ಸೋಮವಾರ, ಜುಲೈ 1, 2013

ನೇಪಾಳದ ಆಕಾಶ ಭೈರವನ ವಿಚಿತ್ರ ಕಥಾನಕ

ಆತ್ಮೀಯರೇ, 

ಜೂನ್ 30 ನನ್ನ 60ನೇ ಜನ್ಮದಿನ, ಜತೆಗೆ ವೃತ್ತಿ ಜೀವನಕ್ಕೆ ವಿದಾಯ ಕೂಡ. ಮುಂದಿನ ವಿಶ್ರಾಂತ ಜೀವನದಲ್ಲಿ ಇ-ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯನಾಗಿರಲು ಅವಕಾಶ !  ಸದ್ಯಕ್ಕೆ  ಸಕ್ರಿಯವಾಗಿಲ್ಲದ ನನ್ನ ಇನ್ನೊಂದು  ಬ್ಲಾಗ್ "ನಾನು-ನೀವು" - ಇದರಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಇರಾದೆಯೂ ಇದೆ. ನಿಮ್ಮ  ಜತೆ ನನ್ನ ಪಯಣ ಮುಂದುವರೆಯುತ್ತಿರಲಿ ! 

ವಂದನೆಗಳೊಡನೆ,

ಶಂಕರ ಅಜ್ಜಂಪುರ



ನೇಪಾಳ ಜಗತ್ತಿನ ಏಕಮಾತ್ರ ಹಿಂದೂ ರಾಷ್ಟ್ರವಾಗಿತ್ತು. ಹೀಗಾಗಿ ಹಿಂದೂ ದೇವ ದೇವಿಯರ ಆರಾಧನೆ ಅಲ್ಲಿ ಎಂದಿನಿಂದಲೂ ನಡೆದುಬಂದಿದೆ. ಅಲ್ಲಿನ ಅತ್ಯಂತ ಜನಪ್ರಿಯ ದೇವನೆಂದರೆ ಆಕಾಶ ಭೈರವ. ಈತನ ಉಗಮ ಮತ್ತು ಅದರ ಉದ್ದೇಶಗಳು ಸ್ವಾರಸ್ಯಕರವಾಗಿದೆ. ನೇವಾರರು ನೇಪಾಳದ ಭೈರವನ ಆರಾಧಕರಲ್ಲಿ ಪ್ರಮುಖರು. ಇವರ ನೇತೃತ್ವದಲ್ಲೇ ಈ ದೇವನ ಆರಾಧನೆ ಆನೂಚಾನವಾಗಿ ನಡೆಯುತ್ತಿದೆ. ಇದು ಪುರಾತನ ಖಟ್ಮಂಡುವಿನ ನ್ಯಾಯಾಲಯವೂ ಹೌದು. ಇಲ್ಲಿ ನಿಂತು ಸುಳ್ಳಾಡಿದರೆ ಸಾವು ಖಚಿತವೆಂಬ ನಂಬಿಕೆ, ಅಲ್ಲಿನ ಜನರನ್ನು ಪ್ರಾಮಾಣಿಕರಾಗಿರುವಂತೆ ನೋಡಿಕೊಂಡಿದ್ದು ನಿಜ. 


18ನೇ ಶತಮಾನದಲ್ಲಿ ನೇಪಾಳಕ್ಕೆ ಭೇಟಿನೀಡಿದ ಆಂಗ್ಲರಲ್ಲಿ ಕರ್ನಲ್ ಕಿರ್ಕ್ ಪ್ಯಾಟ್ರಿಕಸನ್ ಮೊದಲನೆಯವ. ಆತ ಉತ್ಸಾಹಿ, ಕಲೆ ಸಂಸ್ಕೃತಿಗಳನ್ನು ಮೆಚ್ಚುವ ಮನಸ್ಸಿದ್ದಾತ. ಹೀಗಾಗಿಯೇ ನೇಪಾಳದ ಅವನ ಭೇಟಿಯ ವರದಿಯಲ್ಲಿ ಹೀಗೆ ನಮೂದಿಸಿದ್ದಾನೆ. ಇಲ್ಲಿ ಎಷ್ಟು ಮನೆಗಳಿವೆಯೋ ಅಷ್ಟೇ ದೇಗುಲಗಳಿವೆ. ಜನಸಂಖ್ಯೆಯನ್ನು ಮೀರಿದ ದೇವರ ಸಂಖ್ಯೆಯಿದೆ, ಇಲ್ಲಿನ ನದೀತೀರ, ಚಿಲುಮೆಗಳು, ಗುಡ್ಡ, ಪರ್ವತಗಳೆಲ್ಲವೂ ಹಿಂದೂ ದೇವ-ದೇವತೆಗಳಿಂದ ತುಂಬಿತುಳುಕುತ್ತಿವೆ. ಈತನೇನಾದರೂ 1763ರ ಫೆಬ್ರವರಿಯಲ್ಲಿ ನಡೆದ ಜಾತ್ರೆಯಲ್ಲಿ ಒಂದು ವಾರ ಇಲ್ಲಿರುವಂತಿದ್ದರೆ, ಇಲ್ಲಿನ ಜಾತ್ರಾ ಉತ್ನವ, ಹಬ್ಬ ಹರಿದಿನಗಳಲ್ಲಿ ಭಾಗವಹಿಸುವಂತಿದ್ದರೆ, ಇಲ್ಲಿನ ಎಲ್ಲ ದೇವ-ದೇವತೆಯರ ಬಗ್ಗೆ ಖಂಡಿತವಾಗಿ ವಿವರವಾಗಿ ದಾಖಲಿಸುತ್ತಿದ್ದ ಎಂದು ಸ್ಥಳೀಯ ಜಾನಪದ ವಿದ್ವಾಂಸ ಕೇಸರ ಲಾಲ್ ಹೇಳುತ್ತಾರೆ.

ಇಲ್ಲಿ ತಾಂತ್ರಿಕ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆ. ಹೀಗಾಗಿ ಜನಸಾಮಾನ್ಯರ ಮೇಲೆ ದೇವರು ಆವಾಹನೆಗೊಳ್ಳುವ ಬಗ್ಗೆ ಇವರಿಗೆ ಅಪರಿಮಿತ ವಿಶ್ವಾಸ. ಫರ್ಪಿಂಕ್ ರಾಜ್ಯದ ಠಾಕೂರ ರಾಜನ ಹೆಸರು ಪಚಾಲಿ ಸಿಂಗ್. ಆತ ಈ ಪ್ರದೇಶದಲ್ಲಿ ಪಚಾಲಿ ಭೈರವನೆಂದೇ ಪ್ರಸಿದ್ಧ. ಅಲ್ಲಿನ ರಾಜಗುರುವಿನ ಮಗಳು ಭೈರವನ ಪತ್ನಿ. ಆಕೆ ವಿಜಯೇಶ್ವರಿ.

ನೇಪಾಳದಲ್ಲಿ 5ಲಕ್ಷ ಭೈರವನ ರೂಪಗಳಿವೆಯೆಂದರೆ ಆಶ್ಚರ್ಯವಾದೀತು. ಇವೆಲ್ಲಕ್ಕೂ ಹೊಂದಿಕೊಂಡಂತೆ ಪ್ರತ್ಯೇಕ ಕಥಾನಕಗಳಿವೆ. ಇದಕ್ಕೆ ಹಳೇ ಖಟ್ಮಂಡುವಿನ ಇಂದ್ರಚೌಕದಲ್ಲಿ ನೆಲೆಸಿರುವ ಆಕಾಶ ಭೈರವ ಹೊರತಲ್ಲ.

ಭೈರವನ ಈ ಕಥಾನಕಕ್ಕೆ ಮಹಾಭಾರತ ನಂಟಿದೆ, ಅದೂ ಯುದ್ಧಪೂರ್ವದಲ್ಲಿ. ಇದರ ಪಾತ್ರಧಾರಿಗಳು ಶಿವ ಮತ್ತು ಕೃಷ್ಣ. ಇವರಿಬ್ಬರೂ ನರ ರೂಪಿಗಳೇ. ಕೃಷ್ಣ ಇಲ್ಲಿ ಕುರಿಗಾಹಿಯಾದರೆ, ಶಿವನು ಯಲಂಬರನೆಂಬ ರಾಜ.  ಯಲಂಬರ ಕೇಳುತ್ತಾನೆ - ಮಹಾಭಾರತ ಯುದ್ಧ ಇನ್ನೂ ಏಕೆ ನಡೆದಿಲ್ಲ . ಈ ರಾಜನು ಕೃಷ್ಣನನ್ನು ಭೇಟಿಯಾದಾಗ ಕೇಳುವ ಪ್ರಶ್ನೆಯಿಂದ ಕೃಷ್ಣನಿಗೆ ಅಚ್ಚರಿಯಾಗುತ್ತದೆ. ಹುಲು ಮಾನವನಿಗೆ ಇಂಥ ದಿವ್ಯದೃಷ್ಟಿಯಿರಲಾರದು ಎಂದು ಎಣಿಸಿ, ಈತನು ಶಿವನಲ್ಲದೆ ಬೇರೆಯಲ್ಲ ಎಂದು ತೀರ್ಮಾನಿಸುತ್ತಾನೆ.  ಯುದ್ಧ ನಡೆಯುವ ಕಾಲಕ್ಕೆ ಈತ ಜೀವಂತವಾಗಿದ್ದರೆ ಯುದ್ಧವೆಂದೂ ನಡೆಯಲಾರದು ಎಂದು ಯೋಚಿಸಿ, ಯಲಂಬರನಿಗೆ ಒಂದು ಪಂದ್ಯದ ಆಮಿಷವೊಡ್ಡುತ್ತಾನೆ. ಅದರಂತೆ, ಕೃಷ್ಣನು ತನ್ನ ಹೆಬ್ಬೆರಳ ತುದಿಯಲ್ಲಿ ಯಲಂಬರನ ಜೀವವನ್ನು ಧರಿಸಿ, ಅದನ್ನು ಒಂದು ಎತ್ತರದ ಮರದ ತುದಿಯಲ್ಲಿಡುತ್ತಾನೆ. ಯಲಂಬರನು ಕೃಷ್ಣನ ಹೆಬ್ಬೆರಳನ್ನು ಕತ್ತರಿಸಲು ಬಾಣ ಹೂಡಿದಾಗ, ಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಆತನನ್ನು ಸಂಹರಿಸುತ್ತಾನೆ. ತನ್ನೊಡನೆ ಮಾತನಾಡಲು ಬಂದವನ ಜೀವ ತೆಗೆದ ಬಗ್ಗೆ ಪಶ್ಚಾತ್ತಾಪ ಹೊಂದಿದ ಕೃಷ್ಣನು ದುಃಖಿತನಾಗುತ್ತಾನೆ. ಏಕೆಂದರೆ ಭಕ್ತರನ್ನು ಸಂರಕ್ಷಿಸಬೇಕಲ್ಲದೆ, ಅವರ ಜೀವ ತೆಗೆಯಬಾರದೆನ್ನುವ ನಿಲುವುಳ್ಳ ಕೃಷ್ಣನನ್ನು ಕಂಡು ಯಲಂಬರನೂ ಬೇಸರಗೊಳ್ಳುತ್ತಾನೆ. ಆಕಾಶದಲ್ಲಿದ್ದುಕೊಂಡು  ತನ್ನ ತಲೆಯ ಮೂಲಕವೇ ಮಹಾಭಾರತ ಯುದ್ಧವನ್ನು ನೋಡುವ ಅವಕಾಶಕೊಡು ಎಂದು ಬೇಡುತ್ತಾನೆ. ಅದಕ್ಕೆ ಸಮ್ಮತಿಸಿದ ಕೃಷ್ಣನಿಗೆ ವಂದಿಸಿ, ಯಲಂಬರ ರಾಜನು ಉತ್ತರದಿಕ್ಕಿಗೆ ಪ್ರಯಾಣಮಾಡಿ, ಹಿಮಾಲಯದಾಚೆಗೆ ಇರುವ ಖಟ್ಮಂಡುವಿನಲ್ಲಿ ಆಕಾಶ ಭೈರವನಾಗಿ ನೆಲೆಸುತ್ತಾನೆ. 

ಖಟ್ಮಂಡುವಿನ ಈ ಆಕಾಶ ಭೈರವನು ನೀಲ ಮೊಗದವ. ಅವನ ಕಣ್ಣುಗಳು ಬೆಳ್ಳಿಯವು. ತಲೆಬುರುಡೆಗಳ ಕಿರೀಟಕ್ಕೆ ಸರ್ಪಗಳ ಅಲಂಕಾರ. ಬೆಳ್ಳಿಯ ಸಿಂಹಾಸನದಲ್ಲಿ ಕುಳಿತಿರುವ ಈತನನ್ನು ಭಯಂಕರವಾದ ಸಿಂಹವು ಹೊತ್ತು ನಿಂತಿರುವಂತೆ ಚಿತ್ರಿಸಲಾಗಿದೆ. ಅವನ ಜತೆಯಲ್ಲಿ ಭೀಮಸೇನ ಮತ್ತು ಭದ್ರಕಾಳಿಯರಿದ್ದಾರೆ. ಶುಭಸೂಚನೆಗೆಂದು ಗಣಪತಿ ಮತ್ತು ಷಣ್ಮುಖರಿದ್ದಾರೆ. ಇದು ಯಲಂಬರ ರಾಜನು ಧರಿಸಿದ ಮುಖವಾಡದ ಸ್ವರೂಪವೆಂದು  ಹೇಳಲಾಗುತ್ತದೆ. 

