತನು ಕ್ಷೇತ್ರರಕ್ಷಕನಾಗಿರಬೇಕೆಂಬುದೇ ಮುಖ್ಯ ಆಶಯ. ಆದರೆ ಕಾಲಭೈರವನಿಗೆಂದೇ ಪ್ರತ್ಯೇಕ ದೇವಾಲಯವು ಬೆಂಗಳೂರಿಗೆ ಸಮೀಪದಲ್ಲಿದೆ. ಬೆಂಗಳೂರಿಗೆ ೧೨೦ ಕಿ.ಮೀ ದೂರದಲ್ಲಿದೆ ಧರ್ಮಪುರಿ. ಇಲ್ಲಿಂದ ಏಳು ಕಿ.ಮೀ. ದೂರದಲ್ಲಿರುವುದು ಅಧಿಯಮನ ಕೋಟೆ. ಇದು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯವೆಂಬುದು ಸ್ಥಳೀಯ ಐತಿಹ್ಯ. 

ತಮಿಳುನಾಡಿನ ಅನೇಕ ಬೃಹತ್ ದೇಗುಲಗಳಂತೆ ಇದೇನೂ ಶಿಲ್ಪಕಲೆಯಿಂದ ಜನರನ್ನು ಸೆಳೆದುದಲ್ಲ. ಬದಲಾಗಿ ಜನರ ನಂಬಿಕೆ ಮತ್ತು ಅಲ್ಲಿ ನಡೆಯುವ ವಿಶಿಷ್ಟ ಪೂಜಾವಿಧಾನಗಳಿಂದ ಸ್ಥಳೀಯರಿಗಿಂತ ಹೊರರಾಜ್ಯದವರನ್ನು ಆಕರ್ಷಿಸುತ್ತಿದೆ. ವಿಶೇಷತಃ ಬೆಂಗಳೂರು ಮತ್ತು ಆಂಧ್ರ ಪ್ರದೇಶಗಳ ಭಕ್ತರು ಇಲ್ಲಿನ ಕಾಲಭೈರವನಿಗೆ ನಡೆದುಕೊಳ್ಳುವರು. ಈ ಊರನ್ನು ಹಿಂದೆ ಅಧಿಯಮನೆಂಬ ಅರಸನು ಆಳುತ್ತಿದ್ದನಂತೆ. ಆತನ ಕಾಲಭೈರವನ ಪರಮಭಕ್ತ. ಅವನು ಯುದ್ಧಕ್ಕೆ ಹೊರಡುವ ಮೊದಲು ಮತ್ತು ವಿಜಯಶಾಲಿಯಾಗಿ ಬಂದನಂತರ ಭೈರವನ ದರ್ಶನ ಪಡೆಯುತ್ತಿದ್ದನಂತೆ. ತನ್ನ ಆಯುಧಗಳನ್ನು ಭೈರವನ ಮಂದಿರದಲ್ಲಿ ಇರಿಸುತ್ತಿದ್ದನಂತೆ. ಭೈರವನ ಎಲ್ಲ ವಿಗ್ರಹಗಳಲ್ಲಿ ತ್ರಿಶೂಲವು ಅವನ ಆಯುಧವಾಗಿರುವುದನ್ನು ಕಾಣಬಹುದಾದರೆ, ಇಲ್ಲಿ ಮಾತ್ರ ತ್ರಿಶೂಲದ ಬದಲು ನೀಳವಾದ ಕತ್ತಿಯನ್ನು ಇರಿಸಲಾಗಿದೆ. ಈ ಖಡ್ಗವನ್ನು ಅಧಿಯಮನ್ ರಾಜನು ಅರ್ಪಿಸಿದ್ದಾದುದರಿಂದ ಇಂದಿಗೂ ಅದಕ್ಕೆ ಅಲ್ಲಿ ಪೂಜೆ ಸಲ್ಲುತ್ತಿದೆ. 

ಪ್ರತಿ ತಿಂಗಳ ಬಹುಳ ಅಷ್ಟಮಿಯು ಅಧಿಯಮನ್ ಕೋಟೆಯ ಕಾಲಭೈರವನ ಪೂಜೆಗೆ ಪ್ರಶಸ್ತವೆಂದು ಹೇಳಲಾಗುತ್ತದೆ. ಆ ಸಂದರ್ಭಗಳಲ್ಲಿ ಅಲ್ಲಿ ಕುಂಬಳಕಾಯಿನ ವ್ಯಾಪಾರಿಗಳು ಹೆಚ್ಚು ಸೇರುತ್ತಾರೆ. ಭರಪೂರ ವ್ಯಾಪಾರ ನಡೆಸುತ್ತಾರೆ.  ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ರಾಹುಕಾಲದ ಪೂಜೆಯೆಂಬ ವಿಶಿಷ್ಠ ಪದ್ಧತಿಯಿದೆ. ರಾಹುಕಾಲವಿರುವಾಗ ನಿಂಬೆಹಣ್ಣುಗಳನ್ನು ಅರ್ಧಕ್ಕೆ ಕತ್ತರಿಸಿ, ಅದರ ರಸವನ್ನು ಹೊರತೆಗೆದು, ಸಿಪ್ಪೆಯನ್ನು ಹಿಂದಕ್ಕೆ ಮಡಿಸಿ, ಅದರಲ್ಲಿ ಎಣ್ಣೆ ಬತ್ತಿಗಳನ್ನು ಬಳಸಿ ದೀಪಾರಾಧನೆ ಮಾಡುವರು. 

ಅಧಿಯಮನಕೋಟೆಯಲ್ಲಿ ಇದೇ ಪದ್ಧತಿ ಇನ್ನೊಂದು ರೂಪ ತಳೆದಿದೆ. ಅದೆಂದರೆ, ಇಲ್ಲಿ ಬೂದುಕುಂಬಳಕಾಯಿಯನ್ನು ಅರ್ಧಕ್ಕೆ ಕತ್ತರಿಸಿ, ಅದನ್ನು ತೊಳೆದು ಶುಚಿಗೊಳಿಸಿ, ಅದನ್ನು ಅರಿಶಿನ-ಕುಂಕುಮದಿಂದ ಅಲಂಕರಿಸುವರು.   ಮಧ್ಯಭಾಗದ ತಿರುಳನ್ನು ಸ್ವಲ್ಪತೆಗೆದು, ಹಣತೆಯಂತಾಗಿಸಿ, ಅದರಲ್ಲಿ ಎಳ್ಳೆಣ್ಣೆಯಲ್ಲಿ  ಕೆಂಪು ಬತ್ತಿಯನ್ನು ಇಟ್ಟು ದೀಪದಂತೆ ಹಚ್ಚುವರು. ಇದಲ್ಲದೆ ಇದರ ಜತೆಗೆ ತೆಂಗಿನಕಾಯಿ ಮತ್ತು ನಿಂಬೆಹಣ್ಣುಗಳನ್ನು ದೀಪದಂತೆ ಬಳಸುವರು. ಈ ಪದ್ಧತಿಯಲ್ಲಿ ಬಳಸಲಾಗುವ ಮೂರು ವಿಧದ ದೀಪಗಳಿಗೆ ಮೂರು ಮಹತ್ವಗಳಿವೆಯೆಂದು ಅಲ್ಲಿನ ಸ್ಥಳೀಕರು ಹೇಳುತ್ತಾರೆ. ಅದೆಂದರೆ ಕುಂಬಳಕಾಯಿನ ದೀಪಾರಾಧನೆಯಿಂದ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ತೆಂಗಿನಕಾಯಿನ ದೀಪದಿಂದ ವೈವಾಹಿಕ ಸಮಸ್ಯೆಗಳು, ವಿವಾಹದಲ್ಲಿ ವಿಳಂಬ ಮುಂತಾದ ಸಮಸ್ಯೆಗಳಿಗೆ ಪರಿಹಾರವಿರುವಂತೆಯೇ, ನಿಂಬೆ ಹಣ್ಣಿನಿಂದ ಹಚ್ಚಲಾಗುವ ದೀಪವು ಮಕ್ಕಳಲ್ಲಿ ವಿದ್ಯಾಭ್ಯಾಸದ ಕೊರತೆಗಳನ್ನು ನೀಗಿಸುವುದೆಂದು ನಂಬಿಕೆ. 

ಭೈರವನ ಹಲವು ರೂಪಗಳಲ್ಲಿ ಸ್ವರ್ಣಾಕರ್ಷಣ ಭೈರವನೆನ್ನುವುದೂ ಒಂದು ರೂಪ. ಇದರ ಮಹತ್ವವೆಂದರೆ, ಲೌಕಿಕ ಸಂಪತ್ತುಗಳಿಗೆ ಸಾಧನವಾದ ಬಂಗಾರವನ್ನು ಭೈರವನು ದಯಪಾಲಿಸುವನು. ಅದರ ಮೂರ್ತಸ್ವರೂಪವನ್ನು ಅಧಿಯಮನಕೋಟೆಯ ದೇಗುಲದಲ್ಲಿ ಕಾಣಬಹುದು. ಕೃಷ್ಣ ಅಷ್ಟಮಿಯಂದು ಪ್ರತಿ ತಿಂಗಳೂ ಜರುಗುವ ಪೂಜೆಯಲ್ಲಿ,  ಹಣಕಾಸು ವಿಷಯ ಸಂಬಂಧವಾಗಿ ಭೈರವನ ಕೃಪೆಗೆಂದು ಅಲ್ಲಿ ಭಕ್ತರು ಸೇರುತ್ತಾರೆ. ದೀಪಗಳನ್ನು ಹಿಡಿದು ಪ್ರದಕ್ಷಿಣೆ ಬರುವರು. ದೇವಾಲಯದ ಒಳ ಭಾಗದ ಪ್ರಾಂಗಣ ಅಷ್ಟೇನೂ ವಿಶಾಲವಾಗಿಲ್ಲವಾದ್ದರಿಂದ, ಹಾಗೂ ಬರುವ ಭಕ್ತರ ಸಂಖ್ಯೆ ಅಧಿಕವಾಗುತ್ತ ನಡೆದಿರುವುದರಿಂದ, ಹೊರ ಭಾಗದ ಅಂಗಳದಲ್ಲಿ ಭೈರವನಿಗೆ ಭಕ್ತರ ಸಾಮೂಹಿಕ ಆರತಿಯ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸೇರಿದ ಭಕ್ತರು ನಿಗದಿತ ಸಮಯದಲ್ಲಿ ಒಂದು ತಟ್ಟೆಯಲ್ಲಿಟ್ಟುಕೊಂಡ ಬೂದುಕುಂಬಳಕಾಯಿಯ ದೀಪ, ನಿಂಬೆಹಣ್ಣು ಮತ್ತು ತೆಂಗಿನಕಾಯಿಗಳ ದೀಪಗಳನ್ನು ಹಿಡಿದು, ಮನದಲ್ಲೇ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತ, ಭೈರವನಿಗೆ ಆರತಿ ಬೆಳಗುವರು. ಜತೆಯಲ್ಲೇ ದೃಷ್ಟಿ ಪರಿಹಾರಕ್ಕೆಂದು ಮೆಣಸಿನಕಾಯಿಗಳನ್ನೂ ಅರ್ಪಿಸುವರು. ದೇವಾಲಯದ ನಾಲ್ಕು ದಿಕ್ಕುಗಳೂ ದೀಪಗಳ ತಟ್ಟೆಗಳಿಂದ ತುಂಬಿಹೋಗಿರುತ್ತದೆ. ಸ್ಥಳೀಯ ಜ್ಯೋತಿಷಿಗಳು ಹೇಳುವಂತೆ ರವಿದಶೆಯ ಚಂದ್ರ ಭುಕ್ತಿಯಲ್ಲಿ, ರಾಹುದಶೆಯ ಕೇತು ಭುಕ್ತಿಯಲ್ಲಿ ಇಲ್ಲಿ ನಡೆಸುವ ದೀಪಾರಾಧನೆ ತುಂಬ ಫಲಕೊಡುತ್ತದೆ. ಏಕೆಂದರೆ ಇಲ್ಲಿ ೨೭ ನಕ್ಷತ್ರಗಳು, ೧೨ ರಾಶಿಗಳು ಮತ್ತು ನವಗ್ರಹಗಳು ಈ ಭೈರವನಲ್ಲಿ ಸನ್ನಿಹಿತವಾಗಿರುವುದು ವಿಶೇಷತೆಯೆನ್ನಲಾಗಿದೆ. 

ಮದರಾಸು, ಕೊಯಮತ್ತೂರು, ಪಾಂಡಿಚೇರಿ, ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರು ಮತ್ತು ಆಂಧ್ರಪ್ರದೇಶಗಳ ಭಕ್ತರು ಪ್ರತಿ ತಿಂಗಳೂ ಹೆಚ್ಚು ಹೆಚ್ಚಿಗೆ ಬರುತ್ತಿರುವುದರಿಂದ ದೇವಾಲಯ ಆಡಳಿತ ಮಂಡಲಿಯು  ಅವರ ವಸತಿಗೆಂದು ಇತ್ತೀಚೆಗೆ ವ್ಯವಸ್ಥೆಮಾಡುತ್ತಿದೆ. ಹಣ ಎಲ್ಲರಿಗೂ ಅವಶ್ಯವೇ ಸರಿ. ಅದರ ಅಧಿದೇವತೆ ಲಕ್ಷ್ಮಿಯೆಂದಾದರೂ, ಭೈರವನ ಸ್ವರ್ಣಾಕರ್ಷಣ ಶಕ್ತಿಯ ಪ್ರತೀಕವಿಲ್ಲಿದೆ. ಅದರ ಆರಾಧಕರು ತಮ್ಮ ನಂಬಿಕೆಯಿಂದ ಫಲಪಡೆದಿದ್ದೇವೆಂದು ಹೇಳುವ ಅನೇಕ ಉದಾಹರಣೆಗಳು ಅಲ್ಲಿ ಕಾಣಸಿಗುತ್ತವೆ. ಹೆಣ್ಣುದೇವರಲ್ಲಿ ಭದ್ರಕಾಳಿಗೆ ಇರುವ ಶಕ್ತಿ, ಸಾಮರ್ಥ್ಯಗಳು ಭೈರವನಿಗೆ ಈ ಕ್ಷೇತ್ರದಲ್ಲಿದೆಯೆಂದು ಹೇಳಲಾಗುತ್ತದೆ.  

* * * * * * *

ಬುಧವಾರ, ಅಕ್ಟೋಬರ್ 3, 2012

ಕಾಲಭೈರವ ಅಷ್ಟೋತ್ತರ ಶತನಾಮಾವಳಿ


ಶ್ರೀ ಕಾಲಭೈರವ ಅಷ್ಟೋತ್ತರ ಶತನಾಮಾವಳಿಯ ಸ್ತೋತ್ರ ರೂಪ ಮತ್ತು ಪದ

 ರೂಪಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಇದೇ ರೀತಿ ಮುಂದೆ, ಲಭ್ಯವಿರುವ ಇತರ

 ಸ್ತೋತ್ರ ಮತ್ತು ಸಹಸ್ರನಾಮಗಳನ್ನೂ ಪ್ರಕಟಿಸುವೆ. ಈ ಎಲ್ಲ ಸಾಹಿತ್ಯಗಳನ್ನು 

ಒದಗಿಸಿದವರು ಈ ಹಿಂದಿನ ಸಂಚಿಕೆಗಳಲ್ಲಿ ಪ್ರಸ್ತಾಪಿಸಲಾಗಿರುವ ಶ್ರೀಮತಿ ಕರೈನ್ 

ಲ್ಯಾಡ್ರೆಕ್‌ ರವರು. ಅವರು ರೋಮನ್ ಇಂಗ್ಲಿಷ್ ಲಿಪಿಯಲ್ಲಿ ಒದಗಿಸಿದ 

ಸಾಹಿತ್ಯವನ್ನು ಕನ್ನಡ ಲಿಪಿಗೆ ಪರಿವರ್ತನೆ ಮಾಡಿ ಪ್ರಕಟಿಸಿರುವೆ. ಇವುಗಳನ್ನು 

ಪೂಜಾ  ಕಾಲದಲ್ಲಿ ದಲ್ಲಿ ಯಥೋಚಿತವಾಗಿ ಬಳಸಬಹುದು.



