ಶುಕ್ರವಾರ, ಜೂನ್ 1, 2012






ಕಾಲ ಕಾಲಂ...................


ಹಿಂದೆಲ್ಲ ಭೌತವಸ್ತುಗಳ ಪರಿಮಾಣಗಳನ್ನು ಹೇಳುವಾಗ ಮೂರು ಆಯಾಮಗಳನ್ನು ಮಾತ್ರ ಪರಿಗಣಿಸುತ್ತಿದ್ದರು. ಆಲ್ಬರ್ಟ್ ಐನ್ಸ್‌ಟೈನ್ ಅದಕ್ಕೆ ನಾಲ್ಕು ಆಯಾಮಗಳಿವೆ ಎಂದು ನಿರೂಪಿಸಿದರು. ಈ ನಾಲ್ಕನೇ ಆಯಾಮವೇ ಕಾಲ. ಈ ವಿಷಯದಲ್ಲಿ ಸಿದ್ಧರು ಇನ್ನೂ ಹೆಚ್ಚಿನ ಕೆಲಸಮಾಡಿದ್ದರು. ಅವರ ಅಧ್ಯಯನಗಳಲ್ಲಿ ಬೇರೆ ಬೇರೆ ಗ್ರಹಗಳಿಗೆ ಬೇರೆ ಬೇರೆ ಸಮಯದ ಅನ್ವಯವಿದೆಯೆಂದು ಅವರು ಅರಿತಿದ್ದರು. ಕಾಲದ ಚಲನೆಯು ಭೂಮಿಯ ಮೇಲೆ ನಿಧಾನ, ಆದರೆ ಇತರ ಗ್ರಹಗಳಲ್ಲಿ ಅದರ ವೇಗ ಹೆಚ್ಚು. ಕಾಲವು ಅಮೂರ್ತವಾಗಿರಬಹುದು. ಆದರೆ ಅದನ್ನು ಸೇರಿಸಿ ಲೆಕ್ಕಹಾಕುವುದರಿಂದ ವಸ್ತುವಿನ ಬಳಕೆ, ತಾಳಿಕೆಗಳ ಬಗ್ಗೆ ಅದರ ಅಸ್ತಿತ್ವವನ್ನು ನಿರ್ಧರಿಸಬಹುದು. ಆಧ್ಯಾತ್ಮದ ಅಧ್ಯಯನದಲ್ಲಿ ಭೌತಶಾಸ್ತ್ರದ ತತ್ವಗಳನ್ನೂ ಗ್ರಹಿಸಬೇಕಾಗುತ್ತದೆ. ಅಮೂರ್ತ ಅಸ್ತಿತ್ವಗಳಾದ ಗಾಳಿ, ವಾಸನೆಗಳಂಥವುಗಳ ಬಗ್ಗೆ ಅವು ಅಮೂರ್ತವೆನ್ನುವ ಕಾರಣಕ್ಕೆ ಅವುಗಳ ಅಸ್ತಿತ್ವವನ್ನು ಅಲ್ಲಗಳೆಯಲಾಗದು. ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಮೇಲಿಂದ ಮೇಲೆ ಪ್ರಸ್ತಾಪವಾಗುವ ಅಗ್ನಿ, ವಾಯು, ಜಲ, ಪೃಥಿವಿ ಮತ್ತು ತೇಜಸ್‌ಗಳನ್ನು ಸಂಕ್ಷಿಪ್ತವಾಗಿ ಪಂಚಭೂತಗಳೆಂದು ಹೆಸರಿಸುತ್ತೇವೆ. ಇವೆಲ್ಲಕ್ಕೂ ಅಭಿಮಾನಿ ದೇವತೆಗಳು, ಪ್ರತ್ಯಧಿದೇವತೆಗಳನ್ನೂ ಕಲ್ಪಿಸಲಾಗಿದೆ. ಇವೆಲ್ಲಕ್ಕೂ ಹೊರತಾದ ಕಾಲಕ್ಕೂ ಓರ್ವ ಅಭಿಮಾನಿ ದೇವತೆಯಿದ್ದಾನೆ. ಆತನೇ ಕಾಲಭೈರವ. ಇವೆಲ್ಲವನ್ನೂ ಸರಿತೂಗಿಸಿಕೊಂಡು ನಡೆಸುವಾತನೇ ಕಾಲಭೈರವನೆನ್ನುವುದು ಸಿದ್ಧರ ಮತ. 

ಕಾಲಭೈರವನ ಭೌತಿಕ ಸ್ವರೂಪಗಳನ್ನು ಕುರಿತಂತೆ ಹಿಂದಿನ ಲೇಖನಗಳಲ್ಲಿ ಅನೇಕ ಶ್ಲೋಕಗಳು, ಸ್ತುತಿಗಳನ್ನು ನೀಡಲಾಗಿದೆ. ಈ ಲೇಖನದಲ್ಲಿ, ಕಾಲವೆಂಬ ಅಮೂರ್ತಕ್ಕೆ ರೂಪ ನೀಡಿ ಅದನ್ನು ಹೇಗೆ ಸಮರ್ಥವಾಗಿ, ಅರ್ಥಪೂರ್ಣವಾಗಿ ಬಳಸಲಾಗಿದೆ ಎಂಬ ಬಗ್ಗೆ ವಿವರಗಳಿವೆ. ಸಮಯ ಪರಿಪಾಲನೆಯ ಅಗತ್ಯ ಮತ್ತು ಮಹತ್ವಗಳನ್ನು ನಾವೆಲ್ಲರೂ ಚೆನ್ನಾಗಿ ತಿಳಿದಿದ್ದೇವೆ. ಸಮಯದ ಸದುಪಯೋಗ ಮತ್ತು ದುರುಪಯೋಗಗಳು ನಮ್ಮೆಲ್ಲರ ಅನುಭವದಲ್ಲಿದೆ. ಕಾಲಭೈರವನ ಜನನ ವೃತ್ತಾಂತದಲ್ಲಿ ತಿಳಿದುಬರುವಂತೆ, ಬ್ರಹ್ಮನ ಅಹಂಕಾರವನ್ನು ಅಡಗಿಸಲೆಂದು ಆತನ ಆವಿರ್ಭಾವವಾಯಿತಲ್ಲವೆ. ಇದೇ ಕಾಲಭೈರವನು ಮುಂದೆ ಬ್ರಹ್ಮಹತ್ಯಾ ದೋಷದ ನಿವೃತ್ತಿಗೆಂದು ಎಲ್ಲೆಡೆ ಅಲೆದಾಡಿ, ಕಾಶಿಯ ಕಪಾಲಮೋಚನ ಕ್ಷೇತ್ರದಲ್ಲಿ ಅದರಿಂದ ವಿಮುಕ್ತಿ ಪಡೆದನು. ಇಲ್ಲಿ ಗಮನಿಸಬಹುದಾದ ತಾತ್ವಿಕ ಅಂಶವೆಂದರೆ, ಒಳ್ಳೆಯ ಕಾಲ ಅಥವಾ ಕೆಟ್ಟ ಕಾಲಗಳ ಪ್ರಭಾವವು ಮಾನವರಂತೆಯೆ ದೇವರನ್ನೂ ಬಿಟ್ಟದ್ದಲ್ಲ. ವಿವೇಚನೆಯು ಒಂದೆಡೆ ಕೆಲಸಮಾಡಿದರೂ, ಆ ಸಮಯದಲ್ಲಿ ಹಾರಿಹೋಗುವ ವಿವೇಚನಾ ರಹಿತ ವರ್ತನೆಯ ಪ್ರಭಾವಗಳನ್ನು ಈ ಕತೆಯಲ್ಲಿ ಸಂಕೇತಿಕವಾಗಿ ನಿರೂಪಿಸಲಾಗಿದೆ.

ಕಾಲ ಕಾಲಂ ಅಂಬುಜಾಕ್ಷಂ ಎಂಬ  ಪ್ರಯೋಗವು ಶ್ರೀ ಶಂಕರಾಚಾರ್ಯರ ಕಾಲಭೈರವಾಷ್ಟಕದಲ್ಲಿ ಇದೆ. ಆದರೆ ಇಲ್ಲಿನ ಕಾಲನು ಸಮಯವಲ್ಲ, ಬದಲಾಗಿ ಕಾಲ ಅಥವಾ ಮೃತ್ಯು. ಇನ್ನೊಂದು ರೀತಿಯಲ್ಲಿ ಇದಕ್ಕೊಂದು ವಿಶೇಷ ಅರ್ಥವೂ ಇದೆ. ಮೃತ್ಯು ಸಂಭವಿಸಿದ ನಂತರ ವ್ಯಕ್ತಿ/ಜೀವಿಯ ಬಾಹ್ಯ ಅಸ್ತಿತ್ವ ನಷ್ಟಗೊಳ್ಳುತ್ತದೆ. ಅದು ವರ್ತಮಾನ ಕಾಲದಲ್ಲಿ ಕಾಣಿಸದು. ಭೂತಕಾಲಕ್ಕೆ ಸರಿಯುತ್ತದೆ. ಸಮಯದ ವಿವಿಧ ಆಯಾಮಗಳನ್ನು ಕನ್ನಡದ ಪ್ರೇಮಕವಿ ಕೆ.ಎಸ್. ನರಸಿಂಹ ಸ್ವಾಮಿಯವರು ತಮ್ಮ ಗಡಿಯಾರದ ಅಂಗಡಿಯಲ್ಲಿ ಎಂಬ ಕವಿತೆಯಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಅಲ್ಲಿನ ಒಳನೋಟವು ಕಾಲಭೈರವನೆಂಬ ಸಮಯದ ಅಧಿದೇವತೆಯನ್ನು ಕಾಣಿಸಲು ಸಹಾಯಕವಾಗಿದೆ.

ಭೈರವನ ಕುರಿತಾದ ಸಾಹಿತ್ಯವನ್ನು ಓದಿದವರಿಗೆ ಆತನ ಎಂಟು ರೂಪಗಳ ಪರಿಚಯವಿರುತ್ತದೆ. ಅವೆಂದರೆ, ೧. ಅಸಿತಾಂಗ ಭೈರವ, ೨. ರುರು ಭೈರವ, ೩. ಚಂಡ ಭೈರವ, ೪. ಕ್ರೋಧ ಭೈರವ, ಉನ್ಮತ್ತ ಭೈರವ, ೫. ಕಪಾಲ ಭೈರವ, ೬. ಭೀಷಣ ಭೈರವ ಮತ್ತು ೮. ಸಂಹಾರ ಭೈರವ. ಈ ಹೆಸರುಗಳನ್ನು ಓದುವಾಗ, ಮೇಲ್ನೋಟಕ್ಕೆ ಅವು ಭಯಾನಕತೆಯ ಇನ್ನೊಂದು ರೂಪದಂತೆ ಕಾಣುತ್ತದೆಯಾದರೂ, ಇವೆಲ್ಲವೂ ಯಾವನೇ ಮನುಷ್ಯ ತಳೆಯಬಹುದಾದ ರೂಪಗಳೇ ಸರಿ. ಅವನ ವರ್ತನೆಯೂ ಹಾಗಿದ್ದೀತು.  ಆದರೆ ಅವುಗಳಲ್ಲಿ ತಾತ್ವಿಕ ಅಂಶಗಳಿವೆ. ಆ ದೃಷ್ಟಿಯಲ್ಲಿ ಕಾಣುವ ಅಂಶಗಳ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ. ಮುಂದೆ ಪ್ರತಿಯೊಂದು ರೂಪಕ್ಕೆ ೮ ರೂಪಗಳಂತೆ ಒಟ್ಟು ೬೪ ರೂಪಗಳಿವೆ. ಈ ಅರವತ್ನಾಲ್ಕು ರೂಪಗಳನ್ನು ಆದಿಚುಂಚನಗಿರಿಯ ಶ್ರೀ ಕಾಲಭೈರವ ಮಂದಿರದಲ್ಲಿ ಸುಂದರವಾಗಿ, ಅವುಗಳ ಹೆಸರುಗಳ ಹೆಸರುಗಳ ಸಹಿತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಅದರ ಕೆಲವು ಚಿತ್ರಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ. 

೧. ಅಸಿತಾಂಗ ಭೈರವ - ಸೃಷ್ಟಿ ಸಾಮರ್ಥ್ಯವನ್ನು ನೀಡಬಲ್ಲವ



೨.ರುರು ಭೈರವ - ಗುರು ಸ್ವರೂಪನಾದವನು



೩. ಚಂಡಭೈರವ - ಸ್ಪರ್ಧೆಗಳು ಮತ್ತು ಪ್ರತಿಸ್ಪರ್ಧಿಗಳನ್ನು ಗೆಲ್ಲುವ ಸತ್ವವನ್ನು   ನೀಡುವವನು


೪. ಕ್ರೋಧ ಭೈರವ - ಬೃಹತ್ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಣೆ ನೀಡುವವನು


೫. ಉನ್ಮತ್ತ ಭೈರವ - ಋಣಾತ್ಮಕ ಅಹಂಕಾರ ಮತ್ತು ವಿನಾಶಕರ ಸ್ವಪ್ರಶಂಸೆಗಳನ್ನು ಹತ್ತಿಕ್ಕುವವನು


೬. ಕಪಾಲ ಭೈರವ - ಎಲ್ಲ ಅಪ್ರಯೋಜಕವಾದ ಕಾರ್ಯಗಳಿಗೆ ಅಂತ್ಯ ಹಾಡುವವನು


೭. ಭೀಷಣ ಭೈರವ - ದುಷ್ಟ ಶಕ್ತಿಗಳು ಮತ್ತು ಋಣಾತ್ಮಕ ಭಾವಗಳಿಂದ ಮುಕ್ತಿ ನೀಡುವವನು


8. ಸಂಹಾರ ಭೈರವ - ಪುರಾತನ ಕರ್ಮಭಾರಗಳ ಪರಿಹಾರಕ.