ಈತನು ಮಹರ್ಜನ್ ಜಾತಿಗೆ ಸೇರಿದ ರೈತರ ಆರಾಧ್ಯ ದೈವ. ಆಕಾಶ ಭೈರವನ ಹಣೆಯ ಮಧ್ಯದಲ್ಲಿ ಬುದ್ಧನ ಬಿಂಬವಿದೆ. ಇದನ್ನು ಹಿಂದೂಗಳು ಬ್ರಹ್ಮನೆಂದು ಮಾನ್ಯ ಮಾಡುವರು. ಹಿಂದೂಗಳು, ಬೌದ್ಧರು ಸಮಾನವಾಗಿ ಆದರಿಸುವ ಈ ಆಕಾಶ ಬೈರವನಿಗೆ ತುಂಬ ಮಾನ್ಯತೆಯಿದೆ. 

ಈ ಕಥಾನಕದಲ್ಲಿ ಅಡಗಿರುವ ರೋಚಕತೆ ಮತ್ತು ಭಕ್ತಿಭಾವಗಳು ಮುಖ್ಯವೇ ವಿನಾ ಅದರ ತಾರ್ಕಿಕ ವಿಶ್ಲೇಷಣೆಯಲ್ಲ. ಅಂಥ ಭಾವಗಳು ನಮ್ಮನ್ನು ವಿನೀತರನ್ನಾಗಿಸುತ್ತವೆ, ದೈವತ್ವದ ಶಕ್ತಿಗೆ ಗೌರವ ನೀಡಲು ಪ್ರೇರಿಸುತ್ತವೆ. 


* * * * * * * 

ಶುಕ್ರವಾರ, ಮೇ 31, 2013

ವ್ಯಾಘ್ರ ನಗರಿಯ ಕಪ್ಪು-ಬಿಳಿ ಭೈರವರು




ಭೈರವನೆಂದರೆ ಕಪ್ಪು ಬಣ್ಣದವ ಎಂದು ನಮ್ಮ ನಂಬಿಕೆ. ಇದಕ್ಕೆ ಪೂರಕವಾಗಿ ಆತನನ್ನು ಚಿತ್ರಿಸಿರುವ ಶಿಲ್ಪಗಳೂ ಅದನ್ನೇ ಹೇಳುತ್ತವೆ. ಆದರೆ ವಸ್ತುಸ್ತಿತಿ ಹಾಗಿಲ್ಲ. ಭೈರವನಲ್ಲಿ ಬಿಳಿಯ ಬಣ್ಣದವನೂ ಇದ್ದಾನೆ. ಈ ಕಪ್ಪು-ಬಿಳುಪಿನ ಭೈರವರ ಜೋಡಿ ಕೇವಲ ಬಣ್ಣದ ದೃಷ್ಟಿಯಿಂದ ಬೇರೆ ಬೇರೆಯಾಗಿ ಕಾಣಿಸಿದರೂ, ಮೂಲತಃ ಅವರು ಸೋದರರು. ಸವಾಯ್ ಮಾಧೋಪುರವನ್ನು ವ್ಯಾಘ್ರ ನಗರಿ ಎಂದೂ ಕರೆಯುವರು. ರಾಜಾಸ್ಥಾನದ ರಣಥಂಬೋರ್ ನ ಸಮೀಪದಲ್ಲಿರುವ ಮಾಧೋಪುರದಲ್ಲಿ  ಈ ಭೈರವರ ಆರಾಧನೆಯು ಪ್ರಚಲಿತವಿದೆ. 

ಭೈರವನ ಆರಾಧನೆಯಲ್ಲಿ ತಾಂತ್ರಿಕ ಪೂಜೆಗೆ ಮಹತ್ವವಿದೆ. ಆದರೆ ಬದಲಾಗಿರುವ ಇಂದಿನ ಸನ್ನಿವೇಶದಲ್ಲಿ ಈ ತೆರನ ತಾಂತ್ರಿಕ ಆರಾಧನೆ ಹೆಚ್ಚು-ಕಡಿಮೆ ನಿಂತುಹೋಗಿರುವಂತೆ ಕಂಡರೂ, ರಣಥಂಬೋರ್ ನ ಕಾಲಾ-ಗೋರಾ ಭೈರವ ಮಂದಿರದಲ್ಲಿ ಇಂದಿಗೂ ತಾಂತ್ರಿಕ ವಿಧಾನಗಳಿಂದಲೇ ಪೂಜೆ ನಡೆಯುತ್ತಿರುವುದು ವಿಶೇಷ. ಈ ದೇವಾಲಯದಲ್ಲಿ ಯಾವ ಪೂಜೆ ಸಲ್ಲಿಸಿ, ಏನನ್ನು ಹರಸಿಕೊಂಡರೂ ಅದರಂತೆಯೇ ನಡೆಯುತ್ತದೆ ಎನ್ನುವ ವಿಶ್ವಾಸ ಇಲ್ಲಿನ ಜನರದು.  

ಸಾಧಾರಣವಾಗಿ ದೇವಾಲಯಗಳ ಪ್ರವೇಶ ದ್ವಾರದಲ್ಲಿ ಭೈರವನ ವಿಗ್ರಹಗಳನ್ನು, ಅದರಲ್ಲೂ ಈಶಾನ್ಯ ದಿಕ್ಕಿನಲ್ಲಿ ನಲ್ಲಿ ಆತನನ್ನು ಸ್ಥಾಪಿಸುವುದು ವಾಡಿಕೆ. ಕಾಲಾ-ಗೋರಾ ಭೈರವ ಮಂದಿರದಲ್ಲಿ, ಗರ್ಭಗುಡಿಯ ಮಧ್ಯದಲ್ಲಿ ಶಿವ ಮತ್ತು ದುರ್ಗೆಯರ ವಿಗ್ರಹಗಳಿವೆ. ಸಮೀಪದಲ್ಲೇ ತ್ರಿನೇತ್ರ ಗಣಪತಿ, ಹಾಗೂ ಬಲಭಾಗದಲ್ಲಿ ಕಪ್ಪು - ಬಿಳಿಯ ಭೈರವರ ವಿಗ್ರಹವಿದೆ. ಈ ಎರಡು ವಿಗ್ರಹಗಳನ್ನೂ ಇಲ್ಲಿನ ಜನ ಸಮಾನವಾಗಿ ಆದರಿಸುತ್ತಾರೆ, ಪೂಜಿಸುತ್ತಾರೆ. 

ದೇಶಾದ್ಯಂತದಿಂದ, ಊರಿನ ಅಥವಾ ಕುಟುಂಬದ ಶುಭಕಾರ್ಯಗಳ ಆಹ್ವಾನ ಪತ್ರಿಕೆಯನ್ನು ಇಲ್ಲಿನ ಮಂದಿರದ ಅರ್ಚಕರ ಹೆಸರಿಗೆ ಜನರು ಕಳಿಸುತ್ತಾರೆ. ಅದನ್ನು ಆಯಾ ದಿನಾಂಕದಂದು ಅರ್ಚಕರು ದೇವರ ಸನ್ನಿಧಿಯಲ್ಲಿ ಓದುವರು. ಹೀಗೆ ಮಾಡುವುದರಿಂದ ಆಯಾ ಶುಭಕಾರ್ಯಗಳಿಗೆ ಯಾವುದೇ ವಿಘ್ನ ಬಾರದೇ, ಸುಲಲಿತವಾಗಿ ನಡೆದುಹೋಗುತ್ತದೆ ಎಂದು ಜನರ ಭಾವನೆ. ಹೀಗೆ ಬಂದ  ಆಮಂತ್ರಣ ಪತ್ರಿಕೆಗಳ ರಾಶಿ ರಾಶಿಯೇ ಮಂದಿರದಲ್ಲಿ ತುಂಬಿಹೋಗಿದೆ. ತೀರ ಪುರಾತನವೇನೂ ಅಲ್ಲದ, ಆಧುನಿಕ ರಚನೆಗಳನ್ನು ಒಳಗೊಂಡ ಈ ಮಂದಿರದ ಗೋಡೆಗಳ ಮೇಲೆ, ಜಲವರ್ಣ, ತೈಲವರ್ಣಗಳ ಕೃತಿಗಳನ್ನು ಚಿತ್ರಿಸಲಾಗಿದೆ. ಎರಡು ಗುಡ್ಡಗಳು ಸೇರುವ ಸಂಧಿಸ್ಥಳದಲ್ಲಿರುವ ಈ ಮಂದಿರಕ್ಕೆ ಪ್ರಕೃತಿಯೇ ಸೂಕ್ತ ವಾತಾವರಣವನ್ನು ನಿರ್ಮಿಸಿದೆ. ದೇವಾಲಯದ ಪ್ರವೇಶದ್ವಾರದಲ್ಲಿರುವ ಎರಡು ಬೃಹತ್ ಆನೆಗಳ ಗಾರೆಯ ಶಿಲ್ಪ ಇದಕ್ಕೆ ವಿಶೇಷ ಮೆರುಗು ತಂದಿದೆ.

ಐತಿಹಾಸಿಕವಾಗಿ ಇಲ್ಲೊಂದು ಕಥೆ ಪ್ರಚಲಿತವಿದೆ. ಮುಘಲರ ಆಡಳಿತಕಾಲದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ರಣಥಂಬೋರಿನ ಮೇಲೆ ದಂಡೆತ್ತಿ ಬಂದನು. ಆಗ ರಾಜನಾಗಿದ್ದ ಹಮ್ಮೀರ ದೇವನಿಗೆ ಇಲ್ಲಿ ಕಪ್ರು-ಬಿಳಿಯ ಭೈರವರಲ್ಲಿ ಅಪರಿಮಿತ ನಂಬಿಕೆ. ತಾನು ಈ ಯುದ್ಧದಲ್ಲಿ ಜಯಶಾಲಿಯಾದರೆ ಸರ್ವಸ್ವವನ್ನೂ ಈ ಭೈರವರಿಗೆ ಅರ್ಪಿಸುತ್ತೇನೆಂದು ಸಂಕಲ್ಪಮಾಡಿ ಯುದ್ಧದಲ್ಲಿ ತೊಡಗಿದ. ಆದರೆ ಫಲಿತಾಂಶ ವಿರುದ್ಧವಾಗಿತ್ತು. ಅಲ್ಲಾವುದ್ದೀನನ ಕೈ ಮೇಲಾಗಿ, ಹಮ್ಮೀರದೇವ ಸೋತು ಸೆರೆ ಸಿಕ್ಕುವಂತಾಯಿತು. ಆದರೆ ಅಭಿಮಾನಧನನಾದ ಹಮ್ಮೀರದೇವ ಶತ್ರುಗಳಿಂದ ಹತನಾಗದಂತೆ ತಾನೇ ತನ್ನ ತಲೆಯನ್ನು ಕತ್ತರಿಸಿಕೊಂಡನಂತೆ. ಭೈರವರು ರಾಜನಿಗೆ ನೆರವಾಗಲಿಲ್ಲವೆನ್ನುವುದು ನಗಣ್ಯವಾಗಿ, ಸ್ವಾಭಿಮಾನವೇ ಮುಖ್ಯ ಎಂದು ಸಾರುವ ಜಾನಪದ ಗಾಥೆಯನ್ನು ಈ ಪ್ರದೇಶದ ಜಾನಪದ ಗಾಯಕರು ಇಂದಿಗೂ ಹಾಡುತ್ತಿದ್ದಾರೆ. ಇದು ಆ ರಾಜನಿಗೆ ಸಂದ ಅತಿ ಹೆಚ್ಚಿನ ಗೌರವವೇ ಸರಿ. 


* * * * * * * 

ಗುರುವಾರ, ಮೇ 2, 2013

ಜೈನರ ನಾಕೋಡಾ ಭೈರವ


ನಾಕೋಡಾ ಭೈರವನ ಸಮ ಭಂಗಿಯ ಮೂರ್ತಿ 

ಜೈನ ಧರ್ಮವು ಹಿಂದೂ ಧರ್ಮದಿಂದ ಮೂಡಿಬಂದ ಮತ್ತೊಂದು ಮತಧರ್ಮವೆನ್ನುವುದು ಸರ್ವವಿದಿತ. ಮಾತೃಧರ್ಮದ ಛಾಯೆಯಿಂದ ತಪ್ಪಿಸಿಕೊಳ್ಳುವುದು ಅದೆಷ್ಟು ಕಷ್ಟಕರವೆನ್ನಲು ಸ್ವಾರಸ್ಯಕರ ಉದಾಹರಣೆ ಇಲ್ಲಿದೆ. ಅದು ನಾಕೋಡಾ ಭೈರವನ ಕಥೆ. ಜೈನರಲ್ಲಿ ಶ್ವೇತಾಂಬರ ಪಂಥದವರು ರೂಢಿಯಲ್ಲಿಟ್ಟುಕೊಂಡಿರುವ ಭೈರವನ ಆರಾಧನೆಯಲ್ಲಿ ಒಂದು ವಿಧದ ಧರ್ಮಸಂಕಟವಿದೆ, ಲೌಕಿಕ ಆಕರ್ಷಣೆಯಿದೆ. ಹಾಗೆಯೇ ಇವೆರಡೂ ಇಲ್ಲದ ಜನವರ್ಗವೂ ಇದೆಯೆನ್ನುವುದು ಇಲ್ಲಿನ ಸ್ವಾರಸ್ಯ.

