ಬುಧವಾರ, ಜನವರಿ 1, 2014

ಮೂಪೂರಿನ ಭೈರವೇಶ್ವರ ದೇವಾಲಯ

ನಿರಾಕಾರ ಭೈರವೇಶ್ವರ

ಆತ್ಮೀಯ ಓದುಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು 

ಇದುವರೆಗೆ ಪರಿಚಯಿಸಿರುವ ದೇಗುಲಗಳೆಲ್ಲಕ್ಕಿಂತ ವಿಶಿಷ್ಟವಾದುದು ಈ ಮಂದಿರ.  ಇಲ್ಲಿ ಭವ್ಯವಾದ ಶಿಲ್ಪ ಸೌಂದರ್ಯವಾಗಲೀ, ಬೃಹದಾಕಾರದ ವಿಗ್ರಹಗಳಾಗಲೀ ಇಲ್ಲ. ಭೈರವನ ಶಿಲ್ಪವೂ ಇಲ್ಲದ, ನಿರಾಕಾರದ ಸಂಕೇತವಾಗಿರುವ ಇಲ್ಲಿನ ಭೈರವೇಶ್ವರನು ಬಂಡೆಯ ರೂಪದಲ್ಲಿ ಆರಾಧಿತನಾಗುತ್ತಿರುವುದೇ ಇಲ್ಲಿನ ವಿಶೇಷ.  ಆಂಧ್ರ ಪ್ರದೇಶದ ರಾಯಲಸೀಮಾ ಪ್ರಾಂತದಲ್ಲಿರುವ ಈ ದೇವಾಲಯದ ಐತಿಹ್ಯವೂ, ಭೈರವನ ಕುರಿತಾಗಿ ಇರುವ ಕಥಾನಕಗಳಿಗಿಂತ ಭಿನ್ನವಾಗಿದೆ. ೧೩ನೇ ಶತಮಾನದಲ್ಲಿ ಈ ಪ್ರದೇಶವನ್ನು ಕಾಕತೀಯರು ಆಳುತ್ತಿದ್ದರು. ಅವರು ಈ ಭೈರವೇಶ್ವರನ ಉಪಾಸನೆಯನ್ನು ಮಾಡುತ್ತಿದ್ದರೆಂಬುದಕ್ಕೆ ಶಿಲಾಶಾಸನಗಳ ದಾಖಲೆಗಳಿವೆ. 


ಶಿವನು ಭಸ್ಮಾಸುರನ ತಪಸ್ಸಿಗೆ ಮೆಚ್ಚಿ ವರನೀಡಿದ. ಆ ಕೃತಜ್ಞತೆಯ ಸಂಕೇತವಾಗಿ ಭಸ್ಮಾಸುರನು ಈ ಸ್ಥಳದಲ್ಲಿ ಭೈರವೇಶ್ವರನೆಂಬ ಹೆಸರಿನಲ್ಲಿ ಸ್ವಲ್ಪಕಾಲ ಇಲ್ಲಿ ನೆಲೆಸಿದನಂತೆ. ಮುಂದೆ ಇದೇ ಸ್ಥಳದಲ್ಲಿ ಭಸ್ಮಾಸುರನ ಅಂತ್ಯವಾಗುತ್ತದೆಂದು ತಿಳಿದಿದ್ದ ವಿಷ್ಣುವು ಮೋಹಿನಿಯ ಅವತಾರ ತಳೆದು ಆತನನ್ನು ಸಂಹರಿಸಿದನು. ಹೀಗಾಗಿ ಬೆಟ್ಟದ ಮೇಲಿರುವ ಈ ಸ್ಥಳವು ಮೋಹನಗಿರಿ ಎಂದು ಪ್ರಸಿದ್ಧವಾದರೂ, ಆಡುಮಾತಿನಲ್ಲಿ ಅಪಭ್ರಂಶಗೊಂಡು ಇದೀಗ ಮೂಪೂರಿ ಎಂದು ಬದಲಾಗಿದೆ.