* * * * * * * 

ಮಂಗಳವಾರ, ಮೇ 1, 2012

ಶ್ರೀ ಕಾಲಭೈರವ ಪಂಚರತ್ನ ಸ್ತೋತ್ರಮ್






ಶ್ರೀ ಶಂಕರಾಚಾರ್ಯ ಕೃತ ಕಾಲಭೈರವಾಷ್ಠಕವು ಅತ್ಯಂತ ಜನಪ್ರಿಯವಾಗಿದೆ. ಅದೇ ರೀತಿ ಇಲ್ಲೊಂದು ಅಪರೂಪದ ಪಂಚರತ್ನ ಸ್ತೋತ್ರವೂ ದೊರಕಿದೆ. ಚಿಕ್ಕದಾಗಿದ್ದು, ಅರ್ಥಪೂರ್ಣವಾಗಿರುವ ಈ ಪಂಚರತ್ನ ಸ್ತೋತ್ರವು ಪ್ರತಿದಿನ ಪಠಿಸಲು ಸುಲಭವಾಗಿದೆ. ಆಸಕ್ತರು ಇದರ ಪ್ರಯೋಜನ ಪಡೆಯಲೆಂದು ಆಶಯ.



ಶ್ರೀ ಕಾಲಭೈರವ ಪಂಚರತ್ನ ಸ್ತೋತ್ರಮ್


            ೧. ಖಡ್ಗಂ ಕಪಾಲಂ ಡಮರುಂ ತ್ರಿಶೂಲಂ |
                ಹಸ್ತಂಭುಜೇ ಸಂತತಂ ತ್ರಿನೇತ್ರಂ ||
                ದಿಗಂಬರಂ ಭಸ್ಮ ವಿಭೂಷಿತಾಂಗಂ |
                ನಮಾಮ್ಯಹಂ ಭೈರವಂ ಇಂದುಚೂಡಮ್ ||

೨. ಕವಿತ್ವದಂ ಸತ್ ವರಮೇವ ಮೂಢಾನ್ |
ನತಾಲ್ಯೈ ಶಂಭು ಮನೋಭಿರಾಮಮ್ ||
ನಮಾಮಿ ಯಾಸೀಕೃತ ಸಾರಮೇಯಮ್ |
ನಮಾಮ್ಯಹಂ ಭೈರವಂ ಇಂದುಚೂಡಮ್ ||

             ೩. ಜರಾದಿ ದುಃಖೌಘ ವಿಭೇದ ದಕ್ಷಮ್ |
               ವಿರಾಗಿ ಸಂಸೇವ್ಯ ಪಾದಾರಾವಿಂದಂ ||
               ನರಪತಿಪಥ್ವಾ ಪ್ರಥಮಾಸುನಾಂದ್ರೇ |
               ನಮಾಮ್ಯಹಂ ಭೈರವಂ ಇಂದುಚೂಡಮ್ ||

೪. ಸಮಾಧಿ ಸಂಪತ್ ಪ್ರಥಮಾನ ತೇಭ್ಯೋ |
ರಮಾತ್ವದ್ ಯಾಚಿತ ಪಾದಪಾದಮ್ ||
ಸಮಾಧಿನಿಷ್ಠೋ ಸ್ತರಸಾಧಿಗಮ್ಯಮ್ |
ನಮಾಮ್ಯಹಂ ಭೈರವಂ ಇಂದುಚೂಡಮ್ ||

               ೫. ಗ್ರಾಮಗಮ್ಯಂ ಮನಸಾಭಿದೂರಮ್ |
               ಚರಾಚರಸ್ಯ ಪ್ರಭವಾತಿ ಹೇತುಮ್ ||
               ಕರಾದಿಶೂನ್ಯ ಮಾತಾಭಿರಮ್ಯಮ್ |
               ನಮಾಮ್ಯಹಂ ಭೈರವಂ ಇಂದುಚೂಡಮ್ ||

* * * * * * * 

ಭಾನುವಾರ, ಏಪ್ರಿಲ್ 1, 2012

ಭೈರವ : ಒಂದು ಐತಿಹಾಸಿಕ ಅಧ್ಯಯನ


ಅಧ್ಯಯನದ ಆಸಕ್ತಿಯು ಅಧ್ಯಯನ ಮಾಡುವವನನ್ನು ಎಲ್ಲೆಲ್ಲಿಗೆ ಕೊಂಡೊಯ್ಯುತ್ತದೆ ಎಂದು ನೆನೆದರೆ ಆಶ್ಚರ್ಯವಾಗುತ್ತದೆ. ಅದಕ್ಕೆ ಬೇಕಾಗಿರುವ ಸಾಹಿತ್ಯ, ಚಿತ್ರಗಳು, ಸಂದರ್ಭಗಳು ನಮಗರಿವಿಲ್ಲದಂತೆ ನಮ್ಮೆದುರು ಬರುತ್ತವೆ. ಅದನ್ನು ಆ ಸಮಯಕ್ಕೆ ಸರಿಯಾಗಿ ಗ್ರಹಿಸಿ, ಉಳಿಸಿಕೊಂಡರೆ ಉಪಯುಕ್ತವಾಗುತ್ತವೆ. ಇಂಥ ಅನುಭವಗಳು ನಿಮ್ಮದೂ ಆಗಿರಬಹುದು. 

ಈ ಮೊದಲು ಪ್ರಸ್ತಾಪಿಸಿದಂತೆ, ಭೈರವನ ಕುರಿತಾದ ನನ್ನ ಅಧ್ಯಯನಕ್ಕೆ ಆತನ ಬಗೆಗಿನ ಭಕ್ತಿ ಮಾತ್ರ ಕಾರಣವಾಗಲಿಲ್ಲ. ಶೈವ ಭಕ್ತಿ ಪರಂಪರೆ ಪುರಾತನವಾದುದು. ಅದರಲ್ಲಿ ಶಿವನ ಈ ರೂಪವು ನಂತರ ಬಂದು ಸೇರಿಕೊಂಡಿತು. ಹೀಗಾಗಿ ಇದಕ್ಕೆ ತಕ್ಕ ಐತಿಹಾಸಿಕ, ಪೌರಾಣಿಕ ಮಹತ್ವಗಳು ಇದೆಯೆಂದು ತರ್ಕಿಸಲು ಅವಕಾಶವಿದೆ. ಐತಿಹಾಸಿಕವಾಗಿಯೂ ಭೈರವನ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆಯೆನ್ನುವುದು, ನನ್ನ ಪಯಣದಲ್ಲಿ ತಿಳಿಯತೊಡಗಿತು. ಹೀಗಾಗಿ ಭೈರವನ ಬಗ್ಗೆ ನನ್ನ ಗಮನಕ್ಕೆ ಬಂದ ಲೇಖನಗಳು, ಚಿತ್ರಗಳು, ಮಾಹಿತಿಗಳು, ಶ್ಲೋಕಗಳು, ಅಷ್ಟಕಗಳು, ಸಹಸ್ರನಾಮಗಳು, ಆತನ ದೇವಾಲಯಗಳ ವಿವರಗಳು ಮುಂತಾದ ಸಾಹಿತ್ಯವನ್ನು ಸಂಗ್ರಹಿಸುತ್ತ ನಡೆಯುತ್ತಿರುವೆ. ಅದರಲ್ಲಿ ಇತಿಹಾಸಕಾರರು, ಸಂಶೋಧಕರು ಈ ದೇವನನ್ನು ಒಂದು ಹೊಸ ಪಂಥದ ಕೇಂದ್ರವನ್ನಾಗಿ ನಡೆಸಿದ ಅಧ್ಯಯನಗಳ ಓದು ಆಕರ್ಷಿಸುವಂತಿದೆ. ಭೈರವನ ಕುರಿತಾದ ಐತಿಹಾಸಿಕ ಮಗ್ಗುಲುಗಳನ್ನು ನೋಡುತ್ತ ಹೋದಾಗ ಇತ್ತೀಚೆಗೆ ಒರಿಸ್ಸಾದ ಇತಿಹಾಸಜ್ಞ ಡಾ. ಶಶಾಂಕ ಪಾಂಡೆಯವರ ಲೇಖನ ಮನಸೆಳೆಯಿತು. 

ಇತಿಹಾಸಜ್ಞರು ಶಿಲ್ಪಗಳನ್ನು, ದೇವಾಲಯಗಳನ್ನು ಅಧ್ಯಯನ ಮಾಡುವ, ಅರ್ಥಮಾಡಿಕೊಳ್ಳುವ, ತರ್ಕಿಸುವ ಕ್ರಮಗಳು ವಿಶಿಷ್ಟವಾಗಿರುತ್ತವೆ. ದೊರೆತ ಸಾಕ್ಷ್ಯಾಧಾರಗಳ ಜತೆಗೆ ತಮ್ಮ ತರ್ಕ, ಊಹೆಗಳನ್ನು ಹದವಾಗಿ ಬೆರೆಸಿ ನಿರ್ಣಯಕ್ಕೆ ಬರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಅದು ನಿಜವೇ ಆಗಿರುತ್ತದೆ. ಒಂದೊಮ್ಮೆ ವಿವಾದಗಳು ಉದ್ಭವಿಸಿದರೆ, ಚರ್ಚೆಗಳಾಗುತ್ತವೆ. ನಂತರ ತೀರ್ಮಾನಗಳಾಗುತ್ತವೆ. ಇದು ಸಾಧಾರಣವಾಗಿ ಇತಿಹಾಸಜ್ಞರು ಅನುಸರಿಸುವ ಕ್ರಮ. ಈ ಎಲ್ಲ ವಿಧಾನಗಳು ಡಾ. ಪಾಂಡಾರ ಲೇಖನದಲ್ಲಿ ಎದ್ದು ಕಾಣುತ್ತವೆ.

ನಮ್ಮ ಪ್ರವಾಸಕಾಲದಲ್ಲಿ ಅನೇಕ ಪುರಾತನ ಸ್ಮಾರಕಗಳನ್ನು, ದೇವಾಲಯಗಳನ್ನು ನಾವು ಸಂದರ್ಶಿಸುತ್ತೇವೆ. ಇತಿಹಾಸ ತಜ್ಞರ ಕಾರ್ಯವಿಧಾನದ ಪರಿಚಯವಿದ್ದು, ಅವರ ದೃಷ್ಟಿಕೋನದಿಂದ ಸ್ವಲ್ಪವಾದರೂ ಊಹಿಸುವ, ಕಲೆಹಾಕಿದ ಮಾಹಿತಿಗಳನ್ನು ವಿಶ್ಲೇಷಿಸುವ ಯತ್ನಮಾಡುವಂತಾದರೆ, ನಮ್ಮ ಪ್ರವಾಸಕ್ಕೆ ಹೊಸತೊಂದು ಆಯಾಮ ದೊರೆತಂತಾಗುತ್ತದೆ. ಇಂಥ ದೃಷ್ಟಿಯಿಂದ ಡಾ. ಪಾಂಡಾರ ಪ್ರಬಂಧವೊಂದರ ಸಂಕ್ಷಿಪ್ತ ಸಂಗ್ರಹಾನುವಾದವನ್ನು ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ. 

