ಸೋಮವಾರ, ಡಿಸೆಂಬರ್ 1, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - ೮

ಆತ್ಮೀಯ ಓದುಗರೇ,


ಡಿಸೆಂಬರ್   ತಿಂಗಳ ಈ ಸಂಚಿಕೆಯಲ್ಲಿ

ಶ್ರೀ ಕಾಲಭೈರವ ಪೂಜಾ ವಿಧಾನ, 
ಭಾಗ - ೮

ಇದರೊಂದಿಗೆ ಕಾಲಭೈರವ ಪೂಜಾ ವಿಧಾನದ ಕೊನೆಯ ಕಂತು ಪ್ರಕಟವಾದಂತಾಗಿದೆ. 
ಆಸಕ್ತರು ಇವುಗಳನ್ನು ಸಂಗ್ರಹಿಸಿ ಪೂಜಾ ಕಾರ್ಯದಲ್ಲಿ ಬಳಸಿಕೊಳ್ಳಬಹುದು.





ಶನಿವಾರ, ನವೆಂಬರ್ 1, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 6

ಆತ್ಮೀಯ ಓದುಗರೇ,


ನವೆಂಬರ್   ತಿಂಗಳ ಈ ಸಂಚಿಕೆಯಲ್ಲಿ

ಶ್ರೀ ಕಾಲಭೈರವ ಪೂಜಾ ವಿಧಾನ, 
ಭಾಗ - 6

ಈ ಲೇಖನವಿದೆ, ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ.

(ಕಣ್ತಪ್ಪಿನಿಂದ ಈ ಭಾಗವು ಪ್ರಕಟವಾಗಿರಲಿಲ್ಲ. ಅದನ್ನೀಗ ಪ್ರಕಟಿಸಲಾಗಿದೆ. )  






ಬುಧವಾರ, ಅಕ್ಟೋಬರ್ 1, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 7

ಆತ್ಮೀಯ ಓದುಗರೇ,

ಎಲ್ಲರಿಗೂ ದಸರಾ - ದೀಪಾವಳಿಯ ಶುಭಾಶಯಗಳು 

ಅಕ್ಟೋಬರ್  ತಿಂಗಳ ಈ ಸಂಚಿಕೆಯಲ್ಲಿ

ಶ್ರೀ ಕಾಲಭೈರವ ಪೂಜಾ ವಿಧಾನ, 
ಭಾಗ - ೭

ಈ ಲೇಖನವಿದೆ, ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ.







ಬುಧವಾರ, ಆಗಸ್ಟ್ 6, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - ೫

ಆತ್ಮೀಯ ಓದುಗರೇ,


2014 ಜೂನ್, ಅಗಸ್ಟ್, ಸೆಪ್ಟೆಂಬರ್ ತಿಂಗಳ ಸಂಚಿಕೆಗಳೊಂದರಲ್ಲಿ ಪ್ರಕಟವಾಗಿರಬೇಕಿದ್ದ

"ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 5"

ಈ ಲೇಖನವಿದೆ, ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ.
ಇದರೊಂದಿಗೆ ಕಾಲಭೈರವ ಪೂಜಾ ವಿಧಾನದ ಎಲ್ಲ ಪುಟಗಳೂ ಪ್ರಕಟವಾದಂತಾಗಿದ್ದು, ಇವುಗಳನ್ನು ಮುದ್ರಿಸಿಕೊಂಡರೆ ಪುಸ್ತಕ ರೂಪ ಸಿದ್ಧವಾಗುತ್ತದೆ. ಆಸಕ್ತರು ಬಳಸಿಕೊಳ್ಳಲೆಂಬುದು ಆಶಯ.






ಸೋಮವಾರ, ಜುಲೈ 21, 2014

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನ - ಭಾಗ ೪

ಆತ್ಮೀಯ ಓದುಗರೇ,
ಜುಲೈ ತಿಂಗಳ ಈ ಸಂಚಿಕೆಯಲ್ಲಿ


ಶ್ರೀ ಕಾಲಭೈರವ ದೇವಕಾರ್ಯ 
ಪೂಜಾ ವಿಧಾನ

ಎಂಬ ಲೇಖನ ಮಾಲೆಯ ನಾಲ್ಕನೆಯ ಕಂತು ಇಲ್ಲಿದೆ.

ಓದಿ ತಮ್ಮ ಅಭಿಪ್ರಾಯಗಳನ್ನು ನಮೂದು ಮಾಡಲು ವಿನಂತಿ. 





(ಜೂನ್ ತಿಂಗಳಲ್ಲಿ ಕಾರಣಾಂತರಗಳಿಂದ ಪ್ರಕಟಿಸಲಾಗಲಿಲ್ಲ ಹಾಗೂ ಜುಲೈನ ಸಂಚಿಕೆ ಕೂಡ ತಿಂಗಳ ಮೊದಲ ದಿನದಂದು ಪ್ರಕಟವಾಗಲು ಸಾಧ್ಯವಾಗಲಿಲ್ಲದುದಕ್ಕಾಗಿ ವಿಷಾದಿಸುತ್ತೇನೆ.)