ನಾಕೋಡಾ ಎನ್ನುವುದು ರಾಜಾಸ್ಥಾನದ ಪಶ್ಚಿಮ ಭಾಗದಲ್ಲಿರುವ ಒಂದು ಗ್ರಾಮದ ಹೆಸರು.  ಕ್ರಿ.ಪೂ. ೨ನೇ ಶತಮಾನದಿಂದ, ಎಂದರೆ ಜೈನರ ೨೪ನೇ ತೀರ್ಥಂಕರ ಮಹಾವೀರನ ಪರಿನಿರ್ವಾಣದ ಕಾಲದಿಂದಲೂ ಅಲ್ಲಿ ಜೈನರ ವಸತಿಗಳಿದ್ದವು ಎನ್ನುವುದು ಇತಿಹಾಸ. ಜೈನ ಶ್ವೇತಾಂಬರ ಪಂಥದ ಲೆಕ್ಕಾಚಾರದಂತೆ  ಕ್ರಿ.ಪೂ. ೫೭೪ರ ಕಾಲದಿಂದಲೂ ದೇವಾಲಯಗಳ ನಿರ್ಮಾಣ, ವಿಗ್ರಹಾರಾಧನೆ, ಅಂದಿನ ಪ್ರಬಲ ಜೈನ ತತ್ವಜ್ಞಾನಿ ಹರಿಭದ್ರನಂಥ ಸಂತರ ದರ್ಶನಗಳಂಥ ಧಾರ್ಮಿಕ ಚಟುವಟಿಕೆಗಳು ನಡೆದುಬಂದಿದ್ದವು. ಸರಿಸುಮಾರು ಇದೇ ಅವಧಿಯಲ್ಲಿ ರಾಜಾಸ್ಥಾನದಲ್ಲಿ ಉಂಟಾದ ರಾಜಕೀಯ ವಿಪ್ಲವಗಳಿಂದಾಗಿ, ದುರುಳ ದೊರೆಗಳ ಆಡಳಿತದಿಂದ ಭಂಗಪಟ್ಟ ಜೈನ ಸಮುದಾಯವು ತಮ್ಮ ದೇವತೆಗಳನ್ನು ಸಂರಕ್ಷಿಸಲೆಂದು ವಿಗ್ರಹಗಳನ್ನು ನೆಲದಲ್ಲಿ ಹುಗಿದಿಟ್ಟರು. ಕಾಲಾಂತರದಲ್ಲಿ ಅವು ಅಲ್ಲೇ ಉಳಿದುಕೊಂಡವು. ಕ್ರಿ.ಶ. ೧೪೫೫ರಲ್ಲಿ ಈ ಪ್ರದೇಶದ ಉತ್ಖತನ ನಡೆದಾಗ, ನಾಕೋಡಾ ಪಾರ್ಶ್ವನಾಥನ ವಿಗ್ರಹ ದೊರಕಿತು. 

ಪ್ರಚಲಿತವಿರುವ ಒಂದು ಕಥಾನಕದಂತೆ, ಓರ್ವ ಸಾಮಾನ್ಯ ಜೈನ ನಾಗರಿಕನಿಗೆ ಪಾರ್ಶ್ವನಾಥನು ಸ್ವಪ್ನದಲ್ಲಿ ಕಾಣಿಸಿಕೊಂಡು ತಾನು ಇಂಥ ಎಡೆಯಲ್ಲಿ ಇರುವುದಾಗಿಯೂ, ತನ್ನನ್ನು ಹೊರಗೆ ತೆಗೆದು ಪೂಜಿಸುವಂತೆ ಆದೇಶಿಸಿದನು. ಅದನ್ನು ಶಿರಸಾ ವಹಿಸಿದ ಆ ನಾಗರಿಕನು, ಕರ್ತಾರಗಚ್ಛ ಮುನಿ ಕೀರ್ತಿರತ್ನಸೂರಿಯ ನೇತೃತ್ವದಲ್ಲಿ ಈ ಮೂರ್ತಿಯನ್ನು ಹೊರತೆಗೆದು, ಅದನ್ನು ಪ್ರತಿಷ್ಠಾಪಿಸಲು ಉದ್ದೇಶಿಸಿದನು. ನೋಡ ನೋಡುತ್ತಿದ್ದಂತೆ ಜನರು ಕೀರ್ತಿನಾಥಸೂರಿಯನ್ನು ಹಿಂಬಾಲಿಸುತ್ತ ನಡೆದಾಗ ಅದೊಂದು ದೊಡ್ಡ ಮೆರವಣಿಗೆಯ ರೂಪ ತಳೆಯಿತು. ಮೆರವಣಿಗೆಯ ಮುಂಭಾಗದಲ್ಲಿ ಓರ್ವ ತೇಜಸ್ವಿ ಬಾಲಕನು ನರ್ತಿಸುತ್ತ ಸಾಗುತ್ತಿದ್ದುದನ್ನು ಕೀರ್ತಿನಾಥಸೂರಿ ಗಮನಿಸಿದನು. ಅದು ಭೈರವನಲ್ಲದೆ ಬೇರೆ ಯಾರೂ ಅಲ್ಲವೆಂದು ತಿಳಿದು, ನಾಕೋಡಾದ ಪ್ರವೇಶದ್ವಾರದಲ್ಲಿ ಪಿಂಡಾಕಾರದ ಭೈರವನನ್ನು ಸ್ಥಾಪಿಸಿ, ನಂತರ ಪಾರ್ಶ್ವನಾಥನನ್ನು ಸ್ಥಾಪಿಸಿದನು. ಕಾಲ ಕಳೆದಂತೆ ಅಲ್ಲಿ ಜನಸಂಚಾರ ವಿರಳವಾಯಿತು. ೨೦ನೇ ಶತಮಾನದ ಆದಿಭಾಗದಲ್ಲಿ ಈ ಪ್ರದೇಶಕ್ಕೆ ಬಂದ ಜೈನ ಸನ್ಯಾಸಿನಿ ತಪಾಗಚ್ಛ ಸುಂದರಶ್ರೀ ಎಂಬಾಕೆಯು ತನ್ನ ಉಳಿದ ಜೀವಿತಾವಧಿಯನ್ನು ಇಲ್ಲಿನ ಗುಡಿ-ಗುಂಡಾರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದಳು. ಹೀಗಾಗಿ ಪಾರ್ಶ್ವನಾಥ ಮತ್ತು ನಾಕೋಡಾ ಭೈರವರ ಪೂಜಾದಿಗಳು ನಡೆಯಲಾರಂಭಿಸಿದವು. 

ನಾಕೋಡಾ ಭೈರವನ ಮೂಲ ವಿಗ್ರಹವನ್ನು

 ಹೋಲುವ ಇತ್ತೀಚಿನ ಶಿಲ್ಪ

ನಾಕೋಡಾ ಭೈರವನ ಮೂರ್ತಿಯು ಈಗ ಕಾಣಿಸುತ್ತಿರುವಂತೆ ಮಾನವಾಕೃತಿಯನ್ನು ಹೊಂದಿರಲಿಲ್ಲ.  ತಪಾಗಚ್ಛ ಹಿಮಾಚಲಸೂರಿಯೆಂಬ ಜೈನ ಸಾಧುವು, ಈಗಿರುವ ಮೂರ್ತಿಯನ್ನು ಪಾರ್ಶ್ವನಾಥನ ಪಕ್ಕದಲ್ಲಿ ಸ್ಥಾಪಿಸಿದರು. ಈ ಭೈರವನು ಕೆಂಪು ಮುಖ, ಮೀಸೆ ಮತ್ತು ಭಾರತದಲ್ಲಿ ಪ್ರಚಲಿತವಿರುವ ಎಲ್ಲ ಭೈರವ ವಿಗ್ರಹಗಳ ಕೈಗಳಲ್ಲಿರುವಂತೆ ಕಪಾಲ, ಡಮರು, ಖಡ್ಗ ಮತ್ತು ತ್ರಿಶೂಲಗಳನ್ನು ಧರಿಸಿರುವನು. ಜೈನ ಶಿಲ್ಪಗಳಲ್ಲೂ ನಾಲ್ಕು ಕೈಗಳನ್ನು ಹೊಂದಿರುವ ವಿಗ್ರಹಗಳ ಆರಾಧನೆಯಿದೆ. ಭಾರತದ ಒಳಗೆ ಮತ್ತು ಹೊರಗೆ ಮೂಲ ಮಂದಿರದಂತೆಯೇ ಪೂಜಾದಿಗಳು ನಡೆಯುತ್ತಿರುವುದು ಆತನು ಎಲ್ಲೆಡೆ ಪ್ರಚಲಿತನಾಗಿರುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ರಾಮನಗರ, ದಾವಣಗೆರೆ ಮುಂತಾದ ಹಲವಾರು ಸ್ಥಳಗಲ್ಲಿ ನಾಕೋಡಾ ಭೈರವ ಮಂದಿರಗಳಿವೆ. ಇಷ್ಟೆಲ್ಲ ಇದ್ದರೂ ಶ್ವೇತಾಂಬರ ಪಂಥದಲ್ಲೇ ಕೆಲವರು ನಾಕೋಡಾ ಭೈರವನಿಗೆ ಎರಡನೆಯ ಸ್ಥಾನವನ್ನು ನೀಡಿದ್ದಾರೆ. ಅವರ ತರ್ಕ ಹೀಗಿದೆ. ಪಾರ್ಶ್ವನಾಥನು ಜೈನ ತೀರ್ಥಂಕರ. ಆತ ಜೀವನ್ಮುಕ್ತ. ಭೈರವನಾದರೋ ಜನ್ಮಚಕ್ರಕ್ಕೆ ಸಿಲುಕಿ, ಪದೇ ಪದೇ ಜನ್ಮವೆತ್ತುವನು. ಲೌಕಿಕ ಸುಖಸಾಧನಗಳನ್ನು ಆತ ನೀಡಬಲ್ಲನೇ ವಿನಾ ಜೀವನ್ಮುಕ್ತನಾದ ಪಾರ್ಶ್ವನಾಥನಲ್ಲ. ಇದೆಲ್ಲ ಏನಿದ್ದರೂ ಭಕ್ತರು ಲೌಕಿಕ ಸುಖ, ಸಂಪತ್ತು, ಆರೋಗ್ಯಗಳಿಗೆಂದು ನಾಕೋಡಾ ಭೈರವನನ್ನೇ ಆಶ್ರಯಿಸುವರು. 


ಹರಕೆಗಳನ್ನು ತೀರಿಸುವ ವಿಷಯದಲ್ಲೂ ವ್ಯತ್ಯಾಸವಿಲ್ಲ. ಅನೇಕ ಜೈನ ವರ್ತಕರ ಅಂಗಡಿಗಳಲ್ಲಿ ಪಾರ್ಶ್ವನಾಥನ ಜತೆಗೆ ಭೈರವನ ಚಿತ್ರಗಳಿರುವುದೂ ಸಾಮಾನ್ಯ.  ಕೆಲವು ವರ್ತಕರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಭೈರವನನ್ನು ತಮ್ಮ ವ್ಯಾಪಾರ-ವಹಿವಾಟಿನಲ್ಲಿ ಪಾಲುದಾರನನ್ನಾಗಿ ಮಾಡಿಕೊಂಡು, ವಾರ್ಷಿಕ ಆದಾಯದ ಪಾಲನ್ನು ಆತನ ದೇಗುಲಕ್ಕೆ ಸಲ್ಲಿಸುವ ಪದ್ಧತಿಯನ್ನೂ ಇರಿಸಿಕೊಂಡಿದ್ದಾರೆ.  ಭೈರವನಿಗೆ ಸಂಬಂಧಿಸಿದಂತೆ ಜೈನ ಧಾರ್ಮಿಕ ವಿಧಿಗಳು ಮಾನ್ಯಮಾಡದ ಎರಡು ಪದ್ಧತಿಗಳು ಹೀಗಿವೆ. ದೇವರು ಮೈಮೇಲೆ ಆವಾಹಿತನಾಗುತ್ತಾನೆ ಮತ್ತು ದೇವರ ಪ್ರಸಾದವನ್ನು ಗುಡಿಯೊಳಗೆ ಮಾತ್ರ ಸೇವಿಸಿದರೆ ಪುಣ್ಯ, ಹಾಗೆ ಮಾಡದಿರುವುದು ಪಾಪವೆಂಬ ಎರಡು ಗ್ರಹಿಕೆಗಳಿವೆ. 

ಪಾರ್ಶ್ವನಾಥ ವಿಗ್ರಹ 
ಪಾರ್ಶ್ವನಾಥ ಮತ್ತು ಭೈರವರ ಪೂಜೆಯಲ್ಲಿಯೂ ಒಂದು ವೈಶಿಷ್ಟ್ಯ ಕಂಡುಬರುತ್ತದೆ. ಅದೆಂದರೆ ಪಾರ್ಶ್ವನಾಥನಿಗೆ ಮೊದಲ ಪೂಜೆ ಸಲ್ಲುತ್ತದೆಯಾದರೆ, ನಂತರದ್ದು ಭೈರವನಿಗೆ. ನಾಕೋಡಾ ಭೈರವನ ಪೂಜೆಯ ಆರಂಭದೊಂದಿಗೆ, ಪಾರ್ಶ್ವನಾಥನು ಮರೆಯಾಗುವಂತೆ ಪೂಜಾರಿಯು ತೆರೆಯನ್ನು ಸರಿಸುತ್ತಾನೆ. ತೆರೆಹಾಕುವ ಸಂಪ್ರದಾಯ ಹಿಂದೂಗಳಲ್ಲಿ ಇದ್ದರೆ ಜೈನರಲ್ಲಿ ಅಂಥ ಪದ್ಧತಿಯಿಲ್ಲ. ಈ ಎಲ್ಲ ಪೂಜಾದಿಗಳನ್ನು ಹಿಂದೂ ಅರ್ಚಕರೇ ನಿರ್ವಹಿಸುವರು. ಪೂಜಾ ವಿಧಾನಗಳ ವಿವಿಧ ಭಾಗಗಳನ್ನು ಹರಾಜು ಹಾಕುವ ಮೂಲಕ ಭಕ್ತರ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ದೇವರಿಗೆ ಸ್ನಾನವಿಧಿಗಳನ್ನು ಪ್ರಕ್ಷಾಳನ ಪೂಜಾ, ಕೇಸರಿಯ ಸಮರ್ಪಣೆಯನ್ನು ಕೇಸರೀ ಪೂಜಾ, ಧೂಪ ಸಲ್ಲಿಸುವಿಕೆಯನ್ನು ಧೂಪ ಪೂಜಾ, ಸುಗಂಧ ದ್ರವ್ಯ ಲೇಪನವನ್ನು ಇತ್ರ್ ಪೂಜಾ, ಹೂವುಗಳ ಪುಷ್ಪಪೂಜಾ, ಮತ್ತು ದೀಪಾರಾಧನೆಯನ್ನು ಆರತಿ ಎಂದು ವಿಭಾಗಿಸಿ, ಸೇವಾದಾರರು ತಮ್ಮ ಇಷ್ಟದ ಸೇವೆಯನ್ನು ಮಾಡಲು ಅನುವು ಮಾಡಿಕೊಡಲಾಗುತ್ತದೆ. ಸುಗಂಧ ಲೇಪನ, ಪುಷ್ಪಪೂಜಾ ಮತ್ತು ಆರತಿಗಳನ್ನು ಹೆಚ್ಚು ಹಣ ಸಂದಾಯ ಮಾಡುವವರು ಮಾತ್ರ ಪಡೆಯಲು ಅವಕಾಶವಿದ್ದು, ಆರತಿಯ ಸೇವಾ ಸಂದರ್ಭದಲ್ಲಿ ಕಾಣಿಕೆಗಳನ್ನು ಅರ್ಪಿಸುವುದು ಮತ್ತು ಭೈರವನ ದರ್ಶನ ಪಡೆಯುವುದು ಶ್ರೇಷ್ಠವೆಂಬ ಭಾವನೆಯಿದೆ. ಸಂಜೆಯ ಆರತಿ ಮತ್ತು ವಿಶೇಷ ಸಂದರ್ಭಗಳ ಪೂಜಾ ಕೈಂಕರ್ಯದಲ್ಲಿ ಜನರು ಪಾರ್ಶ್ವನಾಥನನ್ನು ಮೊದಲು ನೋಡುವುದು ಉತ್ತಮವೋ, ಭೈರವನನ್ನು ಮೊದಲು ನೋಡುವುದು ಒಳಿತೋ ಎಂಬ ಜಿಜ್ಞಾಸೆಗೆ ಒಳಗಾಗುತ್ತಾರೆ. 

