ಶುಕ್ರವಾರ, ಜುಲೈ 1, 2011

ಬಳ್ಳಾರೇಶ್ವರ ದೇಗುಲದ ಕಾಲಭೈರವ

 ಬಳ್ಳಾರೇಶ್ವರ ದೇಗುಲದ ಕಾಲಭೈರವ
    ನೀವು ಚಿತ್ರದಲ್ಲಿ ಕಾಣುತ್ತಿರುವ ಶ್ರೀ ಕಾಲಭೈರವನ ಭವ್ಯಮೂರ್ತಿ ಇರುವುದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪವಿರುವ ಸಖರಾಯಪಟ್ಟಣದಲ್ಲಿ.  
 
ಹೊಟ್ಟೆಯ ಭಾಗದಲ್ಲಿ ಮುಕ್ಕಾಗಿರುವ ಗಣಪತಿ

ಒಂದು ಕಾಲದಲ್ಲಿ ಹೊಯ್ಸಳ ಇತರ ದೇವಾಲಯಗಳಂತೆ ಇತರ ಭವ್ಯವಾಗಿದ್ದಿರಬಹುದಾದ ಈ ದೇಗುಲ ಇಂದು ವಿಚಿತ್ರ ರೂಪ ತಳೆದಿದೆ. ಸಾಧಾರಣವಾಗಿ ಎಲ್ಲ ಹೊಯ್ಸಳ ದೇಗುಲಗಳೂ ನಕ್ಷತ್ರಾಕಾರದ ಜಗುಲಿಯ ಮೇಲೆ ಕಟ್ಟಲ್ಪಟ್ಟಿರುತ್ತವೆ. ಈ ದೇವಾಲಯದಲ್ಲಿ ಇಂದು ಕೇವಲ ಪೂಜಾವಿಗ್ರಹಗಳು ಮಾತ್ರ ಉಳಿದಿವೆ. ಅವೂ ಮುಕ್ಕಾಗಿ ಹೋಗಿದ್ದರೂ ತಮ್ಮ ಭವ್ಯತೆ ಮತ್ತು ಕಲಾಕುಶಲತೆಗೆ ಸ್ಥಳೀಯರು ಮನಸೋತು ಸಂರಕ್ಷಿಸಿರುವುದರಿಂದ ಹಾಗೆ ಉಳಿದಿವೆ.  ಸುಪ್ರಸಿದ್ಧ ಅಯ್ಯನಕೆರೆ ದಂಡೆಯಲ್ಲಿ ಇರುವ ಈ ದೇವಾಲಯದ ಭಗ್ನ ಭಾಗಗಳು, ಇಲ್ಲಿಂದ 5  ಕಿ.ಮೀ ದೂರದಲ್ಲಿರುವ ಮನೆಯ ಅಂಗಳಗಳಲ್ಲಿ, ಹಾದಿಗಳಲ್ಲಿ ಕಾಂಪೌಡ್ ಗಳಲ್ಲಿ ಸೇರಿಹೋಗಿವೆ.  ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷದಿಂದಾಗಿ ಈ ಸ್ಥಿತಿ ಒದಗಿದೆ.  ದೇವಾಲಯದ ನೆಲಗಟ್ಟಿನಲ್ಲಿ ಇನ್ನೂ ಹಳೆಗಾಲದ ಕಲ್ಲುಗಳು ಹಾಗೇ ಉಳಿದಿವೆ.  ಅದನ್ನೇ ಆಧರಿಸಿ, ಸಿಮೆಂಟಿನ ಕಟ್ಟಡವನ್ನು ಕಟ್ಟಲಾಗಿದೆ,  ಗರ್ಭಗುಡಿಯಲ್ಲಿ ಶಿವಲಿಂಗ ಮತ್ತು ನಂದಿಯ ವಿಗ್ರಹಗಳಿವೆ. ನಂದಿಯ ವಿಗ್ರಹ ಮುಕ್ಕಾಗದೇ ಹಾಗೇ ತನ್ನ ಸೌಂದರ್ಯವನ್ನು ಉಳಿಸಿಕೊಂಡಿದೆ.  ಅಕ್ಕಪಕ್ಕಗಳಲ್ಲಿ ಕಾರ್ತಿಕೇಯ ಮತ್ತು ಚಾಮುಂಡೇಶ್ವರಿಯ ವಿಗ್ರಹಗಳಿವೆ.

    ಹೊರಭಾಗದಲ್ಲಿ ಗಣೇಶ ಮತ್ತು ಮಹಿಷಾಸುರಮರ್ದಿನಿಯ ಶಿಲ್ಪಗಳಿವೆ. ಅತ್ಯಂತ ಕಲಾತ್ಮಕವಾಗಿರುವ ದೇವಿಯ ವಿಗ್ರಹದ ಕೈಗಳನ್ನು ಮುರಿದು ವಿರೂಪಗೊಳಿಸಲಾಗಿದೆ.  ಗಣಪತಿಯ ಹೊಟ್ಟೆಯನ್ನು ಬಗೆದಿರುವುದರಿಂದ ಅ ಭಾಗಕ್ಕೆ ಸಿಮೆಂಟ್ ತುಂಬಿಸಿ ಇಡಲಾಗಿದೆ.