ಶುಕ್ರವಾರ, ಮೇ 2, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 3

ಆತ್ಮೀಯ ಓದುಗರೇ,

ಈ ಸಂಚಿಕೆಯಲ್ಲಿ ಶ್ರೀ ಕಾಲಭೈರವ ಪೂಜಾ ವಿಧಾನದ ಮೂರನೇ ಭಾಗವು ಪ್ರಕಟವಾಗಿದೆ. ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ. 







ಮಂಗಳವಾರ, ಏಪ್ರಿಲ್ 1, 2014

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನ ಭಾಗ - 2

ಆತ್ಮೀಯ ಓದುಗರೇ,

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನದ ಎರಡನೇ ಕಂತು ಇಲ್ಲಿದೆ. 

ಋಣ ತ್ರಯಗಳು ಎಂಬ ಬಗ್ಗೆ ಕೇಳಿರುತ್ತೀರಿ. ಆ ಋಣಗಳೆಂದರೆ ದೇವ ಋಣ, ಪಿತೃ ಋಣ ಮತ್ತು  ಆಚಾರ್ಯ ಋಣ. ದೇವ ಋಣದ ಸಲ್ಲಿಕೆಗಾಗಿ ಎಂದು ಹಲವಾರು ಪೂಜಾ ವಿಧಾನಗಳಿವೆ. ಪಿತೃ ಋಣವನ್ನು ಅದರ ಅಧಿಕಾರಿಗಳಾದವರು ಯಥಾರೀತಿ ಆಚರಿಸುವುದರ ಮೂಲಕ ಸಲ್ಲಿಸುವರು. ಆಚಾರ್ಯ ಋಣದ ಸಲ್ಲಿಕೆಗೆಂದು ಇರುವ ನಿರ್ದಿಷ್ಟ ಕಾಲ ಉಪಾಕರ್ಮ ವಿಧಿ. ಇದರಲ್ಲಿ ಕರ್ತನು ತನ್ನ ಸ್ವಶಾಖೆಯನ್ನು ಗಮನದಲ್ಲಿರಿಸಿಕೊಂಡು ಋಷಿ ತರ್ಪಣಾದಿಗಳು, ಋಷಿ ಪೂಜೆ ಮುಂತಾದ ಕ್ರಿಯೆಗಳಿಂದ, ವೇದಪುರುಷನಿಗೆ ಹಾಗೂ ಋಷಿವರೇಣ್ಯರಿಗೆ ತನ್ನ ಕೃತಜ್ಞತೆಯನ್ನು ಸಲ್ಲಿಸುವ ಪದ್ಧತಿಯಿದೆ.

ಶ್ರೀ ಕಾಲಭೈರವನಿಗೆಂದೇ ನಿರ್ದಿಷ್ಟವಾದ ಪೂಜಾ ಕ್ರಮದ ಸಂಗ್ರಹ ಇಲ್ಲಿದೆ. ಇದನ್ನು ಹಲವಾರು ಗ್ರಂಥಗಳಿಂದ ಆಯ್ದು ಕ್ರೋಢೀಕರಿಸಲಾಗಿದೆ. ಈಗಾಗಲೇ ತಿಳಿಸಿರುವಂತೆ ಇದನ್ನು ಅನುಕ್ರಮವಾಗಿ ಸಂಗ್ರಹಿಸಿ, ಮುದ್ರಿಸಿಕೊಂಡು ನಿತ್ಯಪೂಜಾ ವಿಧಾನದಲ್ಲಿ ಶ್ರೀ ಕಾಲಭೈರವನ ಆರಾಧಕರು ಬಳಸುವಂತಾದರೆ, ವಹಿಸಿದ ಶ್ರಮ ಸಾರ್ಥಕವಾದೀತೆಂದು ಭಾವಿಸುತ್ತೇನೆ. 

ಇದಲ್ಲದೆ ಶ್ರೀ ಕಾಲಭೈರವನಿಗೆ ಸಂಬಂಧಿಸಿದಂತೆ ಇರುವ ಪಠ್ಯಗಳು, ಮಂತ್ರಗಳು, ಚಿತ್ರಗಳು, ಮಾಹಿತಿಗಳು ತಮ್ಮಲ್ಲಿ ಇರುವುದಾದಲ್ಲಿ, ನನ್ನ ಈ-ಮೇಲ್ ವಿಳಾಸಕ್ಕೆ ಕಳಿಸಿಕೊಡಲು ವಿನಂತಿ. ಅವುಗಳನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಲು ಅನುಕೂಲವಾಗುತ್ತದೆ. 