ಬುಧವಾರ, ಆಗಸ್ಟ್ 1, 2012


ಕಾಶಿಯ ಕೊತ್ವಾಲ :  ಕಾಲಭೈರವ


ಭೈರವನನ್ನು ಕಾಶಿಯ ಕೊತ್ವಾಲನೆಂದು ಕರೆಯುವರಷ್ಟೆ.  ಆ ಪದದ ನಿಷ್ಪತ್ತಿ ಹೀಗಿದೆ. ಈ ಪದವು ಉರ್ದುಮೂಲದ್ದಾಗಿದ್ದರೂ, ಸಂಸ್ಕೃತದಲ್ಲಿ ಕೋಟ ಅಥವಾ ಕೋಷ್ಠ, ಪಾಲ ಎಂದರೆ ರಕ್ಷಕ ಎಂದಾಗುತ್ತದೆ. ಎಂದರೆ ಕೋಷ್ಠ - ಧನ ಕೋಶವನ್ನು ಪಾಲನೆಮಾಡುವವನು ಎಂದು ಅರ್ಥ. ಇದಕ್ಕೆ ಸಂವಾದಿಯಾಗಿ ಕೊತ್ವಾಲನೆಂಬ ಪದಕ್ಕೆ, ನಗರ ರಕ್ಷಕ ಅಥವಾ ನಗರ ನ್ಯಾಯಾಧೀಶ ಎಂದೂ ಅರ್ಥವಿದೆ. ಕಾಲಭೈರವನ ಈ ಕೊತ್ವಾಲ ಸ್ವರೂಪವನ್ನು ಆರಾಧಿಸುವ ಸಂತರನ್ನು ದಶನಾಮಿ ಸನ್ಯಾಸಿಗಳು ಮತ್ತು ಅವರ ಗುಂಪನ್ನು ಅಖಾಡಾ ಎಂದು ಕರೆಯಲಾಗುತ್ತದೆ. ಕಾಶಿಯಲ್ಲಿ ಕಾಲಭೈರವನು ಈಗಿರುವ ನೆಲೆಯನ್ನು ಕೊತ್ವಾಲ್‌ಪುರಿ ಎಂದು ಹೆಸರಿಸಲಾಗಿದೆ. ಇದಕ್ಕೆ ಪೂರಕವಾಗಿ ಕಾಲಭೈರವನ ಅಷ್ಟೋತ್ತರದಲ್ಲಿ ಆತನನ್ನು ದಂಡಪಾಣೀ ಎಂದು ಹೆಸರಿಸಿರುವುದನ್ನು ಸ್ಮರಿಸಿದರೆ, ದಂಡಧಾರಿಯೇ ಕೊತ್ವಾಲನೆಂದು ಅರ್ಥವಾಗುತ್ತದೆ ಮತ್ತು ಆತನು ಕಾಶೀ ಕ್ಷೇತ್ರಾಧಿಪತಿ ವಿಶ್ವನಾಥನಿಂದ ನಿಯುಕ್ತನಾದ ದೈವ ಸ್ವರೂಪ. ಹೀಗೆ ವಿಶ್ವನಾಥನಿಂದ ತನಗೊದಗಿದ ಪದವಿಯನ್ನು ಒಪ್ಪಿಕೊಂಡ ಭೈರವನಿಗೆ ಇಡೀ ಕಾಶೀನಗರವೇ ಬೃಹತ್ತಾದ ಶಿವಲಿಂಗದಂತೆ ಗೋಚರಿಸಿತು. ಎತ್ತ ಸಂಚರಿಸಬೇಕೆಂದು ತಿಳಿಯದಾದ ಭೈರವನು ಒಂದು ನಾಯಿಯನ್ನು ತನ್ನ ವಾಹನವಾಗಿ ಮಾಡಿಕೊಂಡು ಹೊರಟನು. 

ಇದೆಲ್ಲ ಏನಿದ್ದರೂ ೧೬ನೇ ಶತಮಾನದಲ್ಲಿ ವಿಶ್ವನಾಥನಿಗೆಂದು ನಿರ್ಮಿತವಾದ ದೇವಾಲಯದ ಅಷ್ಟದಿಕ್ಪಾಲಕರಲ್ಲಿ ಭೈರವನಿಗೆ ಒಬ್ಬನಾಗಿ ಮೆರೆಯುವ ಗೌರವವಂತೂ ದಕ್ಕಿತು. ವಿಶ್ವನಾಥನು ಮೃದು ಸ್ವಭಾವದವನೆಂದೂ, ಭೈರವನು ಉಗ್ರರೂಪಿಯೆಂದೂ, ಅವರ ಗುಣಸ್ವಭಾವಗಳಿಂದ ತಿಳಿಯಬಹುದಾದರೆ, ಭೈರವನ ಆರಾಧಕರು ಉಗ್ರತೆಯನ್ನು ಮೆಚ್ಚುವವರು ಎಂದು ಅದರ ಅರ್ಥವಲ್ಲ. ಭೈರವನು ಕೇವಲ ದಿಕ್ಪಾಲಕರಲ್ಲಿ ಓರ್ವನಾದುದರಿಂದ ಆತನ ಮಹತ್ವವೇನೂ ಕಡಿಮೆಯಾಗಿದೆ ಎಂದು ಭಾವಿಸುವವರಿಗೆ ಆತನ ಹೆಸರಿನಲ್ಲಿ ದೇಶಾದ್ಯಂತ ಸ್ಥಾಪಿತವಾಗಿರುವ ದೇವಾಲಯಗಳೇ ಸಾಕ್ಷಿಯಾಗಿವೆ. 

ಕಾಶಿಯಲ್ಲಿ ಪಚಾಲಿ ಭೈರವನೆಂಬ ರಾಜನಿದ್ದನು. ಭಾಗಮತಿ ಅಥವಾ ಗಂಗಾನದಿಯ ತೀರದ ಸ್ಮಶಾನಗಳಿಗೆ ಆತನೇ ಅಧಿಪತಿ. ಕಾಲಭೈರವ ಅಥವಾ ಕಾಶೀ ವಿಶ್ವನಾಥನು ವಾರಾಣಸಿಯಲ್ಲಿ ನಡಯುವ ಭಕ್ತಪುರದ ಜಾತ್ರೆಯನ್ನು ವೀಕ್ಷಿಸಲು ಕುತೂಹಲದಿಂದ ಗುಪ್ತವಾಗಿ ಬರುತ್ತಿದ್ದನೆಂದು ಐತಿಹ್ಯ. ಆದರೆ ಅಲ್ಲಿನ ತಾಂತ್ರಿಕ ಪೂಜಾರಿಯೊಬ್ಬನು ಆತನನ್ನು ಗುರುತಿಸಿ, ಅವನ ತಲೆಯನ್ನು ಕತ್ತರಿಸಿ, ಕಾಶಿಗೆ ಓಡಿಹೋಗುವ ಹವಣಿಕೆಯಲ್ಲಿದ್ದನು. ಆಕಾಶ ಭೈರವನೆನ್ನುವವನು ಭೈರವನ ಸಹಚರ. ಯಾವಾಗಲೂ ಆತನೊಡನೇ ಇರುತ್ತಿದ್ದವನು. ಈಗಲೂ ಈ ಉತ್ಸವದಲ್ಲಿ ಶಿರವೊಂದನ್ನು ಪ್ರದರ್ಶಿಸಿ, ಅದು ಕಾಲಭೈರವನದು ಎಂದು ಭಕ್ತಪುರದ ಮಂದಿ ಈಗಲೂ ಹೇಳಿಕೊಳ್ಳುತ್ತಾರಾದರೂ, ಅದು ನಿಜವಾಗಿ ಕಾಲಭೈರವನಿಗೆ ಸಂಬಂಧಿಸಿದ್ದಲ್ಲ. 

ಇದಲ್ಲದೆ ಆತನನ್ನು ಕ್ಷೇತ್ರಪಾಲಕನೆಂದೂ ಕರೆದಿರುವುದರಿಂದ ಆಯಾ ಶಿವ ದೇವಾಲಯಗಳಿಗೆ ಸಂರಕ್ಷಕನಾಗಿ ಭೈರವನಿಗೆ ಪ್ರಾಶಸ್ತ್ಯವನ್ನೂ ನೀಡಲಾಗಿದೆ.  ಭೈರವನ ದೇವಾಲಯಗಳು ಮಹಾರಾಷ್ಟ್ರದ ಜಾವಳಿ, ಬೋರ್ಬಾನ್, ಸೋನಾರಿ ಮುಂತಾದ ಸ್ಥಳಗಳಲ್ಲಿ ಸ್ಥಾಪಿತವಾಗಿತ್ತು.

ಕಾಶೀ ವಿಶ್ವನಾಥ ದೇವಾಲಯ
 ಉಜ್ಜಯನಿ, ವೀರ್ ಮುಂತಾದ ಸ್ಥಳಗಳಲ್ಲೂ ಅವುಗಳ ಕುರುಹುಗಳಿವೆ. ಕಾಶೀಕ್ಷೇತ್ರವು ತೀರ್ಥವೆಂದೇ ಪ್ರಸಿದ್ಧಿಯಾಗಿದ್ದು, ಇಲ್ಲಿಯೇ ಕಾಲಭೈರವನು ಬ್ರಹ್ಮಹತ್ಯಾದೋಷದಿಂದ ವಿಮುಕ್ತನಾದನೆಂದು ಹೇಳಲಾಗುತ್ತದೆ. ಇಂತಹ ಮಹತ್ವವು ಉಜ್ಜಯನಿಗೆ ಅನ್ವಯಿಸುವುದಿಲ್ಲ. ಕಾಶೀ ವಿಶ್ವನಾಥನಿಗೆ ಸಾತ್ವಿಕ ಆಹಾರವನ್ನು ನಿವೇದನೆ ಮಾಡಿದರೆ, ಭೈರವ ಅಥವಾ ಚಂಡ ಇವರಿಗೆ ಅರ್ಪಿಸುವ ನೈವೇದ್ಯವು ತಾಮಸಿಕ ಸ್ವರೂಪದ್ದಾಗಿರುತ್ತದೆ. ಆದ್ದರಿಂದಲೇ ಭೈರವ ಅಷ್ಟೋತ್ತರ ಶತನಾಮದಲ್ಲಿ ಆತನನ್ನು ಸ್ಮಶಾನ ವಾಸೀ, ಮಾಂಸಾಶೀ, ರಕ್ತಪಃ ಪಾನಪಃ ಎಂದೆಲ್ಲ ವರ್ಣಿಸಲಾಗಿದೆ. 

ಉಜ್ಜಯನಿ ಕಾಲಭೈರವ ದೇಗುಲ

ಆಧುನಿಕ ಪೂರ್ವ ಕಾಶೀ ಮತ್ತು ಮೈದಾಗಿನ್ ಪಾರ್ಕ್ ಇವುಗಳ ನಡುವಣ ಚೌಖಂಬಾ ಓಣಿಯಲ್ಲಿರುವ ಕಾಲಭೈರವನನ್ನು ಭೈರೋನಾಥ್ ಎಂದು ಕರೆಯುವರು. ಪೂರ್ವಕಾಲದಲ್ಲಿ ಕಾಶಿಯ ಈ ಸ್ಧಳವು ಶೈವ ಸಂತರು ಮತ್ತು ಉಗ್ರ ಕಾಪಾಲಿಕರ ಅಧ್ಯಾತ್ಮಕೇಂದ್ರವಾಗಿತ್ತು. ಇವರ ಮುಂದಿನ ಸಂತತಿಯನ್ನು ಗೋರಖನಾಥ್ ಮತ್ತು ಗಾಣಾಪತ್ಯ ಯೋಗಿಗಳೆಂದು ಗುರ್ತಿಸುತ್ತಾರೆ.  ಇವರಿಗೆ ಸಾಂಪ್ರದಾಯಕ ಜಾತಿ ಮತಗಳ ಯಾವುದೇ ಹಂಗು ಇರುವುದಿಲ್ಲ. ಇಂದು ಭೈರವನ ದೇಗುಲಗಳು ಇಂಥ ಉಗ್ರ ಧಾರ್ಮಿಕ ವಾದಿಗಳ ನೆಲೆಯಾಗಿಲ್ಲವಾದರೂ, ಸಾಧಾರಣ ಗೃಹಸ್ಥರು ಈ ದೇವನನ್ನು ಒಪ್ಪಿಕೊಂಡು ಸಾತ್ವಿಕ ಆಹಾರದ ನಿವೇದನೆಯನ್ನು ಮಾಡುತ್ತಾರೆ. ಇದೇ ಪರಂಪರೆಯು ಮುಂದುವರೆದು ಭಾರತ ಉಪಖಂಡದಲ್ಲಿ ವಿಶ್ವನಾಥನ ದೇವಾಲಯಗಳಿಗಿಂತಲೂ ಭೈರವನ ದೇವಾಲಯಗಳೇ ಅಧಿಕವಾಗಲು ಕಾರಣವಾಯಿತು. 

* * * * * * *



ಸೋಮವಾರ, ಜುಲೈ 2, 2012

ಭೈರವ - ಪದ ನಿಷ್ಪತ್ತಿ



ಭೈರ, ಭೈರವ ಇತ್ಯಾದಿ..........

ಪದಗಳ ನಿಷ್ಪತ್ತಿಯನ್ನು ತಿಳಿಯುವುದೆಂದರೆ, ಅವುಗಳ ಮೂಲವನ್ನು ಅರಸಿದಂತೆ. ಇಂತಹ ಕುತೂಹಲಗಳು ಶೋಧಕನಿಗೆ ಆ ಪದದ ಹಲವು ಮಗ್ಗುಲುಗಳನ್ನು ಪರಿಚಯಿಸುತ್ತದೆ. ಐತಿಹಾಸಿಕ ದೃಷ್ಟಿಯಿಂದ ಪದದ ಮೂಲವನ್ನು ಅರಸಿ ಹೋದವನಿಗೆ ಇದಕ್ಕೆ ಇಷ್ಟೊಂದು ದೀರ್ಘ ಇತಿಹಾಸವಿದೆಯೇ ಎಂದು ಬೆರಗು ಹುಟ್ಟಿಸುವುದರ ಮೂಲಕ, ಆ ಪದವು ಸಂಸ್ಕೃತಿಯಲ್ಲಿ ಬೆರೆತು ಹೋದ ಬಗೆಯನ್ನೂ ತಿಳಿಸುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯಾಗಿ ಪಾವೆಂ ಆಚಾರ್ಯರ ಪದಾರ್ಥ ಚಿಂತಾಮಣಿಯನ್ನು ಹೆಸರಿಸಬಹುದು. 