ಒರಿಸ್ಸಾದ ಮಹಾನದಿ ಕಣಿವೆಯಲ್ಲಿ 
ಭೈರವನ ಆರಾಧನೆ

 ಸುವರ್ಣಪುರ ಭೈರವ 

ಕ್ರಿ.ಶ. ೪-೫ ನೇ ಶತಮಾನದಲ್ಲಿ ನಳರು ಒರಿಸ್ಸಾದ ನೈಋತ್ಯ ಭಾಗದಲ್ಲಿ ಪ್ರಬಲವಾಗಿದ್ದವರು. ಇವರ ಪೈಕಿ ಪಾಂಡುವಂಶೀಯನಾದ ಮಹಾಶಿವಗುಪ್ತ ಬಾಲಾರ್ಜುನನು ಪರಮ ಶಿವಭಕ್ತನಾಗಿದ್ದನು. ೫೮ ವರ್ಷಗಳ ದೀರ್ಘ ಆಳ್ವಿಕೆ ನಡೆಸಿದ ಈತನ ಸೇನಾಧಿಪತಿಯಾಗಿದ್ದ ದುರ್ಗರಕ್ಷಿತನು ಗುಡಶರ್ಕರಕವೆಂಬ ಗ್ರಾಮವನ್ನು ಶಿವಾಲಯಕ್ಕೆ ದತ್ತಿಯಾಗಿ ನೀಡಿದನು. ಇದಲ್ಲದೆ ಕೊಡಸೀಮಾ ಎಂಬ ಗ್ರಾಮವನ್ನು ಶಿವಭಕ್ತನಾಗಿದ್ದ ಸದಾಶಿವಾಚಾರ್ಯನಿಗೆ ನೀಡಿದ್ದನು. ೮ನೇ ಶತಮಾನದಲ್ಲಿ ಮಧ್ಯಭಾಗದಲ್ಲಿದ್ದ ಮಹಾ ಶಿವಭಕ್ತ ಬಾಲಾರ್ಜುನನ  ಕಾಲಕ್ಕೆ ಒರಿಸ್ಸಾದ ಮಹಾನದಿ ಕಣಿವೆಯಲ್ಲಿ ಭೈರವನ ಆರಾಧನೆ ಪ್ರಚಲಿತವಾಗಿತ್ತು. ಅವರ ಮುಂದಿನ ಸೋಮವಂಶೀಯ ಪೀಳಿಗೆಯವರು ಸುವರ್ಣಪುರದಿಂದ ೯ನೇ ಶತಮಾನದ ಮಧ್ಯಭಾಗದಲ್ಲಿ ಶ್ರೀಪುರದಲ್ಲಿ ನೆಲೆಸಿದರು. ಅಲ್ಲಿದ್ದ ರಣಭಂಜನನ್ನು ಓಡಿಸಿ, ಮಹಾಭವಗುಪ್ತ ಜನಮೇಜಯನೆಂಬುವನು ಕ್ರಿ.ಶ. ೮೫೦ರಲ್ಲಿ ನೆಲೆನಿಂತನು. ಇವನ ಕಾಲದಲ್ಲಿ ಮತ್ತಮಯೂರ ಎಂಬುವವನು ಶೈವಪಂಥದ ಗುರುವಾಗಿದ್ದ ಆಚಾರ್ಯ ಗಗನಶಿವನೆಂಬ ಮುನಿಯ ಗೌರವಾರ್ಥ ಇಂದಿನ ರಾಣಿಪುರದ ಜರಿಯಾಲ್‌ನಲ್ಲಿ ಶಿವಾಲಯವನ್ನು ಕಟ್ಟಿಸಿದನು. ಶತ್ರು ಭಂಜನದೇವ ಮತ್ತು ರಣಭಂಜದೇವ ಇವುರು ನೀಡಿರುವ ದತ್ತಿಯ ತಾಮ್ರಶಾಸನದಲ್ಲಿ ಭೈರವನ ಆರಾಧನೆಯ ಬಗ್ಗೆ ಹೀಗೆ ಬರೆಯಲಾಗಿದೆ.

              ಸಂಹಾರಕಾರ ಹೃತಭುಗ್ವಿಕರಾಳಘೋರ | 
              ಸಂಹ್ರಾಂತಕಿಂಕರ ಕೃತಾಂತ ನಿತಾಂತವಿನ್ನಂ ||
             ವಿನ್ನಾಂಧಕಾಸುರ ಮಹಾಗಹನತಾ ಪತ್ರಂ | 
             ತತ್ ಭೈರವಂ ಹರವಪುರ್ಬಹುತಃ ಪ್ರಪತ್ತು ||

ಇದರಿಂದ ಭಂಜನರಾಜರು ಭೈರವ ಪಂಥವನ್ನು ಮಹಾನದಿಯ ಮೇಲ್ಕಣಿವೆಯಲ್ಲಿ  ಕ್ರಿ.ಶ. ೮-೯ನೇ ಶತಮಾನದಿಂದ ಜನಪ್ರಿಯಗೊಳಿಸಿದರೆಂದು ತಿಳಿಯುತ್ತದೆ.

ಶಿಲಾಶಾಸನಗಳಿಂದ ತಿಳಿದುಬರುವಂತೆ ಮಹಾನದಿ ಕಣಿವೆಯಲ್ಲಿ ಕ್ರಿ.ಶ. ೧ನೇ ಶತಮಾನದಿಂದಲೂ ಭೈರವನ ಆರಾಧನೆಯು ನಡೆಯುತ್ತಿದ್ದ ಕುರುಹುಗಳಿವೆ. ೧೯೮೩ರಲ್ಲಿ ಬೆಳಕಿಗೆ ಬಂದ ಜುನಾಗಢದ ಬಂಕಾಪೈಕ್‌ಪಾದ ಎಂಬಲ್ಲಿ  ದೊರೆತ ಒಂದು ಬೈರವನ ವಿಗ್ರಹದ ಪದತಲದಲ್ಲಿ ೨ ಸಾಲುಗಳ ಶಾಸನವಿದೆ.  ಇದು ಪ್ರಾಕೃತ ಭಾಷೆಯಲ್ಲಿದ್ದು ಮುರಿದ ಭೈರವನ ಪೀಠದ ಕೆಳಗೆ "ರ" ಎಂಬ ಅಕ್ಷರವಿದೆ. ಇಂಥ "ರ" ಅಕ್ಷರವು ೪ ರಿಂದ ೮ ನೇ ಶತಮಾನದಲ್ಲಿ ಬಳಕೆಯಾಗುತ್ತಿತ್ತು. ಕಾಲಹಂದಿ ಜಿಲ್ಲೆಯ ಮೋಹನಗಿರಿ ಎಂಬ ಊರಿನಲ್ಲಿರುವ ಧವಳೇಶ್ವರ ಶಿವಮಂದಿರದಲ್ಲಿ "ವ್ಯೂಹ ಭೈರವ" ನ ವಿಗ್ರಹವು ದೊರೆತಿದ್ದು, ಇದು ಕೂಡ ೮ನೇ ಶತಮಾನಕ್ಕೆ ಸೇರಿದ್ದೆಂದು ಇತಿಹಾಸಜ್ಞ ಎಸ್. ಎನ್. ರಾಜಗುರು ಗುರುತಿಸಿದ್ದಾರೆ. ಇದೇ ದೇವಾಲಯದ ಗರ್ಭಗೃಹದ ಹೊರಬಾಗಿಲಿನಲ್ಲಿ  ನರ್ತಿಸುತ್ತಿರುವ ಭೈರವರ ದ್ವಾರಪಾಲಕ ವಿಗ್ರಹವಿದೆ. ಬಲ ಭಾಗದಲ್ಲಿ ದೊಡ್ಡ ದಂಡವನ್ನು ಹಿಡಿದಿರುವ ಶೈವ ಸನ್ಯಾಸಿಯು ಸಮಭಂಗಿಯಲ್ಲಿ ನಿಂತಿರುವ ವಿಗ್ರಹವಿದೆ. ಪಾಶುಪತ ಪಂಥದ ಗುರುವಾದ ಲಕುಲೀಶನು ತನ್ನ ಶಿಷ್ಯರೊಂದಿಗೆ ಇರುವ ತೋರಣ ಶಿಲ್ಪವಿದ್ದು, ಆ ಕಾಲದಲ್ಲಿ ಕಾಪಾಲಿಕರ ಪ್ರಾಬಲ್ಯವಿದ್ದುದನ್ನು ಸೂಚಿಸುತ್ತದೆ. ರಣಭಂಜನದೇವನ ತಾಮ್ರ ಶಾಸನದಲ್ಲಿ ಆತನು ಭೈರವನ ಕೃಪೆಗೆ ಪಾತ್ರನಾಗಿದ್ದಂತೆಯೇ, ಸ್ತಂಭೇಶ್ವರಿಯ ಕೃಪೆಗೂ (ಸ್ತಂಭೇಶ್ವರಿ ಲಬ್ಧ ವರ ಪ್ರಸಾದ) ಪಾತ್ರನಾಗಿದ್ದನೆಂದು ತಿಳಿಸಲಾಗಿದೆ. ಭೈರವನ ಆರಾಧನೆಯ ಜತೆಗೆ ಸ್ತಂಭೇಶ್ವರಿಯ ಆರಾಧನೆಯೂ ಆ ಕಾಲದಲ್ಲಿ ಪ್ರಚಲಿತವಿತ್ತೆನ್ನಲು ಪರ್ವತವರ್ಧಕ ವಂಶಜನಾದ ತುಷ್ಠಿಕರ ಮಹಾರಾಜನ ತಾಮ್ರಶಾಸನಗಳನ್ನು ಗ್ರಹಿಸಬಹುದು. 

ಸ್ವರ್ಣಾಕರ್ಷಣ ಭೈರವ
ಜುನಾಗಡ್‌ನಲ್ಲಿ ಮೇಲೆ ಹೇಳಿದ ವಿಗ್ರಹಗಳಲ್ಲದೆ, ಅದಕ್ಕಿಂತ ಚಿಕ್ಕದಾದ ಎರಡು ವಿಗ್ರಹಗಳು ಇಲ್ಲಿನ ಪಂಚಾಯತ್ ಕಛೇರಿ ಕಟ್ಟಡದ ಸಮೀಪದಲ್ಲಿ ದೊರೆತಿದೆ. ಇವುಗಳಲ್ಲಿ ಒಂದು ಒಂದೂಕಾಲು ಅಡಿ ಎತ್ತರವಾಗಿದ್ದು, ನಾಲ್ಕು ಕೈಗಳನ್ನು ಹೊಂದಿದೆ. ಮತ್ತೊಂದು ವಿಗ್ರಹವು ಎರಡೂವರೆ ಅಡಿ ಎತ್ತರವಿದ್ದು ಇದು ಅನೇಕ ಆಭರಣಗಳಿಂದ ಅಲಂಕೃತವಾಗಿದೆ. ಈ ವಿಗ್ರಹವನ್ನು "ಸ್ವರ್ಣಾಕರ್ಷಣ ಭೈರವ" ನೆಂದು ಕರೆಯುವರು. ಬಂಕಾಪೈನ್ ಪಾದ ಇಲ್ಲಿ ದೊರೆತಿರುವ ವಿಗ್ರಹದ ಎತ್ತರ ಆರು ಅಡಿ, ನಿಂತಿರುವುದು ಸಮಭಂಗಿಯಲ್ಲಿ. ಈತನು ಊರ್ಧ್ವಲಿಂಗ. ಶೂಲ, ಕಪಾಲಗಳು ಹಿಂದಿನ ಎರಡು ಕೈಗಳಲ್ಲಿದ್ದು, ಮುಂದಿನ ಎಡಗೈ ಕಟ್ಯಾವಲಂಬಿತ (ಸೊಂಟದ ಮೇಲೆ ಕೈಯಿಟ್ಟಿರುವಂತೆ) ಭಂಗಿಯಲ್ಲಿದೆ. ಬಲಗೈನಲ್ಲಿ ಕಮಂಡಲುವಿದೆ. ಇಡೀ ಶರೀರವನ್ನು ಸರ್ಪವು ಸುತ್ತುವರೆದಿದೆ. ಕಾಲಹಂದಿಯ ಬೆಲಖಿಂಡಿ ಗ್ರಾಮದಲ್ಲಿ ಇಷ್ಟೇ ಎತ್ತರದ ಇನ್ನೊಂದು ಭೈರವ ವಿಗ್ರಹವು ಬೆನ್ನು ಮೇಲಾಗಿ ಬಿದ್ದಿತ್ತು. ಇದು ೫-೬ ನೇ ಶತಮಾನದಲ್ಲಿ ಸಪ್ತಮಾತೃಕೆಯರೊಡನೆ ಪೂಜೆಗೊಳ್ಳುತ್ತಿತ್ತು. 

ಸಂಕುಶಗುಡದ ಭೈರವ 
ಅದೇ ರೀತಿ ಇಲ್ಲಿಗೆ ಸಮೀಪವಿರುವ ಸಂಕುಶಗುಡ ಎಂಬಲ್ಲಿ ಸಮಭಂಗಿಯಲ್ಲಿರುವ ಭೈರವನ ವಿಗ್ರಹ ದೊರೆಯಿತು. ಇದು ದೇವಾಲಯದ ಗರ್ಭಗೃಹದಲ್ಲಿ ಇದ್ದುದಕ್ಕೆ ಸಾಕ್ಷಿಯಾಗಿ ಈ ವಿಗ್ರಹದ ಎರಡು ಬದಿಗಳಲ್ಲಿ ಇಬ್ಬರು ಭಕ್ತರ ಚಿತ್ರಗಳಿವೆ. ಮೇಲ್ಭಾಗದಲ್ಲಿ ಕೈಗಳಲ್ಲಿ ಹಾರಹಿಡಿದು ಹಾರುತ್ತಿರುವ ವಿದ್ಯಾಧರ ಸ್ತ್ರೀ ಮತ್ತು ಪುರುಷರ ಚಿತ್ರಗಳಿವೆ. ಕೆಳಭಾಗದಲ್ಲಿ ಶಿವಗಣಗಳ ಜತೆಗೆ ಮಹಿಳೆಯರ ಚಿತ್ರಗಳಿದ್ದು, ಅವರಲ್ಲಿ ಒಬ್ಬಳು ಚಾಮರ ಬೀಸುತ್ತಿದ್ದರೆ, ಮತ್ತೊಬ್ಬಳು ಕುಳಿತು ಅಂಜಲಿ ಮುದ್ರೆಯಲ್ಲಿ ಪ್ರಾರ್ಥಿಸುತ್ತಿದ್ದಾಳೆ. ಪೀಠದ ತುದಿಯಲ್ಲಿ ಕುಳಿತಿರುವ ಭಂಗಿಯಲ್ಲಿರುವ ನಂದಿಯ ತಲೆಯು ತನ್ನ ಸ್ವಾಮಿಯನ್ನು ನೋಡುತ್ತಿದ್ದು, ಇದನ್ನು ಮತ್ಸ್ಯ ಪುರಾಣದಲ್ಲಿ "ದೇವ ವೀಕ್ಷಣಾ ತತ್ಪರಃ" ಎಂದು ವರ್ಣಿಸಲಾಗಿದೆ. ಬಲಭಾಗದಲ್ಲಿ ದಪ್ಪ ಹೊಟ್ಟೆಯ ಯಕ್ಷನ ಚಿತ್ರವಿದೆ. ಮೋಹನಗಿರಿ ಮತ್ತು ಸಂಕುಶಗುಡದ ಈ ವಿಗ್ರಹಗಳಲ್ಲಿ ಅನೇಕ ಸಾಮಾನ್ಯ ಅಂಶಗಳಿದ್ದು, ಇವು ೭-೮ನೇ ಶತಮಾನಕ್ಕೆ ಸೇರಿದವು ಎಂದು ನಿರ್ಣಯಿಸಬಹುದು. ಸಂಕುಶಗುಡದ ಸಮೀಪದಲ್ಲೇ ದೊರೆತಿರುವ ಇನ್ನೊಂದು ಭೈರವ ವಿಗ್ರಹದ ಅಕ್ಕ-ಪಕ್ಕಗಳಲ್ಲಿ ಮೂವರು ಮಹಿಳೆಯರು ಅಂಜಲಿ ಮುದ್ರೆಯಲ್ಲಿ ಕುಳಿತಿರುವರು. ಈ ವಿಗ್ರಹವನ್ನು "ಅಗ್ನಿಭೈರವ" ನೆಂದು ಹೆಸರಿಸಲಾಗಿದೆ.