ಶನಿವಾರ, ಮಾರ್ಚ್ 1, 2014

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನ - ಭಾಗ 1



ಇದುವರೆಗೆ  ದೇಶದ ಅನೇಕ ಭಾಗಗಳಲ್ಲಿರುವ ಶ್ರೀ ಕಾಲಭೈರವ ಮಂದಿರಗಳ ಬಗ್ಗೆ, ಅವುಗಳ ಇತಿಹಾಸ ಮತ್ತು ವೈಶಿಷ್ಟ್ಯಗಳನ್ನು ಕುರಿತಂತೆ ಲೇಖನಗಳನ್ನು ಪ್ರಕಟಿಸಿರುವೆ. ಓದುಗರಲ್ಲಿ ಅನೇಕರು ಭೈರವನ ಪೂಜಾ ವಿಧಾನದ ಬಗ್ಗೆ ಬರೆಯಬೇಕೆಂದು ಕೋರಿದ್ದರು. ಹೀಗಾಗಿ ಸಂಚಿಕೆಯಲ್ಲಿ ಶ್ರೀ ಕಾಲಭೈರವನ ಪೂಜಾ ವಿಧಾನವನ್ನು ಒಳಗೊಂಡಿರುವ ಲೇಖನ ಮಾಲೆಯಿದೆ. ಇದರಲ್ಲಿ ಭೈರವ ದೇವರ ಅವತರಣ ಎಂಬ ಭಾಗವು ಹಿಂದೆ ಪ್ರಕಟವಾಗಿದೆಯಾದರೂ, ಇಡೀ ಪುಸ್ತಕದ ಪುಟಗಳನ್ನು ಇಲ್ಲಿ ನೀಡಲಾಗಿದೆ.  ಇವನ್ನು ಅನುಕ್ರಮವಾಗಿ ಪ್ರತಿ ತಿಂಗಳೂ ಪ್ರಕಟಿಸಲಾಗುವುದು. ಇವುಗಳನ್ನು ಗಮನಿಸಿ ಒಂದೆಡೆ ಸಂಗ್ರಹಿಸಿ ಮುದ್ರಿಸಿ ಇಟ್ಟುಕೊಂಡಲ್ಲಿ ಭೈರವನ ಪೂಜಾವಿಧಾನವು ನಿಮಗೆ ದೊರೆತಂತಾಗುತ್ತದೆ

ಕಾಲಭೈರವನಿಗೆ ಸಂಬಂಧಿಸಿದಂತೆ ಪೂಜಾ ಸಾಹಿತ್ಯವು ದಕ್ಷಿಣ ಭಾರತದಲ್ಲಿ ತೀರ ಕಡಿಮೆಯಿದೆ ಎನ್ನಬೇಕು. ಏಕೆಂದರೆ ಆತನ ಭಕ್ತರ ಸಂಖ್ಯೆ ವಿರಳವಾಗಿದೆ. ಆದರೂ ಭೈರವನನ್ನು ಆರಾಧಿಸುವವರು, ಆತನು ಶಿವನ ಮತ್ತೊಂದು ರೂಪವೆಂಬುದನ್ನು ಗ್ರಹಿಸಿ, ಶಿವಾಷ್ಟೋತ್ತರ ಮುಂತಾದ ಸಾಹಿತ್ಯಗಳಿಂದ ಅರ್ಚಿಸುತ್ತಿದ್ದರು. ನಾನು ಗಮನಿಸಿದಂತೆ, ಕಾಲಭೈರವ ಸಹಸ್ರನಾಮದ ಅನೇಕ ಪಾಠಗಳು ಲಭ್ಯವಿದ್ದು, ಅದರಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಇರುವುದನ್ನು ಗಮನಿಸಿದ್ದೇನೆ

ಇಲ್ಲಿ ಸಂಗ್ರಹಿಸಿರುವ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಪಡೆಯಲಾಗಿದ್ದು, ಎಲ್ಲ ಕರ್ತೃಗಳಿಗೆ, ವಿದ್ವಾಂಸರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ವಿಶೇಷತಃ ಕರೈನ್ ಲ್ಯಾಡ್ರೆಕ್, (ಇವರ ಬಗ್ಗೆ ಒಂದು ವಿವರಣಾತ್ಮಕ ಲೇಖನವು ಹಿಂದಿನ ಸಂಚಿಕೆಗಳಲ್ಲಿ ಪ್ರಕಟವಾಗಿದೆ) ಕಾಲಭೈರವನ ಬಗ್ಗೆ ಸಂಶೋಧನೆ ನಡೆಸಿರುವವರಲ್ಲಿ ಅಗ್ರಗಣ್ಯರು. ಅವರು ನಾನು ಬಗ್ಗೆ ತಳೆದ ಆಸಕ್ತಿಯನ್ನು ಗಮನಿಸಿ ಪುಸ್ತಕದಲ್ಲಿರುವ ಹೆಚ್ಚಿನ ಭಾಗವನ್ನು ನನಗೆ ಕಳಿಸಿದ್ದರು. ಆಂಗ್ಲೋ-ರೋಮನ್ ಲಿಪಿಯಲ್ಲಿದ್ದ ಅವರ ಸಂಗ್ರಹಿತ ಸಾಹಿತ್ಯವನ್ನು ಕನ್ನಡಕ್ಕೆ ಲಿಪ್ಯಂತರಣ ಮಾಡಿ, ಪುಸ್ತಕವನ್ನು ಪ್ರಕಟಿಸಿದೆ. ಹೀಗಾಗಿ ಅವರಿಗೆ ವಿಶೇಷ ಕೃತಜ್ಞತೆಗಳು ಸಲ್ಲುತ್ತವೆ

