ಭಾನುವಾರ, ನವೆಂಬರ್ 27, 2011

"ಭೈರವ ದೇವರ ಅವತರಣ"


ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ "ಭೈರವ ದೇವರ ಅವತರಣ". ಈ ವಿಷಯದ ಬಗ್ಗೆ ಅನೇಕ ಕಥಾನಕಗಳು ಪ್ರಚಲಿತವಿದೆಯಾದರೂ, ಇಲ್ಲಿರುವ ಬರಹವನ್ನು ವಾರಾಣಸಿಯ ದೇಹಾತ್ ಪ್ರಕಾಶನ ಸಂಸ್ಥೆಯವರು ಪ್ರಕಟಿಸಿರುವ "ಭೈರವ ಪೂಜಾ ವಿಧಾನ" ಗ್ರಂಥದಿಂದ ಆಯ್ದುಕೊಳ್ಳಲಾಗಿದೆ. ಇತರ ಕಥಾನಕಗಳಲ್ಲೂ ಹೆಚ್ಚು ಕಡಿಮೆ ಇದೇ ಅಂಶಗಳು ಪ್ರಸ್ತಾಪಿತವಾಗಿದ್ದು, ಅಲ್ಲಲ್ಲಿ ಅಲ್ಪ ಸ್ಪಲ್ಪ ಬದಲಾವಣೆಗಳು ಕಂಡುಬರುತ್ತವೆ. ಏನಿದ್ದರೂ ಪುರಾಣ ಕಥಾನಕಗಳು ಜನರ ಬಾಯಿಂದ ಬಾಯಿಗೆ ಹರಿದು ಬರುವಾಗ ಇಂತಹ ವ್ಯತ್ಯಾಸಗಳು ಸ್ವಾಭಾವಿಕ. ನಮ್ಮ ಅನೇಕ ಶಿಲ್ಪಗಳಲ್ಲಿ, ಚಿತ್ರಗಳಲ್ಲಿ  ಬ್ರಹ್ಮನು ಚತುರ್ಮುಖನಾಗಿಯೇ ಚಿತ್ರಿತನಾಗಿರುವನಷ್ಟೇ. ಆದರೆ ವಸ್ತುಸ್ಥಿತಿ ಹಾಗಿಲ್ಲ.  ತಾನೇ ಅತಿ ಶ್ರೇಷ್ಠನೆಂದು ಬ್ರಹ್ಮನಂಥ ಪಿತಾಮಹನೇ ಗಳಹಲು ಆರಂಭಿಸಿದಾಗ,ಪಂಚಮುಖನಾದ ಆತನು ಅನಿವಾರ್ಯವಾಗಿ ತನ್ನ ಒಂದು ಶಿರವನ್ನು ಕಳೆದುಕೊಂಡು ಚತುರ್ಮುಖ ಬ್ರಹ್ಮನಾದನು. ಈ ಕಾರಣದಿಂದ ಕಾಲಭೈರವನ ಉತ್ಪತ್ತಿಯೂ ಆಯಿತು. ಇದರಲ್ಲಿ ಅಹಂಕಾರವು ಯಾರಿಗೂ ಸಲ್ಲದೆಂಬ ಒಂದು ನೀತಿಯೂ ಇದೆ. ವಿಸ್ತೃತ ಬರಹ ನಿಮ್ಮ ಮುಂದಿದೆ. ಓದಿ.







ಮಂಗಳವಾರ, ನವೆಂಬರ್ 1, 2011

"ಭಿಭ್ರಾಣಂ ಶುನಕಾರೂಢಂ........."



"ಭಿಭ್ರಾಣಂ ಶುನಕಾರೂಢಂ........."

ಈಗಾಗಲೇ ಪ್ರಸ್ತಾಪಿಸಿರುವಂತೆ, ಕಾಲಭೈರವ ಶುನಕಾರೂಢ, ಎಂದರೆ, ನಾಯಿಯನ್ನು ವಾಹನವಾಗಿ ಉಳ್ಳವ.  ಮೊತ್ತ ಮೊದಲು, ನಮ್ಮ ಕುಲದೇವತೆ ನನ್ನನ್ನು ಆಕರ್ಷಿಸಲಿಲ್ಲ, ಬದಲಾಗಿ ಚಿಕ್ಕಂದಿನಲ್ಲಿ ಆತನ ಅಚ್ಚ ಬಿಳಿಯ ವಾಹನ "ನಾಯಿ"  ನನ್ನ ಗಮನ ಸೆಳೆಯಿತಂದರೆ ಅದು ಸ್ವಾಭಾವಿವೂ ಇರಬಹುದು. ದೊಡ್ಡ ಗಾತ್ರದ ಗೋಲ್ಡನ್ ರಿಟ್ರೀವರ್ ಹೋಲುವ ಈ ಬಿಳಿಯ ನಾಯಿಯ ಜೋಲು ಕಿವಿಗಳು, ಸೂಕ್ಷ್ಮ ಕಣ್ಣುಗಳು ಮತ್ತು ಮನುಷ್ಯನನ್ನು ಹೊರಬಲ್ಲ ಅದರ ತ್ರಾಣವನ್ನು ಕಲಾವಿದರು ಸಮರ್ಥವಾಗಿ ಚಿತ್ರಿಸಿದ್ದಾರೆ. ಈ ಚಿತ್ರವನ್ನು ಹಿಂದೆ ಪ್ರಕಟಿಸಲಾಗಿದೆ.