ಇದರ ಪ್ರಸ್ತಾಪವೇಕೆಂದರೆ, ಪ್ರಸ್ತುತ ಬ್ಲಾಗಿನ ವಿಷಯವಾದ ಕಾಲಭೈರವನ ಅರಸಾಟದಲ್ಲಿ ಆ ಶಬ್ದದ ಮೂಲ ಮತ್ತು ಅದರ ವ್ಯಾಪ್ತಿಗಳನ್ನು ನೋಡಬೇಕೆನಿಸಿತು. ಇದಕ್ಕೆ ಪೂರಕವಾಗಿ ಮಿತ್ರರಾದ ಕಡೂರಿನ ಕುಮಾರಸ್ವಾಮಿಯವರು, ಭೈರವ ಶಬ್ದವು ಜಾತಿಸೂಚಕವಾಗಿ ಬಳಕೆಯಾಗುತ್ತಿರುವುದರ ಬಗ್ಗೆ ಗಮನ ಸೆಳೆದಿದ್ದರು. ಇದನ್ನೇ ಅವಲೋಕಿಸುತ್ತಿದ್ದಾಗ, ಭೈರ, ಬೈರ ಮುಂತಾದ ಹೆಸರುಗಳು ಆ ದೇವರನ್ನು ಕುರಿತಾದ ಆರಾಧನಾ ಸಂಪ್ರದಾಯದ ಮುಂದುವರಿಕೆಯಾಗಿ ಬಂದಿರಬೇಕು ಎನ್ನಿಸಿತು. ಬೈರವನ ಆರಾಧನೆಯು ಉತ್ತರ ಭಾರತದಲ್ಲಿರುವಂತೆ, ದಕ್ಷಿಣದಲ್ಲೂ ಪ್ರಚಲಿತವಿದೆ. ವಿಶೇಷತಃ ಕರಾವಳಿ ಪ್ರದೇಶದಲ್ಲಿ, ಪಂಜುರ್ಲಿ, ಬೊಬ್ಬರ್ಯಗಳಂತೆಯೇ ತುಳುನಾಡಿನಲ್ಲಿ ಭೈರವನ ಹೆಸರಿನ ಒಂದು ಭೂತವಿದೆ. ಇದರ ಆರಾಧನೆಯು ಮುಂದೆ ಪ್ರಚಲಿತವಾದಂತೆಲ್ಲ, ಆದಿರುವ ನೆಲೆಯಲ್ಲಿ ತ್ರಿಶೂಲ, ವಿಭೂತಿ, ಡಮರು ಮುಂತಾದ ಶೈವ ಸಂಕೇತಗಳನ್ನು ಸ್ಥಾಪಿಸಿ ತಮ್ಮ ಶೈವ ಸಂಪ್ರದಾಯವನ್ನು ಬಲಗೊಳಿಸಿಕೊಂಡಿದ್ದಾರೆ. “ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ-ಗಿರಿಜನ ಸಾಮಾಜಿಕ ಇತಿಹಾಸ” ಎಂಬ ಕೃತಿಯಲ್ಲಿ, ಪಿ.ಕಮಲಾಕ್ಷ ಅವರುಭೈರವರಾರಾಧನೆಯ ವಿಷಯವನ್ನು ತಿಳಿಸುತ್ತಾ, ಪೂರ್ವದಲ್ಲಿ ಶಿವನು ಕಾಲಭೈರವನ ರೂಪತಾಳಿ ಅವತಾರಕ್ಕೆ ಬಂದು ಜನತೆಯಲ್ಲಿ ದೈವಭಕ್ತಿಯನ್ನು ಹಾಗೂ ದೇವರ ಭಯವನ್ನು, ಧರ್ಮವನ್ನು ಸ್ಥಾಪಿಸುವ ಕಾಲದಲ್ಲಿ ಈ ವರ್ಗದ ಜನರು ಶಿವನ, ಕಾಲಭೈರವ ಅವತಾರದ ದೈವಿಕಶಕ್ತಿಗೆ ಬೆರಗಾಗಿ ಕಾಲಭೈರವನ ದೈವಿಕಶಕ್ತಿಯನ್ನು ನಂಬಿ, ಪೂಜೆ-ಪುನಸ್ಕಾರ ಕೊಟ್ಟು ಆರಾಧನೆ ಮಾಡಿಕೊಂಡು ಬಂದ ಕಾರಣ ಕಾಲಭೈರವನ ಆರಾಧಕರಾದ ಇವರನ್ನು “ಭೈರವರು” ಎಂಬುದಾಗಿಯೂ ಕರೆಯತೊಡಗಿದರು ಎಂಬ ಹಿರಿಯರ ಮಾತಿದೆ, ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೆ ಕೆಲವರು ಭೈರ ಅರಸರ ಪಾಳೆಯಗಾರರಾದ ಕಾರಣ ತಮಗೆ ಭೈರರೆಂದು ಕರೆಯಲಾಯಿತು ಎಂಬ ಅಭಿಪ್ರಾಯ ವನ್ನೂ ವ್ಯಕ್ತಪಡಿಸುತ್ತಾರೆ.

 ಭೈರವ ಪದವು "ಭೇರಿ" ಯಿಂದ ಬಂದಿರಬಹುದೆಂದು ಊಹಿಸಲಾಗಿದೆ. ಸಿ.ಡಿ. ಮ್ಯಾಕ್ಲನ್ ಯೆಂಬ ಆಂಗ್ಲ  ವಿದ್ವಾಂಸರು ತಮ್ಮ ಗ್ಲೋಸರಿ ಆಫ್ ದಿ ಮದ್ರಾಸ್ ಪ್ರೆಸಿಡೆನ್ಸಿ ಎಂಬ ನಿಘಂಟನ್ನು ರಚಿಸಿದ್ದಾರೆ. ಅದರಲ್ಲಿ ಕೆಳಜಾತಿಯ ಜನರು ದೇವಾಲಯಗಳಲ್ಲಿ ಭೇರಿಯನ್ನು ಬಡಿಯುವ ಸೇವೆಗೆಂದು ನಿಯುಕ್ತರಾಗಿದ್ದರು. ಅವರಿಗೆ ದೇವಾಲಯದ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸಂಬಳವಾಗಿ ನೀಡಲಾಗುತ್ತಿತ್ತು. ಇದಲ್ಲದೆ ಅವರು ವೃತ್ತಿಯಿಂದ ಸೈನಿಕರಾಗಿದ್ದರು. ಅಲ್ಲಿಯೂ ಭೇರಿ ಬಡಿಯುವ ಕೆಲಸ ಅವರಿಗೆ ಇರುತ್ತಿತ್ತು. ಹೀಗಾಗಿ ತಮ್ಮ ಪರಿಣತಿಯಿಂದ ಅವರು ದೇವಾಲಯದ ಸೇವೆಗೂ ನಿಯುಕ್ತರಾಗಿರಬಹುದು ಮತ್ತು ಭೇರಿ ಬಾರಿಸುವವನನ್ನು ಭೇರ ಅಥವಾ ಭೈರ ಎಂದು ಕರೆಯಲಾಗುತ್ತಿತ್ತು. 

ನಮ್ಮ ಜಾನಪದ ಸಾಹಿತ್ಯದಲ್ಲಿ ಭೈರವನನ್ನು ಭೈರುವ, ಭೈರೂವ, ಭೈಯರೂಪ ಎಂದೆಲ್ಲ ಹೆಸರಿಸಲಾಗಿದೆ. ಇವರೆಲ್ಲರೂ ಶಿವನ ಭಯಕಂರ ರೂಪವಾದ ಭೈರವ ಆರಾಧಕರೇ ಆಗಿದ್ದಾರೆ. ಬೋರಯ್ಯ ಎನ್ನುವ ಹೆಸರು ಕೂಡ ಭೈರವಯ್ಯ ಎಂಬ ಹೆಸರಿನ ಅಪಭ್ರಂಶ ಅಥವಾ ಗ್ರಾಮೀಣ ರೂಪವೇ ಸರಿ. 

ಹಿಂದಿದ್ದ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಜಾತಿ ಅಂತಸ್ಥುಗಳ ಆಧಾರದ ಮೇಲೆ ತಮ್ಮ ತಮ್ಮ ಕೇರಿ, ಬೀದಿಗಳಲ್ಲಿ ವಾಸಿಸುತ್ತಿದ್ದರು. ಅಥವಾ  ಬಹುಸಂಖ್ಯಾತ ಜಾತಿಯ ಜನರ ಒಕ್ಕಲನ್ನು ಆಯಾ ಜಾತಿಯ ಹೆಸರಿನಿಂದಲೇ ಗುರುತಿಸುವ ಪದ್ಧತಿಯಿತ್ತು. ಬ್ರಾಹ್ಮಣರು ಹೆಚ್ಚಾಗಿರುವ ಸ್ಥಳವು ಅಗ್ರಹಾರವಾದರೆ, ಕುರುಬರ ಎಡೆಯನ್ನು ಕುರುಬರ ಹಟ್ಟಿ ಎಂದು ಕರೆಯಲಾಗುತ್ತಿತ್ತು. ಭೈರರು ವಾಸಿಸುವ ನೆಲೆಗಳಲ್ಲಿನ ಬ್ರಾಹ್ಮಣರು ನೀಡಿದ ನಿಷ್ಪತ್ತಿಯು  ವ್ಯಾಕರಣಾತ್ಮಕವಾಗಿ ಸರಿಯಿದ್ದೀತು ಎಂದೆನಿಸುತ್ತದೆ. ಏಕೆಂದರೆ ಈ ವರ್ಗದ ಜನ, ಊರ ಹೊರಗಿರುತ್ತಿದ್ದರು, ಅವರನ್ನು ಬಾಹಿರರು ಎಂದು ಕರೆಯುತ್ತಿದ್ದರು. ಅದೇ ಮುಂದೆ ಬಹಿರರು, ಬಯಿರ, ಬೈರ ಮುಂತಾಗಿ ಆಡುಮಾತಿನ ಪರಿವರ್ತಗೆ ಒಳಗಾಗಿ, ಕೊನೆಗೆ ಬೈರರೆಂಬ ಪದವೇ ಉಳಿದುಕೊಂಡಿತು. ನಮ್ಮ ಅನೇಕ ಪದಗಳು ತಮ್ಮ ಮೂಲರೂಪವನ್ನು ಕಳೆದುಕೊಂಡಿರುವ ಬಗೆ ಇಂತಹುದೇ ಆದ್ದರಿಂದ  ತಾರ್ಕಿಕವಾಗಿಯೂ ಇದು ಸರಿಯಾಗಿ ಕಾಣುತ್ತದೆ. 

* * * * * * * 

ಶುಕ್ರವಾರ, ಜೂನ್ 1, 2012






ಕಾಲ ಕಾಲಂ...................


ಹಿಂದೆಲ್ಲ ಭೌತವಸ್ತುಗಳ ಪರಿಮಾಣಗಳನ್ನು ಹೇಳುವಾಗ ಮೂರು ಆಯಾಮಗಳನ್ನು ಮಾತ್ರ ಪರಿಗಣಿಸುತ್ತಿದ್ದರು. ಆಲ್ಬರ್ಟ್ ಐನ್ಸ್‌ಟೈನ್ ಅದಕ್ಕೆ ನಾಲ್ಕು ಆಯಾಮಗಳಿವೆ ಎಂದು ನಿರೂಪಿಸಿದರು. ಈ ನಾಲ್ಕನೇ ಆಯಾಮವೇ ಕಾಲ. ಈ ವಿಷಯದಲ್ಲಿ ಸಿದ್ಧರು ಇನ್ನೂ ಹೆಚ್ಚಿನ ಕೆಲಸಮಾಡಿದ್ದರು. ಅವರ ಅಧ್ಯಯನಗಳಲ್ಲಿ ಬೇರೆ ಬೇರೆ ಗ್ರಹಗಳಿಗೆ ಬೇರೆ ಬೇರೆ ಸಮಯದ ಅನ್ವಯವಿದೆಯೆಂದು ಅವರು ಅರಿತಿದ್ದರು. ಕಾಲದ ಚಲನೆಯು ಭೂಮಿಯ ಮೇಲೆ ನಿಧಾನ, ಆದರೆ ಇತರ ಗ್ರಹಗಳಲ್ಲಿ ಅದರ ವೇಗ ಹೆಚ್ಚು. ಕಾಲವು ಅಮೂರ್ತವಾಗಿರಬಹುದು. ಆದರೆ ಅದನ್ನು ಸೇರಿಸಿ ಲೆಕ್ಕಹಾಕುವುದರಿಂದ ವಸ್ತುವಿನ ಬಳಕೆ, ತಾಳಿಕೆಗಳ ಬಗ್ಗೆ ಅದರ ಅಸ್ತಿತ್ವವನ್ನು ನಿರ್ಧರಿಸಬಹುದು. ಆಧ್ಯಾತ್ಮದ ಅಧ್ಯಯನದಲ್ಲಿ ಭೌತಶಾಸ್ತ್ರದ ತತ್ವಗಳನ್ನೂ ಗ್ರಹಿಸಬೇಕಾಗುತ್ತದೆ. ಅಮೂರ್ತ ಅಸ್ತಿತ್ವಗಳಾದ ಗಾಳಿ, ವಾಸನೆಗಳಂಥವುಗಳ ಬಗ್ಗೆ ಅವು ಅಮೂರ್ತವೆನ್ನುವ ಕಾರಣಕ್ಕೆ ಅವುಗಳ ಅಸ್ತಿತ್ವವನ್ನು ಅಲ್ಲಗಳೆಯಲಾಗದು. ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಮೇಲಿಂದ ಮೇಲೆ ಪ್ರಸ್ತಾಪವಾಗುವ ಅಗ್ನಿ, ವಾಯು, ಜಲ, ಪೃಥಿವಿ ಮತ್ತು ತೇಜಸ್‌ಗಳನ್ನು ಸಂಕ್ಷಿಪ್ತವಾಗಿ ಪಂಚಭೂತಗಳೆಂದು ಹೆಸರಿಸುತ್ತೇವೆ. ಇವೆಲ್ಲಕ್ಕೂ ಅಭಿಮಾನಿ ದೇವತೆಗಳು, ಪ್ರತ್ಯಧಿದೇವತೆಗಳನ್ನೂ ಕಲ್ಪಿಸಲಾಗಿದೆ. ಇವೆಲ್ಲಕ್ಕೂ ಹೊರತಾದ ಕಾಲಕ್ಕೂ ಓರ್ವ ಅಭಿಮಾನಿ ದೇವತೆಯಿದ್ದಾನೆ. ಆತನೇ ಕಾಲಭೈರವ. ಇವೆಲ್ಲವನ್ನೂ ಸರಿತೂಗಿಸಿಕೊಂಡು ನಡೆಸುವಾತನೇ ಕಾಲಭೈರವನೆನ್ನುವುದು ಸಿದ್ಧರ ಮತ. 