    ದೇವಾಲಯದ ಬಲಭಾಗದಲ್ಲಿ ವಿಷ್ಣು ಮತ್ತು ಕಾಲಭೈರವರ 8 ಅಡಿ ಎತ್ತರದ ಭವ್ಯ ಮೂರ್ತಿಗಳಿವೆ.  ಇಲ್ಲಿನ ಕಾಲಭೈರವ ಶಿಲ್ಪದ ವಿಶೇಷತೆಯಂದೆರೆ, ಶಿಲ್ಪಶಾಸ್ತ್ರದಲ್ಲಿ ಈ ವಿಗ್ರಹದ ಬಗ್ಗೆ ಹೇಳಿರುವ ಎಲ್ಲ ಲಕ್ಷಣಗಳನ್ನು ಗಮನಿಸಿ ಕಡೆಯಲಾಗಿದೆ.  ತಲೆಯ ಮೇಲೊಂದು ಸೂರು ಇಲ್ಲದೆ ಗಾಳಿ ಮಳೆಗಳಿಗೆ ಸಿಲುಕಿರುವ ಈ ವಿಗ್ರಹವನ್ನು ಭಿನ್ನವಾಗಿದೆ ಎಂಬ ಕಾರಣಕ್ಕೆ ಪೂಜಿಸಲಾಗುತ್ತಿಲ್ಲ.   ಆದರೆ  ಅದರ ಶಿಲ್ಪ ಸೌಂದರ್ಯವನ್ನು ಗಮನಿಸುವ ಯಾರಿಗೂ ಭಕ್ತಿ ಮೂಡದೇ ಇರಲು ಸಾಧ್ಯವಿಲ್ಲ.  ಸಾಧಾರಣವಾಗಿ ಕಂಡುಬರುವ ಕಾಲಭೈರವನ ಶಿಲ್ಪಗಳಲ್ಲೆಲ್ಲಾ ಸೌಂದರ್ಯ ಮತ್ತು ಗಾತ್ರದಲ್ಲಿ ಗಮನ ಸೆಳೆಯುವ ಈ ಶಿಲ್ಪಕ್ಕೆ ಒದಗಿರುವ ದುರ್ಗತಿ  ಕನಿಕರ ಹುಟ್ಟಿಸುವಂತಿದೆ.
ಮಹಿಷಾಸುರಮರ್ದಿನಿಯ ಸುಂದರ ಶಿಲ್ಪವೂ ಭಗ್ನಗೊಂಡಿದೆ
ಕಾಲಭೈರವನ ಆಳೆತ್ತರದ ಭವ್ಯ ಮೂರ್ತಿ
 ನಂದಿಯ ವಿಗ್ರಹ ಚಿಕ್ಕದಾಗಿದ್ದರೂ
ಅದರಲ್ಲಿರುವ ಕುಸುರಿ ಕೆಲಸ ಗಮನಾರ್ಹ
         ಪಕ್ಕದಲ್ಲಿರುವ ವಿಷ್ಣು ಮೂರ್ತಿಯೂ ಸೌಂದರ್ಯ ಮತ್ತು ಶಿಲ್ಪಮೌಲ್ಯದಲ್ಲಿ ಕಳಪೆಯದೇನಲ್ಲ.  ವಿಷ್ಣುವಿನ ಮೊಗದ  ಮಂದಹಾಸ ನಿಬ್ಬೆರಗುಗೊಳಿಸುವಂತಿದೆ.  ಎಡಭಾಗದಲಿ ಶ್ರೀ ಕೃಷ್ಣನ ವಿಗ್ರಹಕ್ಕೆ ಒಂದು ಕಟ್ಟಡ ಕಟ್ಟಿ, ಭಿನ್ನವಾದ ಭಾಗವನ್ನು ಸಿಮೆಂಟಿನಿಂದ ಸಂರಕ್ಷಿಸಲಾಗಿದೆ. ಒಂದು ವಿಧದಲ್ಲಿ  ನೋಡಿದರೆ, ಈಗ ಬಂದಿರುವ ತಂತ್ರಜ್ಞಾನ ಮತ್ತು ಪರಿಕರಗಳಿಂದ ಇಂಥ ಭಗ್ನ ಶಿಲ್ಪಗಳನ್ನು ಪುನರುಜ್ಜೀವನಗೊಳಿಸಿ ಇನ್ನಷ್ಟು ಕಾಲ ಕಾಪಾಡಬಹುದು. 

    ಸುಂದರ ಪ್ರಕೃತಿಯ ಮಡಿಲಲ್ಲಿ ಇರುವ ಈ ದೇಗುಲವನ್ನು ಪ್ರಾಚ್ಚವಸ್ತು ಇಲಾಖೆ, ಬಹಳಷ್ಟು ವರ್ಷಗಳ ಹಿಂದೆ ಆಸ್ಠೆವಹಿಸಿದ್ದರೆ, ಅಥವಾ ಈಗಲೂ ಈ ದೇಗುಲದ ಆವರಣದಲ್ಲಿ ಮತ್ತು ಊರಿನಲ್ಲಿ ಚದುರಿ ಬಿದ್ದಿರುವ  ಶಿಲ್ಪಭಾಗಗಳನ್ನು ಪುನರ್ ಜೋಡಣೆ ಮಾಡಿದರೆ, ಅಲ್ಲಿ ಮತ್ತೊಮ್ಮ ಆ ಮಂದಿರದ ಭವ್ಯತೆ ಮರಳಬಹುದು.  ಆ ಮಟ್ಟಿಗಿನ ಆಸ್ಠೆಯನ್ನು ಸ್ಠಳೀಯರು ತೋರಿದರೆ ಇದು ಅಗಲಾರದ ಕೆಲಸವೇನೂ ಅಲ್ಲ.   
* * * * * *