ಮಂಗಳವಾರ, ಅಕ್ಟೋಬರ್ 1, 2013

ದೇವತೆಗಳೂ - ಶ್ವಾನ ಸಾಂಗತ್ಯವೂ


ದೇವತೆಗಳೂ - ಶ್ವಾನ ಸಾಂಗತ್ಯವೂ

ಹಿಂದಿನ ಸಂಚಿಕೆಯೊಂದರಲ್ಲಿ ಕಾಲಭೈರವನ ಜತೆಗೆ ನಾಯಿಯ ಸಾಂಗತ್ಯ ಹೇಗೆ ಬಂದಿತು ಎಂದು ಪ್ರಸ್ತಾಪಿಸಿದ್ದೆ. ಈ ವಿಷಯದ ಕುರಿತು ನನ್ನ ಅನ್ವೇಷಣೆ ಬೇರೊಂದೇ ದಿಕ್ಕಿಗೆ ಕರೆದೊಯ್ಯಿತು. ಕಾಲಭೈರವನಲ್ಲದೆ ನಮ್ಮ ಇತರ ದೇವತೆಗಳೂ ಪ್ರಾಣಿಗಳನ್ನು ವಾಹನವನ್ನಾಗಿ ಹೊಂದಿರುವರು. ಅಂಥ ಸಂಗತಿಯ ಬಗ್ಗೆ ಮೂಡಿದ ವಿಚಾರಗಳ ಸಂಗ್ರಹವನ್ನು ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ. 

ಆರಂಭದಲ್ಲಿ ಗಣಪತಿಯನ್ನು ಸ್ಮರಿಸುವುದು ವಾಡಿಕೆ. ಹೀಗಾಗಿ ಗಣಪತಿಯ ವಾಹನ ಮೂಷಕ ಅಥವಾ ಇಲಿ. ಸಕಲ ಜೀವಗಳನ್ನು ಪೋಷಿಸುವ ದೇವತೆಗಳು, ಮನುಷ್ಯ, ಪ್ರಾಣಿ, ಸಸ್ಯವರ್ಗ ಎಂದೆಲ್ಲ ಭೇದ-ಭಾವ ಮಾಡಲಾಗದು. ಭಾರೀ ಕಾಯದ ಗಣೇಶ ಅದು ಹೇಗೆ ಒಂದು ಇಲಿಯನ್ನು ತನ್ನ ವಾಹನವನ್ನಾಗಿಸಿಕೊಳ್ಳಲು ಸಾಧ್ಯ ಎಂದೆಲ್ಲ ತರ್ಕಿಸಲಾಗದು. ಒಂದು ತರ್ಕದಂತೆ ಗಣೇಶನೇ ವಿನೋದದ ಸಂಕೇತವಾಗಿರುವಾಗ ಇಲಿ-ವಾಹನವೂ ಅದರ ಒಂದು ಅಂಗ ಎಂದು ತಿಳಿಯುವುದೇ ಸರಿಯಾದೀತು. ವನ ತಂದೆ ಶಿವ. ಆತನ ವಾಹನ ನಂದಿ. ಶಿವನ ಇನ್ನೋರ್ವ ಮಗ ಸ್ಕಂದ ಅಥವಾ ಷಣ್ಮುಖನ ವಾಹನ ನವಿಲು. ಶಿವನ ಪತ್ನಿಯ ವಾಹನ ಹುಲಿ. ತ್ರಿಮೂರ್ತಿಗಳಲ್ಲಿ ಓರ್ವನಾದ ವಿಷ್ಣುವಿನ ವಾಹನ ಗರುಡ. ಆತನ ಪತ್ನಿಯ ವಾಹನ ಗೂಬೆ. ಬಹಳ ಜನರಿಗೆ ತಿಳಿಯದ ಸಂಗತಿಯಿದು. ಬ್ರಹ್ಮನ ಪತ್ನಿ ಸರಸ್ವತಿ ಹಂಸವಾಹಿನಿ. ಎಲ್ಲರಿಗೂ ಜೀವಕಾರುಣ್ಯ ಮುಖ್ಯವೆನ್ನುವುದಷ್ಟೇ ಸಂದೇಶ.

ಹೀಗೆ ವಿವಿಧ ದೇವತೆಗಳು ಪ್ರಾಣಿಗಳನ್ನು ತಮ್ಮ ವಾಹನ ವನ್ನಾಗಿಸಿಕೊಂಡಿರುವಂತೆ, ಕಾಲಭೈರವನಿಗೆ ನಾಯಿಯ ಸಾಂಗತ್ಯವಿದೆ. ಇದನ್ನೇ ಅವನನ್ನು ಕುರಿತಾದ ಧ್ಯಾನಶ್ಲೋಕದಲ್ಲಿ ಹೀಗೆ ಹೇಳಲಾಗಿದೆ 