ನಮ್ಮ ಪುರಾಣಕತೆಗಳಲ್ಲಿ ನಾಯಿಯ ಪ್ರಸ್ತಾಪ ಅನೇಕ ಸಂದರ್ಭಗಳಲ್ಲಿ ಬಂದಿದೆ.  ಮಹಾಭಾರತದಲ್ಲಿ ಧರ್ಮರಾಯ ವೃಷೋತ್ಸರ್ಗ ಮಾಡುವ ಕಾಲಕ್ಕೆ ಆತನನ್ನು ಹಿಂಬಾಲಿಸಿದ್ದು ಒಂದು ನಾಯಿ.  ದತ್ತಾತ್ರೇಯನ ಚಿತ್ರದಲ್ಲಿ ಆತನು ಹಸುವೊಂದಕ್ಕೆ ಒರಗಿ ನಿಂತಿದ್ದರೆ, ಬಳಿಯಲ್ಲಿ ನಾಲ್ಕು ನಾಯಿಗಳು ಸುತ್ತಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ನಾಲ್ಕು ನಾಯಿಗಳು, ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತದೆ ಎಂದೂ ಹೇಳಲಾಗಿದೆ.


ಕಾಲಭೈರವ ಧ್ಯಾನ ಶ್ಲೋಕವನ್ನು ಇಲ್ಲಿ ಇನ್ನೊಮ್ಮೆ ಅರ್ಥ ಸಹಿತ ನೀಡಿದ್ದೇನೆ. ಕಾಲಭೈರವನ ಆರಾಧಕರು ಇದನ್ನು  ಮಕ್ಕಳಿಗೂ ಕಲಿಸುವಂತಾಗಲಿ ಎನ್ನುವುದು ಆಶಯ.






ಕರಕಲಿತ ಕಪಾಲೀ, ಕುಂಡಲೀ ದಂಡಪಾಣಿ |
(ಕರದಲ್ಲಿ ಕಪಾಲವನ್ನು ಹಿಡಿದಿರುವ, ಕಿವಿಗಳಿಗೆ ಕುಂಡಲಗಳನ್ನು ಧರಿಸಿ, ಕೈಯಲ್ಲಿ ದಂಡವನ್ನು ಹಿಡಿದಿರುವ)

ತರುಣ ತಿಮಿರ ನೀಲೋ, ವ್ಯಾಲಯಜ್ಞೋಪವೀತಿ ||
(ಆತನ ಬಣ್ಣ ಮುಸ್ಸಂಜೆಯ ಕತ್ತಲಿನ ನೀಲಿಯ ಬಣ್ಣ, ಸರ್ಪದ ಜನಿವಾರವನ್ನು ಧರಿಸಿರುವ)

ಕೃತ ಸಮಯ ಪರ್ಯಾ ವಿಘ್ನವಿಚ್ಛೇದ ಹೇತುಃ |
(ನಿಶ್ಚಿತ ಸಮಯದಲ್ಲಿ ವಿಘ್ನಗಳನ್ನು ನಿವಾರಿಸಲು ಕಾರಣವಾಗುವ)

ಜಯತು ವಟುಕನಾಥಃ ಸಿದ್ಧಿದಃ ಸಾಧಕಾನಾಂ ||
(ಸಾಧಕರಿಗೆ ಒಲಿಯುವಂಥ ವಟು ಸ್ವರೂಪಿಯಾದ ಕಾಲಭೈರವನಿಗೆ ಜಯವಾಗಲಿ)

ಅದೇ ರೀತಿ ಮತ್ತೊಂದು ಪ್ರಚಲಿತ ಧ್ಯಾನ ಶ್ಲೋಕ ಹೀಗಿದೆ :