ಇದಲ್ಲದೆ, ಓದುಗರಲ್ಲಿ ಇರಬಹುದಾದ ಸಾಹಿತ್ಯವನ್ನು ನನಗೆ ಕಳಿಸಿದರೆ, ಅದನ್ನೂ ಪ್ರಕಟಿಸಲಾಗುವುದು. ಇಂಥ ಒಂದು ಕ್ರಮದಿಂದ ಕಾಲಭೈರವನಿಗೆ ಸಂಬಂಧಿಸಿದ ಸಾಹಿತ್ಯವನ್ನು ಒಂದೆಡೆ ಕ್ರೋಢೀಕರಿಸಲು ಅನುಕೂಲವಾಗುತ್ತದೆ. ಇದನ್ನು ತಾವು ಗಮನಿಸಿ, ಸಹಕರಿಸುವಿರೆಂದು ಭಾವಿಸುತ್ತೇನೆ.

ಬ್ಲಾಗ್  ಅಂಕಿ-ಅಂಶಗಳ ವಿಭಾಗದಲ್ಲಿ ಕಂಡುಬಂದ ಒಂದು ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಅದೆಂದರೆ ಕಾಲಭೈರವನ ಬ್ಲಾಗ್ ನ್ನು ಓದುವವರು ವಿಶ್ವದ ಹಲವೆಡೆಯಿದ್ದಾರೆ. ಅಂಥವರು ಬೆಲಾರೆಸ್, ಕೆನಡಾ, ಅಮೆರಿಕಾ, ದಕ್ಷಿಣ ಆಫ್ರಿಕಾ, ಚೀನಾ,  ರಷಿಯಾ, ಉಕ್ರೇನ್ ಮುಂತಾದ ದೇಶಗಳಲ್ಲಿ ಹರಡಿದ್ದಾರೆಂಬುದು ಇದರ ವ್ಯಾಪ್ತಿಯನ್ನು ನೋಡಿದಾಗ ತಿಳಿಯಿತು. 

ಸಂಚಿಕೆಯಲ್ಲಿ ರಕ್ಷಾಪುಟದಿಂದ ಆರಂಭಿಸಿ ಐದನೇ ಪುಟದ ವರೆಗಿನ ಪಠ್ಯವನ್ನು ಪ್ರಕಟಿಸಲಾಗಿದೆ. 






* * * * * * *

  

ಶನಿವಾರ, ಫೆಬ್ರವರಿ 1, 2014

ಯಾಣದ " ಭೈರವ ಶಿಖರ "