ಮಾರ್ಗಶಿರ ಮಾಸದ ಕಾಲಭೈರವಾಷ್ಟಮಿ, ಭೈರವನ ಜನ್ಮದಿನ. ಅಂಥ ಸಂದರ್ಭಗಳಲ್ಲಿ ಮತ್ತು ವಿಶೇಷತಃ ಭಾನುವಾರಗಳಂದು ಭಕ್ತರ ಮೈಮೇಲೆ ಭೈರವನು ಆವಾಹಿತನಾಗುತ್ತಾನೆ. ಭಕ್ತರು ತಮ್ಮ ಆರೋಗ್ಯ, ವಿವಾಹ, ಭವಿಷ್ಯ ಮುಂತಾದ ಪ್ರಶ್ನೆಗಳಿಗೆ ಆವಾಹಿತರನ್ನು ಕೇಳಿ ಪರಿಹಾರ ಪಡೆಯುವರು. ಇದರಲ್ಲಿ ಜೈನರು, ಜೈನರಲ್ಲದವರೂ ಭಾಗವಹಿಸುವರು. ಕೆಲವೊಮ್ಮೆ ಜೈನರ ಮೇಲೆ ಕೂಡಾ ಭೈರವನು ಆವಾಹಿತನಾಗುವುದುಂಟು.

ಹೀಗೆ ಭೈರವನ ಕಥಾನಕಗಳು, ಭೈರವ ದೇವರ ಸಂಬಂಧದ ಆಚರಣೆಗಳು, ಪದ್ಧತಿಗಳು ಆನೂಚಾನವಾಗಿ ನಮ್ಮ ದೇಶದಲ್ಲಿ ನಡೆಯುತ್ತ ಬಂದಿದೆ. ಉತ್ತರ ಭಾರತವಲ್ಲದೆ ದಕ್ಷಿಣ ಭಾರತದಲ್ಲಿಯೂ ಆತನ ಹಲವಾರು ದೇಗುಲಗಳು, ಮಂದಿರಗಳು ಪ್ರತಿಷ್ಠಾಪಿತವಾಗುತ್ತಿರುವುದು ಈ ಶತಮಾನದಲ್ಲಿ ನಡೆಯುತ್ತಿರುವ ಹೊಸ ಪ್ರಕ್ರಿಯೆಯೆನ್ನಬಹುದು.

* * * * * * *

ಸೋಮವಾರ, ಏಪ್ರಿಲ್ 1, 2013

ಬೇತಾಳ ಭೈರವಮಂದಿರದ ಜೀರ್ಣೋದ್ಧಾರಕರು ಮುಸ್ಲಿಮರು !



ರೇನ್ ವಾಡಿ ಕ್ರಿಯಾ ಸಮಿತಿಯ ಚಳವಳಿ 

ಸಾಮಾಜಿಕ ಜಾಲತಾಣ ಫೇಸ್ ಬುಕ್ ಈಗ ನಿಜವಾದ ಜನಧ್ವನಿಯಾಗಿ ಮಾರ್ಪಡುತ್ತಿರುವುದು ಇತ್ತೀಚಿನ ಉತ್ತಮ ಬೆಳವಣಿಗೆಗಳಲ್ಲೊಂದು. ಅದು ಅನೇಕ ಚಳವಳಿಗಳಿಗೆ ಪ್ರೇರಕವಾಗಿದೆ. ಭೈರವನಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಚಳವಳಿ ಅವನ ಮಂದಿರದ ಜೀರ್ಣೋದ್ಧಾರಕ್ಕೆ ನೆರವಾದ ವಿಶಿಷ್ಟ ಸಂಗತಿಯ ಕಿರುವರದಿ ಇಲ್ಲಿದೆ. ಇದಕ್ಕೆ ಪೂರಕವಾದ ವರದಿ/ಚಿತ್ರಗಳನ್ನು ಕೆಳಗೆ ನೀಡಿರುವ ಕೊಂಡಿಯನ್ನು ಬಳಸಿ ನೋಡಬಹುದು.

ಕಾಶ್ಮೀರವು ಶೈವ ಪಂಥದ ಪರಮ ಪವಿತ್ರ ಕ್ಷೇತ್ರವೆನ್ನುವುದು ಎಲ್ಲರಿಗೂ ತಿಳಿದಿದೆ. ಅಲ್ಲಿ ಶೈವ ಪಂಥಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳು ನಡೆದವು. ಶಕ್ತಿ ಪೀಠಗಳು, ಶಿವಕ್ಷೇತ್ರಗಳು ಅಲ್ಲಿ ಇವೆ. ಕಾಪಾಲಿಕ, ಗಾಣಾಪತ್ಯ ಮುಂತಾದ ಶಕ್ತಿಪಂಥಗಳು ಅಲ್ಲಿಂದಲೇ ಬೆಳೆದು ಬಂದವು. ಈಗ ಕಾಶ್ಮೀರ ಒಂದು ವಿವಾದಿತ ಪ್ರದೇಶವಾಗುವಲ್ಲಿ ರಾಜಕಾರಣದ ಪ್ರಭಾವ ಹೆಚ್ಚಾಗಿದೆಯಾದರೂ, ಸಾಂಸ್ಕೃತಿಕ ದೃಷ್ಟಿಯಿಂದ, ದೇಶದ ಈ ಭಾಗವು ಭಾರತದ ಮುಕುಟವೇ ಸರಿ. ಕಾಶ್ಮೀರಿ ಪಂಡಿತರು ಇಲ್ಲಿನ ಪ್ರಮುಖ ಹಿಂದೂ ವರ್ಗ. ಅವರೀಗ ತಮ್ಮ ನೆಲೆ ಕಳೆದುಕೊಂಡು ದೂರದ ಸ್ಥಳಗಳಿಗೆ ವಲಸೆ ಹೋಗಿ ಜೀವಿಸುತ್ತಿದ್ದಾರೆ. ಅತಂತ್ರದ ಬದುಕು ಈಗ ಅವರದಾಗಿದೆ. ಇತ್ತೀಚೆಗೆ ಪ್ರಕಟವಾದ ಅಂತರಜಾಲದ ವರದಿಯೊಂದು ಅಲ್ಲಿನ ಕೆಲವು ಮುಸ್ಲಿಮರ ರಚನಾತ್ಮಕ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಎಲ್ಲ ಮುಸ್ಲಿಮರೂ ಉಗ್ರವಾದಿಗಳಲ್ಲ ಎಂಬ ಜನಜನಿತ ಘೋಷಣೆಯನ್ನು ಸಾಕಾರಗೊಳಿಸುವಂತೆ ತೋರುವ ಈ ವರದಿಯ ವಿವರಗಳು ಹೀಗಿವೆ.

ಶ್ರೀನಗರದ ಸಮೀಪ ರೇನ್‌ವಾಡಿ ಎಂಬ ಕುಗ್ರಾಮವಿದೆ. ಅಲ್ಲಿರುವ ಬೇತಾಳ ಭೈರವ ಮಂದಿರ ಸುಮಾರು ನಾನ್ನೂರು ವರ್ಷಗಳಷ್ಟು ಹಳೆಯದು. ಅದು ಕಾಲದ ಆಘಾತಕ್ಕೆ ಸಿಲುಕಿ ನಶಿಸಿಹೋಗುವ ಹಂತದಲ್ಲಿತ್ತು. ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ, ಅಲ್ಲಿನ ಪಂಡಿತರು ತಮ್ಮ ಜೀವವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿರುವಾಗ, ತಮ್ಮ ಆರಾಧ್ಯದೈವವಾದ ಬೇತಾಳ ಭೈರವನ ಬಗ್ಗೆ ಗಮನಹರಿಸಲು ಆಗಿರಲಿಲ್ಲ. ಇದರ ಲಾಭ ಪಡೆದ ಆ ದೇವಾಲಯದ ಮಹಂತರು ದೇವಾಲಯ ಪ್ರದೇಶವನ್ನು ಸ್ಥಳೀಯ ವರ್ತಕನೊಬ್ಬನಿಗೆ ಮಾರಾಟಮಾಡುವ ಹವಣಿಕೆಯಲ್ಲಿದ್ದರು. ಇದರ ಸುಳಿವನ್ನು ಅರಿತ ಈ ಪ್ರದೇಶದ ಮುಸ್ಲಿಮರು, ಮಹಂತರ ವಿರುದ್ಧ ಗುಲ್ಲು ಎಬ್ಬಿಸಿದರು. ಜತೆಗೇ ಸ್ಥಳೀಯ ಪಂಡಿತರ ಗಮನ ಸೆಳೆದರು. ಈ ಬಗ್ಗೆ ಅಂತರಜಾಲದ ಫೇಸ್‌ಬುಕ್‌ನಲ್ಲಿ ಚಳವಳಿ ಆರಂಭವಾಯಿತು. ಇದರಿಂದ ಜನರು ಸಂಘಟಿತರಾಗಿ ದೇವಾಲಯ ಜೀರ್ಣೋದ್ಧಾರಕ್ಕೆ ನಾಂದಿಯಾಯಿತು.


ನವೀಕರಣ ಕಾಮಗಾರಿ 

ಸ್ಥಳೀಯ ಮುಸ್ಲಿಮರು ದೇವಾಲಯದ ಪುನರ್‌ನಿರ್ಮಾಣಕ್ಕೆಂದು ನುರಿತ ಕಾರ್ಮಿಕರನ್ನು ನಿಯೋಜಿಸಿದರು. ಸ್ಥಳೀಯ ನಿವಾಸಿ ಗುಲ್ ಮುಹಮ್ಮದ್ ಭಟ್ ಹೇಳುವಂತೆ, ಪ್ರಾಥಮಿಕ ಹಂತದಲ್ಲಿ ಈ ದೇವಾಲಯದ ಹೊರ ಪೌಳಿಯನ್ನು ದುರಸ್ತಿಗೊಳಿಸಲಾಯಿತು. ಮುಸ್ಲಿಮರು ಮತ್ತು ಕಶ್ಮೀರೀ ಪಂಡಿತರ ಜಂಟಿ ಸಹಯೋಗದಲ್ಲಿ "ರೇನ್‌ವಾಡಿ ಕ್ರಿಯಾ ಸಮಿತಿ" ಆರಂಭವಾಯಿತು. ಮುಂದೆ ಈ ಪ್ರದೇಶದಲ್ಲಿರುವ ಪುರಾತನ ಮಂದಿರಗಳ ಸಂರಕ್ಷಣೆಯ ಕಾರ್ಯಗಳನ್ನು ಕೈಗೆತ್ತಿಕೊಂಡು ಮುನ್ನಡೆಯಿತು.