ಉತ್ಕಟಿಕಾಸನ ಭೈರವ  
ಬಾಲಂಘೀರ್  ಜಿಲ್ಲೆಯ ತಿತಿಲಾಗಢದ ಸಮೀಪದಲ್ಲಿ ಗೂಡಾರ್ ಎಂಬ ಗ್ರಾಮವಿದೆ. ಇಲ್ಲಿರುವ ಚಿಕ್ಕ ಬೆಟ್ಟವನ್ನು "ಭೈನ್ರೋ ಪರ್ವತ"ವೆಂದು ಕರೆಯುವರು. ಇಲ್ಲಿರುವ ಬೃಹತ್ ಬಂಡೆಯ ಮೇಲೆ "ಏಕಪಾದ ಭೈರವ" ನನ್ನು ಚಿತ್ರಿಸಲಾಗಿದೆ.ಈ ಶಿಲ್ಪದ ಬಲಭಾಗದಲ್ಲಿರುವ ಪಟ್ಟಿಕೆಗಳಲ್ಲಿ ಕೆಳ ಭಾಗದಲ್ಲಿ ಕಾಳಿ ಅಥವಾ ಯೋಗೇಶ್ವರಿಯು ಓರ್ವ ರಾಕ್ಷಸನೊಡನೆ ಇರುವಂತೆ ಚಿತ್ರಿಸಲಾಗಿದ್ದು, ವೈಷ್ಣವಿ ಮತ್ತು ಮಾಹೇಶ್ವರಿಯರ ಎರಡು ಮಾತೃಕಾ ಚಿತ್ರಗಳಿವೆ. ಬಲಭಾಗದಲ್ಲಿ  ಇನ್ನೊಂದು ಬಂಡೆಯ ಮೇಲೆ ವಾರಾಹೀ, ಚಾಮುಂಡೀ ಮತ್ತು ಗಣೇಶ ವಿಗ್ರಹಗಳನ್ನು ಕೆತ್ತಲಾಗಿದೆ. ಏಕಪಾದ ಭೈರವನ ಈಶಾನ್ಯಕ್ಕೆ ಇರುವ ಬಂಡೆಯಲ್ಲಿ ಅಷ್ಟದಳ ಪದ್ಮ ಹಾಗೂ ಒಂದು ಜೋಡಿ ಪಾದಗಳನ್ನು ಕಡೆಯಲಾಗಿದೆ. ಬಂಡೆಗಳ ನಡುವೆ ಚೌಕಾಕಾರದ ಯಂತ್ರವಿದ್ದು, ಅದರಲ್ಲಿ ಎರಡು ಪಾದಗಳನ್ನು ಕೆತ್ತಲಾಗಿದೆ. ಅಂಧಕಾಸುರ ವಧೆ ಮತ್ತು ಮಾತೃಕಾ ವಿಗ್ರಹಗಳ ಚಿತ್ರಗಳಿವೆ. ಇನ್ನೊಂದು ಬಂಡೆಯ ಮೇಲೆ ನಾಲ್ಕು ಕೈಗಳ ಭೈರವನ ವಿಗ್ರಹವಿದ್ದು, ಇದು ಉತ್ಕುಟಿಕಾಸನದಲ್ಲಿ (ಎಂದರೆ ಅಯ್ಯಪ್ಪ ದೇವರ ವಿಗ್ರಹವಿರುವ ಭಂಗಿ) ಕುಳಿತಿದ್ದು, ತೊಡೆಗಳಿಗೆ ಯೋಗಪಟ್ಟಿಕೆಯಿದೆ. ಇದು ತೀರ ವಿರಳ ಶೈಲಿಯ ಭೈರವ ವಿಗ್ರಹವೆನ್ನಬಹುದು. ಆತನ ವಾಹನ ನಾಯಿಯು ಸಮೀಪದಲ್ಲಿ ಓಡುತ್ತಿರುವಂತೆ ಚಿತ್ರಿಸಲಾಗಿದೆ. ವೃತ್ತದೊಳಗೆ ಕೆತ್ತಲ್ಪಟ್ಟ ಪಾದಗಳ ಸಂಕೇತವೆಂದರೆ, ಅವು ಆ ಕಾಲದಲ್ಲಿ ಸಾಮಾನ್ಯವಾಗಿ ಪ್ರಚಲಿತವಿದ್ದ ಪ್ರಬಲ ತಾಂತ್ರಿಕ ಗುರುಗಳಾದ ಶೈವಾಚಾರ್ಯರ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತವೆಯೆಂದು ಡಾ. ಪಾಂಡಾ ಸರಿಯಾಗಿ ಗುರ್ತಿಸಿದ್ದಾರೆ. 

ನರ್ತನ ಭೈರವ 
ಗೂಡಾರ್ ಗ್ರಾಮದ ಈಶಾನ್ಯಕ್ಕೆ ಎಂಟು ಅಡಿ ಎತ್ತರ, ಮೂವತ್ತು ಅಡಿ ಉದ್ದದ ಒಂದು ಶಿಲಾಖಂಡವಿದೆ. ಅದರ ಮೇಲೆ ಸಪ್ತಮಾತೃಕಾ ಸಹಿತವಾದ ಭೈರವ ಊರ್ಧ್ವ ಲಿಂಗ ಶಿಲ್ಪವಿದೆ. ಇದೇ ಬಂಡೆಯ ಹಿಂಬದಿಯಲ್ಲಿ ನಾಲ್ಕು ಕೈಗಳುಳ್ಳ ನರ್ತನ ಭೈರವನ ವಿಗ್ರಹವಿದೆ. ಆತನು ಭೈರವನ ಎಲ್ಲ ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದು, ಕೈಗಳಲ್ಲಿ ಸರ್ಪಗಳಿವೆ. ಇದು ತಾಂತ್ರಿಕಾರಾಧನೆಯಲ್ಲಿ ಬಳಕೆಯಾಗುತ್ತಿದ್ದ ವಿಗ್ರಹ ಶೈಲಿ. ಅದೇ ರೀತಿ,ಗೂಡಾರ್‌ನ ಸಮೀಪದ ರಾಣಿಪುರ ಜರಿಯಾಲ್‌ನಲ್ಲಿ ಮೂರು ಮುಖಗಳುಳ್ಳ ಮತ್ತು ಎಂಟು ಕೈಗಳಿರುವ ಭೈರವ ವಿಗ್ರಹವಿದ್ದು, ಇದು ಆನಂದ ತಾಂಡವ ನರ್ತನಶೈಲಿಯಲ್ಲಿರುವ ಇನ್ನೊಂದು ಅಪರೂಪದ ವಿಗ್ರಹ. ಇದನ್ನು ತೆರೆದ ಮಂಟಪದಲ್ಲಿಟ್ಟು ಪೂಜಿಸಲಾಗುತ್ತಿತ್ತು. ಈ ದೇಗುಲವು ವರ್ತುಲಾಕಾರದಲ್ಲಿತ್ತು ಮತ್ತು ಅರವತ್ತನಾಲ್ಕು ಯೋಗಿನಿಯರ ವಿಗ್ರಹಗಳನ್ನು ಕಡೆಯಲಾಗಿತ್ತು. ಇದು ನಟರಾಜನ ಶೈಲಿಯಲ್ಲಿರುವಂತೆ ಹೊರನೋಟಕ್ಕೆ ಕಂಡರೂ, ಈ ಲೇಖಕನು ಅದನ್ನು ಒಪ್ಪುವುದಿಲ್ಲ ಮತ್ತು ಇದು ಅರವತ್ನಾಲ್ಕು ಯೋಗಿನೀಪೀಠದ ಕೇಂದ್ರದಲ್ಲಿದ್ದ ಊರ್ಧ್ವಲಿಂಗ ಭೈರವನದೆಂದು ಅಭಿಪ್ರಾಯಪಡುತ್ತಾನೆ. ಭೈರವನ ಎಡಪಾದವು ಮಲಗಿರುವ ನಂದಿಯ ಮೇಲೆ ಇಡುವಂತೆ ಇದ್ದು, ತಲೆಯೆತ್ತಿರುವ ನಂದಿಯ ಈ ಶೈಲಿಯನ್ನು ದೇವವೀಕ್ಷಣಾತತ್ಪರಃ ಎಂದು ವಿವರಿಸಲಾಗಿದೆ.  ಭೈರವನ ಕೈಗಳಲ್ಲಿರುವ ಸರ್ಪಗಳನ್ನು ಅಂಧಕಾಸುರನ ವಧಾ ಸಮಯದಲ್ಲಿ ನೆರವಾದ ಪ್ರಸಿದ್ಧ ನಾಗಗಳಾದ ತಕ್ಷಕ ಮತ್ತು ಧನಂಜಯರೆಂದು ಹೆಸರಿಸಲಾಗಿದೆ. ಆತನ ಕೈಗಳಲ್ಲಿರುವ ಇತರ ಆಯುಧಗಳೆಂದರೆ, ತ್ರಿಶೂಲ, ಡಮರು, ಬಲಗೈಯು ವರದಹಸ್ತ ಭಂಗಿಯಲ್ಲಿದೆ. ಎಡ ಮೇಲುಗೈಯಲ್ಲಿ ಗದೆಯಿದೆ. ಮೂರನೆಯ ಎಡಗೈನಲ್ಲಿ ಅಕ್ಷಮಾಲೆಯಿದೆ. ಆತನ ಕಣ್ಣುಗಳು ಮುಚ್ಚಿವೆ. ಇದು ಶಿವನು ಶಾಂತಮುದ್ರೆಯಲ್ಲಿರುವ ಸ್ವರೂಪ. ಯೋಗಿಣಿಯರನ್ನು ತೊಂದರೆಗೊಳಪಡಿಸಿದಾಗ ಆತ ಕ್ರುದ್ಧ. ಕಥಾಸರಿತ್ಸಾಗರದಲ್ಲಿನ ಒಂದು ಕಥೆಯಲ್ಲಿ ಚಂದ್ರವಂಶಿಯು ಆತನನ್ನು ಮಾತೃಚಕ್ರದ ಮಧ್ಯದಲ್ಲಿ ನೋಡಿದನೆಂಬ ಉಲ್ಲೇಖವಿದೆ. ಆಕೆಯ ಜತೆಯಲ್ಲಿ ನಾರಾಯಣಿಯೂ ಇದ್ದಳು. ಅವರೆಲ್ಲರೂ ಭೈರವನಿಗೆ ಉಡುಗೊರೆಗಳನ್ನು ನೀಡಲು ಕಾತುರರಾಗಿದ್ದರು. ನಾರಾಯಣಿ ಅಥವಾ ವೈಷ್ಣವಿಯು ಭೈರವನು ಬರಲು ತಡವೇಕಾಯಿತೆಂದು ವಿವರಿಸುತ್ತಿರುವಾಗಲೇ, ಮಾತೃಚಕ್ರಮಧ್ಯಸ್ಥನಾದ ಭೈರವನು ಅಲ್ಲಿಗೆ ಆಗಮಿಸಿದನು. ಆಗ ಭೈರವನು ಅಲ್ಲಿದ್ದ ಯೋಗಿನಿಯರೊಂದಿಗೆ ನರ್ತಿಸಿದನು (ತಾಂಡವೇನ ಕ್ಷಣಮ್ ನೃತ್ಯನಾಕ್ರೀಡಯದ್ದ್ಯೋಗಿನೀಸ್ಸಹ) ಎಂಬ ಉಲ್ಲೇಖವಿದೆ. ಅಗ್ನಿಪುರಾಣದಲ್ಲಿ ಭೈರವನನ್ನು ಮಾತೃನಾಥನೆಂದು ವಿವರಿಸಲಾಗಿದೆ. ತಾಂತ್ರಿಕ ಕೌಲವೆಂಬ ಗ್ರಂಥದ ಕುಲಾರ್ಣವ ಮತ್ತು ಮೇರು ತಂತ್ರಗ್ರಂಥಗಳಲ್ಲಿ ಭೈರವನು "ಯೋಗಿನೀಚಕ್ರಮಧ್ಯಸ್ಥಮ್" ಎಂದು ಹೇಳಲಾಗಿದೆ.