ಬಂಡೆಯ ರೂಪದಲ್ಲಿದ್ದ ಭಸ್ಮಾಸುರನು ಪ್ರತೀ ವರ್ಷವೂ ಬೆಳೆಯುತ್ತಿದ್ದನಂತೆ. ಆತನಿಗೊಬ್ಬ ಸೋದರಿ. ಅವಳ ಹೆಸರು ಅಕ್ಕ ಪಪ್ಪೂರಮ್ಮ ಎಂದಿತ್ತು. ಆಕೆಯು ಈ ಅಸುರನು ಹೀಗೇ ಬೆಳೆದು ಲೋಕ ಕಂಟಕನಾಗುತ್ತಾನೆಂದು ತಿಳಿದು, ಅವನ ಬೆಳವಣಿಗೆಯನ್ನು ಮೊಟಕುಗೊಳಿಸಲು ಆತನ ತಲೆಯಮೇಲೆ ಕೈಯಿಟ್ಟಳು. ಇದರಿಂದ ಕ್ರುದ್ಧನಾದ ಭೈರವರೂಪೀ ಭಸ್ಮಾಸುರನು ಆಕೆಯನ್ನು ಸ್ಥಳಬಿಟ್ಟು ಹೋಗುವಂತೆ ಆದೇಶಿಸಿದನು. ನಂತರ ಆಕೆಯು ಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಳು. ಇಂದಿಗೂ ಆಕೆಯ ದರ್ಶನ ಪಡೆಯದೇ ಭೈರವನನ್ನು ದರ್ಶಿಸುವುದು ಫಲ ನೀಡುವುದಿಲ್ಲವೆಂಬ ನಂಬಿಕೆ ಆಚರಣೆಯಲ್ಲಿದೆ. ಇತ್ತೀಚೆಗೆ ನಡೆದ ಮೌಢ್ಯ ತಡೆ ವಿಧೇಯಕದ ಹಿನ್ನೆಲೆಯಲ್ಲಿ ಇಂಥ ಕಥೆಗಳನ್ನು ವಿಶ್ಲೇಷಿಸಲು ಹೊರಟರೆ, ಇದು ಮೌಢ್ಯವೆಂದೇ ಕಂಡೀತು. ಆದರೆ ಇವೆಲ್ಲ ಯಾವ ವಿಶ್ಲೇಷಣೆಯನ್ನೂ, ಸಾಬೀತನ್ನೂ ನಿರೀಕ್ಷಿಸುವುದಿಲ್ಲ. ಜನಮಾನಸದಲ್ಲಿ ನೆಲೆ ನಿಂತ ಇಂಥ ಕಥಾನಕಗಳೇ ಅಲ್ಲಿನ ದೇಗುಲಗಳನ್ನು ಶ್ರದ್ಧಾಕೇಂದ್ರಗಳನ್ನಾಗಿ ಮಾಡಿವೆ, ಪರಂಪರೆಯಂತೆ ಮುಂದುವರೆಯುತ್ತಿವೆ.

ಕಡಪಾ ಜಿಲ್ಲೆಯ ವೇಮುಲ ಮಂಡಲಕ್ಕೆ ಸೇರಿದ ಈ ಪ್ರದೇಶವು ನದಿಯಿಂದ ಸುತ್ತುವರೆದ ಗುಡ್ಡದ ಮೇಲಿದೆ. ತಪ್ಪಲಿನಲ್ಲಿ ನಲ್ಲಚಿರುವಪಲ್ಲಿ, ಕೊಂಡಾರೆಡ್ಡಿಪಲ್ಲಿ ಮುಂತಾದ ಹಳ್ಳಿಗಳಿವೆ. ಇವುಗಳನ್ನು ಪುಲಿವೆಂದುಲ ಪಟ್ಟಣದಿಂದ ಬಸ್ ಮೂಲಕ ತಲುಪಬಹುದು. ಮೊಯಿಲ್ ಚೆರುವ ಅಥವಾ ನರೇಪಲ್ಲಿಯೆಂಬ ಗ್ರಾಮಗಳ ಮೂಲಕವೂ ೩-೪ ಕಿ.ಮೀ. ಹಾದಿಯನ್ನು ನಡೆದು ತಲುಪಬಹುದು. ಗುಡ್ಡದ ಮೇಲೆ ಬಸ್ ಸಂಚರಿಸುವಂತೆ ರಸ್ತೆಯನ್ನೂ ಮಾಡಲಾಗಿದೆ. ಶತಮಾನಗಳ ಹಿಂದಿನಿಂದಲೂ ಆಂಧ್ರ ಮತ್ತು ತಮಿಳುನಾಡಿನ ಭಕ್ತರು ಈ ದೇಗುಲವನ್ನು ಸಂದರ್ಶಿಸುತ್ತಿದ್ದಾರೆ. ವಿಷ್ಣುವಿನ ಕಥಾನಕದ ಹಿನ್ನೆಲೆಯಿರುವುದರಿಂದಲೋ ಏನೋ, ಕೇರಳದ ಶಬರಿಮಲೆಯ ಯಾತ್ರಿಕರು ಇಲ್ಲಿಂದ ಇರುಮುಡಿ ಹೊತ್ತು ಸಾಗುವ ಹರಕೆಯ ಸಂಪ್ರದಾಯವು ಹಿಂದಿನಿಂದಲೂ ರೂಢಿಯಲ್ಲಿದೆ. ಆಂಧ್ರಪ್ರದೇಶದ ಸರಕಾರದ ನೆರೆವಿನಿಂದ ಇತ್ತೀಚೆಗೆ ದೇಗುಲವನ್ನು ನವೀಕರಿಸಲಾಗಿದ್ದು, ಗಾಳಿಗೋಪುರ, ಕಲ್ಯಾಣಮಂಟಪಗಳ ನಿರ್ಮಾಣವನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಭೈರವೇಶ್ವರನ ಕಥಾನಕವನ್ನು ವಿವರಿಸುವ ಸುಪ್ರಭಾತದ ಧ್ವನಿಮುದ್ರಿಕೆಯನ್ನೂ ಬಿಡುಗಡೆಮಾಡಲಾಗಿದೆ.

* * * * * * *





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