ಪುನರ್ ನಿರ್ಮಿತ ಬೇತಾಳ ಭೈರವ ಮಂದಿರ 

ದೇವಾಲಯವು ಎರಡು ಕೋಮುಗಳ ನಡುವಣ ಸೌಹಾರ್ದತೆಗೆ ಕಾರಣವಾಯಿತು. "೧೯೯೦ರಲ್ಲಿ ನಡೆದ ಕಶ್ಮೀರೀ ಪಂಡಿತರ ಹತ್ಯೆ ದುರದೃಷ್ಟಕರ. ಇದರಿಂದ ಅವರು ತಮ್ಮ ನೆಲವನ್ನು ಬಿಟ್ಟು ವಲಸೆ ಹೋಗುವಂತಾಯಿತು. ಅವರ ಸರಕಾರೀ ಆಶ್ರಯಸ್ಥಾನಗಳಲ್ಲಿರದೇ ತಮ್ಮ ಸ್ವಂತ ನೆಲದಲ್ಲಿ ಬದುಕುವಂತಾಗಬೇಕು ಎನ್ನುವುದು ನಮ್ಮ ಆಶಯ" ಎಂದು ರೇನ್‌ವಾಡಿಯ ನಿವಾಸಿ ಮುಹಮ್ಮದ್ ಗನಾಯ್‌ ಹೇಳುತ್ತಾರೆ. ಇಂದಿಗೂ ಈ ಪ್ರದೇಶದ ಅನೇಕ ಕಶ್ಮೀರೀ ಪಂಡಿತರ ಮನೆಗಳ ಕೀಲಿಕೈಗಳು ಸ್ಥಳೀಯ ಮುಸ್ಲಿಮರಲ್ಲೇ ಇವೆ. ಬೇಸಿಗೆಯಲ್ಲಿ ಅವರು ತಮ್ಮ ಮೂಲ ಮನೆಗಳಿಗೆ ಬಂದು ಕೆಲವಾರು ವಾರ ಇದ್ದು  ಜಮ್ಮುವಿಗೆ ಹೋಗುತ್ತಿದ್ದಾರೆ.  ಇದೆಲ್ಲ ಏನಿದ್ದರೂ, ೨೨ವರ್ಷಗಳ ನಂತರ ಜೀರ್ಣೋದ್ಧಾರ ಕಂಡಿರುವ ಬೇತಾಳ ಭೈರವ ಮಂದಿರದ ಸುಸ್ಥಿತಿಯ ಬಗ್ಗೆ ಇಲ್ಲಿನ ನಿವಾಸಿ ಸುನಿಲ್ ಪಂಡಿತರಿಗೆ ಸಂತಸವಿದೆ. ಏಕೆಂದರೆ ಕಶ್ಮೀರದ ಈ ಪ್ರದೇಶದ ಜನ ಬೇತಾಳ ಭೈರವನಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಮತ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಕೊಂಡಿಯಾಗಿರುವ ಈ ಪುರಾತನ ಮಂದಿರ ಮತ್ತೆ ಪುನರುಜ್ಜೀವನಗೊಂಡಿರುವುದರಿಂದ, ತಮ್ಮ ನೆಲೆಯಿನ್ನೂ ಸುಭದ್ರವಾಗಿದೆ, ಮುಂದೊಮ್ಮೆ ಇಲ್ಲಿ ಬಂದು ನೆಲಸಬಹುದೆಂಬ ಆಸೆ ಮರುಕಳಿಸಲು, ಇದು ಸಹಾಯಕವಾಗಿದೆ ಎನ್ನುವುದು ಸುನಿಲ್ ಪಂಡಿತರ ಅಭಿಪ್ರಾಯ.


* * * * * * *

ಶುಕ್ರವಾರ, ಮಾರ್ಚ್ 1, 2013

ಡಣಾಯಕಪುರದ ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿ




ಡಣಾಯಕಪುರದ
ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿ




ಶಿರೋಮಾಲಾ ವಿಭೂಷಿತಂ 
ಇತ್ತೀಚೆಗೆ ಶಿವಮೊಗ್ಗಕ್ಕೆ ಹೋದಾಗ ಅಗರದ ಹಳ್ಳಿಯಲ್ಲಿರುವ ಮಿತ್ರರಾದ ಮುರಳಿ, ತಮ್ಮ ಗ್ರಾಮದ ಸಮೀಪ ಒಂದು ಕಾಲಭೈರವ ದೇವಾಲಯವಿದೆಯೆಂದು ತಿಳಿಸಿದ್ದರು. ಅದನ್ನು ಇತ್ತೀಚೆಗೆ ಸಂದರ್ಶಿಸಿದ ನಂತರ ಆ ಬಗ್ಗೆ ಇಲ್ಲಿ ಬರೆಯುತ್ತಿರುವೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊಳೆಹೊನ್ನೂರಿನಿಂದ ಸ್ವಲ್ಪ ಮುಂದೆ ಸಾಗಿದರೆ, ಡಣಾಯಕಪುರವೆಂಬ ಚಿಕ್ಕ ಗ್ರಾಮವಿದೆ. ಅಲ್ಲಿ ಊರಿನ ಅಂಚಿನಲ್ಲಿ ಒಂದು ಚಿಕ್ಕ ಗುಡ್ಡ. ಅದರ ಮೇಲೊಂದು ದೇಗುಲವಿದೆ. ಅಲ್ಲಿರುವುದು ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿಯ ದೇವಾಲಯ. ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಕಾಲಭೈರವ ಮಂದಿರದ ಬಗ್ಗೆ ಈ ಬ್ಲಾಗ್‌ನಲ್ಲಿ ಒಂದು ಲೇಖನವಿದೆ. ಅದರಲ್ಲಿ ಪ್ರಸ್ತಾಪಿಸಿದ್ದಂತೆ, ಹಳೆಗಾಲದ ಮಂದಿರಗಳು ನಶಿಸಿಹೋದಾಗ,  ಮಂದಿರದ, ಅಲ್ಲಿನ ವಿಗ್ರಹಗಳ ಬಗ್ಗೆ ಆಸ್ಥೆಯುಳ್ಳ ಸ್ಥಳೀಕರು ಹೊಂದಿರುವ ಭಕ್ತಿ ಗೌರವಗಳಿಂದಾಗಿ, ಅವನ್ನು ಈಗ ಲಭ್ಯವಿರುವ ವಸ್ತುಗಳಿಂದ ಕಾಪಾಡಲು ಮುಂದಾಗುತ್ತಾರೆ. ಎಂದರೆ ಕಾಂಕ್ರೀಟ್ ಕಟ್ಟಡದಲ್ಲಿ ಪುರಾತನ ಶಿಲ್ಪಗಳು ಆಶ್ರಯ ಪಡೆಯುತ್ತವೆ. ಕೆಲವೇ ಅದೃಷ್ಟವಂತ ಪುರಾತನ ದೇವಾಲಯಗಳು, ಪುರಾತತ್ವ ಇಲಾಖೆಯ ಕಾಳಜಿಯಿಂದಾಗಿ ಮರುಹುಟ್ಟು ಪಡೆಯುತ್ತವೆ. ತೀರ ಭಗ್ನಗೊಂಡಿರುವ ದೇವಾಲಯಗಳು ಕುಸಿದು ಬೀಳುತ್ತವೆ. ಹಾಗೆ ಆಧುನಿಕ ಕಟ್ಟಡದಲ್ಲಿ ಪುರಾತನ ಶಿಲ್ಪಗಳನ್ನು ನೋಡಿದಾಗ ಅದು ಅಸಮಂಜಸವೆಂದು ತೋರುತ್ತದೆ.

ಸುಂದರ ಹೊಯ್ಸಳ ವಿಗ್ರಹ 
ಆದರೆ ಇದೆಲ್ಲ ಅನಿವಾರ್ಯ. ಡಣಾಯಕ ಪುರದ ದೇವಾಲಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಖರಾಯಪಟ್ಟಣಕ್ಕೂ ಇಲ್ಲಿಗೂ ಒಂದು ವ್ಯತ್ಯಾಸವಿದೆ. ಎರಡು ಸ್ಥಳಗಳಲ್ಲಿ ಇಟ್ಟಿಗೆ ಮರಳಿನ ದೇವಾಲಯವಿದ್ದರೂ, ಡಣಾಯಕಪುರದ ಮಂದಿರದ ಗರ್ಭಗುಡಿಯಲ್ಲಿ ಹಳೆಗಾಲದ ವಿಗ್ರಹವಿದೆ. ಶಿಲ್ಪಕಲೆಯ ದೃಷ್ಟಿಯಿಂದ ಅದೇನೂ ಗಮನ ಸೆಳೆಯುವಂತಿಲ್ಲ. ಆದರೆ ಆವರಣದಲ್ಲಿರುವ ಕಾಲಭೈರವನ ಭಗ್ನಮೂರ್ತಿ ಮತ್ತು ದೇವಾಲಯದ ಇತರ ಬಿಡಿಭಾಗಗಳು ಅಲ್ಲೊಂದು ಹೊಯ್ಸಳರ ದೇವಾಲಯವಿತ್ತು ಎನ್ನುವುದನ್ನು ಸಮರ್ಥಿಸುತ್ತವೆ. ಚಿತ್ರದಲ್ಲಿ ಕಾಣುವ ಈ ಸುಂದರ ಮೂರ್ತಿಯು ತನ್ನ ಶಿರೋ ಅಲಂಕಾರ ಮತ್ತು ನಿಂತಿರುವ ತ್ರಿಭಂಗಿಗಳಿಂದ ಗಮನಸೆಳೆಯುತ್ತದೆ. ಆಭರಣಗಳು ಮತ್ತು ಮುಖಭಾವಗಳು ಅದ್ಭುತವಾಗಿವೆ. ಈ ಶಿಲ್ಪವಲ್ಲದೆ ಇತರ ಚಿಕ್ಕರಚನೆಗಳು ಈಗಿರುವ ದೇವಾಲಯವನ್ನು ನಿರ್ಮಿಸುವ ಕಾಲಕ್ಕೆ ದೊರೆಯಿತು ಎಂದು ಅಲ್ಲಿನ ಅರ್ಚಕರಾದ ಶ್ರೀ ವೆಂಕಟೇಶ ಭಟ್ಟರು ತಿಳಿಸಿದರು. ದೇವಾಲಯದ ಬಲಭಾಗಕ್ಕೆ ಒಂದು ಧ್ವಜಸ್ಥಂಭವಿದೆ. ಪೂರ್ವಕ್ಕೆ ಎದುರಾಗಿರುವಂತೆ ನಿರ್ಮಿತವಾದ ಒಂದು ದೇವಾಲಯ ಅಲ್ಲಿತ್ತು.  ಹೊಯ್ಸಳರ ಕಾಲದ ಆ ದೇವಾಲಯ ಭಗ್ನಗೊಂಡ ನಂತರ, ಸ್ಥಳೀಯ ಐತಿಹ್ಯದಂತೆ ಅಲ್ಲೊಂದು ನೂತನ ದೇವಾಲಯವನ್ನೂ, ಮತ್ತೊಂದು ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಯಿತು. ಈ ದೇವಾಲಯವೀಗ ಜೀರ್ಣೋದ್ಧಾರಗೊಳ್ಳುತ್ತಿದೆ. ಸದ್ಯದಲ್ಲೇ ಅಷ್ಟ ಭೈರವವಿಗ್ರಹಗಳಿರುವ ಆಧುನಿಕ ದೇವಾಲಯ ಅಲ್ಲಿ ತಲೆಯೆತ್ತಲಿದೆ.
ಈಗಿರುವ ವಿಗ್ರಹ 
ಈ ದೇವಾಲಯವನ್ನು ಕುರಿತಂತೆ ಸ್ಥಳೀಯ ಭಕ್ತಮಂಡಲಿಯು ಒಂದು ಕಿರುಪುಸ್ತಕವನ್ನು ಹೊರ ತಂದಿದೆ. ಅದರಲ್ಲಿ ಐತಿಹಾಸಿಕ ಅಂಶಗಳ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲವಾದರೂಪೌರಾಣಿಕ ಮಹತ್ವವನ್ನು ಕುರಿತು ವಿಸ್ತಾರವಾಗಿ ಹೇಳಲಾಗಿದೆ. ಸಮೀಪದ ಶ್ರೀ ಕ್ಷೇತ್ರ ಕೂಡಲಿಯ ಪುರೋಹಿತರಾದ ಶ್ರೀ ಸೋಮಸುಂದರ ಭಟ್ಟರು ಸಂಪಾದಿಸಿದ ಸಂಸ್ಕೃತ ಕೃತಿಯನ್ನು ಆಧರಿಸಿದ ಈ ಮಾಹಿತಿಯನ್ನು ವಿದ್ವಾನ್ ಕೂಡಲಿ ಜಗನ್ನಾಥ ಶಾಸ್ತ್ರಿಗಳು ಕನ್ನಡ ದಲ್ಲಿ ಅನುವಾದಿಸಿದ್ದಾರೆ. ಸಾಧಾರಣವಾಗಿ ಕಾಲಭೈರವ ದೇವಾಲಯಗಳಲ್ಲಿ ಆ ದೇವರಿಗೆ ಸಂಬಂಧಿಸಿದ ಸ್ತೋತ್ರಗಳು, ಮಂತ್ರಗಳು ಪ್ರಚಲಿತವಿಲ್ಲವಾಗಿ, ಶಿವಾರಾಧನೆಯ ಸಾಹಿತ್ಯವನ್ನೇ ಅವಲಂಬಿಸಬೇಕಾಗಿದೆ. ಆದರೆ ಇಲ್ಲಿ ಹಾಗಾಗದೆ ಕಾಲಭೈರವ ಅಷ್ಟೋತ್ತರವು ಚಾಲ್ತಿಯಲ್ಲಿದೆ.

