ಶುಕ್ರವಾರ, ಮೇ 31, 2013

ವ್ಯಾಘ್ರ ನಗರಿಯ ಕಪ್ಪು-ಬಿಳಿ ಭೈರವರು




ಭೈರವನೆಂದರೆ ಕಪ್ಪು ಬಣ್ಣದವ ಎಂದು ನಮ್ಮ ನಂಬಿಕೆ. ಇದಕ್ಕೆ ಪೂರಕವಾಗಿ ಆತನನ್ನು ಚಿತ್ರಿಸಿರುವ ಶಿಲ್ಪಗಳೂ ಅದನ್ನೇ ಹೇಳುತ್ತವೆ. ಆದರೆ ವಸ್ತುಸ್ತಿತಿ ಹಾಗಿಲ್ಲ. ಭೈರವನಲ್ಲಿ ಬಿಳಿಯ ಬಣ್ಣದವನೂ ಇದ್ದಾನೆ. ಈ ಕಪ್ಪು-ಬಿಳುಪಿನ ಭೈರವರ ಜೋಡಿ ಕೇವಲ ಬಣ್ಣದ ದೃಷ್ಟಿಯಿಂದ ಬೇರೆ ಬೇರೆಯಾಗಿ ಕಾಣಿಸಿದರೂ, ಮೂಲತಃ ಅವರು ಸೋದರರು. ಸವಾಯ್ ಮಾಧೋಪುರವನ್ನು ವ್ಯಾಘ್ರ ನಗರಿ ಎಂದೂ ಕರೆಯುವರು. ರಾಜಾಸ್ಥಾನದ ರಣಥಂಬೋರ್ ನ ಸಮೀಪದಲ್ಲಿರುವ ಮಾಧೋಪುರದಲ್ಲಿ  ಈ ಭೈರವರ ಆರಾಧನೆಯು ಪ್ರಚಲಿತವಿದೆ. 

ಭೈರವನ ಆರಾಧನೆಯಲ್ಲಿ ತಾಂತ್ರಿಕ ಪೂಜೆಗೆ ಮಹತ್ವವಿದೆ. ಆದರೆ ಬದಲಾಗಿರುವ ಇಂದಿನ ಸನ್ನಿವೇಶದಲ್ಲಿ ಈ ತೆರನ ತಾಂತ್ರಿಕ ಆರಾಧನೆ ಹೆಚ್ಚು-ಕಡಿಮೆ ನಿಂತುಹೋಗಿರುವಂತೆ ಕಂಡರೂ, ರಣಥಂಬೋರ್ ನ ಕಾಲಾ-ಗೋರಾ ಭೈರವ ಮಂದಿರದಲ್ಲಿ ಇಂದಿಗೂ ತಾಂತ್ರಿಕ ವಿಧಾನಗಳಿಂದಲೇ ಪೂಜೆ ನಡೆಯುತ್ತಿರುವುದು ವಿಶೇಷ. ಈ ದೇವಾಲಯದಲ್ಲಿ ಯಾವ ಪೂಜೆ ಸಲ್ಲಿಸಿ, ಏನನ್ನು ಹರಸಿಕೊಂಡರೂ ಅದರಂತೆಯೇ ನಡೆಯುತ್ತದೆ ಎನ್ನುವ ವಿಶ್ವಾಸ ಇಲ್ಲಿನ ಜನರದು.  

ಸಾಧಾರಣವಾಗಿ ದೇವಾಲಯಗಳ ಪ್ರವೇಶ ದ್ವಾರದಲ್ಲಿ ಭೈರವನ ವಿಗ್ರಹಗಳನ್ನು, ಅದರಲ್ಲೂ ಈಶಾನ್ಯ ದಿಕ್ಕಿನಲ್ಲಿ ನಲ್ಲಿ ಆತನನ್ನು ಸ್ಥಾಪಿಸುವುದು ವಾಡಿಕೆ. ಕಾಲಾ-ಗೋರಾ ಭೈರವ ಮಂದಿರದಲ್ಲಿ, ಗರ್ಭಗುಡಿಯ ಮಧ್ಯದಲ್ಲಿ ಶಿವ ಮತ್ತು ದುರ್ಗೆಯರ ವಿಗ್ರಹಗಳಿವೆ. ಸಮೀಪದಲ್ಲೇ ತ್ರಿನೇತ್ರ ಗಣಪತಿ, ಹಾಗೂ ಬಲಭಾಗದಲ್ಲಿ ಕಪ್ಪು - ಬಿಳಿಯ ಭೈರವರ ವಿಗ್ರಹವಿದೆ. ಈ ಎರಡು ವಿಗ್ರಹಗಳನ್ನೂ ಇಲ್ಲಿನ ಜನ ಸಮಾನವಾಗಿ ಆದರಿಸುತ್ತಾರೆ, ಪೂಜಿಸುತ್ತಾರೆ. 