ಕಾಲಭೈರವನ ಭೌತಿಕ ಸ್ವರೂಪಗಳನ್ನು ಕುರಿತಂತೆ ಹಿಂದಿನ ಲೇಖನಗಳಲ್ಲಿ ಅನೇಕ ಶ್ಲೋಕಗಳು, ಸ್ತುತಿಗಳನ್ನು ನೀಡಲಾಗಿದೆ. ಈ ಲೇಖನದಲ್ಲಿ, ಕಾಲವೆಂಬ ಅಮೂರ್ತಕ್ಕೆ ರೂಪ ನೀಡಿ ಅದನ್ನು ಹೇಗೆ ಸಮರ್ಥವಾಗಿ, ಅರ್ಥಪೂರ್ಣವಾಗಿ ಬಳಸಲಾಗಿದೆ ಎಂಬ ಬಗ್ಗೆ ವಿವರಗಳಿವೆ. ಸಮಯ ಪರಿಪಾಲನೆಯ ಅಗತ್ಯ ಮತ್ತು ಮಹತ್ವಗಳನ್ನು ನಾವೆಲ್ಲರೂ ಚೆನ್ನಾಗಿ ತಿಳಿದಿದ್ದೇವೆ. ಸಮಯದ ಸದುಪಯೋಗ ಮತ್ತು ದುರುಪಯೋಗಗಳು ನಮ್ಮೆಲ್ಲರ ಅನುಭವದಲ್ಲಿದೆ. ಕಾಲಭೈರವನ ಜನನ ವೃತ್ತಾಂತದಲ್ಲಿ ತಿಳಿದುಬರುವಂತೆ, ಬ್ರಹ್ಮನ ಅಹಂಕಾರವನ್ನು ಅಡಗಿಸಲೆಂದು ಆತನ ಆವಿರ್ಭಾವವಾಯಿತಲ್ಲವೆ. ಇದೇ ಕಾಲಭೈರವನು ಮುಂದೆ ಬ್ರಹ್ಮಹತ್ಯಾ ದೋಷದ ನಿವೃತ್ತಿಗೆಂದು ಎಲ್ಲೆಡೆ ಅಲೆದಾಡಿ, ಕಾಶಿಯ ಕಪಾಲಮೋಚನ ಕ್ಷೇತ್ರದಲ್ಲಿ ಅದರಿಂದ ವಿಮುಕ್ತಿ ಪಡೆದನು. ಇಲ್ಲಿ ಗಮನಿಸಬಹುದಾದ ತಾತ್ವಿಕ ಅಂಶವೆಂದರೆ, ಒಳ್ಳೆಯ ಕಾಲ ಅಥವಾ ಕೆಟ್ಟ ಕಾಲಗಳ ಪ್ರಭಾವವು ಮಾನವರಂತೆಯೆ ದೇವರನ್ನೂ ಬಿಟ್ಟದ್ದಲ್ಲ. ವಿವೇಚನೆಯು ಒಂದೆಡೆ ಕೆಲಸಮಾಡಿದರೂ, ಆ ಸಮಯದಲ್ಲಿ ಹಾರಿಹೋಗುವ ವಿವೇಚನಾ ರಹಿತ ವರ್ತನೆಯ ಪ್ರಭಾವಗಳನ್ನು ಈ ಕತೆಯಲ್ಲಿ ಸಂಕೇತಿಕವಾಗಿ ನಿರೂಪಿಸಲಾಗಿದೆ.

ಕಾಲ ಕಾಲಂ ಅಂಬುಜಾಕ್ಷಂ ಎಂಬ  ಪ್ರಯೋಗವು ಶ್ರೀ ಶಂಕರಾಚಾರ್ಯರ ಕಾಲಭೈರವಾಷ್ಟಕದಲ್ಲಿ ಇದೆ. ಆದರೆ ಇಲ್ಲಿನ ಕಾಲನು ಸಮಯವಲ್ಲ, ಬದಲಾಗಿ ಕಾಲ ಅಥವಾ ಮೃತ್ಯು. ಇನ್ನೊಂದು ರೀತಿಯಲ್ಲಿ ಇದಕ್ಕೊಂದು ವಿಶೇಷ ಅರ್ಥವೂ ಇದೆ. ಮೃತ್ಯು ಸಂಭವಿಸಿದ ನಂತರ ವ್ಯಕ್ತಿ/ಜೀವಿಯ ಬಾಹ್ಯ ಅಸ್ತಿತ್ವ ನಷ್ಟಗೊಳ್ಳುತ್ತದೆ. ಅದು ವರ್ತಮಾನ ಕಾಲದಲ್ಲಿ ಕಾಣಿಸದು. ಭೂತಕಾಲಕ್ಕೆ ಸರಿಯುತ್ತದೆ. ಸಮಯದ ವಿವಿಧ ಆಯಾಮಗಳನ್ನು ಕನ್ನಡದ ಪ್ರೇಮಕವಿ ಕೆ.ಎಸ್. ನರಸಿಂಹ ಸ್ವಾಮಿಯವರು ತಮ್ಮ ಗಡಿಯಾರದ ಅಂಗಡಿಯಲ್ಲಿ ಎಂಬ ಕವಿತೆಯಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಅಲ್ಲಿನ ಒಳನೋಟವು ಕಾಲಭೈರವನೆಂಬ ಸಮಯದ ಅಧಿದೇವತೆಯನ್ನು ಕಾಣಿಸಲು ಸಹಾಯಕವಾಗಿದೆ.

ಭೈರವನ ಕುರಿತಾದ ಸಾಹಿತ್ಯವನ್ನು ಓದಿದವರಿಗೆ ಆತನ ಎಂಟು ರೂಪಗಳ ಪರಿಚಯವಿರುತ್ತದೆ. ಅವೆಂದರೆ, ೧. ಅಸಿತಾಂಗ ಭೈರವ, ೨. ರುರು ಭೈರವ, ೩. ಚಂಡ ಭೈರವ, ೪. ಕ್ರೋಧ ಭೈರವ, ಉನ್ಮತ್ತ ಭೈರವ, ೫. ಕಪಾಲ ಭೈರವ, ೬. ಭೀಷಣ ಭೈರವ ಮತ್ತು ೮. ಸಂಹಾರ ಭೈರವ. ಈ ಹೆಸರುಗಳನ್ನು ಓದುವಾಗ, ಮೇಲ್ನೋಟಕ್ಕೆ ಅವು ಭಯಾನಕತೆಯ ಇನ್ನೊಂದು ರೂಪದಂತೆ ಕಾಣುತ್ತದೆಯಾದರೂ, ಇವೆಲ್ಲವೂ ಯಾವನೇ ಮನುಷ್ಯ ತಳೆಯಬಹುದಾದ ರೂಪಗಳೇ ಸರಿ. ಅವನ ವರ್ತನೆಯೂ ಹಾಗಿದ್ದೀತು.  ಆದರೆ ಅವುಗಳಲ್ಲಿ ತಾತ್ವಿಕ ಅಂಶಗಳಿವೆ. ಆ ದೃಷ್ಟಿಯಲ್ಲಿ ಕಾಣುವ ಅಂಶಗಳ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ. ಮುಂದೆ ಪ್ರತಿಯೊಂದು ರೂಪಕ್ಕೆ ೮ ರೂಪಗಳಂತೆ ಒಟ್ಟು ೬೪ ರೂಪಗಳಿವೆ. ಈ ಅರವತ್ನಾಲ್ಕು ರೂಪಗಳನ್ನು ಆದಿಚುಂಚನಗಿರಿಯ ಶ್ರೀ ಕಾಲಭೈರವ ಮಂದಿರದಲ್ಲಿ ಸುಂದರವಾಗಿ, ಅವುಗಳ ಹೆಸರುಗಳ ಹೆಸರುಗಳ ಸಹಿತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಅದರ ಕೆಲವು ಚಿತ್ರಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ. 

೧. ಅಸಿತಾಂಗ ಭೈರವ - ಸೃಷ್ಟಿ ಸಾಮರ್ಥ್ಯವನ್ನು ನೀಡಬಲ್ಲವ



೨.ರುರು ಭೈರವ - ಗುರು ಸ್ವರೂಪನಾದವನು



೩. ಚಂಡಭೈರವ - ಸ್ಪರ್ಧೆಗಳು ಮತ್ತು ಪ್ರತಿಸ್ಪರ್ಧಿಗಳನ್ನು ಗೆಲ್ಲುವ ಸತ್ವವನ್ನು   ನೀಡುವವನು


೪. ಕ್ರೋಧ ಭೈರವ - ಬೃಹತ್ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಣೆ ನೀಡುವವನು


೫. ಉನ್ಮತ್ತ ಭೈರವ - ಋಣಾತ್ಮಕ ಅಹಂಕಾರ ಮತ್ತು ವಿನಾಶಕರ ಸ್ವಪ್ರಶಂಸೆಗಳನ್ನು ಹತ್ತಿಕ್ಕುವವನು


೬. ಕಪಾಲ ಭೈರವ - ಎಲ್ಲ ಅಪ್ರಯೋಜಕವಾದ ಕಾರ್ಯಗಳಿಗೆ ಅಂತ್ಯ ಹಾಡುವವನು


೭. ಭೀಷಣ ಭೈರವ - ದುಷ್ಟ ಶಕ್ತಿಗಳು ಮತ್ತು ಋಣಾತ್ಮಕ ಭಾವಗಳಿಂದ ಮುಕ್ತಿ ನೀಡುವವನು


8. ಸಂಹಾರ ಭೈರವ - ಪುರಾತನ ಕರ್ಮಭಾರಗಳ ಪರಿಹಾರಕ.


* * * * * * * 

ಮಂಗಳವಾರ, ಮೇ 1, 2012

ಶ್ರೀ ಕಾಲಭೈರವ ಪಂಚರತ್ನ ಸ್ತೋತ್ರಮ್






ಶ್ರೀ ಶಂಕರಾಚಾರ್ಯ ಕೃತ ಕಾಲಭೈರವಾಷ್ಠಕವು ಅತ್ಯಂತ ಜನಪ್ರಿಯವಾಗಿದೆ. ಅದೇ ರೀತಿ ಇಲ್ಲೊಂದು ಅಪರೂಪದ ಪಂಚರತ್ನ ಸ್ತೋತ್ರವೂ ದೊರಕಿದೆ. ಚಿಕ್ಕದಾಗಿದ್ದು, ಅರ್ಥಪೂರ್ಣವಾಗಿರುವ ಈ ಪಂಚರತ್ನ ಸ್ತೋತ್ರವು ಪ್ರತಿದಿನ ಪಠಿಸಲು ಸುಲಭವಾಗಿದೆ. ಆಸಕ್ತರು ಇದರ ಪ್ರಯೋಜನ ಪಡೆಯಲೆಂದು ಆಶಯ.



ಶ್ರೀ ಕಾಲಭೈರವ ಪಂಚರತ್ನ ಸ್ತೋತ್ರಮ್


            ೧. ಖಡ್ಗಂ ಕಪಾಲಂ ಡಮರುಂ ತ್ರಿಶೂಲಂ |
                ಹಸ್ತಂಭುಜೇ ಸಂತತಂ ತ್ರಿನೇತ್ರಂ ||
                ದಿಗಂಬರಂ ಭಸ್ಮ ವಿಭೂಷಿತಾಂಗಂ |
                ನಮಾಮ್ಯಹಂ ಭೈರವಂ ಇಂದುಚೂಡಮ್ ||

೨. ಕವಿತ್ವದಂ ಸತ್ ವರಮೇವ ಮೂಢಾನ್ |
ನತಾಲ್ಯೈ ಶಂಭು ಮನೋಭಿರಾಮಮ್ ||
ನಮಾಮಿ ಯಾಸೀಕೃತ ಸಾರಮೇಯಮ್ |
ನಮಾಮ್ಯಹಂ ಭೈರವಂ ಇಂದುಚೂಡಮ್ ||

             ೩. ಜರಾದಿ ದುಃಖೌಘ ವಿಭೇದ ದಕ್ಷಮ್ |
               ವಿರಾಗಿ ಸಂಸೇವ್ಯ ಪಾದಾರಾವಿಂದಂ ||
               ನರಪತಿಪಥ್ವಾ ಪ್ರಥಮಾಸುನಾಂದ್ರೇ |
               ನಮಾಮ್ಯಹಂ ಭೈರವಂ ಇಂದುಚೂಡಮ್ ||

೪. ಸಮಾಧಿ ಸಂಪತ್ ಪ್ರಥಮಾನ ತೇಭ್ಯೋ |
ರಮಾತ್ವದ್ ಯಾಚಿತ ಪಾದಪಾದಮ್ ||
ಸಮಾಧಿನಿಷ್ಠೋ ಸ್ತರಸಾಧಿಗಮ್ಯಮ್ |
ನಮಾಮ್ಯಹಂ ಭೈರವಂ ಇಂದುಚೂಡಮ್ ||

               ೫. ಗ್ರಾಮಗಮ್ಯಂ ಮನಸಾಭಿದೂರಮ್ |
               ಚರಾಚರಸ್ಯ ಪ್ರಭವಾತಿ ಹೇತುಮ್ ||
               ಕರಾದಿಶೂನ್ಯ ಮಾತಾಭಿರಮ್ಯಮ್ |
               ನಮಾಮ್ಯಹಂ ಭೈರವಂ ಇಂದುಚೂಡಮ್ ||

* * * * * * * 

ಭಾನುವಾರ, ಏಪ್ರಿಲ್ 1, 2012

ಭೈರವ : ಒಂದು ಐತಿಹಾಸಿಕ ಅಧ್ಯಯನ


ಅಧ್ಯಯನದ ಆಸಕ್ತಿಯು ಅಧ್ಯಯನ ಮಾಡುವವನನ್ನು ಎಲ್ಲೆಲ್ಲಿಗೆ ಕೊಂಡೊಯ್ಯುತ್ತದೆ ಎಂದು ನೆನೆದರೆ ಆಶ್ಚರ್ಯವಾಗುತ್ತದೆ. ಅದಕ್ಕೆ ಬೇಕಾಗಿರುವ ಸಾಹಿತ್ಯ, ಚಿತ್ರಗಳು, ಸಂದರ್ಭಗಳು ನಮಗರಿವಿಲ್ಲದಂತೆ ನಮ್ಮೆದುರು ಬರುತ್ತವೆ. ಅದನ್ನು ಆ ಸಮಯಕ್ಕೆ ಸರಿಯಾಗಿ ಗ್ರಹಿಸಿ, ಉಳಿಸಿಕೊಂಡರೆ ಉಪಯುಕ್ತವಾಗುತ್ತವೆ. ಇಂಥ ಅನುಭವಗಳು ನಿಮ್ಮದೂ ಆಗಿರಬಹುದು. 

ಈ ಮೊದಲು ಪ್ರಸ್ತಾಪಿಸಿದಂತೆ, ಭೈರವನ ಕುರಿತಾದ ನನ್ನ ಅಧ್ಯಯನಕ್ಕೆ ಆತನ ಬಗೆಗಿನ ಭಕ್ತಿ ಮಾತ್ರ ಕಾರಣವಾಗಲಿಲ್ಲ. ಶೈವ ಭಕ್ತಿ ಪರಂಪರೆ ಪುರಾತನವಾದುದು. ಅದರಲ್ಲಿ ಶಿವನ ಈ ರೂಪವು ನಂತರ ಬಂದು ಸೇರಿಕೊಂಡಿತು. ಹೀಗಾಗಿ ಇದಕ್ಕೆ ತಕ್ಕ ಐತಿಹಾಸಿಕ, ಪೌರಾಣಿಕ ಮಹತ್ವಗಳು ಇದೆಯೆಂದು ತರ್ಕಿಸಲು ಅವಕಾಶವಿದೆ. ಐತಿಹಾಸಿಕವಾಗಿಯೂ ಭೈರವನ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆಯೆನ್ನುವುದು, ನನ್ನ ಪಯಣದಲ್ಲಿ ತಿಳಿಯತೊಡಗಿತು. ಹೀಗಾಗಿ ಭೈರವನ ಬಗ್ಗೆ ನನ್ನ ಗಮನಕ್ಕೆ ಬಂದ ಲೇಖನಗಳು, ಚಿತ್ರಗಳು, ಮಾಹಿತಿಗಳು, ಶ್ಲೋಕಗಳು, ಅಷ್ಟಕಗಳು, ಸಹಸ್ರನಾಮಗಳು, ಆತನ ದೇವಾಲಯಗಳ ವಿವರಗಳು ಮುಂತಾದ ಸಾಹಿತ್ಯವನ್ನು ಸಂಗ್ರಹಿಸುತ್ತ ನಡೆಯುತ್ತಿರುವೆ. ಅದರಲ್ಲಿ ಇತಿಹಾಸಕಾರರು, ಸಂಶೋಧಕರು ಈ ದೇವನನ್ನು ಒಂದು ಹೊಸ ಪಂಥದ ಕೇಂದ್ರವನ್ನಾಗಿ ನಡೆಸಿದ ಅಧ್ಯಯನಗಳ ಓದು ಆಕರ್ಷಿಸುವಂತಿದೆ. ಭೈರವನ ಕುರಿತಾದ ಐತಿಹಾಸಿಕ ಮಗ್ಗುಲುಗಳನ್ನು ನೋಡುತ್ತ ಹೋದಾಗ ಇತ್ತೀಚೆಗೆ ಒರಿಸ್ಸಾದ ಇತಿಹಾಸಜ್ಞ ಡಾ. ಶಶಾಂಕ ಪಾಂಡೆಯವರ ಲೇಖನ ಮನಸೆಳೆಯಿತು. 