ಬೆಟ್ಟದ ಹಾದಿ 
ಪೌರಾಣಿಕ ವಿವರಗಳಂತೆ ಈ ಗುಡ್ಡಕ್ಕೆ ದ್ರೋಣ ಪರ್ವತವೆಂಬ ಹೆಸರಿತ್ತು. ತುಂಗಾ ಭದ್ರಾ ನದಿಗಳ ಸಂಗಮ ಕ್ಷೇತ್ರವಾದ ಕೂಡಲಿಯಲ್ಲಿ ಬ್ರಹ್ಮೇಶ್ವರ, ನರಸಿಂಹ, ರಾಮೇಶ್ವರ ದೇವತೆಗಳನ್ನು ಸಂದರ್ಶಿಸಿದ ನಂತರ ದ್ರೋಣ ಪರ್ವತದ ಕಾಲಭೈರವ ನನ್ನು ನೋಡಬೇಕು. ಇದಕ್ಕೆ ಸಂಬಂಧಿ ಸಿದಂತೆ ಒಂದು ಪೌರಾಣಿಕ ಕತೆಯನ್ನೂ ನೀಡಿದ್ದಾರೆ. ಇಲ್ಲಿ ಶಿವನ ಜತೆಗೆ ವಿಷ್ಣುವಿನ ಪಾತ್ರವೂ ಇರುವುದೊಂದು ವಿಶೇಷ. ದೇವ-ದಾನವ ಯುದ್ಧದ ಕಾಲದಲ್ಲಿ ದಾನವರೇ ಗೆದ್ದು ಹಿಂಸಾಚಾರದಲ್ಲಿ ತೊಡಗಿದಾಗ, ದೇವತೆಗಳು ವಿಷ್ಣುವಿನ ಮೊರೆ ಹೋದರು. ಮಂದರ ಪರ್ವತದ ಮಥನ ಸಮಯದಲ್ಲಿ ಉದ್ಭವಿಸಿದ ಅಮೃತಕಲಶವನ್ನು ಧನ್ವಂತರಿಯಿಂದ ಅಪಹರಿಸಿದಾಗ, ವಿಷ್ಣುವು ಸ್ತ್ರೀ ರೂಪ ತಳೆದು ಅವರನ್ನು ಆಕರ್ಷಿಸಿದನು.  ದಾನವರು ಮೈಮರೆತದ್ದರಿಂದ ಅಮೃತಕಲಶವು ದೇವತೆಗಳಿಗೆ ದೊರೆಯಿತು.  ದೇವತೆಗಳ ಅಮೃತಪಾನದ ನಂತರವೂ ಬರಿದಾಗದ ಆ ಕಲಶವನ್ನು ಈಗ ದ್ರೋಣಪರ್ವತವೆಂದು ಕರೆಯಲಾಗುವ ಈ ಪ್ರದೇಶದಲ್ಲಿ ಹುಗಿದಿಟ್ಟರು.  ಅದರ ಕಾವಲಿಗೆ ಓರ್ವನನ್ನು ನೇಮಿಸಬೇಕೆಂಬ ಕೋರಿಕೆ ಬಂದಾಗ ವಿಷ್ಣುವು ವಸಂತ ಸಹಿತ ಶ್ರೀ ಕಾಲಭೈರವನನ್ನು ಬೆಟ್ಟದ ತುದಿಯಲ್ಲಿ ಸ್ಥಾಪಿಸಿದನು. ಅಂದಿನಿಂದ ಈ ಕ್ಷೇತ್ರವು ಕಾಲಭೈರವನ ನೆಲೆಯಾಯಿತು ಎನ್ನುತ್ತದೆ ಈ ಕಥಾನಕ. ಇನ್ನೂ ವಿಶೇಷವೆಂದರೆ ಕಾಲಭೈರವಾಷ್ಟಮಿ, ಚತುರ್ದಶೀ ಮುಂತಾದ ಪರ್ವದಿನಗಳಂದು, ಸೂರ್ಯನು ಕರ್ಕಾಟಕ ರಾಶಿಯಲ್ಲಿದ್ದಾಗ ಇಲ್ಲಿನ .ಕಾಲಭೈರವ ನನ್ನು ಸಂದರ್ಶಿಸುವುದು ವಿಶೇಷ ಫಲನೀಡುತ್ತದೆಯೆಂಬುದು ಐತಿಹ್ಯ
ಬಲಿಪೀಠದ ಸಮೀಪ  ಕೆತ್ತನೆ
ದೇವಾಲಯದ ಎದುರಿಗಿರುವ ಬಲಿಪೀಠದ ಸಮೀಪ ಒಂದು ಕೆತ್ತನೆಯಿದೆ. ಅದರಲ್ಲಿನ ಮಾನವ ಶರೀರಗಳ ತಲೆಗಳು ಕಾಣುತ್ತಿಲ್ಲ. ಇದರ ಬಗ್ಗೆ ಸೂಕ್ತ ವಿವರಣೆಯೂ ದೊರೆಯಲಿಲ್ಲವಾಗಿ, ಓದುಗರಲ್ಲಿ ಯಾರಿಗಾದರೂ ಮಾಹಿತಿಯಿದ್ದರೆ ತಿಳಿಸಲು ಕೋರಿಕೆ. 

ಒಂದು ಭಗ್ನ ಶಿಲ್ಪ 
ಒಟ್ಟಿನಲ್ಲಿ ಇಲ್ಲಿರುವ ಹೊಯ್ಸಳ ವಿಗ್ರಹದ ಸೌಂದರ್ಯ ಮತ್ತು ಭವ್ಯತೆಯನ್ನು ನೋಡುವ ಯಾರಿಗೂ, ಉತ್ಖತನ ಕೈಗೊಂಡರೆ ಸುಂದರ ಪುರಾತನ ದೇವಾಲಯವೊಂದು ಕಾಣಸಿಗುತ್ತದೆಯೆಂಬ ವಿಶ್ವಾಸವಂತೂ ಬರುತ್ತದೆ. ವಿಗ್ರಹವೇ ಇಷ್ಟು ಸುಂದರ ವಾಗಿರುವಾಗ ಮಂದಿರವೂ ಅದ್ಭುತ ವಾಗಿರಬೇಕು ಎಂಬ ಕಲ್ಪನೆ ಗರಿಗೆದರುತ್ತದೆ. ಸ್ಥಳೀಯರ ಸಹಕಾರದೊಂದಿಗೆ, ಪುರಾತತ್ವ ಇಲಾಖೆ ಶ್ರಮವಹಿಸಿದರೆ ಆ ಕಾರ್ಯ ನಡೆದೀತು. ಹಾಗಾಗಲಿ ಎನ್ನುವುದಷ್ಟೇ ಜನರ ಆಶಯ.

* * * * * * *

ಶುಕ್ರವಾರ, ಫೆಬ್ರವರಿ 1, 2013

ವಿಜ್ಞಾನ ಭೈರವ ತಂತ್ರ



ಭೈರವರಾಧನೆಯು ಕೇವಲ ಆಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸಂಬಂಧಿಸಿರದೇ, ಅದರ ಹರಹು ಇನ್ನಷ್ಟು ವಿಸ್ತಾರವಾಗಿದೆಯೆಂದು ತಿಳಿಯಲು ಆಶಿಸುವವರಿಗೆ ವಿಜ್ಞಾನ ಭೈರವ ತಂತ್ರವು ಹಲವಾರು ಸಾಧ್ಯತೆಗಳನ್ನು ತೆರೆದಿಡುತ್ತದೆ. ನಮ್ಮ ಎಲ್ಲ ಧಾರ್ಮಿಕ ಕ್ರಿಯೆಗಳ ಹಿಂದೆ, ಅಲೌಕಿಕವಾದುದನ್ನು ಸಾಧಿಸುವ ಉದ್ದೇಶವಿರುತ್ತದೆಯೆನ್ನುವುದು ಸತ್ಯವಾದರೂ, ಅವುಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ಅದರ ಆಂತರ್ಯವನ್ನು ಹೊರಗೆಡಹಲು ನಿರ್ಮಮಕಾರವಾದ ಅಧ್ಯಯನದ ಆವಶ್ಯಕತೆಯಿರುತ್ತದೆ. ಅದು ಎಲ್ಲ ಸಂದರ್ಭಗಳಲ್ಲೂ ಸಾಧ್ಯವಾಗಲಾರದು. ಧಾರ್ಮಿಕ ಆಚರಣೆಗಳ ಬಾಹ್ಯ ಸ್ವರೂಪವನ್ನು ಮಾತ್ರ ಅನುಸರಿಸುತ್ತಿರುವುದು ಈಗಿನ ಕ್ರಮ. ಈ ಕಾರಣದಿಂದಾಗಿ, ಆಚರಣೆಗಳಿಗಾದರೂ ಜೀವವಿದೆಯೆಂಬ ಸಮಾಧಾನ ತಳೆಯಬಹುದು. ಭೈರವನ ಆರಾಧನೆಯಲ್ಲಿ, ತಾಂತ್ರಿಕರು, ಅಘೋರಿಗಳು, ಶಿವಸಾಧಕರು ಅನೇಕ ಆಚರಣೆಗಳನ್ನು ಅನುಸರಿಸುತ್ತಿರುವರು. ಅವುಗಳ ಅಂತಃಸತ್ವವನ್ನು ಅರಿತವರು, ಅನುಸರಿಸುವವರು ಕಡಿಮೆಯೆಂದೇ ಹೇಳಬೇಕು. ಆದರೆ ಈಗಿನ ಅಂತರಜಾಲದ ಸೌಕರ್ಯದಲ್ಲಿ ಈ ಕುರಿತಾದ ಸಾಹಿತ್ಯ, ಚೆನ್ನಾಗಿಯೇ ಲಭ್ಯವಿದೆಯೆನ್ನುವುದು ಸಂತೋಷದ ಸಂಗತಿ. ಹೀಗಾಗಿ, ಭೈರವಾರಾಧನೆಯ ನೈಜ ಉದ್ದೇಶಗಳನ್ನು ಒಳಗೊಂಡ ವಿಜ್ಞಾನ ಭೈರವ ತಂತ್ರದ ಬಗ್ಗೆ ಒಂದು ಪ್ರಾತಿನಿಧಿಕ ಲೇಖನವನ್ನು ನಿಮ್ಮ ಓದಿಗೆಂದು ಈ ಸಂಚಿಕೆಯಲ್ಲಿ ನೀಡಲಾಗಿದೆ.  


ವಿಜ್ಞಾನ ಭೈರವ ತಂತ್ರವನ್ನು ಶಿವ ವಿಜ್ಞಾನ ಎಂದೂ ಕರೆಯುವರು. ಕ್ರಿ.ಪೂ. ೮೦೦ರ ಇತಿಹಾಸವುಳ್ಳ ತಂತ್ರಾಧಾರಿತ ವೇದ ಸಾಹಿತ್ಯವನ್ನು ಆಧರಿಸಿ ಇದನ್ನು ರಚಿಸಲಾಗಿದೆ. ಇದು ಕಾಶ್ಮೀರ ಶೈವಪಂಥಕ್ಕೆ ಸೇರಿದ್ದು. ಇದಕ್ಕೊಂದು ಬಲವಾದ ತಾತ್ತ್ವಿಕ ನೆಲಗಟ್ಟು ಇದ್ದರೂ, ವ್ಯಕ್ತಿಯ ಅಸ್ತಿತ್ವದ ಏಕೆ ಮತ್ತು ಹೇಗೆ - ಈ ಪ್ರಮುಖ ಪ್ರಶ್ನೆಗಳನ್ನು ಚರ್ಚಿಸುವ ರಹಸ್ಯ ವಿಜ್ಞಾನ ತಂತ್ರವಿದು. ಇದನ್ನು ಆತ್ಮ ಸಾಕ್ಷಾತ್ಕಾರದ ಸಂಹಿತೆಯೆಂದೂ ಪರಿಗಣಿಸಲಾಗಿದೆ. ಮಾನವ ಮನಸ್ಸಿನ ಆಂತರ್ಯವನ್ನು ಒಳಹೊಕ್ಕು ಅದರಲ್ಲಿ ಜಾಗೃತಿಯನ್ನು ಮೂಡಿಸುವ ಹಲವಾರು ತಂತ್ರವಿಧಾನಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಹೀಗಾಗಿ ಇದನ್ನು ಭಾರತೀಯ ಮಾನಸ ಶಾಸ್ತ್ರದ ಅಧ್ಯಯನದಲ್ಲಿ ಪ್ರಮುಖ ಕೃತಿಯೆಂದು ಹೆಸರಿಸಲಾಗಿದೆ. 

ಇದರ ತಂತ್ರ ವಿಧಾನಗಳಲ್ಲಿ ಯೋಗಕ್ಕೆ ಪ್ರಾಧಾನ್ಯ ನೀಡಲಾಗಿದೆ. ಯೋಗವೆಂದರೆ ಇಲ್ಲಿ ಹಠಯೋಗ ಆಧಾರಿತ ಶರೀರ ಭಂಗಿಗಳ ವ್ಯಾಯಾಮ ಎನ್ನಲಾಗದು. ಸಾಧಾರಣವಾಗಿ ಭಾರತೀಯ ವೇದಾಂತ ಮತ್ತು  ಯೋಗಿಕ ಸಾಹಿತ್ಯದಲ್ಲಿ ಮಾನವ ಜೀವನವೆನ್ನುವುದು ನಶ್ವರ, ಭೋಗವನ್ನು ತ್ಯಜಿಸಿದರೇ ಯೋಗಿಯಾಗಲು ಸಾಧ್ಯ ಮುಂತಾದ ಪರಿಕಲ್ಪನೆಗಳಿವೆ. ಇದಕ್ಕೆ ಪ್ರತಿಯಾಗಿ ಭೈರವ ವಿಜ್ಞಾನ ತಂತ್ರದಲ್ಲಿ ಜೀವನವನ್ನು ಅನುಭವಿಸುವುದು ಮತ್ತು ಆಧ್ಯಾತ್ಮಿಕ ಜಾಗೃತಿಗಳು ಬೇರೆ ಬೇರೆಯಲ್ಲ ಎಂದು ಸಾರಲಾಗಿದೆ. ಸಾಂಸಾರಿಕ ಕೋಟಲೆಗಳು ಎಲ್ಲರಿಗೂ ಇರುವುದು ಸಹಜ. ಅದೇ ರೀತಿ ಎಲ್ಲರೂ ಒಂದಲ್ಲ ಒಂದು ನೆಲೆಯಲ್ಲಿ ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಯಲ್ಲಿ ತೊಡಗಿರುತ್ತಾರೆ. ಅಂಥ ಎಲ್ಲರಿಗೂ ಈ ವಿಜ್ಞಾನ ಭೈರವ ತಂತ್ರವು ಒಂದು ಸೇತುವೆಯಂತೆ ಕೆಲಸ ಮಾಡುತ್ತದೆ.