ನಮ್ಮ ಬಹುತೇಕ ದೇವರುಗಳು ನೆಲಸಿರುವುದು ಬೆಟ್ಟದ ತುದಿಯಲ್ಲಿ. ಅಂಥ ಪರಿಕಲ್ಪನೆಯ ಹಿಂದೆ ವಿಶೇಷವಾದ ಒಂದು ಉದ್ದೇಶವಿದೆ. ದೇವರನ್ನು ಸಂದರ್ಶಿಸುವುದು ಅಷ್ಟು ಸುಲಭಸಾಧ್ಯವಲ್ಲ, ಅದಕ್ಕೆ ಶ್ರಮ, ಆಸಕ್ತಿ ಮತ್ತು ಭಕ್ತಿಗಳು ಬೇಕು ಎನ್ನುವುದು ಒಂದು ಉದ್ದೇಶವಾದರೆ, ಪ್ರಕೃತಿಯಲ್ಲೇ ಲೀನನಾಗಿರುವ ಆತನನ್ನು ಅಂಥಲ್ಲೇ ನೋಡಬೇಕು, ಇದರಿಂದ ಮನಸ್ಸಿಗೆ ಮುದ, ಎತ್ತರದ ಬೆಟ್ಟವನ್ನು ಹತ್ತಿಬಂದು ಸಾಧಿಸಿದಾಗಿನ ಹೆಮ್ಮೆಗಳು ವ್ಯಕ್ತಿಯ ಆತ್ಮವಿಶ್ವಾಸವನ್ನು ದೃಢಗೊಳಿಸುತ್ತವೆ. ಹೆಚ್ಚಿನಂಶದ ಕಾಲಭೈರವನ ಮಂದಿರಗಳೂ  ಬೆಟ್ಟದ ಮೇಲೆಯೇ ಇರುತ್ತವೆ. ಹೀಗಾಗಿ "ಬೆಟ್ಟಭೈರವ"ನೆಂಬ ಪದವೂ ರೂಢಿಯಲ್ಲಿದೆ.
ಹೀಗೆಯೇ ಕರ್ನಾಟಕದಲ್ಲಿ ಅತ್ಯಂತ ಎತ್ತರದಲ್ಲಿ ನೆಲೆಸಿರುವ ಭೈರವ ಸ್ಥಾನ ಶಿರಸಿಯ ಸಮೀಪದಲ್ಲಿರುವ "ಯಾಣ" ದಲ್ಲಿದೆ. ಯಾಣವು ಚಾರಣಕ್ಕೆ ಪ್ರಸಿದ್ಧವಾದದ್ದು ತೀರ ಇತ್ತೀಚೆಗೆನ್ನಬೇಕು. ಮಾನವನ ಕರ್ತೃತ್ವ ಶಕ್ತಿಗೆ ಸವಾಲೆಂಬ ರೂಪದಲ್ಲಿರುವ ಈ ಪ್ರದೇಶಕ್ಕೆ ಭೇಟಿ ನೀಡುವ ಯಾರಿಗೂ, ಅದು ಪ್ರಕೃತಿಯ ರುದ್ರ ರಮಣೀಯತೆಯನ್ನು ತೋರುವುದರ ಜತೆಗೇ, ದೈವಭಕ್ತಿಯ ಪರೀಕ್ಷೆಗೂ ಸೂಕ್ತ ಸ್ಥಳವೆಂಬ ಭಾವನೆ ಮೂಡುತ್ತದೆ. ಅಲ್ಲಿ ಭೈರವನ ನೆಲೆಯಿರುವುದು ಕೂಡ ಸಾಂಕೇತಿಕ ದೃಷ್ಟಿಯಿಂದ ಮಹತ್ವಪೂರ್ಣವಾದುದು. ಏಕೆಂದರೆ, ಅಲ್ಲಿನ ನಿಸರ್ಗದ ರುದ್ರತೆ, ಕಾಠಿಣ್ಯಗಳ ಸಂಕೇತವನ್ನು ಬಹುಶಃ  ಭೈರವನ ರೂಪವಲ್ಲದೇ ಮತ್ತಾವ ದೇವ ದೇವಿಯರೂ ಸಮರ್ಥವಾಗಿ ಪ್ರತಿನಿಧಿಸಲಾರರು. ಸುಮಾರು 350 ಅಡಿಗಳಷ್ಟು ಎತ್ತರದ ಕಪ್ಪು ಬಂಡೆಗಲ್ಲುಗಳ ತುದಿಯಲ್ಲಿ ಸೀಳು ಗುಹೆಯಾಗಿ ಮಾರ್ಪಾಡಾಗಿದೆ. ಇದೇ ಭೈರವ ಶಿಖರ. ಈ ಗುಹೆಯಲ್ಲಿ ಒಡಮೂಡಿರುವ ಲಿಂಗದ ಮೇಲೆ ನಿರಂತರವಾಗಿ ಜಲಧಾರೆ ಹರಿಯುತ್ತಿದೆ. ನೀರಿನ ಸ್ರೋತವನ್ನು ಕಲ್ಲುಬಂಡೆಗಳ ಯಾವಭಾಗದಲ್ಲೂ ಗುರುತಿಸಲು ಸಾಧ್ಯವಾಗದು. ನಿಸರ್ಗದ ವೈಚಿತ್ರ್ಯಗಳಿಗೆ ಇನ್ನೊಂದು ಉತ್ತಮ ಉದಾಹರಣೆಯಾಗಿ ಯಾಣದ ಕಲ್ಲು ಶಿಖರಗಳು ಆಗಸವನ್ನು ಚುಚ್ಚುವಂತೆ ಅನಾದಿಕಾಲದಿಂದ ನಿಂತಿವೆ.