ಇತಿಹಾಸಜ್ಞರು ಶಿಲ್ಪಗಳನ್ನು, ದೇವಾಲಯಗಳನ್ನು ಅಧ್ಯಯನ ಮಾಡುವ, ಅರ್ಥಮಾಡಿಕೊಳ್ಳುವ, ತರ್ಕಿಸುವ ಕ್ರಮಗಳು ವಿಶಿಷ್ಟವಾಗಿರುತ್ತವೆ. ದೊರೆತ ಸಾಕ್ಷ್ಯಾಧಾರಗಳ ಜತೆಗೆ ತಮ್ಮ ತರ್ಕ, ಊಹೆಗಳನ್ನು ಹದವಾಗಿ ಬೆರೆಸಿ ನಿರ್ಣಯಕ್ಕೆ ಬರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಅದು ನಿಜವೇ ಆಗಿರುತ್ತದೆ. ಒಂದೊಮ್ಮೆ ವಿವಾದಗಳು ಉದ್ಭವಿಸಿದರೆ, ಚರ್ಚೆಗಳಾಗುತ್ತವೆ. ನಂತರ ತೀರ್ಮಾನಗಳಾಗುತ್ತವೆ. ಇದು ಸಾಧಾರಣವಾಗಿ ಇತಿಹಾಸಜ್ಞರು ಅನುಸರಿಸುವ ಕ್ರಮ. ಈ ಎಲ್ಲ ವಿಧಾನಗಳು ಡಾ. ಪಾಂಡಾರ ಲೇಖನದಲ್ಲಿ ಎದ್ದು ಕಾಣುತ್ತವೆ.

ನಮ್ಮ ಪ್ರವಾಸಕಾಲದಲ್ಲಿ ಅನೇಕ ಪುರಾತನ ಸ್ಮಾರಕಗಳನ್ನು, ದೇವಾಲಯಗಳನ್ನು ನಾವು ಸಂದರ್ಶಿಸುತ್ತೇವೆ. ಇತಿಹಾಸ ತಜ್ಞರ ಕಾರ್ಯವಿಧಾನದ ಪರಿಚಯವಿದ್ದು, ಅವರ ದೃಷ್ಟಿಕೋನದಿಂದ ಸ್ವಲ್ಪವಾದರೂ ಊಹಿಸುವ, ಕಲೆಹಾಕಿದ ಮಾಹಿತಿಗಳನ್ನು ವಿಶ್ಲೇಷಿಸುವ ಯತ್ನಮಾಡುವಂತಾದರೆ, ನಮ್ಮ ಪ್ರವಾಸಕ್ಕೆ ಹೊಸತೊಂದು ಆಯಾಮ ದೊರೆತಂತಾಗುತ್ತದೆ. ಇಂಥ ದೃಷ್ಟಿಯಿಂದ ಡಾ. ಪಾಂಡಾರ ಪ್ರಬಂಧವೊಂದರ ಸಂಕ್ಷಿಪ್ತ ಸಂಗ್ರಹಾನುವಾದವನ್ನು ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ. 

ಒರಿಸ್ಸಾದ ಮಹಾನದಿ ಕಣಿವೆಯಲ್ಲಿ 
ಭೈರವನ ಆರಾಧನೆ

 ಸುವರ್ಣಪುರ ಭೈರವ 

ಕ್ರಿ.ಶ. ೪-೫ ನೇ ಶತಮಾನದಲ್ಲಿ ನಳರು ಒರಿಸ್ಸಾದ ನೈಋತ್ಯ ಭಾಗದಲ್ಲಿ ಪ್ರಬಲವಾಗಿದ್ದವರು. ಇವರ ಪೈಕಿ ಪಾಂಡುವಂಶೀಯನಾದ ಮಹಾಶಿವಗುಪ್ತ ಬಾಲಾರ್ಜುನನು ಪರಮ ಶಿವಭಕ್ತನಾಗಿದ್ದನು. ೫೮ ವರ್ಷಗಳ ದೀರ್ಘ ಆಳ್ವಿಕೆ ನಡೆಸಿದ ಈತನ ಸೇನಾಧಿಪತಿಯಾಗಿದ್ದ ದುರ್ಗರಕ್ಷಿತನು ಗುಡಶರ್ಕರಕವೆಂಬ ಗ್ರಾಮವನ್ನು ಶಿವಾಲಯಕ್ಕೆ ದತ್ತಿಯಾಗಿ ನೀಡಿದನು. ಇದಲ್ಲದೆ ಕೊಡಸೀಮಾ ಎಂಬ ಗ್ರಾಮವನ್ನು ಶಿವಭಕ್ತನಾಗಿದ್ದ ಸದಾಶಿವಾಚಾರ್ಯನಿಗೆ ನೀಡಿದ್ದನು. ೮ನೇ ಶತಮಾನದಲ್ಲಿ ಮಧ್ಯಭಾಗದಲ್ಲಿದ್ದ ಮಹಾ ಶಿವಭಕ್ತ ಬಾಲಾರ್ಜುನನ  ಕಾಲಕ್ಕೆ ಒರಿಸ್ಸಾದ ಮಹಾನದಿ ಕಣಿವೆಯಲ್ಲಿ ಭೈರವನ ಆರಾಧನೆ ಪ್ರಚಲಿತವಾಗಿತ್ತು. ಅವರ ಮುಂದಿನ ಸೋಮವಂಶೀಯ ಪೀಳಿಗೆಯವರು ಸುವರ್ಣಪುರದಿಂದ ೯ನೇ ಶತಮಾನದ ಮಧ್ಯಭಾಗದಲ್ಲಿ ಶ್ರೀಪುರದಲ್ಲಿ ನೆಲೆಸಿದರು. ಅಲ್ಲಿದ್ದ ರಣಭಂಜನನ್ನು ಓಡಿಸಿ, ಮಹಾಭವಗುಪ್ತ ಜನಮೇಜಯನೆಂಬುವನು ಕ್ರಿ.ಶ. ೮೫೦ರಲ್ಲಿ ನೆಲೆನಿಂತನು. ಇವನ ಕಾಲದಲ್ಲಿ ಮತ್ತಮಯೂರ ಎಂಬುವವನು ಶೈವಪಂಥದ ಗುರುವಾಗಿದ್ದ ಆಚಾರ್ಯ ಗಗನಶಿವನೆಂಬ ಮುನಿಯ ಗೌರವಾರ್ಥ ಇಂದಿನ ರಾಣಿಪುರದ ಜರಿಯಾಲ್‌ನಲ್ಲಿ ಶಿವಾಲಯವನ್ನು ಕಟ್ಟಿಸಿದನು. ಶತ್ರು ಭಂಜನದೇವ ಮತ್ತು ರಣಭಂಜದೇವ ಇವುರು ನೀಡಿರುವ ದತ್ತಿಯ ತಾಮ್ರಶಾಸನದಲ್ಲಿ ಭೈರವನ ಆರಾಧನೆಯ ಬಗ್ಗೆ ಹೀಗೆ ಬರೆಯಲಾಗಿದೆ.

              ಸಂಹಾರಕಾರ ಹೃತಭುಗ್ವಿಕರಾಳಘೋರ | 
              ಸಂಹ್ರಾಂತಕಿಂಕರ ಕೃತಾಂತ ನಿತಾಂತವಿನ್ನಂ ||
             ವಿನ್ನಾಂಧಕಾಸುರ ಮಹಾಗಹನತಾ ಪತ್ರಂ | 
             ತತ್ ಭೈರವಂ ಹರವಪುರ್ಬಹುತಃ ಪ್ರಪತ್ತು ||

ಇದರಿಂದ ಭಂಜನರಾಜರು ಭೈರವ ಪಂಥವನ್ನು ಮಹಾನದಿಯ ಮೇಲ್ಕಣಿವೆಯಲ್ಲಿ  ಕ್ರಿ.ಶ. ೮-೯ನೇ ಶತಮಾನದಿಂದ ಜನಪ್ರಿಯಗೊಳಿಸಿದರೆಂದು ತಿಳಿಯುತ್ತದೆ.

ಶಿಲಾಶಾಸನಗಳಿಂದ ತಿಳಿದುಬರುವಂತೆ ಮಹಾನದಿ ಕಣಿವೆಯಲ್ಲಿ ಕ್ರಿ.ಶ. ೧ನೇ ಶತಮಾನದಿಂದಲೂ ಭೈರವನ ಆರಾಧನೆಯು ನಡೆಯುತ್ತಿದ್ದ ಕುರುಹುಗಳಿವೆ. ೧೯೮೩ರಲ್ಲಿ ಬೆಳಕಿಗೆ ಬಂದ ಜುನಾಗಢದ ಬಂಕಾಪೈಕ್‌ಪಾದ ಎಂಬಲ್ಲಿ  ದೊರೆತ ಒಂದು ಬೈರವನ ವಿಗ್ರಹದ ಪದತಲದಲ್ಲಿ ೨ ಸಾಲುಗಳ ಶಾಸನವಿದೆ.  ಇದು ಪ್ರಾಕೃತ ಭಾಷೆಯಲ್ಲಿದ್ದು ಮುರಿದ ಭೈರವನ ಪೀಠದ ಕೆಳಗೆ "ರ" ಎಂಬ ಅಕ್ಷರವಿದೆ. ಇಂಥ "ರ" ಅಕ್ಷರವು ೪ ರಿಂದ ೮ ನೇ ಶತಮಾನದಲ್ಲಿ ಬಳಕೆಯಾಗುತ್ತಿತ್ತು. ಕಾಲಹಂದಿ ಜಿಲ್ಲೆಯ ಮೋಹನಗಿರಿ ಎಂಬ ಊರಿನಲ್ಲಿರುವ ಧವಳೇಶ್ವರ ಶಿವಮಂದಿರದಲ್ಲಿ "ವ್ಯೂಹ ಭೈರವ" ನ ವಿಗ್ರಹವು ದೊರೆತಿದ್ದು, ಇದು ಕೂಡ ೮ನೇ ಶತಮಾನಕ್ಕೆ ಸೇರಿದ್ದೆಂದು ಇತಿಹಾಸಜ್ಞ ಎಸ್. ಎನ್. ರಾಜಗುರು ಗುರುತಿಸಿದ್ದಾರೆ. ಇದೇ ದೇವಾಲಯದ ಗರ್ಭಗೃಹದ ಹೊರಬಾಗಿಲಿನಲ್ಲಿ  ನರ್ತಿಸುತ್ತಿರುವ ಭೈರವರ ದ್ವಾರಪಾಲಕ ವಿಗ್ರಹವಿದೆ. ಬಲ ಭಾಗದಲ್ಲಿ ದೊಡ್ಡ ದಂಡವನ್ನು ಹಿಡಿದಿರುವ ಶೈವ ಸನ್ಯಾಸಿಯು ಸಮಭಂಗಿಯಲ್ಲಿ ನಿಂತಿರುವ ವಿಗ್ರಹವಿದೆ. ಪಾಶುಪತ ಪಂಥದ ಗುರುವಾದ ಲಕುಲೀಶನು ತನ್ನ ಶಿಷ್ಯರೊಂದಿಗೆ ಇರುವ ತೋರಣ ಶಿಲ್ಪವಿದ್ದು, ಆ ಕಾಲದಲ್ಲಿ ಕಾಪಾಲಿಕರ ಪ್ರಾಬಲ್ಯವಿದ್ದುದನ್ನು ಸೂಚಿಸುತ್ತದೆ. ರಣಭಂಜನದೇವನ ತಾಮ್ರ ಶಾಸನದಲ್ಲಿ ಆತನು ಭೈರವನ ಕೃಪೆಗೆ ಪಾತ್ರನಾಗಿದ್ದಂತೆಯೇ, ಸ್ತಂಭೇಶ್ವರಿಯ ಕೃಪೆಗೂ (ಸ್ತಂಭೇಶ್ವರಿ ಲಬ್ಧ ವರ ಪ್ರಸಾದ) ಪಾತ್ರನಾಗಿದ್ದನೆಂದು ತಿಳಿಸಲಾಗಿದೆ. ಭೈರವನ ಆರಾಧನೆಯ ಜತೆಗೆ ಸ್ತಂಭೇಶ್ವರಿಯ ಆರಾಧನೆಯೂ ಆ ಕಾಲದಲ್ಲಿ ಪ್ರಚಲಿತವಿತ್ತೆನ್ನಲು ಪರ್ವತವರ್ಧಕ ವಂಶಜನಾದ ತುಷ್ಠಿಕರ ಮಹಾರಾಜನ ತಾಮ್ರಶಾಸನಗಳನ್ನು ಗ್ರಹಿಸಬಹುದು. 

ಸ್ವರ್ಣಾಕರ್ಷಣ ಭೈರವ
ಜುನಾಗಡ್‌ನಲ್ಲಿ ಮೇಲೆ ಹೇಳಿದ ವಿಗ್ರಹಗಳಲ್ಲದೆ, ಅದಕ್ಕಿಂತ ಚಿಕ್ಕದಾದ ಎರಡು ವಿಗ್ರಹಗಳು ಇಲ್ಲಿನ ಪಂಚಾಯತ್ ಕಛೇರಿ ಕಟ್ಟಡದ ಸಮೀಪದಲ್ಲಿ ದೊರೆತಿದೆ. ಇವುಗಳಲ್ಲಿ ಒಂದು ಒಂದೂಕಾಲು ಅಡಿ ಎತ್ತರವಾಗಿದ್ದು, ನಾಲ್ಕು ಕೈಗಳನ್ನು ಹೊಂದಿದೆ. ಮತ್ತೊಂದು ವಿಗ್ರಹವು ಎರಡೂವರೆ ಅಡಿ ಎತ್ತರವಿದ್ದು ಇದು ಅನೇಕ ಆಭರಣಗಳಿಂದ ಅಲಂಕೃತವಾಗಿದೆ. ಈ ವಿಗ್ರಹವನ್ನು "ಸ್ವರ್ಣಾಕರ್ಷಣ ಭೈರವ" ನೆಂದು ಕರೆಯುವರು. ಬಂಕಾಪೈನ್ ಪಾದ ಇಲ್ಲಿ ದೊರೆತಿರುವ ವಿಗ್ರಹದ ಎತ್ತರ ಆರು ಅಡಿ, ನಿಂತಿರುವುದು ಸಮಭಂಗಿಯಲ್ಲಿ. ಈತನು ಊರ್ಧ್ವಲಿಂಗ. ಶೂಲ, ಕಪಾಲಗಳು ಹಿಂದಿನ ಎರಡು ಕೈಗಳಲ್ಲಿದ್ದು, ಮುಂದಿನ ಎಡಗೈ ಕಟ್ಯಾವಲಂಬಿತ (ಸೊಂಟದ ಮೇಲೆ ಕೈಯಿಟ್ಟಿರುವಂತೆ) ಭಂಗಿಯಲ್ಲಿದೆ. ಬಲಗೈನಲ್ಲಿ ಕಮಂಡಲುವಿದೆ. ಇಡೀ ಶರೀರವನ್ನು ಸರ್ಪವು ಸುತ್ತುವರೆದಿದೆ. ಕಾಲಹಂದಿಯ ಬೆಲಖಿಂಡಿ ಗ್ರಾಮದಲ್ಲಿ ಇಷ್ಟೇ ಎತ್ತರದ ಇನ್ನೊಂದು ಭೈರವ ವಿಗ್ರಹವು ಬೆನ್ನು ಮೇಲಾಗಿ ಬಿದ್ದಿತ್ತು. ಇದು ೫-೬ ನೇ ಶತಮಾನದಲ್ಲಿ ಸಪ್ತಮಾತೃಕೆಯರೊಡನೆ ಪೂಜೆಗೊಳ್ಳುತ್ತಿತ್ತು. 