ಮಹಾಗಾವ್ ನ ಭೈರವ 
ನಾಲ್ಕು ಕೈಗಳ ನರ್ತನ ಭೈರವನ ವಿಗ್ರಹವು ವಿಶೇಷವೆಂದು ಹೇಳಲಾಗಿದೆಯಾದರೂ, ಭಾಲಂಗೀರ್ ಜಿಲ್ಲೆಯ ಮಹಾಗಾಂವ್‌ನಲ್ಲಿರುವ ಶಿವ ದೇವಾಲಯದಲ್ಲಿನ ಭೈರವನ ಇನ್ನೊಂದು ವಿಗ್ರ ತಲೆ  ಮತ್ತು ಉಳಿದೆಲ್ಲ ಅಂಗಾಂಗಗಳು, ಆಭರಣಗಳಲ್ಲಿ ಇತರ ವಿಗ್ರಹಗಳ ಸಾಮ್ಯತೆಯಿದೆಯಾದರೂ, ವಿಶೇಷವೆಂದರೆ ಆತನ ಜಟಾಮುಕುಟದ ಎಡಭಾಗದಲ್ಲಿ ಬಾಲಚಂದ್ರನನ್ನು ಚಿತ್ರಿಸಲಾಗಿದೆ.  ಭೈರವ ಮತ್ತು ಚಾಮುಂಡಿಯರು ಈರ್ವರೂ ಇರುವ ವಿಗ್ರಹಗಳು ಈ ಪ್ರದೇಶದಲ್ಲಿ ಸರ್ವಸಾಧಾರಣವೆನ್ನುವಂತೆ ಕಂಡುಬಂದಿದೆ. ಇವುಗಳನ್ನು ಕೆಂಪು ಮರಳುಗಲ್ಲುಗಳಲ್ಲಿ ಕೆತ್ತಲಾಗಿದೆ. ಇವುಗಳಲ್ಲಿ ಕೆಲವು ೮ ಅಡಿ ಎತ್ತರ ಮತ್ತು ೬ ಅಡಿ ಅಗಲದ ವಿಗ್ರಹಗಳು ದೊರಕಿವೆ. ಕಾಲಹಂದಿ ಜಿಲ್ಲೆಯ ಚೌರೀಗಢವೆಂಬ ಊರಿನಲ್ಲಿರುವ ನಾಲ್ಕು ಕೈಗಳನ್ನು ಹೊಂದಿರುವ ಭೈರವನ ವಿಗ್ರಹ ೧೮ ಅಡಿ ಎತ್ತರದ ಭವ್ಯಮೂರ್ತಿ. 

ಪಾಟಣಗಢದ ಭೈರವನ ವಿಗ್ರಹದ ಬಗ್ಗೆ ಈಗಾಗಲೇ ಒಂದು ವಿಸ್ತಾರವಾದ ಲೇಖನ ಪ್ರಕಟವಾಗಿದೆ. ಭಾಲಂಘೀರ್ ನ  ಪುನಿತಾಲ ಎಂಬ ಊರಿನಲ್ಲಿರುವ ಸ್ವಪ್ನೇಶ್ವರ ದೇವಾಲಯದಲ್ಲಿ ನಾಲ್ಕು ಕೈಗಳ ಭೈರವನ ವಿಗ್ರಹವಿದೆ. ಇದು ಭಂಜರ ಕಾಲಕ್ಕೆ ಸೇರಿದ್ದೆಂದು ತರ್ಕಿಸಲಾಗಿದೆ ಮತ್ತು ೯ನೇ ಶತಮಾನದ ಪ್ರಥಮಾರ್ಧ ಭಾಗದಲ್ಲಿ ಇದು ರಚಿತವಾಗಿರಬಹುದು ಎನ್ನಲಾಗಿದೆ. 

ಮಹಾನದಿ ಕಣಿವೆಯಲ್ಲಿ ದೊರೆತಿರುವ ಭೈರವನ ಬಿಡಿ ವಿಗ್ರಹಗಳ ಬಗ್ಗೆ ಚರ್ಚಿಸುವಾಗ, ಎಂಟು ಕೈಗಳನ್ನುಳ್ಳ ಇನ್ನೂ ಎರಡು ವಿಗ್ರಹಗಳನ್ನು ಪರಿಶೀಲಿಸುವುದು ಔಚಿತ್ಯಪೂರ್ಣವಾಗಿದೆ. ಇವಗಳಲ್ಲೊಂದು ಬಾಲಂಗೀರ್‌ನ ದೇವಗಾಂವ್‌ನಲ್ಲಿದೆ ಮತ್ತೊಂದು ಪಾಟಣಗಢದ ಕೋಟೆಯ ಸಮೀಪದಲ್ಲಿರುವ ಆಧುನಿಕ ದೇವಾಲಯದಲ್ಲಿ ಇರಿಸಲಾಗಿದೆ. ದೇವಗಾಂವ್‌ನ ವಿಗ್ರಹವು ನರ್ತನ ಭಂಗಿಯಲ್ಲಿದೆ. ಎಂಟು ಕೈಗಳಲ್ಲಿ ಕ್ರಮವಾಗಿ ಎಡಭಾಗದಲ್ಲಿ ಮೇಲಿನಿಂದ ಕೆಳಗೆ ಖಡ್ಗ, ಕಿರುಗತ್ತಿ, ಮತ್ತು ವಜ್ರಗಳನ್ನು ಹೊಂದಿದೆಯಾದರೆ ಕೆಳಗಿನ ಕೈಯನ್ನು ಒಡೆದು ಹಾಕಿರುವುದರಿಂದ ಏನಿದೆಯೆಂದು ತಿಳಿಯಲಾಗದು. ಅದೇ ರೀತಿ ಬಲಭಾಗದ ಕೈಗಳಲ್ಲಿ ಮೇಲಿನಿಂದ ಕೆಳಗೆ ಕ್ರಮವಾಗಿ ಶಂಖ, ಸರ್ಪ, ಕಪಾಲ ಮತ್ತು ಗದೆಗಳು ಇವೆ. ಇದು ಅಘೋರ ಶಿವನ ಸ್ವರೂಪವಾಗಿದ್ದು ರೌದ್ರಾಕಾರದಲ್ಲಿದೆ. ವಿಶೇಷವೆಂದರೆ ಇದರ ಇಕ್ಕೆಲಗಳಲ್ಲಿ ಏಳು ವನಿತೆಯರ ಚಿತ್ರಗಳಿದ್ದು, ಅವರು ಛತ್ರವನ್ನು ಹಿಡಿದು ಸಾಗುತ್ತಿರುವಂತೆ ಕೆತ್ತಲಾಗಿದೆ. ಬಾಲಂಗೀರ್ ಜಿಲ್ಲೆಯಲ್ಲಿ ಪಾಟಣಗಢದಿಂದ ೪೦ ಕಿ.ಮೀ. ದೂರದಲ್ಲಿರುವ ಹರಿಶಂಕರ ದೇವಾಲಯದಲ್ಲೂ ಭೈರವನ ವಿಗ್ರಹಗಳಿವೆ. ಇಲ್ಲಿಗೆ ಸಮೀಪದಲ್ಲಿರುವ ಕುಶಾಂಗ್‌ನಲ್ಲಿರುವ ಕೋಸಲೇಶ್ವರ ಶಿವ ಮಂದಿರ ಹಾಗೂ ಸೋನೇಪುರದ ಸಮೀಪದಲ್ಲಿರುವ ಪಶ್ಚಿಮ ಸೋಮನಾಥ ಗುಡಿಯಲ್ಲೂ ಭೈರವನ ವಿಗ್ರಹಗಳಿವೆ. ಇವು ೧೫-೧೬ನೇ ಶತಮಾನದಲ್ಲಿ ಆಳಿದ ಚೌಹಾನರ ಆರಾಧ್ಯ ದೈವಗಳೆಂದು ತಿಳಿಯಲಾಗಿದೆ. 
ದೇವಗಾವ್ (ಬಾನೆಯ್) ಭೈರವ 
ಸುಂದರಗಢ ಜಿಲ್ಲೆಯಿಂದ ಮೂರು ಕಿ.ಮೀ. ದೂರದಲ್ಲಿರುವ ಬಾನೇಯ್ ಪ್ರಾಂತದಲ್ಲಿ ಬಾಣೇಶ್ವರ ಶಿವಮಂದಿರವಿದೆ. ಇಲ್ಲಿಯೂ ಅರ್ಧ ಭಂಗಿಯಲ್ಲಿರುವ ಭೈರವನ ವಿಗ್ರಹವಿದೆ. ಬುದ್ಧನ ವಿಗ್ರಹಗಳಲ್ಲಿ ಕಂಡುಬರುವಂಥ ಶಿರೋಧಾರವಿದೆ.  ಎರಡು ಬದಿಗಳಲ್ಲಿ ಕಮಲದ ಚಿತ್ರಗಳಿವೆ. ಈ ಲಕ್ಷಣಗಳಿಂದ ಇದು ೧೨ ನೇ ಶತಮಾನಕ್ಕೆ ಸೇರಿದ ಸೋಮವಂಶೀಯರ ಕಾಲದ್ದು ಎಂದು ಹೇಳಬಹುದು. 

ಶೈವ ಪಂಥದ ಭೈರವ ಆರಾಧನೆಯು ಪಶ್ಚಿಮ ಒರಿಸ್ಸಾದ ಆದಿವಾಸಿ ಜನಾಂಗಗಳಲ್ಲಿ ೮ನೇ ಶತಮಾನದ ಭಂಜರ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿತ್ತು. ಈ ಪ್ರದೇಶಗಳಲ್ಲಿ ದೊರೆತಿರುವ ಬಹುತೇಕ ಭೈರವ ವಿಗ್ರಹಗಳು ಊರ್ಧ್ವಲಿಂಗವನ್ನು ಹೊಂದಿದವೇ ಆಗಿವೆ. ವಿಶೇಷವೆಂದರೆ ಮಹಾಗಾಂವ್‌ನ ದುಂಗ್ರಿಪಾಲಿಯಲ್ಲಿರುವ ನಟರಾಜನ ವಿಗ್ರಹ, ರಾಣೀಪಾಲ್‌ನಲ್ಲಿರುವ ೬೪ ಯೋಗಿನೀ ಸಹಿತ ನಟರಾಜನ ವಿಗ್ರಹಗಳು ಹಾಗೂ ಟೋಪೀಗಾಂವ್‌ ಮತ್ತು ಬೆಲಖಂಡಿಯಲ್ಲಿರುವ ಮಹೇಶ್ವರ ವಿಗ್ರಹಗಳು ಊರ್ಧ್ವಲಿಂಗವನ್ನು ಹೊಂದಿದವೇ ಆಗಿವೆ. ಈ ಬಗೆಯ ಊರ್ಧ್ವಲಿಂಗವುಳ್ಳ ವಿಗ್ರಹಗಳು ಅಸ್ಸಾಂ, ಬಂಗಾಳ ಮತ್ತು ಒರಿಸ್ಸಾಗಳಲ್ಲಿ ಕುಶಾನರ ಕಾಲದಿಂದಲೂ ಕಂಡುಬರುತ್ತವೆ. ಊರ್ಧ್ವಲಿಂಗವು ಶಾಶ್ವತ ಬ್ರಹ್ಮಚರ್ಯದ ಸಂಕೇತ. ಇದನ್ನೇ "ಊರ್ಧ್ವ ರೇತಸ್" ಎಂದು ಕರೆದಿದ್ದಾರೆ. ಶಿವನ ತಪಸ್ಸನ್ನು ಭಂಗಪಡಿಸಲು ಯತ್ನಿಸಿದ ಕಾಮನನ್ನು ಶಿವನು ದಹಿಸಿದ ಕಥೆ ಭಾರತಾದ್ಯಂತ ಪ್ರಚಲಿತ. ಮುಖ್ಯವಾಗಿ ಶಿವನು ಐಹಿಕ ಕಾಮನೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಕುರುಹು. 