ನಗ್ನರೂಪಂ ತ್ರಿನೇತ್ರಂ ಚ ಸರ್ಪಾಭರಣ ಭೂಷಿತಂ |
ರತ್ನಕುಂಡಲ ಸಂಯುಕ್ತಂ ಶಿರೋಮಾಲಾ ವಿಭೂಷಿತಂ  ||
ಖಡ್ಗಂ ಶೂಲಂ ಕಪಾಲಂ ಚ ಡಮರುಂ ಭೀಮ ದಂಷ್ಟ್ರಕಂ |
ಬಿಭ್ರಾಣಂ ಶುನಕಾರೂಢಂ ಕ್ಷೇತ್ರಪಾಲಂ ಅಹಂ ಭಜೇ ||

ಇಲ್ಲಿ ಆತನು ಶುನಕಾರೂಢಂ, ಎಂದರೆ ನಾಯಿಯ ಮೇಲೆ ಕುಳಿತಿರುವವನು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೊಮ್ಮೆ ನಾಯಿಯ ಮೇಲೆ ಕುಳಿತಿರದ ಕಾಲಭೈರವನ ಬಹುತೇಕ ಶಿಲ್ಪಗಳಲ್ಲಿ,  ಕಾಲಭೈರವನು ಹಿಡಿದಿರುವ ರುಂಡದಿಂದ ಹನಿಯುತ್ತಿರುವ ರಕ್ತವನ್ನು ನೆಕ್ಕಲು ಯತ್ನಿಸುತ್ತಿರುವ ನಾಯಿಯೊಂದು ಕಂಡುಬರುತ್ತದೆ.  ನಾಯಿಗಳ ಯೋಗಕ್ಷೇಮ ನೋಡಿಕೊಳ್ಳುವುದು ಕೂಡ ಕಾಲಭೈರವನ ಸೇವೆಮಾಡಿದಂತೆ ಎಂಬ ನಂಬಿಕೆಯಿದೆ. ಕಾಶಿಕ್ಷೇತ್ರದಲ್ಲಿ  ಶ್ರದ್ಧಾಳುಗಳು ವಿಶ್ವನಾಥ ಮಂದಿರದ ಆವರಣದಲ್ಲಿ ತಿರುಗುವ ೧೧ ನಾಯಿಗಳಿಗೆ ಸಿಹಿತಿಂಡಿಗಳನ್ನು ದಿನವೂ ಅರ್ಪಿಸುವ ಪರಿಪಾಠವನ್ನು ಇಂದಿಗೂ ಕಾಣಬಹುದು.  


ಶಿವನ ಇನ್ನೊಂದು ರೂಪ ಖಂಡೋಬಾ. ಈತನ ಪೂಜೆ, ಆರಾಧನೆಗಳು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಚಲಿತವಿದೆ. ಖಂಡೋಬಾನ ವಾಹನ ಕೂಡ ನಾಯಿಯೇ. ಇದೇ ಪ್ರಭಾವಕ್ಕೆ ಒಳಗಾಗಿರುವ ಖಂಡೋಬಾನ ಕೆಲವು ಶಿಲ್ಪಗಳಲ್ಲಿ ಆತನು ಕುದುರೆಯ ಮೇಲೆ ಕುಳಿತಿರುವಂತೆಯೂ ಚಿತ್ರಿಸಲಾಗಿದೆ.  ಇದಕ್ಕೆ ಪೂರಕವಾದ ಒಂದು ವಿಸ್ತೃತ  ಲೇಖನ ಈ ಬ್ಲಾಗಿನ ಸಂಚಿಕೆಯಲ್ಲಿದೆ.   
ಕಾಲಭೈರವನ ಏಕೈಕ ದೊಡ್ಡ ಕ್ಷೇತ್ರವಾದ ಆದಿ ಚುಂಚನಗಿರಿಯಲ್ಲಿ ಹಿಂದಿನ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು, ಭೈರವನೊಂದಿಗಿನ ಶ್ವಾನ ಸಾಂಗತ್ಯವನ್ನು ಚೆನ್ನಾಗಿ ಗಮನಿಸಿದ್ದರು. ಅದನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಎರಡು ಕಪ್ಪು ಬಣ್ಣದ ನಾಯಿಗಳನ್ನು ಬೆಳಸಿ, ಅವುಗಳನ್ನು ಪೂಜಾ ಕೈಂಕರ್ಯ ನಡೆಯುವ ವೇಳೆಗೆ ಭೈರವನ ಸನ್ನಿಧಿಗೆ ಕರೆತಂದು ಅವನೆದುರಿಗೆ ಅವು ನಮಸ್ಕರಿಸುವಂಥ  ವ್ಯವಸ್ಥೆಯನ್ನು ರೂಪಿಸಿದರು. ಇದು ದೇಶದ ಬೇರಾವ ಭೈರವ ದೇಗುಲಗಳಲ್ಲಿ ಕಾಣಲಾಗದ ಅಪರೂಪದ ಆಚರಣೆ.   