ಸಂಕುಶಗುಡದ ಭೈರವ 
ಅದೇ ರೀತಿ ಇಲ್ಲಿಗೆ ಸಮೀಪವಿರುವ ಸಂಕುಶಗುಡ ಎಂಬಲ್ಲಿ ಸಮಭಂಗಿಯಲ್ಲಿರುವ ಭೈರವನ ವಿಗ್ರಹ ದೊರೆಯಿತು. ಇದು ದೇವಾಲಯದ ಗರ್ಭಗೃಹದಲ್ಲಿ ಇದ್ದುದಕ್ಕೆ ಸಾಕ್ಷಿಯಾಗಿ ಈ ವಿಗ್ರಹದ ಎರಡು ಬದಿಗಳಲ್ಲಿ ಇಬ್ಬರು ಭಕ್ತರ ಚಿತ್ರಗಳಿವೆ. ಮೇಲ್ಭಾಗದಲ್ಲಿ ಕೈಗಳಲ್ಲಿ ಹಾರಹಿಡಿದು ಹಾರುತ್ತಿರುವ ವಿದ್ಯಾಧರ ಸ್ತ್ರೀ ಮತ್ತು ಪುರುಷರ ಚಿತ್ರಗಳಿವೆ. ಕೆಳಭಾಗದಲ್ಲಿ ಶಿವಗಣಗಳ ಜತೆಗೆ ಮಹಿಳೆಯರ ಚಿತ್ರಗಳಿದ್ದು, ಅವರಲ್ಲಿ ಒಬ್ಬಳು ಚಾಮರ ಬೀಸುತ್ತಿದ್ದರೆ, ಮತ್ತೊಬ್ಬಳು ಕುಳಿತು ಅಂಜಲಿ ಮುದ್ರೆಯಲ್ಲಿ ಪ್ರಾರ್ಥಿಸುತ್ತಿದ್ದಾಳೆ. ಪೀಠದ ತುದಿಯಲ್ಲಿ ಕುಳಿತಿರುವ ಭಂಗಿಯಲ್ಲಿರುವ ನಂದಿಯ ತಲೆಯು ತನ್ನ ಸ್ವಾಮಿಯನ್ನು ನೋಡುತ್ತಿದ್ದು, ಇದನ್ನು ಮತ್ಸ್ಯ ಪುರಾಣದಲ್ಲಿ "ದೇವ ವೀಕ್ಷಣಾ ತತ್ಪರಃ" ಎಂದು ವರ್ಣಿಸಲಾಗಿದೆ. ಬಲಭಾಗದಲ್ಲಿ ದಪ್ಪ ಹೊಟ್ಟೆಯ ಯಕ್ಷನ ಚಿತ್ರವಿದೆ. ಮೋಹನಗಿರಿ ಮತ್ತು ಸಂಕುಶಗುಡದ ಈ ವಿಗ್ರಹಗಳಲ್ಲಿ ಅನೇಕ ಸಾಮಾನ್ಯ ಅಂಶಗಳಿದ್ದು, ಇವು ೭-೮ನೇ ಶತಮಾನಕ್ಕೆ ಸೇರಿದವು ಎಂದು ನಿರ್ಣಯಿಸಬಹುದು. ಸಂಕುಶಗುಡದ ಸಮೀಪದಲ್ಲೇ ದೊರೆತಿರುವ ಇನ್ನೊಂದು ಭೈರವ ವಿಗ್ರಹದ ಅಕ್ಕ-ಪಕ್ಕಗಳಲ್ಲಿ ಮೂವರು ಮಹಿಳೆಯರು ಅಂಜಲಿ ಮುದ್ರೆಯಲ್ಲಿ ಕುಳಿತಿರುವರು. ಈ ವಿಗ್ರಹವನ್ನು "ಅಗ್ನಿಭೈರವ" ನೆಂದು ಹೆಸರಿಸಲಾಗಿದೆ.

ಉತ್ಕಟಿಕಾಸನ ಭೈರವ  
ಬಾಲಂಘೀರ್  ಜಿಲ್ಲೆಯ ತಿತಿಲಾಗಢದ ಸಮೀಪದಲ್ಲಿ ಗೂಡಾರ್ ಎಂಬ ಗ್ರಾಮವಿದೆ. ಇಲ್ಲಿರುವ ಚಿಕ್ಕ ಬೆಟ್ಟವನ್ನು "ಭೈನ್ರೋ ಪರ್ವತ"ವೆಂದು ಕರೆಯುವರು. ಇಲ್ಲಿರುವ ಬೃಹತ್ ಬಂಡೆಯ ಮೇಲೆ "ಏಕಪಾದ ಭೈರವ" ನನ್ನು ಚಿತ್ರಿಸಲಾಗಿದೆ.ಈ ಶಿಲ್ಪದ ಬಲಭಾಗದಲ್ಲಿರುವ ಪಟ್ಟಿಕೆಗಳಲ್ಲಿ ಕೆಳ ಭಾಗದಲ್ಲಿ ಕಾಳಿ ಅಥವಾ ಯೋಗೇಶ್ವರಿಯು ಓರ್ವ ರಾಕ್ಷಸನೊಡನೆ ಇರುವಂತೆ ಚಿತ್ರಿಸಲಾಗಿದ್ದು, ವೈಷ್ಣವಿ ಮತ್ತು ಮಾಹೇಶ್ವರಿಯರ ಎರಡು ಮಾತೃಕಾ ಚಿತ್ರಗಳಿವೆ. ಬಲಭಾಗದಲ್ಲಿ  ಇನ್ನೊಂದು ಬಂಡೆಯ ಮೇಲೆ ವಾರಾಹೀ, ಚಾಮುಂಡೀ ಮತ್ತು ಗಣೇಶ ವಿಗ್ರಹಗಳನ್ನು ಕೆತ್ತಲಾಗಿದೆ. ಏಕಪಾದ ಭೈರವನ ಈಶಾನ್ಯಕ್ಕೆ ಇರುವ ಬಂಡೆಯಲ್ಲಿ ಅಷ್ಟದಳ ಪದ್ಮ ಹಾಗೂ ಒಂದು ಜೋಡಿ ಪಾದಗಳನ್ನು ಕಡೆಯಲಾಗಿದೆ. ಬಂಡೆಗಳ ನಡುವೆ ಚೌಕಾಕಾರದ ಯಂತ್ರವಿದ್ದು, ಅದರಲ್ಲಿ ಎರಡು ಪಾದಗಳನ್ನು ಕೆತ್ತಲಾಗಿದೆ. ಅಂಧಕಾಸುರ ವಧೆ ಮತ್ತು ಮಾತೃಕಾ ವಿಗ್ರಹಗಳ ಚಿತ್ರಗಳಿವೆ. ಇನ್ನೊಂದು ಬಂಡೆಯ ಮೇಲೆ ನಾಲ್ಕು ಕೈಗಳ ಭೈರವನ ವಿಗ್ರಹವಿದ್ದು, ಇದು ಉತ್ಕುಟಿಕಾಸನದಲ್ಲಿ (ಎಂದರೆ ಅಯ್ಯಪ್ಪ ದೇವರ ವಿಗ್ರಹವಿರುವ ಭಂಗಿ) ಕುಳಿತಿದ್ದು, ತೊಡೆಗಳಿಗೆ ಯೋಗಪಟ್ಟಿಕೆಯಿದೆ. ಇದು ತೀರ ವಿರಳ ಶೈಲಿಯ ಭೈರವ ವಿಗ್ರಹವೆನ್ನಬಹುದು. ಆತನ ವಾಹನ ನಾಯಿಯು ಸಮೀಪದಲ್ಲಿ ಓಡುತ್ತಿರುವಂತೆ ಚಿತ್ರಿಸಲಾಗಿದೆ. ವೃತ್ತದೊಳಗೆ ಕೆತ್ತಲ್ಪಟ್ಟ ಪಾದಗಳ ಸಂಕೇತವೆಂದರೆ, ಅವು ಆ ಕಾಲದಲ್ಲಿ ಸಾಮಾನ್ಯವಾಗಿ ಪ್ರಚಲಿತವಿದ್ದ ಪ್ರಬಲ ತಾಂತ್ರಿಕ ಗುರುಗಳಾದ ಶೈವಾಚಾರ್ಯರ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತವೆಯೆಂದು ಡಾ. ಪಾಂಡಾ ಸರಿಯಾಗಿ ಗುರ್ತಿಸಿದ್ದಾರೆ. 

ನರ್ತನ ಭೈರವ 
ಗೂಡಾರ್ ಗ್ರಾಮದ ಈಶಾನ್ಯಕ್ಕೆ ಎಂಟು ಅಡಿ ಎತ್ತರ, ಮೂವತ್ತು ಅಡಿ ಉದ್ದದ ಒಂದು ಶಿಲಾಖಂಡವಿದೆ. ಅದರ ಮೇಲೆ ಸಪ್ತಮಾತೃಕಾ ಸಹಿತವಾದ ಭೈರವ ಊರ್ಧ್ವ ಲಿಂಗ ಶಿಲ್ಪವಿದೆ. ಇದೇ ಬಂಡೆಯ ಹಿಂಬದಿಯಲ್ಲಿ ನಾಲ್ಕು ಕೈಗಳುಳ್ಳ ನರ್ತನ ಭೈರವನ ವಿಗ್ರಹವಿದೆ. ಆತನು ಭೈರವನ ಎಲ್ಲ ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದು, ಕೈಗಳಲ್ಲಿ ಸರ್ಪಗಳಿವೆ. ಇದು ತಾಂತ್ರಿಕಾರಾಧನೆಯಲ್ಲಿ ಬಳಕೆಯಾಗುತ್ತಿದ್ದ ವಿಗ್ರಹ ಶೈಲಿ. ಅದೇ ರೀತಿ,ಗೂಡಾರ್‌ನ ಸಮೀಪದ ರಾಣಿಪುರ ಜರಿಯಾಲ್‌ನಲ್ಲಿ ಮೂರು ಮುಖಗಳುಳ್ಳ ಮತ್ತು ಎಂಟು ಕೈಗಳಿರುವ ಭೈರವ ವಿಗ್ರಹವಿದ್ದು, ಇದು ಆನಂದ ತಾಂಡವ ನರ್ತನಶೈಲಿಯಲ್ಲಿರುವ ಇನ್ನೊಂದು ಅಪರೂಪದ ವಿಗ್ರಹ. ಇದನ್ನು ತೆರೆದ ಮಂಟಪದಲ್ಲಿಟ್ಟು ಪೂಜಿಸಲಾಗುತ್ತಿತ್ತು. ಈ ದೇಗುಲವು ವರ್ತುಲಾಕಾರದಲ್ಲಿತ್ತು ಮತ್ತು ಅರವತ್ತನಾಲ್ಕು ಯೋಗಿನಿಯರ ವಿಗ್ರಹಗಳನ್ನು ಕಡೆಯಲಾಗಿತ್ತು. ಇದು ನಟರಾಜನ ಶೈಲಿಯಲ್ಲಿರುವಂತೆ ಹೊರನೋಟಕ್ಕೆ ಕಂಡರೂ, ಈ ಲೇಖಕನು ಅದನ್ನು ಒಪ್ಪುವುದಿಲ್ಲ ಮತ್ತು ಇದು ಅರವತ್ನಾಲ್ಕು ಯೋಗಿನೀಪೀಠದ ಕೇಂದ್ರದಲ್ಲಿದ್ದ ಊರ್ಧ್ವಲಿಂಗ ಭೈರವನದೆಂದು ಅಭಿಪ್ರಾಯಪಡುತ್ತಾನೆ. ಭೈರವನ ಎಡಪಾದವು ಮಲಗಿರುವ ನಂದಿಯ ಮೇಲೆ ಇಡುವಂತೆ ಇದ್ದು, ತಲೆಯೆತ್ತಿರುವ ನಂದಿಯ ಈ ಶೈಲಿಯನ್ನು ದೇವವೀಕ್ಷಣಾತತ್ಪರಃ ಎಂದು ವಿವರಿಸಲಾಗಿದೆ.  ಭೈರವನ ಕೈಗಳಲ್ಲಿರುವ ಸರ್ಪಗಳನ್ನು ಅಂಧಕಾಸುರನ ವಧಾ ಸಮಯದಲ್ಲಿ ನೆರವಾದ ಪ್ರಸಿದ್ಧ ನಾಗಗಳಾದ ತಕ್ಷಕ ಮತ್ತು ಧನಂಜಯರೆಂದು ಹೆಸರಿಸಲಾಗಿದೆ. ಆತನ ಕೈಗಳಲ್ಲಿರುವ ಇತರ ಆಯುಧಗಳೆಂದರೆ, ತ್ರಿಶೂಲ, ಡಮರು, ಬಲಗೈಯು ವರದಹಸ್ತ ಭಂಗಿಯಲ್ಲಿದೆ. ಎಡ ಮೇಲುಗೈಯಲ್ಲಿ ಗದೆಯಿದೆ. ಮೂರನೆಯ ಎಡಗೈನಲ್ಲಿ ಅಕ್ಷಮಾಲೆಯಿದೆ. ಆತನ ಕಣ್ಣುಗಳು ಮುಚ್ಚಿವೆ. ಇದು ಶಿವನು ಶಾಂತಮುದ್ರೆಯಲ್ಲಿರುವ ಸ್ವರೂಪ. ಯೋಗಿಣಿಯರನ್ನು ತೊಂದರೆಗೊಳಪಡಿಸಿದಾಗ ಆತ ಕ್ರುದ್ಧ. ಕಥಾಸರಿತ್ಸಾಗರದಲ್ಲಿನ ಒಂದು ಕಥೆಯಲ್ಲಿ ಚಂದ್ರವಂಶಿಯು ಆತನನ್ನು ಮಾತೃಚಕ್ರದ ಮಧ್ಯದಲ್ಲಿ ನೋಡಿದನೆಂಬ ಉಲ್ಲೇಖವಿದೆ. ಆಕೆಯ ಜತೆಯಲ್ಲಿ ನಾರಾಯಣಿಯೂ ಇದ್ದಳು. ಅವರೆಲ್ಲರೂ ಭೈರವನಿಗೆ ಉಡುಗೊರೆಗಳನ್ನು ನೀಡಲು ಕಾತುರರಾಗಿದ್ದರು. ನಾರಾಯಣಿ ಅಥವಾ ವೈಷ್ಣವಿಯು ಭೈರವನು ಬರಲು ತಡವೇಕಾಯಿತೆಂದು ವಿವರಿಸುತ್ತಿರುವಾಗಲೇ, ಮಾತೃಚಕ್ರಮಧ್ಯಸ್ಥನಾದ ಭೈರವನು ಅಲ್ಲಿಗೆ ಆಗಮಿಸಿದನು. ಆಗ ಭೈರವನು ಅಲ್ಲಿದ್ದ ಯೋಗಿನಿಯರೊಂದಿಗೆ ನರ್ತಿಸಿದನು (ತಾಂಡವೇನ ಕ್ಷಣಮ್ ನೃತ್ಯನಾಕ್ರೀಡಯದ್ದ್ಯೋಗಿನೀಸ್ಸಹ) ಎಂಬ ಉಲ್ಲೇಖವಿದೆ. ಅಗ್ನಿಪುರಾಣದಲ್ಲಿ ಭೈರವನನ್ನು ಮಾತೃನಾಥನೆಂದು ವಿವರಿಸಲಾಗಿದೆ. ತಾಂತ್ರಿಕ ಕೌಲವೆಂಬ ಗ್ರಂಥದ ಕುಲಾರ್ಣವ ಮತ್ತು ಮೇರು ತಂತ್ರಗ್ರಂಥಗಳಲ್ಲಿ ಭೈರವನು "ಯೋಗಿನೀಚಕ್ರಮಧ್ಯಸ್ಥಮ್" ಎಂದು ಹೇಳಲಾಗಿದೆ.