ಕಾಮ ಮತ್ತು ಶಿವನ ಸಾಂಗತ್ಯವನ್ನು ವಿವರಿಸುವ ಇನ್ನೊಂದು ಸ್ವಾರಸ್ಯಕರ ಶಿಲ್ಪವು ನೌಪದ ಜಿಲ್ಲೆಯ ದುಂಗುರಿಪಲ್ಲಿ ಎಂಬ ಹಳ್ಳಿಯಲ್ಲಿ ದೊರೆತಿದೆ. ಇಲ್ಲಿರುವ ಎಂಟು ಕೈಗಳ ಭೈರವ ವಿಗ್ರಹದ ಬದಿಯಲ್ಲಿ ಒಂದು ಊರ್ಧ್ವಲಿಂಗಿಯಾದ ಪುರುಷನ ಮೇಲೆ ಓರ್ವ ಸ್ತ್ರೀ ಪ್ರೇಮಕ್ರೀಡೆ ನಡೆಸುತ್ತಿರುವ ಚಿತ್ರವಿದೆ. ಈಕೆಯನ್ನು ಸ್ಥಳೀಯರು "ಜಾರಿಣಿ" ಎಂದು ಕರೆಯುವರು. ಆದರೆ ಅದು ದಕ್ಷಿಣ ಕಾಳಿಕೆ ಎಂಬ ದೇವತೆಯಾಗಿರಬಹುದು. ಏಕೆಂದರೆ ಸಾಧಾರಣವಾಗಿ ಆಕೆಯನ್ನು ಹಲವೆಡೆ ಶಿವನ ಶವದ ಮೇಲೆ ಕುಳಿತು  ಸಂಭೋಗಿಸುತ್ತಿರುವಂತೆ ಚಿತ್ರಿಸಲಾಗಿರುತ್ತದೆ. ಈ ಬಗೆಯ ವಿಗ್ರಹವು ಕರ್ಪೂರಾದಿ ಸ್ತೋತ್ರದಲ್ಲಿ ಹೇಳಲಾಗಿರುವ ವಿವರಣೆಗಳೊಂದಿಗೆ ಹೊಂದಿಕೊಳ್ಳುತ್ತದೆ. ಈ ಸ್ತೋತ್ರದ ಪಾಠದಂತೆ, ಈಕೆಯು ನಿರ್ವಾಣವನ್ನು ನೀಡುವವಳು. ಅದರಲ್ಲಿ "ಪ್ರಜ್ವಲನಾಗಿ ಬೆಳಗುತ್ತಿರುವ ಕಾಮ ಸ್ವರೂಪಿಯಾದ ಕಾಲನನ್ನು ನಾಶಮಾಡುವ ಕಾಳಿಯಾದ ನಾನು ದಕ್ಷಿಣ ಕಾಳಿಕೆ" ಎಂಬ ವಿವರಣೆಯಿದೆ.

ಈ ಹಿಂದಿನ ವಿವರಣೆಗಳಲ್ಲಿ ನಾವು ಭೈರವನನ್ನು ೬೪ ಯೋಗಿನಿಯರೊಡನೆ, ತೆರೆದ ದೇವಾಲಯಗಳಲ್ಲಿ ಸ್ಥಾಪಿಸಲಾಗುತ್ತಿತ್ತು ಎಂದು ತಿಳಿದಿದ್ದೇವೆ. ಇದರ ಉದ್ದೇಶವೆಂದರೆ, ಈ ಪೀಠಗಳಲ್ಲೇ ತಾಂತ್ರಿಕ ಸಾಧಕರು ತಮ್ಮ ಯೋಗಿಕ-ಲೈಂಗಿಕ ಸಾಧನೆಗಳಲ್ಲಿ ತೊಡಗಿಕೊಳ್ಳುತ್ತಿದ್ದರೆಂದು ಗ್ರಹಿಸಬಹುದು. ೬೪ ಯೋಗಿನಿಯರ ಮಂದಿರ ಸ್ಥಾಪನೆಯೇ ತಾಂತ್ರಿಕ ಸಾಧನೆಯ ಉದ್ದೇಶ ಹೊಂದಿರುತ್ತದೆ ಮತ್ತು ಭೈರವನು ಯೋಗಿನಿಯರ ಕೇಂದ್ರಬಿಂದುವಾಗಿರುತ್ತಾನೆ. 

ಭೈರವರ ಬಗ್ಗೆ ವಿವರಣೆಗಳು "ವಿಷ್ಣು ಧರ್ಮೋತ್ತರ" ದಲ್ಲಿ ಇವೆ. ಇದರಲ್ಲಿ ಪ್ರಮುಖವಾಗಿ ವಟುಕ ಭೈರವ ಮತ್ತು ಸ್ವರ್ಣಾಕರ್ಷಣ ಭೈರವರನ್ನು ಮಾತ್ರ ಪ್ರಸ್ತಾಪಿಸಲಾಗಿದೆ. ಇದಲ್ಲದೆ ಜನಪ್ರಿಯವಾಗಿರುವ ಎಂಟು ಭೈರವ ರೂಪಗಳೆಂದರೆ : 1. ಅಸಿತಾಂಗ ಭೈರವ, ೨.ರುರು, ೩. ಚಂಡ, ೪, ಕ್ರೋಧ, ೫. ಉನ್ಮತ್ತ, ೬. ಕಪಾಲ, ೭. ಭೀಷಣ, ೮. ಸಂಹಾರ ಭೈರವರು, ಇವರಿಗೆ ಅಧಿದೇವತೆಗಳೆಂದು ಎಂಟು ರೂಪಗಳು ಮತ್ತು ಅವರಿಗೆ ಪ್ರತ್ಯಧಿದೇವತೆಗಳೆಂದು ಎಂಟು ರೂಪಗಳು, ಹೀಗೆ ಅರವತ್ತನಾಲ್ಕು ರೂಪಗಳು ಇದ್ದು, ಇವುಗಳ ವಿವರಗಳು ರುದ್ರಯಾಮಳ ಗ್ರಂಥದಲ್ಲಿ ದೊರೆಯುತ್ತವೆ.

ಅಜೈಕಪಾದ ಭೈರವ 
ಭೈರವನ ಮೂಲವು ಅಜೈಕಪಾದ ರೂಪದಿಂದಲೇ ಜನ್ಯ ಎಂದು ವಿದ್ವಾಂಸರ ವಿವರಣೆಯಿದೆ. ಅಜ+ಏಕ ಪಾದ, ಎಂದರೆ ಒಂಟಿಕಾಲಿನ ಭೈರವನೆಂದು ಅರ್ಥ. ಇದು ತಾಂತ್ರಿಕರ ದೈವ. ತಾಂತ್ರಿಕ ಸಾಹಿತ್ಯದಲ್ಲಿ ದೊರೆಯುವ ಅಜೈಕಪಾದನ ವಿವರಣೆಯನ್ನು ಅನುಸರಿಸಿ ಹೊರಟರೆ, ಅದು ವೇದಗಳಲ್ಲಿ ಉಲ್ಲೇಖಿತವಾಗಿರುವ ಅಗ್ನಿ, ಹವನ ವಿಧಿಗಳು, ಬ್ರಹ್ಮಾಂಡದ ಮಧ್ಯ ಸ್ತಂಭ ಮತ್ತು ಯೋಗಿನಿಯರೊಂದಿಗೆ ಹೊಂದಿರುವ ಸಂಬಂಧಗಳೊಂದಿಗೆ ತಾಳೆಯಾಗುತ್ತದೆ. ಆತನ ಆಯುಧಗಳೆಲ್ಲವೂ ಶೈವಸಂಬಂಧಿತವಾದವು. ಆತನು ಊರ್ಧ್ವಲಿಂಗ ಮತ್ತು ವ್ಯಾಘ್ರಚರ್ಮಾಂಬರಧರ. ಪುರಿಯಲ್ಲಿನ ಜಗನ್ನಾಥನ ಶಿಲ್ಪಶೈಲಿಯು ಏಕಪಾದ ಭೈರವನಿಂದಲೇ ಪ್ರಭಾವಿತವಾಗಿರಬಹುದೆಂದು ಸ್ಟೈಟೆನ್ಕ್ರಾನ್ ರ ಅಭಿಪ್ರಾಯ. ರಾಣೀಪುರ ಜರೀಯಾಲ್‌ನಲ್ಲಿ ವೀರಭದ್ರನು ಸಪ್ತಮಾತೃಕೆಯರ ಜತೆಗೆ ಇರುವುದರ ಬದಲಾಗಿ, ಏಕಪಾದ ಭೈರವನನ್ನು ಕಡೆದಿರುವುದು ವಿಶೇಷವೆಂದು ತಿಳಿಯಬಹುದು.

ಡಾ. ಪಾಂಡಾ  ಕೆಲವು ಶೈವಾಚಾರ್ಯರು ಭೈರವನ ವಿಗ್ರಹ ಪ್ರಭೇದಗಳನ್ನು ಗ್ರಹಿಸದೇ, ಕೆಲವೊಮ್ಮೆ ಹಾಗೆಯೇ ಒಪ್ಪಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದಿದ್ದಾರೆ. ಬೌದ್ಧ ತಾಂತ್ರಿಕ ಪಂಥಗಳ ಪ್ರಭಾವದಿಂದಾಗಿ, ಶೈವರೂ ಯೋಗಿನೀ ಸಹಿತ  ಭೈರವಾರಾಧನೆಯನ್ನು ರೂಢಿಗೊಳಿಸಲು ಪ್ರಯತ್ನಿಸಿರಬಹುದು ಎಂಬ ತರ್ಕವೂ ಇದೆ. ಒರಿಸ್ಸಾದ ಪಶ್ಚಿಮ ಭಾಗದಲ್ಲಿರುವ ಆದಿವಾಸಿ ವಲಯಗಳಲ್ಲಿ ಭೈರವನ ಅಘೋರ ರೂಪವನ್ನು ಆರಾಧಿಸುತ್ತಿದ್ದರು. ಅವರು ಅವನೊಂದಿಗೆ ಪಾಟಣಕುಮಾರಿಯರನ್ನು ಆರಾಧಿಸುತ್ತಿದ್ದರು. ಇದೇ ಮುಂದೆ ಸಾಥೇನ (ಸಪ್ತ ಸೋದರಿಯರು) ಎಂಬ ಆಚರಣೆಗೆ ನಾಂದಿಯಾಯಿತು. ಈ ಅಭಿಪ್ರಾಯವನ್ನು ಪುಷ್ಟೀಕರಿಸಲು ದೊರೆಯುವ ಇನ್ನೊಂದು ಮಾಹಿತಿಯೆಂದರೆ, ಸಂಬಾಲಾದ ಪ್ರಸಿದ್ಧ ದೊರೆ ಇಂದ್ರಭೂತಿಯ ಸೋದರಿಯಾದ ವಿಖ್ಯಾತ ತಾಂತ್ರಿಕ ಗುರು ಲಕ್ಷ್ಮೀಂಕರಳು ಭೈರವ ಪಂಥವನ್ನೂ ಜನಪ್ರಿಯಗೊಳಿಸಿದಳು. ಈಕೆಯು ೮ನೇ ಶತಮಾನದಲ್ಲಿದ್ದ ಸಹಜಯಾನ ಬೌದ್ಧ ತಂತ್ರದ ಪ್ರತಿಪಾದಕಳೂ ಆಗಿದ್ದಳು.

ಹಿಂದೆ ಹೇಳಿರುವಂತೆ ಭೈರವನೊಡನೆ ಚಾಮುಂಡಿಯನ್ನು ತಾಂತ್ರಿಕ ಸಾಧನೆಗಳ ಉದ್ದೇಶಕ್ಕೆಂದು ಬಳಸಲಾಗುತ್ತಿತ್ತು. ಸತಿಯ ಶರೀರ ಭಾಗಗಳೆಲ್ಲ ಬಿದ್ದ ಸ್ಥಳಗಳು ಮುಂದೆ ಶಕ್ತಿಪೀಠಗಳಾಗಿ, ಅವುಗಳ ರಕ್ಷಣೆಗೆಂದು ಭೈರವನನ್ನು ಸ್ಥಾಪಿಸಿದ  ಬಗ್ಗೆ ಪೌರಾಣಿಕ ಉಲ್ಲೇಖಗಳು ಇವೆ. ಹೀಗಾಗಿಯೇ ಭೈರವ ಮತ್ತು ಶಕ್ತಿದೇವತೆಗಳ ಸಾಂಗತ್ಯ ಬೆಳೆದು ಬಂದಿತೆಂದು ಪ್ರೊ. ಥಾಮಸ್ ಡೊನಾಲ್ಡ್ಸನ್ ರ ಅಭಿಪ್ರಾಯ.