ಈಶ್ವರನ ಇತರ ಅವತಾರಗಳಾದ ವೀರಭದ್ರ ಮತ್ತು ರುದ್ರರೊಂದಿಗೆ ಕೂಡ ನಾಯಿಗಳ ಸಾಂಗತ್ಯವಿದೆ. ರುದ್ರಾಧ್ಯಾಯದಲ್ಲಿ ಶಿವನನ್ನು ಸ್ತುತಿಸುವಾಗ ಶ್ವಪತಿ, ಎಂದರೆ ನಾಯಿಗಳ ಒಡೆಯನೆಂದು ಸಂಬೋಧಿಸಲಾಗಿದೆ. ಮಹಾಭಾರತದ ಆರಂಭ ಹಾಗೂ ಅಂತ್ಯದಲ್ಲಿ ನಾಯಿಯ ಪ್ರಸ್ತಾಪವಿದೆ. ಆರಂಭದಲ್ಲಿ ಸುರಮೆಯೆಂಬ ದೇವಲೋಕದ ನಾಯಿಯು ಜನಮೇಜಯನು ಯಜ್ಞ ಮಾಡುತ್ತಿರುವಾಗ ಯಾಗಶಾಲೆಯನ್ನು ಪ್ರವೇಶಿಸಿ ಮಾತನಾಡತೊಡಗಿತು. ಚಕಿತನಾದ ಜನಮೇಜಯನು ಅದರ ಮಾತನ್ನು ಆಲಿಸಿದನು. ನಾಯಿ ಹೇಳಿತು -  "ಹಿಂದೊಮ್ಮೆ ಯಾಗ ನಡೆಯುತ್ತಿರುವಾಗ ನನ್ನ ಮಕ್ಕಳು ಯಾಗ ಮಂಟಪದದ ಬಳಿ ಸುತ್ತಾಡುತ್ತಿದ್ದರು. ಅವರು ಯಾಗ ಪದಾರ್ಥಗಳನ್ನು ಮುಟ್ಟಲಿಲ್ಲ, ಮಲಿನ ಮಾಡಲಿಲ್ಲ. ಆದರೂ ಋತ್ವಿಜರು ಅವುಗಳನ್ನು ಹೊಡೆದೋಡಿಸಿದರು. ಧರ್ಮವಂತನಾದವನು ಎಲ್ಲ ಜೀವಿಗಳನ್ನೂ ಸಮಾನ ದೃಷ್ಟಿಯಿಂದ ನೋಡುವನು. ನೀವು ಹಾಗೆ ಮಾಡಲಿಲ್ಲವಾದ್ದರಿಂದ ನಿಮ್ಮ ಯಾಗವು ಅಪೂರ್ಣವಾಗಲಿ" ಎಂದು ಶಪಿಸಿತು. ಅದೇ ರೀತಿ ಅಂತ್ಯದಲ್ಲಿ ಧರ್ಮರಾಯನು ನಾಯಿಯ ಸಂಗವನ್ನು ತೊರೆಯುವಂತೆ ಹೇಳಿದರೂ, ಅದನ್ನು ಮಾಡಲಿಲ್ಲ. ನಾಯಿಯೊಂದಿಗೇ ಸ್ವರ್ಗಾರೋಹಣ ಮಾಡಿದನು. ಇದರಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಬೇಕೆಂಬ ಸಂದೇಶವಿದೆ.    


ದತ್ತಾತ್ರೇಯನ ಚಿತ್ರಗಳಲ್ಲಿ ನಾಲ್ಕುನಾಯಿಗಳು ಆತನನ್ನು ಸುತ್ತುವರೆದಿರುವುದನ್ನು ಕಾಣಬಹುದು. ಇವು ನಾಲ್ಕುವೇದಗಳಾದ ಋಕ್, ಯಜುರ್, ಅಥರ್ವ ಮತ್ತು ಸಾಮವೇದಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಸತ್ಯದ ಸಂರಕ್ಷಕರೆಂದು ಹೇಳಲಾಗುವ ಈ ನಾಯಿಗಳು ಮನುಷ್ಯನ ಆತ್ಮವನ್ನು ಬೇಟೆಯಾಡುತ್ತವೆ ಎಂದು ತಿಳಿಯಲಾಗಿದೆ. 

ಯಮನ ವಾಹನ ಕೋಣವೆಂದು ಸಾಧಾರಣವಾಗಿ ತಿಳಿದಿದೆ.  ಆತನ ಬಳಿ ಇರುವ ಎರಡು ಭಯಂಕರ ನಾಯಿಗಳು ನರಮಾನವರ  ನಡುವೆ ತಿರುಗುತ್ತ, ಯಮನ ಸಂದೇಶವಾಹಕರಾಗಿ ಕೆಲಸ ಮಾಡುತ್ತವೆ ಮತ್ತು ಯಮಪುರಿಯ ರಸ್ತೆಯನ್ನು ಅವು ಕಾಯುತ್ತವೆ  ಎಂಬ ನಂಬಿಕೆಯಿದೆ

* * * * * * * 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