ದೇಶಾದ್ಯಂತದಿಂದ, ಊರಿನ ಅಥವಾ ಕುಟುಂಬದ ಶುಭಕಾರ್ಯಗಳ ಆಹ್ವಾನ ಪತ್ರಿಕೆಯನ್ನು ಇಲ್ಲಿನ ಮಂದಿರದ ಅರ್ಚಕರ ಹೆಸರಿಗೆ ಜನರು ಕಳಿಸುತ್ತಾರೆ. ಅದನ್ನು ಆಯಾ ದಿನಾಂಕದಂದು ಅರ್ಚಕರು ದೇವರ ಸನ್ನಿಧಿಯಲ್ಲಿ ಓದುವರು. ಹೀಗೆ ಮಾಡುವುದರಿಂದ ಆಯಾ ಶುಭಕಾರ್ಯಗಳಿಗೆ ಯಾವುದೇ ವಿಘ್ನ ಬಾರದೇ, ಸುಲಲಿತವಾಗಿ ನಡೆದುಹೋಗುತ್ತದೆ ಎಂದು ಜನರ ಭಾವನೆ. ಹೀಗೆ ಬಂದ  ಆಮಂತ್ರಣ ಪತ್ರಿಕೆಗಳ ರಾಶಿ ರಾಶಿಯೇ ಮಂದಿರದಲ್ಲಿ ತುಂಬಿಹೋಗಿದೆ. ತೀರ ಪುರಾತನವೇನೂ ಅಲ್ಲದ, ಆಧುನಿಕ ರಚನೆಗಳನ್ನು ಒಳಗೊಂಡ ಈ ಮಂದಿರದ ಗೋಡೆಗಳ ಮೇಲೆ, ಜಲವರ್ಣ, ತೈಲವರ್ಣಗಳ ಕೃತಿಗಳನ್ನು ಚಿತ್ರಿಸಲಾಗಿದೆ. ಎರಡು ಗುಡ್ಡಗಳು ಸೇರುವ ಸಂಧಿಸ್ಥಳದಲ್ಲಿರುವ ಈ ಮಂದಿರಕ್ಕೆ ಪ್ರಕೃತಿಯೇ ಸೂಕ್ತ ವಾತಾವರಣವನ್ನು ನಿರ್ಮಿಸಿದೆ. ದೇವಾಲಯದ ಪ್ರವೇಶದ್ವಾರದಲ್ಲಿರುವ ಎರಡು ಬೃಹತ್ ಆನೆಗಳ ಗಾರೆಯ ಶಿಲ್ಪ ಇದಕ್ಕೆ ವಿಶೇಷ ಮೆರುಗು ತಂದಿದೆ.

ಐತಿಹಾಸಿಕವಾಗಿ ಇಲ್ಲೊಂದು ಕಥೆ ಪ್ರಚಲಿತವಿದೆ. ಮುಘಲರ ಆಡಳಿತಕಾಲದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ರಣಥಂಬೋರಿನ ಮೇಲೆ ದಂಡೆತ್ತಿ ಬಂದನು. ಆಗ ರಾಜನಾಗಿದ್ದ ಹಮ್ಮೀರ ದೇವನಿಗೆ ಇಲ್ಲಿ ಕಪ್ರು-ಬಿಳಿಯ ಭೈರವರಲ್ಲಿ ಅಪರಿಮಿತ ನಂಬಿಕೆ. ತಾನು ಈ ಯುದ್ಧದಲ್ಲಿ ಜಯಶಾಲಿಯಾದರೆ ಸರ್ವಸ್ವವನ್ನೂ ಈ ಭೈರವರಿಗೆ ಅರ್ಪಿಸುತ್ತೇನೆಂದು ಸಂಕಲ್ಪಮಾಡಿ ಯುದ್ಧದಲ್ಲಿ ತೊಡಗಿದ. ಆದರೆ ಫಲಿತಾಂಶ ವಿರುದ್ಧವಾಗಿತ್ತು. ಅಲ್ಲಾವುದ್ದೀನನ ಕೈ ಮೇಲಾಗಿ, ಹಮ್ಮೀರದೇವ ಸೋತು ಸೆರೆ ಸಿಕ್ಕುವಂತಾಯಿತು. ಆದರೆ ಅಭಿಮಾನಧನನಾದ ಹಮ್ಮೀರದೇವ ಶತ್ರುಗಳಿಂದ ಹತನಾಗದಂತೆ ತಾನೇ ತನ್ನ ತಲೆಯನ್ನು ಕತ್ತರಿಸಿಕೊಂಡನಂತೆ. ಭೈರವರು ರಾಜನಿಗೆ ನೆರವಾಗಲಿಲ್ಲವೆನ್ನುವುದು ನಗಣ್ಯವಾಗಿ, ಸ್ವಾಭಿಮಾನವೇ ಮುಖ್ಯ ಎಂದು ಸಾರುವ ಜಾನಪದ ಗಾಥೆಯನ್ನು ಈ ಪ್ರದೇಶದ ಜಾನಪದ ಗಾಯಕರು ಇಂದಿಗೂ ಹಾಡುತ್ತಿದ್ದಾರೆ. ಇದು ಆ ರಾಜನಿಗೆ ಸಂದ ಅತಿ ಹೆಚ್ಚಿನ ಗೌರವವೇ ಸರಿ. 


* * * * * * * 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