ಯಾಣಕ್ಕೆ ಪೌರಾಣಿಕ ಮಹತ್ವವೂ ಇದೆ. ಇಲ್ಲಿ ಮೋಹಿನಿ ಭಸ್ಮಾಸುರರ ಕಥೆಯ ವಿವರಣೆಯಿದೆ. ಭಸ್ಮಾಸುರ ಶಿವನಿಂದ ವರಪಡೆದು, ತಾನು ಯಾರ ತಲೆಯ ಮೇಲೆ ಕೈಯಿಡುತ್ತಾನೋ ಅವರಿಗೆ ಸಾವು ನಿಶ್ಚಯವೆಂಬ ವರವನ್ನು ಭಸ್ಮಾಸುರ ಶಿವನಿಂದ ಪಡೆದನಷ್ಟೆ. ಇಲ್ಲಿ ಪ್ರಚಲಿತವಿರುವ ಕಥಾನಕದ ಅನ್ವಯ, ವರ ನೀಡಿದವ ಶಿವ. ಭಸ್ಮಾಸುರನ ವರ ಪ್ರಯೋಗಕ್ಕೆ ಬಲಿಪಶುವಾದದ್ದು "ಭೈರವೇಶ್ವರ"ನೆಂಬ ಶಿವನ ಇನ್ನೊಂದು ರೂಪ. ಆಗ ಮೋಹಿನಿಯ ರೂಪದಲ್ಲಿ ಬಂದು ಅವನನ್ನು ರಕ್ಷಿಸಿದ್ದು ಮಹಾವಿಷ್ಣು. ಕೊನೆಗೂ ಭಸ್ಮಾಸುರ ಭಸ್ಮವಾದ. ಅದರ ಕುರುಹು ಆ ಪ್ರದೇಶದಲ್ಲಿ ಇನ್ನೂ ಇದೆಯೆನ್ನಲು ಸಾಕ್ಷಿಯಾಗಿ ಸುತ್ತಮುತ್ತಲಿನ ವನಪ್ರದೇಶವೆಲ್ಲ ಕಪ್ಪುಬಣ್ಣದ ಬೂದಿಮಣ್ಣಿನಿಂದಲೇ ತುಂಬಿದೆ. ಈ ಎರಡು ಪಾತ್ರಗಳಾದ ಭೈರವ ಮತ್ತು  ಮೋಹಿನಿಯ ಸ್ಮಾರಕವಾಗಿ ಈ ಪ್ರದೇಶದಲ್ಲಿನ ಎರಡು ಎತ್ತರವಾದ ಶಿಖರಗಳನ್ನು "ಭೈರವ ಶಿಖರ" ಮತ್ತು "ಮೋಹಿನಿ ಶಿಖರ"ಗಳೆಂದು ಹೆಸರಿಸಲಾಗಿದೆ. ಒಂದು ಕಾಲಕ್ಕೆ ಹತ್ತುಸಾವಿರ ಜನಸಂಖ್ಯೆಯಿದ್ದ ಎಪ್ಪತ್ತು ಹಳ್ಳಿಗಳ ಯಾಣದಲ್ಲೀಗ ಕೇವಲ ಕೆಲವು ನೂರುಗಳಷ್ಟು ಜನವಸತಿಯಿದೆ. ಅದರಲ್ಲೂ ಪೂಜಾರಿಗಳ ವಂಶಸ್ಧರು ಅಲ್ಲಿ ಸ್ಥಿರವಾಗಿ ಉಳಿದುಕೊಂಡದ್ದನ್ನು ಗಮನಿಸಿದರೆ, ಭೈರವನ ಆರಾಧನೆ ಈ ಪ್ರದೇಶದಲ್ಲಿ ತುಂಬ ಹಿಂದಿನ ಕಾಲದಿಂದಲೂ ನಡೆದದ್ದು ಗೋಚರಿಸುತ್ತದೆ.
ಪ್ರತಿವರ್ಷ ಶಿವರಾತ್ರಿಯಂದು ಅಲ್ಲಿ ವಿಶೇಷ ಉತ್ಸವ ಜರುಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಶಿವನು ಆವಾಸಸ್ಥಳವಾದ ಇಲ್ಲಿ ಪಾದರಕ್ಷೆಗಳನ್ನು ಧರಿಸಿ ನಡೆಯುವುದು ಶಿವನಿಗೆ ಅಪಚಾರ ಮಾಡಿದಂತೆ ಎಂಬ ಭಾವನೆಯಿರುವುದರಿಂದ ಭಕ್ತಾದಿಗಳು ಬರಿಗಾಲಿನಲ್ಲೇ ಬಂದು ತಮ್ಮ ಸೇವೆ ಸಲ್ಲಿಸುತ್ತಾರೆ.  ಶಿವರಾತ್ರಿಯ ದಿನ ಇಲ್ಲಿನ ಭೈರವನ ಅರ್ಚನೆ ಮಾಡಿ, ಸಮೀಪದಲ್ಲೇ ಇರುವ ದಂಡಿತೀರ್ಥದಿಂದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅಭಿಷೇಕಮಾಡಿದರೆ ನಿಶೇಷ ಪುಣ್ಯ ಲಭ್ಯವೆಂಬ ನಂಬಿಕೆಯಿದೆ.
"ರೊಕ್ಕ ಇದ್ದರೆ ಗೋಕರ್ಣ, ಸೊಕ್ಕು ಇದ್ದರೆ ಯಾಣ" - ಯಾಣದ ಕುರಿತು ಅನಾದಿಕಾಲದಿಂದ ಇರುವ ಗಾದೆಯು ಅದರ ದುರ್ಗಮತೆಯನ್ನು ಕುರಿತು ಹೇಳುತ್ತದೆ.  ಈಗೇನೋ ಪರಿಸ್ಥಿತಿ ಸುಧಾರಿಸಿರುವುದರಿಂದ ಯಾಣವನ್ನು ತಲುಪಲು ಬಸ್ಸು ಕಾರುಗಳ ಸೌಲಭ್ಯವಿದೆ. ಆದರೆ ದುರ್ಗಮ ಶಿಲಾ ಶಿಖರಗಳನ್ನು ಕಾಲ್ನಡಿಗೆಯಲ್ಲೇ ಹತ್ತಿ ಸಾಗಬೇಕಾಗಿರುವುದರಿಂದ, ಗಾದೆಯ ಮಾತು ಸುಳ್ಳಾಗಿಲ್ಲ ಮತ್ತು ಎಂದಿಗೂ ಸುಳ್ಳಾಗದು ಕೂಡ!.
ಚಿತ್ರಕೃಪೆ : ಇಂಟರ್ನೆಟ್ 