ನಗ್ನ ರೂಪಂ ತ್ರಿನೇತ್ರಂ ಚ ಸರ್ಪಾಭರಣ ಭೂಷಿತಮ್ |
(ಈತನು ನಗ್ನರೂಪಿ, ಮೂರು ಕಣ್ಣುಗಳುಳ್ಳವ, ಸರ್ಪಗಳನ್ನು ಆಭರಣಗಳನ್ನಾಗಿ ಧರಿಸಿರುವನು)

ರತ್ನ ಕುಂಡಲ ಸಂಯುಕ್ತಂ ಶಿರೋಮಾಲಾ ವಿಭೂಷಿತಂ |
(ಕಿವಿಗೆ ರತ್ನ ಕುಂಡಲಗಳನ್ನು ಧರಿಸಿ, ರುಂಡಮಾಲೆಗಳಿಂದ ಸುಶೋಭಿತನಾಗಿರುವವನು)

ಖಡ್ಗಂ ಶೂಲಂ ಕಪಾಲಂ ಚ ಡಮರುಂ ಭೀಮ ದಂಷ್ಟ್ರಕಂ |
(ಕೈಗಳಲ್ಲಿ ಖಡ್ಗ, ಶೂಲ, ಕಪಾಲ ಮತ್ತು ಡಮರುಗಳನ್ನು ಧರಿಸಿರುವ ಈತನು ಭೀಮ ಬಲವುಳ್ಳವನು)

ಭಿಭ್ರಾಣಂ ಶುನಕಾರೂಢಂ ಕ್ಷೇತ್ರಪಾಲಂ ಅಹಂ ಭಜೇ ||
(ನಾಯಿಯನ್ನು ವಾಹನವಾಗಿ ಹೊಂದಿ ಅದರ ಮೇಲೆ ಕುಳಿತಿರುವ ಕ್ಷೇತ್ರಪಾಲನನ್ನು ನಾನು ಭಜಿಸುತ್ತೇನೆ.

ಈ ವರೆಗೆ ಪ್ರಕಟವಾಗಿರುವ ಕಾಲಭೈರವ ಶಿಲ್ಪಗಳನ್ನು ಗಮನಿಸಿ. ಈ ಎಲ್ಲ ಶಿಲ್ಪಗಳಲ್ಲೂ ಮೇಲೆ ನೀಡಿರುವ ವಿವರಗಳು ಕಂಡುಬರುತ್ತವೆ. ಇದನ್ನು ಧ್ಯಾನಶ್ಲೋಕ ಎಂದು ಹೇಳಲಾಗಿದ್ದು, ಇದರ ಅನ್ವಯವೇ ಶಿಲ್ಪಿಗಳು ಕಾಲಭೈರವನನ್ನು ಕಂಡರಿಸಿರುವುದು ಗೋಚರಿಸುತ್ತದೆ.  ಸ್ವಾರಸ್ಯದ ಸಂಗತಿಯೆಂದರೆ ವಿಪುಲ ಸಾಹಿತ್ಯನನ್ನು ಹೊಂದಿರುವ ಈ ದೇವನ ಇತರ ಸ್ತುತಿಗಳಲ್ಲಿ ಎಲ್ಲಿಯೂ ಆತನು ಶುನಕಾರೂಢನೆಂದು ಹೇಳಲಾಗಿಲ್ಲ ! ಇದೊಂದು ಶ್ಲೋಕದಲ್ಲಿ ಮಾತ್ರ ಈ ವಿವರಣೆ ಇದ್ದು,  ನಾವು ಕಾಣುವ ಬಹುತೇಕ ಭೈರವ ವಿಗ್ರಹಗಳಲ್ಲಿ ಕಾಣಿಸಿರುವ ನಾಯಿಯು, ಆತನ ಕರದಲ್ಲಿರುವ ತಲೆಬುರುಡೆಯಿಂದ ಸೋರುತ್ತಿರುವ ರಕ್ತವನ್ನು ನೆಕ್ಕಲು ಹವಣಿಸುತ್ತಿರುವಂತೆ ಮಾತ್ರ ಚಿತ್ರಿಸಲಾಗಿದೆಯೇ ವಿನಾ, ನಾಯಿಯ ಮೇಲೆ ಕುಳಿತಿರುವಂಥ ಶಿಲ್ಪಗಳಾಗಲೀ, ಚಿತ್ರಗಳಾಗಲೀ ತೀರ ವಿರಳವೆಂದೇ ಕಾಣುತ್ತದೆ.  ಏನಿದ್ದರೂ ಕಾಲಭೈರವ ಮತ್ತು ನಾಯಿಗಳ ಸಾಂಗತ್ಯವಂತೂ ಎಲ್ಲೆಡೆ ಕಂಡುಬರುತ್ತಿದೆಯೆನ್ನಲು ಅಡ್ಡಿಯಿಲ್ಲ.

* * * * * * *