ಇದರಲ್ಲಿ ವಿಜ್ಞಾನ ಮತ್ತು ಭೈರವ ಎಂಬೆರಡು ಪದಗಳಿವೆ. ವಿಶೇಷವಾದ ಜ್ಞಾನ ವಿಜ್ಞಾನವಾದರೆ, ಭೈರವನೆಂಬ ಪದಕ್ಕೆ ಭೀಕರ, ಭೀಷಣ ಎಂಬ ಅರ್ಥಗಳು ಸ್ಫುರಿಸಿದರೂ, ಅದರ ನೈಜ ನೆಲೆಯಿರುವುದು, ವ್ಯಕ್ತಿಯ ಅಜ್ಞಾನವನ್ನು ಕಳೆದು, ಮಾನಸಿಕ ಸ್ಥಿತಿಯನ್ನು ಹದಗೊಳಿಸುವ ಶಿವನ ಉಗ್ರರೂಪವಿದೆಂದು ಹೇಳಬಹುದು. ವಿಜ್ಞಾನ ಭೈರವ ತಂತ್ರವೆಂದರೆ ವ್ಯಕ್ತಿಯ ದೈನಂದಿನ ಜೀವನದಲ್ಲಿ ಮೂಲಭೂತ ಬದಲಾವಣೆ ಮತ್ತು ಜಾಗೃತಿಯನ್ನು ಮೂಡಿಸುವ ಧ್ಯಾನ ವಿಧಾನದ ಸಂಹಿತೆಯೆಂದು ಸಂಕ್ಷಿಪ್ತವಾಗಿ ವಿವರಿಸಬಹುದು.

ಮುಖ್ಯ ತತ್ತ್ವಗಳು

ಇದರ ಪ್ರಮುಖ ತತ್ತ್ವ ವೆಂದರೆ, ನಾವು ಯಾರೂ ಭೌತಿಕವಾಗಿ ಕಾಣುವಂತೆ ರಕ್ತ-ಮಾಂಸಗಳಿಂದ ಕೂಡಿದ ಬಾಹ್ಯ ಸ್ವರೂಪರಲ್ಲ. ಬದಲಾಗಿ ನಮ್ಮ ವೈಯುಕ್ತಿಕ ಸ್ವಭಾವವು ಸಂಸ್ಕೃತದಲ್ಲಿ ಹೇಳುವಂತೆ ಸ್ಪಂದನ ಎಂಬ ಅವಿನಾಶಿ ಶಕ್ತಿ. ಅದು ಹಿಂದೆಯೂ ಇದ್ದಿತು ಮತ್ತು ಮುಂದೆ ಕೂಡ ಇರುತ್ತದೆ. ಆಧುನಿಕ ವಿಜ್ಞಾನ ಕೂಡ ಇದನ್ನೇ ಹೇಳುತ್ತದೆ. ವಿಜ್ಞಾನ ಭೈರವ ತಂತ್ರದ ತಾಂತ್ರಿಕ ಭಾಗವು ಜಗತ್ತನ್ನು ಮಾಯೆ ಅಥವಾ ಭ್ರಮೆ ಎಂದು ಹೇಳುವುದಿಲ್ಲ, ಬದಲಾಗಿ ಅದು ಶಕ್ತಿಯನ್ನು ಆರಾಧಿಸುತ್ತದೆ ಮತ್ತು ಗೌರವಿಸುತ್ತದೆ. ಬ್ರಹ್ಮಾಂಡವೇ ಒಂದು ಶಕ್ತಿಯೆಂದು ಪರಿಭಾವಿಸುವವನಿಗೆ, ಅದು ಶಿವನ ಸ್ವರೂಪವಾಗಿಯೇ ಕಾಣುತ್ತದೆ. ತೆರೆದ ಕಣ್ಣುಗಳಿಂದ ಅವಲೋಕಿಸುವ ವಿಶಾಲ ದೃಷ್ಟಿಯನ್ನು ಅದು ಒದಗಿಸುತ್ತದೆ. ಹೀಗಾಗಿ ಆಂತರ್ಯದಲ್ಲಿ ಅದು ನಮ್ಮೆಲ್ಲರ ಪ್ರಜ್ಞೆಯ ಅಂಗವೇ ಆಗಿರುತ್ತದೆ. ಅದು ಗುಣಾತ್ಮಕವಾಗಿ ಶಕ್ತಿ ಮತ್ತು ವಸ್ತುಗಳಿಗಿಂತ ಭಿನ್ನವಾಗಿರುತ್ತದೆ. ನಾವು ನಮ್ಮ ಶಕ್ತಿಯನ್ನು ಪುನರುಜ್ಜೀವನಗೊಳಿಸಿಕೊಳ್ಳಲು ಬಯಸುವುದಾದರೆ, ಶಿವ ಸ್ವರೂಪವು ನಮ್ಮ ಅರಿವು, ಆನಂದಗಳನ್ನು ವೃದ್ಧಿಸಿ, ನಮ್ಮ ಪ್ರಜ್ಞೆಯ ಅಂತರ್ದರ್ಶನ ಮಾಡಿಸಬಲ್ಲ ವೇಗವರ್ಧಕವಾಗಿ ಕೆಲಸಮಾಡುತ್ತದೆ. 

ತಂತ್ರಗಳು

ಈ ಗ್ರಂಥದಲ್ಲಿ ಒಟ್ಟು ೧೧೨ ತಂತ್ರಗಳ ಪ್ರಸ್ತಾಪವಿದೆ. ಇವುಗಳಲ್ಲಿ ಪ್ರಾಪಂಚಿಕ ವಿಷಯಗಳೂ ಇವೆ. ಜೀವನದ ಪ್ರತಿಹಂತದಲ್ಲಿ ಯೋಗವನ್ನು ಮರೆಯದಂತೆ, ಅದರ ಅನುಸರಣೆಯಿಂದ ಜೀವನವನ್ನು ಪೂರ್ತಿಯಾಗಿ ಅನುಭವಿಸುವ, ನಮ್ಮತನವನ್ನು ಗಟ್ಟಿಗೊಳಿಸುವ ಬೋಧನೆಯನ್ನು ಅದು ಒಳಗೊಂಡಿದೆ.

ಈ ಎಲ್ಲ ತಂತ್ರ ಅಭ್ಯಾಸಗಳ ಮುಖ್ಯ ಉದ್ದೇಶವೆಂದರೆ, ಚಂಚಲ ಮನಸ್ಸನ್ನು ಶಾಂತಗೊಳಿಸಿ, ಅದನ್ನು ಪ್ರಸ್ತುತ ಸಮಯಕ್ಕೆ ನೆಲೆಗೊಳಿಸುವುದು ಮತ್ತು ಆಯಾ ಸಮಯದ ನಮ್ಮ ಕ್ರಿಯೆಗಳೇ ಭವಿಷ್ಯವನ್ನು ನಿರ್ಧರಿಸುತ್ತದೆಯಲ್ಲವೆ. ಹೀಗಾಗಿ ನಮ್ಮ ಕ್ರಿಯೆಗಳಿಗೆ ನಾವೇ ಬಾಧ್ಯಸ್ತರು ಎನ್ನುವುದನ್ನು ವಿಜ್ಞಾನ ಭೈರವ ತಂತ್ರವು ಪದೇ ಪದೇ ಶೃತಗೊಳಿಸುತ್ತದೆ. ಇಲ್ಲಿ ನೀಡಿರುವ ಬೋಧೆಗಳು ಯಾವುದೇ ಧರ್ಮ ಅಥವಾ ಜಾತಿ ಹಾಗೂ ನೈತಿಕ ಕಟ್ಟಪಾಡುಗಳನ್ನು ನಿರ್ದೇಶಿಸಿ ಹೇಳಿರುವುದಲ್ಲ. ಇಲ್ಲಿ ಯಾವುದೇ ತಾತ್ತ್ವಿಕ ನಿರೀಕ್ಷೆಗಳಿಲ್ಲ. ಬೌದ್ಧಿಕ ಕಸರತ್ತಿನ ಚಮತ್ಕಾರಿಕ ವಿವರಣೆಗಳಿಲ್ಲ. ಇಲ್ಲಿರುವುದು ಕೇವಲ ಆತ್ಮಾನುಸಂಧಾನದ ಮಾರ್ಗ ಮಾತ್ರ.

ಕೆಲವು ತಂತ್ರಗಳು ಉಸಿರಾಟಕ್ಕೆ ಸಂಬಂಧಿಸಿವೆ. ಮತ್ತು ಕೆಲವು ಭಾವನಾತ್ಮಕವಾದ ಸಂಗತಿಗಳಾದ ಪ್ರೀತಿ, ನಿರಾಶೆ ಮತ್ತು ಕೋಪಗಳಿಗೆ ಸಂಬಂಧಿಸಿವೆ. ಇದರಲ್ಲಿ ಮಾನವ ಮತ್ತು ಪ್ರಕೃತಿಗಳ ನಡುವಣ ಮಾನಸಿಕ ಸಂಬಂಧಗಳು ಇರುವಂತೆಯೇ. ಮತ್ತೆ ಕೆಲವು ಮಾನವ ಶರೀರವು ಅನುಭವಿಸುವ ಶಬ್ದ, ರೂಪ, ರಸ, ಗಂಧ ಮುಂತಾದ ಸ್ಪಂದನೆಗಳನ್ನು ಕುರಿತು ಹೇಳುತ್ತವೆ. ಅಂತಿಮವಾಗಿ ಇವೆಲ್ಲವೂ ಮಾನವನ ಪ್ರಜ್ಞಾ ಶಕ್ತಿಯನ್ನು ಮಾತ್ರವೇ ಆಧರಿಸಿದ್ದು, ಅವನು ಸಚೇತನವಾಗಿರಲು ಕಾರಣವಾಗುವ ಎಲ್ಲವನ್ನೂ ಒಳಗೊಂಡಿದೆ. ಆದರೆ ಯಾವುದೇ ಬಾಹ್ಯಶಕ್ತಿಗಳಿಂದ ಪ್ರೇರಿತನಾಗದಂತೆ, ಅಂತರಂಗದ ದನಿಯನ್ನು ಮಾತ್ರ ಗ್ರಹಿಸಲು ವ್ಯಕ್ತಿಯನ್ನು ಅಣಿಗೊಳಿಸುತ್ತದೆ. ಹೀಗಾಗಿ ವಿಜ್ಞಾನ ಭೈರವ ತಂತ್ರವು ಒಂದು ಪ್ರಜ್ಞಾ ಕೇಂದ್ರಿತ ತತ್ತ್ವ ವಿಚಾರವೆಂದು ಗಂಭೀರವಾಗಿ ಪರಿಗಣಿಸುವುದು ಅತ್ಯವಶ್ಯ.

ಈ ತಂತ್ರದ ಕೆಲವು ಶ್ಲೋಕಗಳು ಮತ್ತು ಅವುಗಳ ಕನ್ನಡ ಅನುವಾದವನ್ನು ಈ ಕೆಳಗೆ ನೀಡಲಾಗಿದೆ. ಇದನ್ನು ಗಮನಿಸಿದರೆ ವಿಜ್ಞಾನ ಭೈರವ ತಂತ್ರದ ಬಾಹ್ಯ ಸ್ವರೂಪ ತಿಳಿಯುತ್ತದೆ. ಹೆಚ್ಚಿನ ಅಧ್ಯಯನ ಬಯಸುವವರು, ವಿಸ್ತೃತ ಲೇಖನಗಳಿಗೆಂದು, ಅಂತರಜಾಲದ ನೆರವನ್ನು ಪಡೆಯಬಹುದು.  

ಆಕಾಶಮ್ ವಿಮಲಮ್ ಪಶ್ಯನ್ ಕೃತ್ವಾ ದೃಷ್ಟಿಮ್ ನಿರಂತರಂ |
ಸ್ತಬ್ಧಾತ್ಮಾ ತತ್ ಕ್ಷಣಾತ್ ದೇವಿ ಭೈರವಮ್ ವಪುರಾಪ್ನುಯಾತ್ ||

ಬಹಳ ಹೊತ್ತಿನ ವರೆಗೆ ನಿರಭ್ರ ಆಕಾಶವನ್ನೆ ಅವಲೋಕಿಸುತ್ತಿದ್ದ, ಪ್ರಜ್ನೆಯು ಆಕಾಶದೊಂದಿಗೆ ಮಿಲಿತವಾಗಿ ಭೈರವ ಅಥವಾ ಶೂನ್ಯ  ಸ್ಥಳದಲ್ಲಿ ಐಕ್ಯವಾಗುತ್ತಾನೆ. 