ಮಹಾಗಾವ್ ನ ಭೈರವ 
ನಾಲ್ಕು ಕೈಗಳ ನರ್ತನ ಭೈರವನ ವಿಗ್ರಹವು ವಿಶೇಷವೆಂದು ಹೇಳಲಾಗಿದೆಯಾದರೂ, ಭಾಲಂಗೀರ್ ಜಿಲ್ಲೆಯ ಮಹಾಗಾಂವ್‌ನಲ್ಲಿರುವ ಶಿವ ದೇವಾಲಯದಲ್ಲಿನ ಭೈರವನ ಇನ್ನೊಂದು ವಿಗ್ರ ತಲೆ  ಮತ್ತು ಉಳಿದೆಲ್ಲ ಅಂಗಾಂಗಗಳು, ಆಭರಣಗಳಲ್ಲಿ ಇತರ ವಿಗ್ರಹಗಳ ಸಾಮ್ಯತೆಯಿದೆಯಾದರೂ, ವಿಶೇಷವೆಂದರೆ ಆತನ ಜಟಾಮುಕುಟದ ಎಡಭಾಗದಲ್ಲಿ ಬಾಲಚಂದ್ರನನ್ನು ಚಿತ್ರಿಸಲಾಗಿದೆ.  ಭೈರವ ಮತ್ತು ಚಾಮುಂಡಿಯರು ಈರ್ವರೂ ಇರುವ ವಿಗ್ರಹಗಳು ಈ ಪ್ರದೇಶದಲ್ಲಿ ಸರ್ವಸಾಧಾರಣವೆನ್ನುವಂತೆ ಕಂಡುಬಂದಿದೆ. ಇವುಗಳನ್ನು ಕೆಂಪು ಮರಳುಗಲ್ಲುಗಳಲ್ಲಿ ಕೆತ್ತಲಾಗಿದೆ. ಇವುಗಳಲ್ಲಿ ಕೆಲವು ೮ ಅಡಿ ಎತ್ತರ ಮತ್ತು ೬ ಅಡಿ ಅಗಲದ ವಿಗ್ರಹಗಳು ದೊರಕಿವೆ. ಕಾಲಹಂದಿ ಜಿಲ್ಲೆಯ ಚೌರೀಗಢವೆಂಬ ಊರಿನಲ್ಲಿರುವ ನಾಲ್ಕು ಕೈಗಳನ್ನು ಹೊಂದಿರುವ ಭೈರವನ ವಿಗ್ರಹ ೧೮ ಅಡಿ ಎತ್ತರದ ಭವ್ಯಮೂರ್ತಿ. 

ಪಾಟಣಗಢದ ಭೈರವನ ವಿಗ್ರಹದ ಬಗ್ಗೆ ಈಗಾಗಲೇ ಒಂದು ವಿಸ್ತಾರವಾದ ಲೇಖನ ಪ್ರಕಟವಾಗಿದೆ. ಭಾಲಂಘೀರ್ ನ  ಪುನಿತಾಲ ಎಂಬ ಊರಿನಲ್ಲಿರುವ ಸ್ವಪ್ನೇಶ್ವರ ದೇವಾಲಯದಲ್ಲಿ ನಾಲ್ಕು ಕೈಗಳ ಭೈರವನ ವಿಗ್ರಹವಿದೆ. ಇದು ಭಂಜರ ಕಾಲಕ್ಕೆ ಸೇರಿದ್ದೆಂದು ತರ್ಕಿಸಲಾಗಿದೆ ಮತ್ತು ೯ನೇ ಶತಮಾನದ ಪ್ರಥಮಾರ್ಧ ಭಾಗದಲ್ಲಿ ಇದು ರಚಿತವಾಗಿರಬಹುದು ಎನ್ನಲಾಗಿದೆ. 

ಮಹಾನದಿ ಕಣಿವೆಯಲ್ಲಿ ದೊರೆತಿರುವ ಭೈರವನ ಬಿಡಿ ವಿಗ್ರಹಗಳ ಬಗ್ಗೆ ಚರ್ಚಿಸುವಾಗ, ಎಂಟು ಕೈಗಳನ್ನುಳ್ಳ ಇನ್ನೂ ಎರಡು ವಿಗ್ರಹಗಳನ್ನು ಪರಿಶೀಲಿಸುವುದು ಔಚಿತ್ಯಪೂರ್ಣವಾಗಿದೆ. ಇವಗಳಲ್ಲೊಂದು ಬಾಲಂಗೀರ್‌ನ ದೇವಗಾಂವ್‌ನಲ್ಲಿದೆ ಮತ್ತೊಂದು ಪಾಟಣಗಢದ ಕೋಟೆಯ ಸಮೀಪದಲ್ಲಿರುವ ಆಧುನಿಕ ದೇವಾಲಯದಲ್ಲಿ ಇರಿಸಲಾಗಿದೆ. ದೇವಗಾಂವ್‌ನ ವಿಗ್ರಹವು ನರ್ತನ ಭಂಗಿಯಲ್ಲಿದೆ. ಎಂಟು ಕೈಗಳಲ್ಲಿ ಕ್ರಮವಾಗಿ ಎಡಭಾಗದಲ್ಲಿ ಮೇಲಿನಿಂದ ಕೆಳಗೆ ಖಡ್ಗ, ಕಿರುಗತ್ತಿ, ಮತ್ತು ವಜ್ರಗಳನ್ನು ಹೊಂದಿದೆಯಾದರೆ ಕೆಳಗಿನ ಕೈಯನ್ನು ಒಡೆದು ಹಾಕಿರುವುದರಿಂದ ಏನಿದೆಯೆಂದು ತಿಳಿಯಲಾಗದು. ಅದೇ ರೀತಿ ಬಲಭಾಗದ ಕೈಗಳಲ್ಲಿ ಮೇಲಿನಿಂದ ಕೆಳಗೆ ಕ್ರಮವಾಗಿ ಶಂಖ, ಸರ್ಪ, ಕಪಾಲ ಮತ್ತು ಗದೆಗಳು ಇವೆ. ಇದು ಅಘೋರ ಶಿವನ ಸ್ವರೂಪವಾಗಿದ್ದು ರೌದ್ರಾಕಾರದಲ್ಲಿದೆ. ವಿಶೇಷವೆಂದರೆ ಇದರ ಇಕ್ಕೆಲಗಳಲ್ಲಿ ಏಳು ವನಿತೆಯರ ಚಿತ್ರಗಳಿದ್ದು, ಅವರು ಛತ್ರವನ್ನು ಹಿಡಿದು ಸಾಗುತ್ತಿರುವಂತೆ ಕೆತ್ತಲಾಗಿದೆ. ಬಾಲಂಗೀರ್ ಜಿಲ್ಲೆಯಲ್ಲಿ ಪಾಟಣಗಢದಿಂದ ೪೦ ಕಿ.ಮೀ. ದೂರದಲ್ಲಿರುವ ಹರಿಶಂಕರ ದೇವಾಲಯದಲ್ಲೂ ಭೈರವನ ವಿಗ್ರಹಗಳಿವೆ. ಇಲ್ಲಿಗೆ ಸಮೀಪದಲ್ಲಿರುವ ಕುಶಾಂಗ್‌ನಲ್ಲಿರುವ ಕೋಸಲೇಶ್ವರ ಶಿವ ಮಂದಿರ ಹಾಗೂ ಸೋನೇಪುರದ ಸಮೀಪದಲ್ಲಿರುವ ಪಶ್ಚಿಮ ಸೋಮನಾಥ ಗುಡಿಯಲ್ಲೂ ಭೈರವನ ವಿಗ್ರಹಗಳಿವೆ. ಇವು ೧೫-೧೬ನೇ ಶತಮಾನದಲ್ಲಿ ಆಳಿದ ಚೌಹಾನರ ಆರಾಧ್ಯ ದೈವಗಳೆಂದು ತಿಳಿಯಲಾಗಿದೆ. 
ದೇವಗಾವ್ (ಬಾನೆಯ್) ಭೈರವ 
ಸುಂದರಗಢ ಜಿಲ್ಲೆಯಿಂದ ಮೂರು ಕಿ.ಮೀ. ದೂರದಲ್ಲಿರುವ ಬಾನೇಯ್ ಪ್ರಾಂತದಲ್ಲಿ ಬಾಣೇಶ್ವರ ಶಿವಮಂದಿರವಿದೆ. ಇಲ್ಲಿಯೂ ಅರ್ಧ ಭಂಗಿಯಲ್ಲಿರುವ ಭೈರವನ ವಿಗ್ರಹವಿದೆ. ಬುದ್ಧನ ವಿಗ್ರಹಗಳಲ್ಲಿ ಕಂಡುಬರುವಂಥ ಶಿರೋಧಾರವಿದೆ.  ಎರಡು ಬದಿಗಳಲ್ಲಿ ಕಮಲದ ಚಿತ್ರಗಳಿವೆ. ಈ ಲಕ್ಷಣಗಳಿಂದ ಇದು ೧೨ ನೇ ಶತಮಾನಕ್ಕೆ ಸೇರಿದ ಸೋಮವಂಶೀಯರ ಕಾಲದ್ದು ಎಂದು ಹೇಳಬಹುದು. 

ಶೈವ ಪಂಥದ ಭೈರವ ಆರಾಧನೆಯು ಪಶ್ಚಿಮ ಒರಿಸ್ಸಾದ ಆದಿವಾಸಿ ಜನಾಂಗಗಳಲ್ಲಿ ೮ನೇ ಶತಮಾನದ ಭಂಜರ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿತ್ತು. ಈ ಪ್ರದೇಶಗಳಲ್ಲಿ ದೊರೆತಿರುವ ಬಹುತೇಕ ಭೈರವ ವಿಗ್ರಹಗಳು ಊರ್ಧ್ವಲಿಂಗವನ್ನು ಹೊಂದಿದವೇ ಆಗಿವೆ. ವಿಶೇಷವೆಂದರೆ ಮಹಾಗಾಂವ್‌ನ ದುಂಗ್ರಿಪಾಲಿಯಲ್ಲಿರುವ ನಟರಾಜನ ವಿಗ್ರಹ, ರಾಣೀಪಾಲ್‌ನಲ್ಲಿರುವ ೬೪ ಯೋಗಿನೀ ಸಹಿತ ನಟರಾಜನ ವಿಗ್ರಹಗಳು ಹಾಗೂ ಟೋಪೀಗಾಂವ್‌ ಮತ್ತು ಬೆಲಖಂಡಿಯಲ್ಲಿರುವ ಮಹೇಶ್ವರ ವಿಗ್ರಹಗಳು ಊರ್ಧ್ವಲಿಂಗವನ್ನು ಹೊಂದಿದವೇ ಆಗಿವೆ. ಈ ಬಗೆಯ ಊರ್ಧ್ವಲಿಂಗವುಳ್ಳ ವಿಗ್ರಹಗಳು ಅಸ್ಸಾಂ, ಬಂಗಾಳ ಮತ್ತು ಒರಿಸ್ಸಾಗಳಲ್ಲಿ ಕುಶಾನರ ಕಾಲದಿಂದಲೂ ಕಂಡುಬರುತ್ತವೆ. ಊರ್ಧ್ವಲಿಂಗವು ಶಾಶ್ವತ ಬ್ರಹ್ಮಚರ್ಯದ ಸಂಕೇತ. ಇದನ್ನೇ "ಊರ್ಧ್ವ ರೇತಸ್" ಎಂದು ಕರೆದಿದ್ದಾರೆ. ಶಿವನ ತಪಸ್ಸನ್ನು ಭಂಗಪಡಿಸಲು ಯತ್ನಿಸಿದ ಕಾಮನನ್ನು ಶಿವನು ದಹಿಸಿದ ಕಥೆ ಭಾರತಾದ್ಯಂತ ಪ್ರಚಲಿತ. ಮುಖ್ಯವಾಗಿ ಶಿವನು ಐಹಿಕ ಕಾಮನೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಕುರುಹು. 

ಕಾಮ ಮತ್ತು ಶಿವನ ಸಾಂಗತ್ಯವನ್ನು ವಿವರಿಸುವ ಇನ್ನೊಂದು ಸ್ವಾರಸ್ಯಕರ ಶಿಲ್ಪವು ನೌಪದ ಜಿಲ್ಲೆಯ ದುಂಗುರಿಪಲ್ಲಿ ಎಂಬ ಹಳ್ಳಿಯಲ್ಲಿ ದೊರೆತಿದೆ. ಇಲ್ಲಿರುವ ಎಂಟು ಕೈಗಳ ಭೈರವ ವಿಗ್ರಹದ ಬದಿಯಲ್ಲಿ ಒಂದು ಊರ್ಧ್ವಲಿಂಗಿಯಾದ ಪುರುಷನ ಮೇಲೆ ಓರ್ವ ಸ್ತ್ರೀ ಪ್ರೇಮಕ್ರೀಡೆ ನಡೆಸುತ್ತಿರುವ ಚಿತ್ರವಿದೆ. ಈಕೆಯನ್ನು ಸ್ಥಳೀಯರು "ಜಾರಿಣಿ" ಎಂದು ಕರೆಯುವರು. ಆದರೆ ಅದು ದಕ್ಷಿಣ ಕಾಳಿಕೆ ಎಂಬ ದೇವತೆಯಾಗಿರಬಹುದು. ಏಕೆಂದರೆ ಸಾಧಾರಣವಾಗಿ ಆಕೆಯನ್ನು ಹಲವೆಡೆ ಶಿವನ ಶವದ ಮೇಲೆ ಕುಳಿತು  ಸಂಭೋಗಿಸುತ್ತಿರುವಂತೆ ಚಿತ್ರಿಸಲಾಗಿರುತ್ತದೆ. ಈ ಬಗೆಯ ವಿಗ್ರಹವು ಕರ್ಪೂರಾದಿ ಸ್ತೋತ್ರದಲ್ಲಿ ಹೇಳಲಾಗಿರುವ ವಿವರಣೆಗಳೊಂದಿಗೆ ಹೊಂದಿಕೊಳ್ಳುತ್ತದೆ. ಈ ಸ್ತೋತ್ರದ ಪಾಠದಂತೆ, ಈಕೆಯು ನಿರ್ವಾಣವನ್ನು ನೀಡುವವಳು. ಅದರಲ್ಲಿ "ಪ್ರಜ್ವಲನಾಗಿ ಬೆಳಗುತ್ತಿರುವ ಕಾಮ ಸ್ವರೂಪಿಯಾದ ಕಾಲನನ್ನು ನಾಶಮಾಡುವ ಕಾಳಿಯಾದ ನಾನು ದಕ್ಷಿಣ ಕಾಳಿಕೆ" ಎಂಬ ವಿವರಣೆಯಿದೆ.