ಜುನಾಗಡ ಭೈರವ 
ತನ್ನ ವಿಘ್ನೇಶ್ವರ ಪ್ರತಿಷ್ಠಾವಿಧಿಯಲ್ಲಿ  ಕ್ಷೇತ್ರಪಾಲನೇ ಭೈರವನು ಎಂದು ಅಘೋರ ಶಿವಾಚಾರ್ಯರು ಹೇಳಿರುವರು. ಆತನ ಗುಡಿಗಳು ಗ್ರಾಮದ ಅಥವಾ ಊರುಗಳ ಈಶಾನ್ಯದಲ್ಲಿ ಇರುತ್ತವೆ. ಪ್ರತಿಷ್ಠಾಪನೆಗೆಂದು ಕ್ಷೇತ್ರಪಾಲನ ರಾಜಸಿಕ, ಸಾತ್ವಿಕ ಮೂರ್ತಿಗಳನ್ನು ಮಾತ್ರ ಬಳಸಬೇಕು ಎಂದು ಅಂಶುಮಭೇದಾಗಮ, ಸುಪ್ರಭೇದಾಗಮ ಮತ್ತು ಕರಣಾಗಮ ಗ್ರಂಥಗಳಲ್ಲಿ ಹೇಳಲಾಗಿದೆ. ೧೧-೧೨ ನೇ ಶತಮಾನದಲ್ಲಿ ಬೇಕಿ ಎಂಬ ಗ್ರಾಮದಲ್ಲಿ ಕುಳಿತಿರುವ ಭಂಗಿಯ ಭೈರವನ ವಿಗ್ರಹಗಳಿವೆ. ಒರಿಸ್ಸಾದ ಕಾಲಹಂದಿ ಜಿಲ್ಲೆಯ ಲಾಂಜೀಗಢ, ಮದನಪುರ, ರಾಮಪುರ, ಮೋಹನಗಿರಿ, ಉರ್ಲಾದನಿ, ಸಂಕುಶಗಢ, ಡಿಗ್ಸಿರಾ, ಬೆಲಖಂಡಿ, ಜುನಾಗಢ, ಟೋಪೀಗಾಂವ್, ಮೇದಿನೀಪುರ ಮತ್ತು ಖಮ್ತಾನಾ ಮುಂತಾದ ಪ್ರದೇಶಗಳಲ್ಲಿ ಭೈರವನ ಆರಾಧನೆ ಇಂದಿಗೂ ಮುಂದುವರೆದಿದೆ. ಈ ಭಯಂಕರ ಸ್ವರೂಪದ ದೈವವನ್ನು ಸೋನೇಪುರ, ಸಂಭಾಲಪುರ, ಹರಿಶಂಕರ, ಲಾಂಜೀಗಢ, ಪುಯಿನ್ತಲಗಳಲ್ಲಿ ದೊಡ್ಡ ಮಂದಿರಗಳಲ್ಲಿ ಪೂಜೆಗೈಯಲಾಗುತ್ತಿದೆ. ಆದಿವಾಸಿ ಸಮುದಾಯದವರಲ್ಲಿ ದ್ವಾದಶ ಭೈರವರ (೧೨) ಆರಾಧನೆಯಿದೆ. ಅವಗಳೆಂದರೆ : ೧. ಬುದ, ೨. ಅಗ್ನಿ, ೩. ಬಲಿ, ೪. ಬೇತಾಳ, ೫. ಸುಹಾರ, ೬. ಸೂದನ, ೭. ಕಣ, ೮. ಬಾಣ, ೯. ರಣ, ೧೦. ಜಲ, ೧೧. ದಂಡ ಮತ್ತು ೧೨. ಹೂಂಕಾರ ಭೈರವ. ಈ ಆದಿವಾಸಿಗಳಲ್ಲಿ ೧೨ ಸಂಖ್ಯೆಗೆ ಮಹತ್ವವಿರುವುದರಿಂದ ಅವರ ದೇವತೆಗಳಲ್ಲೂ ಅದು ಪ್ರತಿಫಲಿಸಿದೆ. ಉದಾಹರಣೆಗೆ ಬಾರಾಭಾಯಿ ಲಾಂಥ್, ಬಾರಾಭಾಯಿ ಭೀಮ, ಬಾರಾ ಪಹಾಡ್, ಬಾರಾಭಾಯಿ ಮರಾಳ ಮತ್ತು ಬಾರಾಭಾಯಿ ಬೆಂತಕರ ಇತ್ಯಾದಿ.

ಕ್ರಿ. ಶ. ೧-೨ ನೇ ಶತಮಾನಗಳಿಂದ ಮಹಾನದೀ ಕಣಿವೆಯಲ್ಲಿ ಆದಿವಾಸಿಗಳಿಂದ ಪೂಜಿತನಾಗಿದ್ದ ಭೈರವನು, ಕಾಲಕ್ರಮೇಣ, ಹಿಂದೂ ದೇವತೆಗಳ ಮುಖ್ಯವಾಹಿನಿಯಲ್ಲಿ ಸ್ಥಾನ ಪಡೆಯುವ ಪ್ರಕ್ರಿಯೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು, ಆಚರಣೆಗಳನ್ನು ರೂಢಿಸಿದನೆಂದು ಹೇಳಬಹುದು.

ಚಿತ್ರ-ಲೇಖನ ಕೃಪೆ: ಡಾ. ಶಶಾಂಕ ಪಾಂಡಾ

* * * * * * *

ಗುರುವಾರ, ಡಿಸೆಂಬರ್ 22, 2011

ದಕ್ಷಿಣದಲ್ಲೊಂದು ಕಾಲಭೈರವನ ಭವ್ಯ ನೆಲೆ


ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಮಂದಿರ


ದೇವಾಲಯದ ಮುಂಭಾಗ

ಆದಿಚುಂಚನಗಿರಿ ಕ್ಷೇತ್ರವು ಇತ್ತೀಚೆಗೆ ಪ್ರಸಿದ್ಧಿಗೆ ಬಂದಿದ್ದರೂ, ಅದು ಪುರಾತನ ಭೈರವ ಕ್ಷೇತ್ರ. ಈ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ನಾಥಪಂಥದವರು ನೆಲೆಸಿದ್ದರು.ಈ ಬಗ್ಗೆ ಸ್ಪಷ್ಟ ಕುರುಹುಗಳನ್ನು ನೀಡಬಲ್ಲ ಅನೇಕ ಗುಹೆಗಳು, ಮಂದಿರಗಳು ಈ ಪ್ರದೇಶದ ಸುತ್ತಮುತ್ತಲೂ ದೊರೆಯುತ್ತವೆ. ೧೯೩೯ರ ಒಂದು ದಾಖಲೆಯಂತೆ ಇದು ಪುರಾತನ ಶಿವಬಾಲಗಂಗಾಧರೇಶ್ವರನ ನೆಲೆಯೆಂದು ಹೇಳಲು ಆಧಾರಗಳನ್ನು ನೀಡಲಾಗಿದೆ. ಅದರಂತೆ ಇದು ಅಧ್ಯಾತ್ಮ ಸಾಧಕರ ವಾಸಸ್ಧಾನವಾದ್ದರಿಂದ ಶೈವಪಂಥದ ಪ್ರಬಲಕೇಂದ್ರವೆಂದು ಹೇಳಬಹುದು.

 ಆದಿಚುಂಚನಗಿರಿ ಕ್ಷೇತ್ರವು ಈ ಕ್ಷೇತ್ರದ ೭೧ನೇ ಪೀಠಾಧಿಪತಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ನೇತೃತ್ವದಲ್ಲಿ ಅಭಿವೃದ್ಧಿಗೊಂಡಿತು. ಶೈವಪಂಥದಲ್ಲಿ ಉಲ್ಲೇಖಿತವಾಗಿರುವ ಅನೇಕ ಆಚರಣೆಗಳು, ವಿಧಿಗಳು ಮತ್ತು ಗ್ರಾಮೀಣ ಪದ್ಧತಿಗಳನ್ನು ಅವರು ಪುನರುಜ್ಜೀವನಗೊಳಿಸಿದರು. ಅಂಥದೊಂದು ಕಾರ್ಯವನ್ನು ಕೈಗೊಳ್ಳುವಾಗ, ಜನರ ನಂಬಿಕೆ ಮತ್ತು ಶ್ರದ್ಧೆಗಳಿಗೊಂದು ಉತ್ತಮ ನೆಲೆ ಹಾಗೂ ಈ ಎಲ್ಲ ಚಟುವಟಿಕೆಗಳೂ ಸಾರೋದ್ಧಾರವಾಗಿ ಮುನ್ನಡೆದುಕೊಂಡು ಹೋಗಬೇಕೆಂಬ ವಿಸ್ತೃತ ದೃಷ್ಟಿಕೋನದೊಂದಿಗೆ ಇಲ್ಲಿ ನೂತನ ಶ್ರೀ ಕಾಲಭೈರವೇಶ್ವರ ಸ್ವಾಮಿಯ ದೇವಾಲಯದ ನಿರ್ಮಾಣ ಹಾಗೂ ಪುರಾತನ ನಾಥಪಂಥದ ಆಚರಣೆಗಳಿಗೆ ಅನುಕೂಲವಾಗುವಂಥ ವಾತಾವರಣವನ್ನು ರೂಪಿಸಿದರು. 
ಭೈರವ ತನ್ನ ವಾಹನದೊಂದಿಗೆ
ಇದರ ಫಲವಾಗಿ ನಿರ್ಮಿತವಾಗಿರುವ ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಮಂದಿರವು ದಕ್ಷಿಣ ಭಾರತದಲ್ಲೇ  ಈ ದೇವರಿಗೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಹಾಗೂ ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ. ಸಾಧಾರಣವಾಗಿ ಕಾಲಭೈರವನೆಂದರೆ ಕಾಶಿಯ ನೆನಪಾಗುತ್ತದೆ, ಉಜ್ಜಯಿನಿಯ ಕಾಲಭೈರವನೂ ಪ್ರಸಿದ್ಧನೇ ಸರಿ. ದಕ್ಷಿಣದಲ್ಲಿ ಈ ದೇವತೆಯ ದೇಗುಲಕ್ಕೆ ಇದ್ದ ಕೊರತೆಯು ಆದಿಚುಂಚನಗಿರಿಯ ಮಂದಿರದ ಮೂಲಕ ತುಂಬಿದಂತಾಗಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು ೧೧೦ ಕಿ.ಮೀ.ಗಳ ದೂರದಲ್ಲಿ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿಗೆ ಸೇರಿದ ಬೆಳ್ಳೂರು ಸಮೀಪ ಈ ದೇವಾಲಯವಿದೆ. ಇದು ೨೦೦೮ರ ಫೆಬ್ರವರಿಯಲ್ಲಿ ಸ್ಥಾಪಿತವಾಯಿತು. ಪ್ರಕೃತಿಯ ಸಿರಿಮಡಿಲಲ್ಲಿರುವ, ಬೃಹತ್ ಬಂಡೆಗಳ ಹಿನ್ನೆಲೆಯಲ್ಲಿ ಪಡಿಮೂಡಿರುವ ಈ ಮಂದಿರವು ಆಧುನಿಕ ಮತ್ತು ಪುರಾತನ ಶೈಲಿಗಳೆರಡನ್ನೂ ಸಮವಾಗಿ ಬಳಸಿಕೊಂಡಿದೆ. 

ಆದಿಚುಂಚನಗಿರಿಯ ಈ ದೇವಾಲಯವನ್ನು ತಲುಪಲು ಬೆಟ್ಟದ ಪಶ್ಚಿಮ ದಿಕ್ಕಿನಲ್ಲಿರುವ ಮೆಟ್ಟಿಲುಗಳ ಮೂಲಕ ಸಾಗಬೇಕು. ಬೆಟ್ಟದ ತಪ್ಪಲಿನಲ್ಲಿ ಬೃಹತ್ ಪುಷ್ಕರಣಿಯನ್ನು ರಚಿಸಲಾಗಿದೆ. ಬೆಟ್ಟದ ಮೇಲೆ ಏರುವಾಗ ಅನೇಕ ಮಹಾದ್ವಾರಗಳು ಕಾಣಸಿಗುತ್ತವೆ. ಇವುಗಳ ಇಕ್ಕೆಲಗಳಲ್ಲಿ ಆಶ್ರಮದ ಕಟ್ಟಡಗಳಿವೆ. ಮಧ್ಯದಲ್ಲಿ ಭದ್ರವಾದ, ವಿಸ್ತಾರವಾದ ಬುನಾದಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ ಭವ್ಯ ದೇವಾಲಯವಿದೆ. 

ಈ ದೇವಾಲಯದ ಕಾರ್ಯವು ೧೯೯೩ರಷ್ಟು ಹಿಂದೆಯೇ ಆರಂಭವಾಯಿತು. ಇದನ್ನು ಸರಿಸುಮಾರು ೧೨೦೦ ಶಿಲ್ಪಿಗಳು ಹದಿನೈದು ವರ್ಷಗಳ ಶ್ರಮದಿಂದ ನಿರ್ಮಿಸಿದರು. ಇದರ ರಾಜಗೋಪುರವು ೯೦ ಅಡಿ ಎತ್ತರವಿದ್ದು, ದೇವಾಲಯವು ಪೂರ್ವ ಪಶ್ಟಿಮವಾಗಿ ೨೮೫ ಅಡಿ ಹಾಗೂ ದಕ್ಷಿಣೋತ್ತರವಾಗಿ ೧೮೦ಅಡಿಗಳ ವಿಸ್ತಾರವಾಗಿದೆ. ಉತ್ತರ, ದಕ್ಷಿಣ ಮತ್ತು ಪಶ್ಚಿಮಕ್ಕೆ ಮೂರು ಗೋಪುರಗಳಿದ್ದು ಅವು ಒಂದೊಂದೂ ೫೦ ಅಡಿಗಳಷ್ಟು ಎತ್ತರವಿವೆ. ಇಡೀ ದೇವಾಲಯದಲ್ಲಿ ೧೭೨ ಸ್ಥಂಭಗಳಿವೆ. ತಮಿಳುನಾಡಿನ ಕಾಂಚೀಪುರಂ ಸಮೀಪದಲ್ಲಿ ದೊರೆಯುವ ಕೃಷ್ಣಶಿಲೆಗಳಿಂದ ಇಲ್ಲಿನ ವಿಗ್ರಹಗಳನ್ನು ಕಡೆಯಲಾಗಿದೆ. ಮಧ್ಯದಲ್ಲಿ ಸ್ಥಳದ ಅಧಿದೇವತೆ ಕಾಲಭೈರವ, ಈಶಾನ್ಯಕ್ಕೆ ಸ್ತಂಭಾಂಬಿಕೆ, ಆಗ್ನೇಯಕ್ಕೆ ನಾಗಲಿಂಗೇಶ್ವರಸ್ವಾಮಿ, ಗಣಪತಿ, ಕಾರ್ತಿಕೇಯ, ಹೀಗೆ ೫ ಮಂದಿರಗಳಿವೆ. ದೇವಾಲಯದ ಪ್ರಮುಖ ರಚನೆಗಳಿಗೆ ಸ್ಥಳೀಯವಾಗಿ ಸಿಕ್ಕುವ ಬಿಳಿಯ ಗ್ರಾನೈಟ್‌ ಕಲ್ಲನ್ನು ಬಳಸಲಾಗಿದೆ. ಇಲ್ಲಿನ ಶಿಲ್ಪಶೈಲಿಯಲ್ಲಿ ಕೆಲವೊಂದು ರಚನೆಗಳು ಆಧುನಿಕ ಕಲೆಯನ್ನು ಬಿಂಬಿಸಿದರೆ ಮತ್ತೆ ಕೆಲವು ೧೬-೧೮ನೇ ಶತಮಾನಗಳಲ್ಲಿ ಪ್ರಚಲಿತವಿದ್ದ ವಿಜಯನಗರದ ನಾಯಕರ ಶೈಲಿಯನ್ನು ನೆನಪಿಸುವಂತಿವೆ. ತಮಿಳುನಾಡಿನ ಶಿಲ್ಪಿಗಳೇ ಇದರ ನಿರ್ಮಾಣಕಾರ್ಯದಲ್ಲಿದ್ದುದರಿಂದ ಅಲ್ಲಿನ ಪ್ರಭಾವವೂ ಗೋಚರವಾಗುತ್ತದೆ. 