* * * * * * * 

ಬುಧವಾರ, ಜನವರಿ 1, 2014

ಮೂಪೂರಿನ ಭೈರವೇಶ್ವರ ದೇವಾಲಯ

ನಿರಾಕಾರ ಭೈರವೇಶ್ವರ

ಆತ್ಮೀಯ ಓದುಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು 

ಇದುವರೆಗೆ ಪರಿಚಯಿಸಿರುವ ದೇಗುಲಗಳೆಲ್ಲಕ್ಕಿಂತ ವಿಶಿಷ್ಟವಾದುದು ಈ ಮಂದಿರ.  ಇಲ್ಲಿ ಭವ್ಯವಾದ ಶಿಲ್ಪ ಸೌಂದರ್ಯವಾಗಲೀ, ಬೃಹದಾಕಾರದ ವಿಗ್ರಹಗಳಾಗಲೀ ಇಲ್ಲ. ಭೈರವನ ಶಿಲ್ಪವೂ ಇಲ್ಲದ, ನಿರಾಕಾರದ ಸಂಕೇತವಾಗಿರುವ ಇಲ್ಲಿನ ಭೈರವೇಶ್ವರನು ಬಂಡೆಯ ರೂಪದಲ್ಲಿ ಆರಾಧಿತನಾಗುತ್ತಿರುವುದೇ ಇಲ್ಲಿನ ವಿಶೇಷ.  ಆಂಧ್ರ ಪ್ರದೇಶದ ರಾಯಲಸೀಮಾ ಪ್ರಾಂತದಲ್ಲಿರುವ ಈ ದೇವಾಲಯದ ಐತಿಹ್ಯವೂ, ಭೈರವನ ಕುರಿತಾಗಿ ಇರುವ ಕಥಾನಕಗಳಿಗಿಂತ ಭಿನ್ನವಾಗಿದೆ. ೧೩ನೇ ಶತಮಾನದಲ್ಲಿ ಈ ಪ್ರದೇಶವನ್ನು ಕಾಕತೀಯರು ಆಳುತ್ತಿದ್ದರು. ಅವರು ಈ ಭೈರವೇಶ್ವರನ ಉಪಾಸನೆಯನ್ನು ಮಾಡುತ್ತಿದ್ದರೆಂಬುದಕ್ಕೆ ಶಿಲಾಶಾಸನಗಳ ದಾಖಲೆಗಳಿವೆ. 


ಶಿವನು ಭಸ್ಮಾಸುರನ ತಪಸ್ಸಿಗೆ ಮೆಚ್ಚಿ ವರನೀಡಿದ. ಆ ಕೃತಜ್ಞತೆಯ ಸಂಕೇತವಾಗಿ ಭಸ್ಮಾಸುರನು ಈ ಸ್ಥಳದಲ್ಲಿ ಭೈರವೇಶ್ವರನೆಂಬ ಹೆಸರಿನಲ್ಲಿ ಸ್ವಲ್ಪಕಾಲ ಇಲ್ಲಿ ನೆಲೆಸಿದನಂತೆ. ಮುಂದೆ ಇದೇ ಸ್ಥಳದಲ್ಲಿ ಭಸ್ಮಾಸುರನ ಅಂತ್ಯವಾಗುತ್ತದೆಂದು ತಿಳಿದಿದ್ದ ವಿಷ್ಣುವು ಮೋಹಿನಿಯ ಅವತಾರ ತಳೆದು ಆತನನ್ನು ಸಂಹರಿಸಿದನು. ಹೀಗಾಗಿ ಬೆಟ್ಟದ ಮೇಲಿರುವ ಈ ಸ್ಥಳವು ಮೋಹನಗಿರಿ ಎಂದು ಪ್ರಸಿದ್ಧವಾದರೂ, ಆಡುಮಾತಿನಲ್ಲಿ ಅಪಭ್ರಂಶಗೊಂಡು ಇದೀಗ ಮೂಪೂರಿ ಎಂದು ಬದಲಾಗಿದೆ.