ಈ ಹಿಂದಿನ ವಿವರಣೆಗಳಲ್ಲಿ ನಾವು ಭೈರವನನ್ನು ೬೪ ಯೋಗಿನಿಯರೊಡನೆ, ತೆರೆದ ದೇವಾಲಯಗಳಲ್ಲಿ ಸ್ಥಾಪಿಸಲಾಗುತ್ತಿತ್ತು ಎಂದು ತಿಳಿದಿದ್ದೇವೆ. ಇದರ ಉದ್ದೇಶವೆಂದರೆ, ಈ ಪೀಠಗಳಲ್ಲೇ ತಾಂತ್ರಿಕ ಸಾಧಕರು ತಮ್ಮ ಯೋಗಿಕ-ಲೈಂಗಿಕ ಸಾಧನೆಗಳಲ್ಲಿ ತೊಡಗಿಕೊಳ್ಳುತ್ತಿದ್ದರೆಂದು ಗ್ರಹಿಸಬಹುದು. ೬೪ ಯೋಗಿನಿಯರ ಮಂದಿರ ಸ್ಥಾಪನೆಯೇ ತಾಂತ್ರಿಕ ಸಾಧನೆಯ ಉದ್ದೇಶ ಹೊಂದಿರುತ್ತದೆ ಮತ್ತು ಭೈರವನು ಯೋಗಿನಿಯರ ಕೇಂದ್ರಬಿಂದುವಾಗಿರುತ್ತಾನೆ. 

ಭೈರವರ ಬಗ್ಗೆ ವಿವರಣೆಗಳು "ವಿಷ್ಣು ಧರ್ಮೋತ್ತರ" ದಲ್ಲಿ ಇವೆ. ಇದರಲ್ಲಿ ಪ್ರಮುಖವಾಗಿ ವಟುಕ ಭೈರವ ಮತ್ತು ಸ್ವರ್ಣಾಕರ್ಷಣ ಭೈರವರನ್ನು ಮಾತ್ರ ಪ್ರಸ್ತಾಪಿಸಲಾಗಿದೆ. ಇದಲ್ಲದೆ ಜನಪ್ರಿಯವಾಗಿರುವ ಎಂಟು ಭೈರವ ರೂಪಗಳೆಂದರೆ : 1. ಅಸಿತಾಂಗ ಭೈರವ, ೨.ರುರು, ೩. ಚಂಡ, ೪, ಕ್ರೋಧ, ೫. ಉನ್ಮತ್ತ, ೬. ಕಪಾಲ, ೭. ಭೀಷಣ, ೮. ಸಂಹಾರ ಭೈರವರು, ಇವರಿಗೆ ಅಧಿದೇವತೆಗಳೆಂದು ಎಂಟು ರೂಪಗಳು ಮತ್ತು ಅವರಿಗೆ ಪ್ರತ್ಯಧಿದೇವತೆಗಳೆಂದು ಎಂಟು ರೂಪಗಳು, ಹೀಗೆ ಅರವತ್ತನಾಲ್ಕು ರೂಪಗಳು ಇದ್ದು, ಇವುಗಳ ವಿವರಗಳು ರುದ್ರಯಾಮಳ ಗ್ರಂಥದಲ್ಲಿ ದೊರೆಯುತ್ತವೆ.

ಅಜೈಕಪಾದ ಭೈರವ 
ಭೈರವನ ಮೂಲವು ಅಜೈಕಪಾದ ರೂಪದಿಂದಲೇ ಜನ್ಯ ಎಂದು ವಿದ್ವಾಂಸರ ವಿವರಣೆಯಿದೆ. ಅಜ+ಏಕ ಪಾದ, ಎಂದರೆ ಒಂಟಿಕಾಲಿನ ಭೈರವನೆಂದು ಅರ್ಥ. ಇದು ತಾಂತ್ರಿಕರ ದೈವ. ತಾಂತ್ರಿಕ ಸಾಹಿತ್ಯದಲ್ಲಿ ದೊರೆಯುವ ಅಜೈಕಪಾದನ ವಿವರಣೆಯನ್ನು ಅನುಸರಿಸಿ ಹೊರಟರೆ, ಅದು ವೇದಗಳಲ್ಲಿ ಉಲ್ಲೇಖಿತವಾಗಿರುವ ಅಗ್ನಿ, ಹವನ ವಿಧಿಗಳು, ಬ್ರಹ್ಮಾಂಡದ ಮಧ್ಯ ಸ್ತಂಭ ಮತ್ತು ಯೋಗಿನಿಯರೊಂದಿಗೆ ಹೊಂದಿರುವ ಸಂಬಂಧಗಳೊಂದಿಗೆ ತಾಳೆಯಾಗುತ್ತದೆ. ಆತನ ಆಯುಧಗಳೆಲ್ಲವೂ ಶೈವಸಂಬಂಧಿತವಾದವು. ಆತನು ಊರ್ಧ್ವಲಿಂಗ ಮತ್ತು ವ್ಯಾಘ್ರಚರ್ಮಾಂಬರಧರ. ಪುರಿಯಲ್ಲಿನ ಜಗನ್ನಾಥನ ಶಿಲ್ಪಶೈಲಿಯು ಏಕಪಾದ ಭೈರವನಿಂದಲೇ ಪ್ರಭಾವಿತವಾಗಿರಬಹುದೆಂದು ಸ್ಟೈಟೆನ್ಕ್ರಾನ್ ರ ಅಭಿಪ್ರಾಯ. ರಾಣೀಪುರ ಜರೀಯಾಲ್‌ನಲ್ಲಿ ವೀರಭದ್ರನು ಸಪ್ತಮಾತೃಕೆಯರ ಜತೆಗೆ ಇರುವುದರ ಬದಲಾಗಿ, ಏಕಪಾದ ಭೈರವನನ್ನು ಕಡೆದಿರುವುದು ವಿಶೇಷವೆಂದು ತಿಳಿಯಬಹುದು.

ಡಾ. ಪಾಂಡಾ  ಕೆಲವು ಶೈವಾಚಾರ್ಯರು ಭೈರವನ ವಿಗ್ರಹ ಪ್ರಭೇದಗಳನ್ನು ಗ್ರಹಿಸದೇ, ಕೆಲವೊಮ್ಮೆ ಹಾಗೆಯೇ ಒಪ್ಪಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದಿದ್ದಾರೆ. ಬೌದ್ಧ ತಾಂತ್ರಿಕ ಪಂಥಗಳ ಪ್ರಭಾವದಿಂದಾಗಿ, ಶೈವರೂ ಯೋಗಿನೀ ಸಹಿತ  ಭೈರವಾರಾಧನೆಯನ್ನು ರೂಢಿಗೊಳಿಸಲು ಪ್ರಯತ್ನಿಸಿರಬಹುದು ಎಂಬ ತರ್ಕವೂ ಇದೆ. ಒರಿಸ್ಸಾದ ಪಶ್ಚಿಮ ಭಾಗದಲ್ಲಿರುವ ಆದಿವಾಸಿ ವಲಯಗಳಲ್ಲಿ ಭೈರವನ ಅಘೋರ ರೂಪವನ್ನು ಆರಾಧಿಸುತ್ತಿದ್ದರು. ಅವರು ಅವನೊಂದಿಗೆ ಪಾಟಣಕುಮಾರಿಯರನ್ನು ಆರಾಧಿಸುತ್ತಿದ್ದರು. ಇದೇ ಮುಂದೆ ಸಾಥೇನ (ಸಪ್ತ ಸೋದರಿಯರು) ಎಂಬ ಆಚರಣೆಗೆ ನಾಂದಿಯಾಯಿತು. ಈ ಅಭಿಪ್ರಾಯವನ್ನು ಪುಷ್ಟೀಕರಿಸಲು ದೊರೆಯುವ ಇನ್ನೊಂದು ಮಾಹಿತಿಯೆಂದರೆ, ಸಂಬಾಲಾದ ಪ್ರಸಿದ್ಧ ದೊರೆ ಇಂದ್ರಭೂತಿಯ ಸೋದರಿಯಾದ ವಿಖ್ಯಾತ ತಾಂತ್ರಿಕ ಗುರು ಲಕ್ಷ್ಮೀಂಕರಳು ಭೈರವ ಪಂಥವನ್ನೂ ಜನಪ್ರಿಯಗೊಳಿಸಿದಳು. ಈಕೆಯು ೮ನೇ ಶತಮಾನದಲ್ಲಿದ್ದ ಸಹಜಯಾನ ಬೌದ್ಧ ತಂತ್ರದ ಪ್ರತಿಪಾದಕಳೂ ಆಗಿದ್ದಳು.

ಹಿಂದೆ ಹೇಳಿರುವಂತೆ ಭೈರವನೊಡನೆ ಚಾಮುಂಡಿಯನ್ನು ತಾಂತ್ರಿಕ ಸಾಧನೆಗಳ ಉದ್ದೇಶಕ್ಕೆಂದು ಬಳಸಲಾಗುತ್ತಿತ್ತು. ಸತಿಯ ಶರೀರ ಭಾಗಗಳೆಲ್ಲ ಬಿದ್ದ ಸ್ಥಳಗಳು ಮುಂದೆ ಶಕ್ತಿಪೀಠಗಳಾಗಿ, ಅವುಗಳ ರಕ್ಷಣೆಗೆಂದು ಭೈರವನನ್ನು ಸ್ಥಾಪಿಸಿದ  ಬಗ್ಗೆ ಪೌರಾಣಿಕ ಉಲ್ಲೇಖಗಳು ಇವೆ. ಹೀಗಾಗಿಯೇ ಭೈರವ ಮತ್ತು ಶಕ್ತಿದೇವತೆಗಳ ಸಾಂಗತ್ಯ ಬೆಳೆದು ಬಂದಿತೆಂದು ಪ್ರೊ. ಥಾಮಸ್ ಡೊನಾಲ್ಡ್ಸನ್ ರ ಅಭಿಪ್ರಾಯ.

ಜುನಾಗಡ ಭೈರವ 
ತನ್ನ ವಿಘ್ನೇಶ್ವರ ಪ್ರತಿಷ್ಠಾವಿಧಿಯಲ್ಲಿ  ಕ್ಷೇತ್ರಪಾಲನೇ ಭೈರವನು ಎಂದು ಅಘೋರ ಶಿವಾಚಾರ್ಯರು ಹೇಳಿರುವರು. ಆತನ ಗುಡಿಗಳು ಗ್ರಾಮದ ಅಥವಾ ಊರುಗಳ ಈಶಾನ್ಯದಲ್ಲಿ ಇರುತ್ತವೆ. ಪ್ರತಿಷ್ಠಾಪನೆಗೆಂದು ಕ್ಷೇತ್ರಪಾಲನ ರಾಜಸಿಕ, ಸಾತ್ವಿಕ ಮೂರ್ತಿಗಳನ್ನು ಮಾತ್ರ ಬಳಸಬೇಕು ಎಂದು ಅಂಶುಮಭೇದಾಗಮ, ಸುಪ್ರಭೇದಾಗಮ ಮತ್ತು ಕರಣಾಗಮ ಗ್ರಂಥಗಳಲ್ಲಿ ಹೇಳಲಾಗಿದೆ. ೧೧-೧೨ ನೇ ಶತಮಾನದಲ್ಲಿ ಬೇಕಿ ಎಂಬ ಗ್ರಾಮದಲ್ಲಿ ಕುಳಿತಿರುವ ಭಂಗಿಯ ಭೈರವನ ವಿಗ್ರಹಗಳಿವೆ. ಒರಿಸ್ಸಾದ ಕಾಲಹಂದಿ ಜಿಲ್ಲೆಯ ಲಾಂಜೀಗಢ, ಮದನಪುರ, ರಾಮಪುರ, ಮೋಹನಗಿರಿ, ಉರ್ಲಾದನಿ, ಸಂಕುಶಗಢ, ಡಿಗ್ಸಿರಾ, ಬೆಲಖಂಡಿ, ಜುನಾಗಢ, ಟೋಪೀಗಾಂವ್, ಮೇದಿನೀಪುರ ಮತ್ತು ಖಮ್ತಾನಾ ಮುಂತಾದ ಪ್ರದೇಶಗಳಲ್ಲಿ ಭೈರವನ ಆರಾಧನೆ ಇಂದಿಗೂ ಮುಂದುವರೆದಿದೆ. ಈ ಭಯಂಕರ ಸ್ವರೂಪದ ದೈವವನ್ನು ಸೋನೇಪುರ, ಸಂಭಾಲಪುರ, ಹರಿಶಂಕರ, ಲಾಂಜೀಗಢ, ಪುಯಿನ್ತಲಗಳಲ್ಲಿ ದೊಡ್ಡ ಮಂದಿರಗಳಲ್ಲಿ ಪೂಜೆಗೈಯಲಾಗುತ್ತಿದೆ. ಆದಿವಾಸಿ ಸಮುದಾಯದವರಲ್ಲಿ ದ್ವಾದಶ ಭೈರವರ (೧೨) ಆರಾಧನೆಯಿದೆ. ಅವಗಳೆಂದರೆ : ೧. ಬುದ, ೨. ಅಗ್ನಿ, ೩. ಬಲಿ, ೪. ಬೇತಾಳ, ೫. ಸುಹಾರ, ೬. ಸೂದನ, ೭. ಕಣ, ೮. ಬಾಣ, ೯. ರಣ, ೧೦. ಜಲ, ೧೧. ದಂಡ ಮತ್ತು ೧೨. ಹೂಂಕಾರ ಭೈರವ. ಈ ಆದಿವಾಸಿಗಳಲ್ಲಿ ೧೨ ಸಂಖ್ಯೆಗೆ ಮಹತ್ವವಿರುವುದರಿಂದ ಅವರ ದೇವತೆಗಳಲ್ಲೂ ಅದು ಪ್ರತಿಫಲಿಸಿದೆ. ಉದಾಹರಣೆಗೆ ಬಾರಾಭಾಯಿ ಲಾಂಥ್, ಬಾರಾಭಾಯಿ ಭೀಮ, ಬಾರಾ ಪಹಾಡ್, ಬಾರಾಭಾಯಿ ಮರಾಳ ಮತ್ತು ಬಾರಾಭಾಯಿ ಬೆಂತಕರ ಇತ್ಯಾದಿ.

ಕ್ರಿ. ಶ. ೧-೨ ನೇ ಶತಮಾನಗಳಿಂದ ಮಹಾನದೀ ಕಣಿವೆಯಲ್ಲಿ ಆದಿವಾಸಿಗಳಿಂದ ಪೂಜಿತನಾಗಿದ್ದ ಭೈರವನು, ಕಾಲಕ್ರಮೇಣ, ಹಿಂದೂ ದೇವತೆಗಳ ಮುಖ್ಯವಾಹಿನಿಯಲ್ಲಿ ಸ್ಥಾನ ಪಡೆಯುವ ಪ್ರಕ್ರಿಯೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು, ಆಚರಣೆಗಳನ್ನು ರೂಢಿಸಿದನೆಂದು ಹೇಳಬಹುದು.

ಚಿತ್ರ-ಲೇಖನ ಕೃಪೆ: ಡಾ. ಶಶಾಂಕ ಪಾಂಡಾ

* * * * * * *