ಚಲಾಸನೇ ಸ್ಥಿತಾಸ್ಯಥಾ ಶನೈರವ ದೇಹಾಚಾಲನಾತ್ | 
ಪ್ರಶಂತೇ ಮಾನಸೇ ಭಾವೇ ದೇವೀ ದಿವ್ಯಯುಗಯಾಪ್ನುಯಾತ್ ||

ಚಲನೆಯೇ ದಿವ್ಯೌಷಧ, ಚಲನೆ ಭಾವನೆಗಳನ್ನು ಉದ್ದೀಪಿಸುತ್ತದೆ. ಈ ಕ್ಷೇತ್ರದಲ್ಲಿ ನಮಗೆ ಪರಿಚಿತವಿರುವ ಕೆಲವು ಚಲನೆಗಳನ್ನು ಹೆಸರಿಸಬಹುದೆಂದರೆ, ನರ್ತನ, ವ್ಯಾಯಾಮ ಮುಂತಾದ್ದನ್ನು ಸೇರಿಸಿಕೊಳ್ಳಬಹುದು. ನೀವು ಶರೀರವನ್ನು ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ ಚಲಿಸುತ್ತಿದ್ದಂತೆ ಮನಸ್ಸು ಸ್ಥಿರಗೊಂಡು, ಅದು ನಮ್ಮ ಶರೀರದ ಚೇತನದ ಜತೆ ಸಂಲಗ್ನಗೊಳ್ಳುತ್ತದೆ. ದೇವಾಲಯಗಳಲ್ಲಿ ಬಳಸುವ ಡೋಲೋತ್ಸವದಲ್ಲಿ ದೇವರ ಮೂರ್ತಿಯನ್ನು ಉಯ್ಯಾಲೆಯಲ್ಲಿ ಚಲಿಸುವಂತೆ ಮಾಡಲಾಗಿರುವುದನ್ನು ನೀವು ಗಮನಿಸಿರುತ್ತೀರಿ. ಸೂಫಿಗಳು ತಮ್ಮ ಮಂತ್ರ ಪಠಣ ಕಾಲಕ್ಕೆ ಚಲನಯುಕ್ತ ಧ್ಯಾನ ಪದ್ಧತಿಯನ್ನು ಅನುಸರಿಸುವರು. ಭಜನೆ,  ಕಾಲದಲ್ಲಿ, ಉತ್ಸವ, ಕೋಲ, ಕಥಕ್ಕಳಿ ಮುಂತಾದ ದೇವತಾರಾಧನೆಗಳ ಸಂದರ್ಭಗಳಲ್ಲಿ  ನಮಗರಿವಿಲ್ಲದಂತೆ, ನಮ್ಮ ಶರೀರಕ್ಕೆ ಚಲನೆಯೊದಗುತ್ತದೆ. ಅದು ದೈವಿಕ ಶಕ್ತಿಯೊಂದಿಗೆ ಸಾಮೀಪ್ಯ ಸಾಧಿಸುವ ಸರಳ ವಿಧಾನ. 

ಆಸನೇ ಶಯನೇ ಸ್ಥಿತ್ವಾ ನಿರಾಧಾರಾಮ್ ವಿಭಾವಯಾನ್ | 
ಸ್ವದೇಹಂ ಮಾನಸಿ ಕ್ಷೀಣೇ ಕ್ಷಣಾತ್ ಕ್ಷೀಣಾಶಯೋರ್ಭವೇತ್ ||

ನಾವು ಕುಳಿತಿರುವಾಗ, ಮಲಗಿರುವಾಗ, ಶರೀರಕ್ಕೆ ಯಾವ ಆಧಾರವಿಲ್ಲದಂತೆ ಇದೆಯೆಂದು ಭಾವಿಸಿಕೊಳ್ಳಿ. ಈ ಸ್ಥಿತಿಯಲ್ಲಿ ನಮ್ಮ ಭಾವನೆಗಳೂ ನಿರಾಧಾರವಾಗುತ್ತವೆ. ನಿಮ್ಮ ಯೋಚನೆಯ ಸರಣಿಗೆ ಭಂಗ ಬಂದು, ಅದು ಸ್ಥಗಿತಗೊಳ್ಳುತ್ತದೆ. 

ಮಧ್ಯ ಜಿಹ್ವೇ ಸ್ಫರೀತಸ್ಯೇ ಮಧ್ಯೇ ನಿಕ್ಷಿಪ್ಯ ಚೇತನಾಮ್ | 
ಹೂಚ್ಛ್ರಂ ಮನಸಾ ಕುರ್ವಾಃ ತತಃ ಶಾಂತೇ ಪ್ರಲೀಯತೇ ||

ನಾಲಿಗೆ ತುದಿಯನ್ನು ಅಂಗುಳಿಗೆ ತಗುಲಿಸಿದಾಗ, ಆಜ್ಞಾಚಕ್ರ ಮತ್ತು ಸಹಸ್ರಾರಗಳಿಗೆ ಚೇತನ ಒದಗಿಸುವ ಸ್ಥಳಾವಕಾಶವು ಬಾಯಿಯಲ್ಲಿ ಉಂಟಾಗುತ್ತದೆ. ಖೇಚರೀ ಮುದ್ರೆಯನ್ನು ಹೋಲುವ ಈ ಭಂಗಿಯಲ್ಲಿದ್ದುಕೊಂಡು, ಹಾ ಎಂದು ಉಚ್ಚರಿಸುತ್ತ, ದೀರ್ಘಶ್ವಾಸವನ್ನು ಎಳೆದುಕೊಂಡಾಗ, ಮನಃಶಾಂತಿಯು ತಾನಾಗಿಯೇ ಲಭಿಸುತ್ತದೆ.

ಉಪವಿಶ್ಯಾಸನೇ ಸಮ್ಯಕ್ ಬಾಹು ಕೃತ್ವಾರ್ಧಾ ಕುಂಚಿತಹೌ | 
ಕಕ್ಷವ್ಯೋಮ್ನಿ ಮನಾಃ ಕುರ್ವನ್ ಶಮಮಾಯತಿ ತಲ್ಲಯಾತ್ ||

ಸೂಕ್ತ ಸ್ಥಿತಿಯಲ್ಲಿ ಕುಳಿತು ಕುತ್ತಿಗೆ ಮತ್ತು ತಲೆಗಳನ್ನು ನೇರವಾಗಿರುವಂತೆ ಇರಿಸಿಕೊಂಡು, ಬಾಹುಗಳನ್ನು ವೃತ್ತಾಕಾರವಾಗಿರುವಂತೆ ಮೇಲೆತ್ತಿ, ಹಿಡಿಯಿರಿ. ಆಗ ಮನಸ್ಸು ಈ ಸ್ಥಿತಿಯಲ್ಲಿ ಶಾಂತತೆಯನ್ನು ಹೊಂದುತ್ತದೆ. 

ಮೃದ್ವಾಸನೇ ಸ್ಥಿತೈಕೇನ ಹಸ್ತ ಪಾದೌ ನಿರಾಶ್ರಯಂ |
ನಿಧಾಯ ತತ್ ಪ್ರಸಂಗೇನ ಪರಾ ಪೂರ್ಣಾ ಮತಿರ್ಭವೇತ್ || 

ಮೃದುವಾದ ಪೃಷ್ಠದ ಒಂದು ಭಾಗವನ್ನಾಧರಿಸಿ ಕುಳಿತು, ಮತ್ತೊಂದನ್ನು ಸ್ವಲ್ಪ ಎತ್ತಿ, ಕೈ, ಕಾಲುಗಳನ್ನು ವಿರಾಮಸ್ಥಿತಿಯಲ್ಲಿ ಇಟ್ಟುಕೊಳ್ಳಿ. ಈ ಸ್ಥಿತಿಯಲ್ಲಿ ಚಿತ್ತವು ಏಕಾಗ್ರತೆಯನ್ನು ಹೊಂದಿ ಪರಬ್ರಹ್ಮದೊಂದಿಗೆ ಸಂಪರ್ಕ ಸಾಧಿಸುತ್ತದೆ. ನಮ್ಮ ಅನೇಕ ಯೋಗಿಕ ಆಸನಗಳು ತಿಳಿಸುವ ಕ್ರಮವೂ ಇದೇ ಆಗಿರುತ್ತದೆ. ಇಲ್ಲಿ ಶರೀರದ ಶಾಂತತೆಯೊಂದಿಗೆ ಮಾನಸಿಕ ಶಾಂತತೆಯನ್ನು ಸಮಾನವಾಗಿ ಸಾಧಿಸಲು ಈ ಬಗೆಯ ಆಸನಗಳು ನೆರವಾಗುತ್ತವೆ.

ಚಿತ್ರ ಕೃಪೆ : ಶ್ರೀ ಪುಟ್ಟಸ್ವಾಮಿ ಗುಡಿಗಾರ್ 
* * * * * * *

ಮಂಗಳವಾರ, ಜನವರಿ 1, 2013

ಹೀಗೊಬ್ಬ ಭೈರವ ಭಕ್ತ


ಆತ್ಮೀಯ ಓದುಗರೆಲ್ಲರಿಗೂ ನೂತನ ವರ್ಷದ ಶುಭಾಶಯಗಳು 


ಸಿದ್ಧರಾಮಪುರದ ಕಾಲಭೈರವ ಮಂದಿರ



ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಬುಕ್ಕರಾಯಸಮುದ್ರ ಮಂಡಲದಲ್ಲಿ ಒಂದು ಪುಟ್ಟ ಗ್ರಾಮವಿದೆ. ಅದರ ಹೆಸರು ಸಿದ್ಧರಾಮಪುರ. ಅಲ್ಲಿ ಒಂದು ಭೈರವನ ಚಿಕ್ಕ ದೇವಾಲಯವಿದೆ. ಅದು ತನ್ನ ಐತಿಹಾಸಿಕತೆಯಿಂದಲಾಗಲೀ, ಶಿಲ್ಪಕಲಾವೈಭವದಿಂದಾಗಲೀ ಪ್ರಸಿದ್ಧವಾಗಲಿಲ್ಲ. ಬದಲಾಗಿ ಭೈರವನ ಪರಮ ಭಕ್ತನೊಬ್ಬ ಮಾಡಿದ ಸಾಧನೆ ಮತ್ತು ಅವರ ಜನೋಪಯೋಗೀ ಕೆಲಸಗಳಿಂದ ಅದೀಗ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಇದರ ನಿರ್ಮಾತೃ ಇದೇ ಗ್ರಾಮದ ನಿವಾಸಿಯಾಗಿದ್ದ ಶ್ರೀ ತಿಪ್ಪಲೂರು ಪೆದ್ದ ವೆಂಕಟರೆಡ್ಡಿ. ಅವರು ಭೈರವನ ಪರಮಭಕ್ತರಾಗಿದ್ದರು. ಭೈರವನ ಸಾಧಕರು ಪಡೆದ ಫಲಗಳು ಸಾಮಾಜಿಕವಾಗಿ ಮಾತ್ರವಲ್ಲದೆ, ಮೂಕಪಶುಗಳ ನೆರವಿಗೆ ಹೇಗೆ ಒದಗಿ ಬಂದಿತೆನ್ನುವುದನ್ನು ಹೇಳುವ ಉದ್ದೇಶದಿಂದ ಇಲ್ಲಿ ಆ ಬಗ್ಗೆ ಒಂದು ಪ್ರಸ್ತಾಪವಿದೆ. ಭೈರವನ ಬಗ್ಗೆ ಅಪಾರ ಶ್ರದ್ಧೆ ಗೌರವಗಳನ್ನು ಹೊಂದಿದ್ದ ಅವರಿಗೆ ಭೈರವನ ಕೃಪೆಯಾಗಿತ್ತೆಂದು ಇಲ್ಲಿನ ಹಲವು ನಿವಾಸಿಗಳು ನಂಬಿದ್ದಾರೆ. ಅದರಂತೆ ಪೆದ್ದ ವೆಂಕಟರೆಡ್ಡಿಯವರ ಜೀವನದಲ್ಲಿ ನಡೆದ ಅನೇಕ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ. 


ರೆಡ್ಡಿಯವರು ಪಶುವೈದ್ಯವನ್ನು ಅರಿತಿದ್ದರು. ಅವರದು ಆಯುರ್ವೇದ ಪದ್ಧತಿ. ತಮ್ಮ ಗ್ರಾಮದ ಆಸುಪಾಸಿನಲ್ಲಿ ಯಾವುದೇ ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದರೂ, ಅವುಗಳನ್ನು ಸೂಕ್ತವಾಗಿ ಉಪಚರಿಸುತ್ತಿದ್ದರು. ಇದಕ್ಕೆಂದು ಅವರು ಪಡೆಯುತ್ತಿದ್ದ ಸಂಭಾವನೆಯೆಂದರೆ ಒಂದು ತೆಂಗಿನ ಕಾಯಿಯ ಬೆಲೆ ಮಾತ್ರ. ಅದನ್ನೂ ಅವರು ಭೈರವನ ನಿವೇದನೆಗೆಂದೇ ಬಳಸುತ್ತಿದ್ದರು. ತಮ್ಮ ಅಲೌಕಿಕ ಸಾಧನೆಯಿಂದಾಗಿ ಅವರಿಗೆ ಎಲ್ಲ ಪಶುಗಳ ರೋಗಗಳು ತಾನಾಗಿಯೇ ತಿಳಿಯುತ್ತಿತ್ತು. ಅವುಗಳ ವೇದನೆಯನ್ನು ನಿವಾರಿಸಲು ಗಂಟೆಗಟ್ಟಲೆ ಸಾಧನೆ ಮಾಡಿ ಶಕ್ತಿಯನ್ನು ಪಡೆಯುತ್ತಿದ್ದರು. ಅದೆಲ್ಲದರ ಮೂಲ ಶಕ್ತಿ ಭೈರವನೇ ಎಂದು ನಂಬಿದ್ದರು. ಶ್ರೀ ರೆಡ್ಡಿಯವರು ತಮ್ಮ ತೊಂಭತ್ತನೆಯ ವಯಸ್ಸಿನಲ್ಲಿ ತೀರಿಕೊಂಡರು. ಅವರ ಸಮಾಧಿಯನ್ನು ದೇವಾಲಯದ ಸಮೀಪವೇ ನಿರ್ಮಿಸಿ, ಯೋಗಿಗಳು, ಸನ್ಯಾಸಿಗಳಿಗೆ ನಡೆಸುವ ಮರಣೋತ್ತರ ವಿಧಿಗಳನ್ನು ಆಚರಿಸಿ, ಗೌರವ ಸಲ್ಲಿಸಲಾಯಿತು. ಗ್ರಾಮದ ಹೊರವಲಯದಲ್ಲಿ ಕಳೆದ ೨೯ರ ಏಪ್ರಿಲ್‌ನಲ್ಲಿ ಇಲ್ಲಿದ್ದ ಭೈರವನ ಚಿಕ್ಕ ಗುಡಿಯನ್ನು ಪುನರ್ ನಿರ್ಮಾಣಗೊಳಿಸಿ ಲೋಕಾರ್ಪಣೆ ಮಾಡಲಾಯಿತು. 

* * * * * * *