ಬಂಡೆಯ ರೂಪದಲ್ಲಿದ್ದ ಭಸ್ಮಾಸುರನು ಪ್ರತೀ ವರ್ಷವೂ ಬೆಳೆಯುತ್ತಿದ್ದನಂತೆ. ಆತನಿಗೊಬ್ಬ ಸೋದರಿ. ಅವಳ ಹೆಸರು ಅಕ್ಕ ಪಪ್ಪೂರಮ್ಮ ಎಂದಿತ್ತು. ಆಕೆಯು ಈ ಅಸುರನು ಹೀಗೇ ಬೆಳೆದು ಲೋಕ ಕಂಟಕನಾಗುತ್ತಾನೆಂದು ತಿಳಿದು, ಅವನ ಬೆಳವಣಿಗೆಯನ್ನು ಮೊಟಕುಗೊಳಿಸಲು ಆತನ ತಲೆಯಮೇಲೆ ಕೈಯಿಟ್ಟಳು. ಇದರಿಂದ ಕ್ರುದ್ಧನಾದ ಭೈರವರೂಪೀ ಭಸ್ಮಾಸುರನು ಆಕೆಯನ್ನು ಸ್ಥಳಬಿಟ್ಟು ಹೋಗುವಂತೆ ಆದೇಶಿಸಿದನು. ನಂತರ ಆಕೆಯು ಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಳು. ಇಂದಿಗೂ ಆಕೆಯ ದರ್ಶನ ಪಡೆಯದೇ ಭೈರವನನ್ನು ದರ್ಶಿಸುವುದು ಫಲ ನೀಡುವುದಿಲ್ಲವೆಂಬ ನಂಬಿಕೆ ಆಚರಣೆಯಲ್ಲಿದೆ. ಇತ್ತೀಚೆಗೆ ನಡೆದ ಮೌಢ್ಯ ತಡೆ ವಿಧೇಯಕದ ಹಿನ್ನೆಲೆಯಲ್ಲಿ ಇಂಥ ಕಥೆಗಳನ್ನು ವಿಶ್ಲೇಷಿಸಲು ಹೊರಟರೆ, ಇದು ಮೌಢ್ಯವೆಂದೇ ಕಂಡೀತು. ಆದರೆ ಇವೆಲ್ಲ ಯಾವ ವಿಶ್ಲೇಷಣೆಯನ್ನೂ, ಸಾಬೀತನ್ನೂ ನಿರೀಕ್ಷಿಸುವುದಿಲ್ಲ. ಜನಮಾನಸದಲ್ಲಿ ನೆಲೆ ನಿಂತ ಇಂಥ ಕಥಾನಕಗಳೇ ಅಲ್ಲಿನ ದೇಗುಲಗಳನ್ನು ಶ್ರದ್ಧಾಕೇಂದ್ರಗಳನ್ನಾಗಿ ಮಾಡಿವೆ, ಪರಂಪರೆಯಂತೆ ಮುಂದುವರೆಯುತ್ತಿವೆ.

ಕಡಪಾ ಜಿಲ್ಲೆಯ ವೇಮುಲ ಮಂಡಲಕ್ಕೆ ಸೇರಿದ ಈ ಪ್ರದೇಶವು ನದಿಯಿಂದ ಸುತ್ತುವರೆದ ಗುಡ್ಡದ ಮೇಲಿದೆ. ತಪ್ಪಲಿನಲ್ಲಿ ನಲ್ಲಚಿರುವಪಲ್ಲಿ, ಕೊಂಡಾರೆಡ್ಡಿಪಲ್ಲಿ ಮುಂತಾದ ಹಳ್ಳಿಗಳಿವೆ. ಇವುಗಳನ್ನು ಪುಲಿವೆಂದುಲ ಪಟ್ಟಣದಿಂದ ಬಸ್ ಮೂಲಕ ತಲುಪಬಹುದು. ಮೊಯಿಲ್ ಚೆರುವ ಅಥವಾ ನರೇಪಲ್ಲಿಯೆಂಬ ಗ್ರಾಮಗಳ ಮೂಲಕವೂ ೩-೪ ಕಿ.ಮೀ. ಹಾದಿಯನ್ನು ನಡೆದು ತಲುಪಬಹುದು. ಗುಡ್ಡದ ಮೇಲೆ ಬಸ್ ಸಂಚರಿಸುವಂತೆ ರಸ್ತೆಯನ್ನೂ ಮಾಡಲಾಗಿದೆ. ಶತಮಾನಗಳ ಹಿಂದಿನಿಂದಲೂ ಆಂಧ್ರ ಮತ್ತು ತಮಿಳುನಾಡಿನ ಭಕ್ತರು ಈ ದೇಗುಲವನ್ನು ಸಂದರ್ಶಿಸುತ್ತಿದ್ದಾರೆ. ವಿಷ್ಣುವಿನ ಕಥಾನಕದ ಹಿನ್ನೆಲೆಯಿರುವುದರಿಂದಲೋ ಏನೋ, ಕೇರಳದ ಶಬರಿಮಲೆಯ ಯಾತ್ರಿಕರು ಇಲ್ಲಿಂದ ಇರುಮುಡಿ ಹೊತ್ತು ಸಾಗುವ ಹರಕೆಯ ಸಂಪ್ರದಾಯವು ಹಿಂದಿನಿಂದಲೂ ರೂಢಿಯಲ್ಲಿದೆ. ಆಂಧ್ರಪ್ರದೇಶದ ಸರಕಾರದ ನೆರೆವಿನಿಂದ ಇತ್ತೀಚೆಗೆ ದೇಗುಲವನ್ನು ನವೀಕರಿಸಲಾಗಿದ್ದು, ಗಾಳಿಗೋಪುರ, ಕಲ್ಯಾಣಮಂಟಪಗಳ ನಿರ್ಮಾಣವನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಭೈರವೇಶ್ವರನ ಕಥಾನಕವನ್ನು ವಿವರಿಸುವ ಸುಪ್ರಭಾತದ ಧ್ವನಿಮುದ್ರಿಕೆಯನ್ನೂ ಬಿಡುಗಡೆಮಾಡಲಾಗಿದೆ.

* * * * * * *