ಧ್ವಜಸ್ತಂಭ ಮತ್ತು ಗರ್ಭ ಗೃಹ 

ಭೈರವನು ರುದ್ರ-ಶಿವ-ಈಶಾನ ಸ್ವರೂಪನಾದ್ದರಿಂದ ಈತನು ದೇವಮೂಲೆಯೆಂದು ಕರೆಯುವ ಈಶಾನ್ಯದ ಅಧಿಪತಿ. ಸಾಧಾರಣವಾಗಿ ಅಷ್ಟಭೈರವರ ಉಲ್ಲೇಖ ಎಲ್ಲೆಡೆಯೂ ಪ್ರಚಲಿತವಿದೆ. ಆದರೆ ಇಲ್ಲಿ ೮೮ ಭೈರವರ ವಿವಿಧ ರೂಪಗಳನ್ನು ಕಂಡರಿಸಲಾಗಿದ್ದು, ಅವುಗಳನ್ನು ಶುಭ್ರ ಬಿಳಿಯ ಕಂಬಗಳ ಹಿನ್ನೆಲೆಯಲ್ಲಿ ಅಳವಡಿಸಲಾಗಿದೆ. ಅಷ್ಟಭೈರವರೆಂದರೆ ಅಷ್ಟದಿಕ್ಪಾಲಕರು. ಆದರೆ ಕೆಲವು ಶಿವಮಂದಿರಗಳಲ್ಲಿ ಈಶಾನ್ಯದಲ್ಲಿ ಕ್ಷೇತ್ರಪಾಲನನ್ನು ಸ್ಥಾಪಿಸಿರುವುದು ಸಾಧಾರಣವಾಗಿ ಕಂಡುಬರುತ್ತದೆ. ಶಿವನ ಶಕ್ತಿ ಮತ್ತು ತತ್ವಗಳು ದೀಕ್ಷೆ ಮತ್ತು ಉಪದೇಶಗಳ ಮೂಲಕ ಸಾಗಿಬಂದಿರುವ ಉದಾಹರಣೆಗಳಿವೆ. ಆದಿಚುಂಚನಗಿರಿಯ ಈ ದೇಗುಲವು ಬ್ರಹ್ಮಾಂಡದ ಪರಿಕಲ್ಪನೆಯ ಸ್ಥಂಭ ಮತ್ತು ಜಲಸ್ಥಾನವಾದ ಬಾವಿಗಳ ಪರಿಕಲ್ಪನೆಯನ್ನು ಹೊಂದಿದೆ. ವಾರಾಣಸಿಯಲ್ಲಿ ಇದು ಸಾಂಕೇತಿಕವಾಗಿ ಸ್ಥಂಭ ಭೈರವ (ಇದನ್ನು ಹಿಂದಿಯಲ್ಲಿ ಲಾತ್ ಎಂದು ಕರೆಯುವರು) ಮತ್ತು ಕಪಾಲಮೋಚನ ಬಾವಿಗಳೆಂದು ನಿರ್ದೇಶಿಸಲಾಗಿದೆ. ಅದೇ ಪದ್ಧತಿಯು ದಕ್ಷಿಣದಲ್ಲಿ ಮುಂದುವರೆದು ಇಲ್ಲಿ ಅಂಬಿಕೆಯು ಸ್ತ್ರೀ ರೂಪವನ್ನು ಪಡೆದಳೆಂದೂ, ಹೀಗಾಗಿ ಆಕೆಯನ್ನು ಸ್ಥಂಭಾಂಬಿಕೆಯೆಂದೂ ಹೆಸರಿಸಲಾಗಿದೆ. (ಸ್ಥಳೀಯವಾಗಿ ಇದನ್ನೇ ಕಂಬದಮ್ಮನೆಂದು ಕರೆಯುವ ರೂಢಿಯಿದೆ).

ಅಶ್ವಾರೂಢ ರಜತ ಭೈರವ
ಆದಿಚುಂಚನಗಿರಿಯ ಮೂಲವಿಗ್ರಹ ಅನೇಕ ಶತಮಾನಗಳಿಂದ ಪೂಜೆಗೊಳ್ಳುತ್ತಿದೆ. ಅದಕ್ಕೆ ಅನೇಕ ವಿಶಿಷ್ಟ ಲಕ್ಷಣಗಳಿವೆ. ಇಲ್ಲಿ ಆತನು ಬಾಲರೂಪಿ, ಎಂದರೆ ವಟುಕ ಭೈರವ. ಭೈರವನ ವಿಷಯದಲ್ಲಿ ರೂಪನಿಷ್ಪತ್ತಿಯನ್ನು ವಿವರಿಸುವಂಥ ನಿಗದಿತ ಶಿಲ್ಪ ಸಾಹಿತ್ಯ ಲಭ್ಯವಿಲ್ಲದಿರುವುದರಿಂದ, ಕೆಲವೊಂದು ಸ್ಥೂಲ ಲಕ್ಷಣಗಳನ್ನು ಮಾತ್ರ ಗ್ರಹಿಸಿ, ಇತರ ಅಂಗಾಂಗ, ಆಯುಧಗಳಿಗೆ ಸಂಬಂಧಿಸಿದಂತೆ, ಅವುಗಳ ಕೆತ್ತನೆಯು ಭೈರವನ ಆರಾಧಕರ ಇಲ್ಲವೇ ಶಿಲ್ಪಿಗಳ ಮೇಲೆ ಆಧಾರಿತವಾಗಿರುತ್ತದೆಂದು ಈ ವಿಷಯದ ಬಗ್ಗೆ ವಿಶೇಷ ಅಧ್ಯಯನಮಾಡಿರುವ ಕರೈನ್ ಲ್ಯಾಡ್ರೆಕ್‌ ಹೇಳಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇಟಗಿಯ ಕಾಲಭೈರವನ ವಿಷಯದಲ್ಲಿ ಅವರು ನೀಡಿರುವ ವಿವರಣೆಯನ್ನು ಈ ಹಿಂದೆ ಚರ್ಚಿಸಲಾಗಿದೆ.

ಆದಿಚುಂಚನಗಿರಿಯಲ್ಲಿನ ಕಾಲಭೈರವನ ವಿಗ್ರಹದ ಲಕ್ಷಣಗಳು ಹೀಗಿವೆ : ಇಲ್ಲಿನ ವಿಗ್ರಹಕ್ಕೆ ನಾಲ್ಕು ಕೈಗಳಿದ್ದು, ಮೇಲಿನ ಬಲಗೈಯಲ್ಲಿ ತ್ರಿಶೂಲ, ಕೆಳ ಬಲಗೈನಲ್ಲಿ ಖಡ್ಗಗಳಿವೆ. ಕೆಳ ಎಡಗೈನಲ್ಲಿ ಕಪಾಲ ಮತ್ತು ಬ್ರಹ್ಮನ ಶಿರಗಳಿವೆ. ಈ ಶಿರದ ಕೆಳಗೆ ಕಾಲಭೈರವನ ವಾಹನ ನಾಯಿಯಿದ್ದು ಇದು ಬ್ರಹ್ಮನ ಶಿರದಿಂದ ತೊಟ್ಟಿಕ್ಕುತ್ತಿರುವ ರಕ್ತವನ್ನು ಹೀರುತ್ತಿದೆ. ಅದರ ಹಿಂಗಾಲುಗಳು ಕತ್ತರಿಸಲ್ಪಟ್ಟ ಇನ್ನೊಂದು ಶಿರದ ಮೇಲೆ ಊರಿ ನಿಂತಿವೆ. ಕಾಲಭೈರವನ ವಿಗ್ರಹವನ್ನು ಗುರುತಿಸುವಾಗ ಬ್ರಹ್ಮಶಿರ ಮತ್ತು ಕಪಾಲಗಳು ಮುಖ್ಯವಾಗುತ್ತವೆ. ಏಕೆಂದರೆ ಡಮರು ಮತ್ತು ತ್ರಿಶೂಲಗಳು ಸಾಧಾರಣವಾಗಿ ಎಲ್ಲ ಶಿವ ಶಿಲ್ಪಗಳಲ್ಲಿ ಕಂಡಬರುತ್ತವೆ. ಆದಿ ಚುಂಚನಗಿರಿಯಲ್ಲಿರುವ ಕಾಲಭೈರವನ ವಿಗ್ರಹದಲ್ಲಿನ ವಿಶೇಷವೆಂದರೆ ಆತನು ಸೊಂಟದಲ್ಲಿ ಕಿರುಗತ್ತಿಯನ್ನು ಧರಿಸಿದ್ದಾನೆ. ಅವನ ಜಟೆಯ ಕೂದಲುಗಳು ಹಿಂದಕ್ಕೆ ಬಾಚಿದಂತಿದ್ದು, ಅವು ಕುತ್ತಿಗೆಯ ಹಿಂಭಾಗದಲ್ಲಿ ಹರಡಿಕೊಂಡಿದೆ. ಉಬ್ಬಿದ ಕಣ್ಣುಗಳು, ಕೋರೆದಾಡೆಗಳು, ದೊಡ್ಡ ಕುಂಡಲಗಳು, ದೀರ್ಘವಾದ ಸರ್ಪಮಾಲೆ, ಅಗಲವಾದ ಮುತ್ತಿನ ಮಣಿಗಳ ಹಾರ, ಎತ್ತರವಾದ ಹಾವುಗೆ (ಪಾದುಕೆ)ಗಳು ಸುಂದರವಾಗಿ ಮೂಡಿಬಂದಿವೆ. 





ರಾಮೇಶ್ವರ ದೇವಾಲಯವನ್ನು ನೆನಪಿಸುವ ಅಧುನಿಕ ರಚನೆಗಳು


 ಗರ್ಭಗೃಹದ ಬದಿಯಲ್ಲಿ ೧೦ ಅಡಿ ಎತ್ತರದ ಭವ್ಯವಾದ ಕಪ್ಪುಕಲ್ಲಿನ ಭದ್ರಕಾಳಿಯ ವಿಗ್ರಹವಿದೆ. ಜನಸಂದಣಿಯಿಂದ ಕಾಪಾಡಲು, ಗಾಜಿನ ಕಪಾಟುಗಳಲ್ಲಿ ಇಡಲಾಗಿದೆ. ಶೈವ ತಂತ್ರಾಗಮದ ಅಧಿದೇವತೆಯೇ ಭೈರವ. ಆತನ ವಿಗ್ರಹಗಳು ಉತ್ತರದ ವಾರಾಣಸಿಯಲ್ಲಿ, ಉಜ್ಜಯನಿಯಲ್ಲಿ  ಯೋಗಿನಿಯರ ಮಂದಿರಗಳಲ್ಲಿ, ವಿಶೇಷತಃ ಶಿವನ ಪ್ರಥಮ ಪತ್ನಿಯಾದ ಸತಿಯ ಶರೀರದ ಭಾಗಗಳು ಬಿದ್ದ ಎಡೆಗಳಾದ ಶಕ್ತಿಪೀಠಗಳಲ್ಲಿ, ಹೀಗೆ ವಿವಿಧೆಡೆಗಳಲ್ಲಿ ಕಂಡುಬರುತ್ತವೆ. ಆದರೆ ದಕ್ಷಿಣ ಭಾರತದಲ್ಲಿ ಆದಿಚುಂಚನಗಿರಿಯ ದೇವಾಲಯವನ್ನು ಮೀರಿಸಿದ ಬೇರೆ ಮಂದಿರ ಕಾಣಲಾರದು.  

ಪುರಾತನ ಆಚರಣೆಗಳ ವೈಭವೀಕೃತ ಮುಂದುವರಿಕೆಯೊಂದಿಗೆ, ಆಧುನಿಕ ಶಿಲ್ಪಶೈಲಿ ಮತ್ತು ವಿಗ್ರಹಾರಾಧನೆಗಳು ಮೇಳೈಸಿರುವ ಈ ಕ್ಷೇತ್ರಕ್ಕೆ ತನ್ನ ಹಿಂದಿನ ವೈಭವ ಮರಳಿ ಬಂದಿರುವುದು ಸಂತಸದ ಸಂಗತಿ.

ಚಿತ್ರ ಕೃಪೆ - ಪವನ್ ಕುಮಾರ್ 
* * * * * * * 

ಮಂಗಳವಾರ, ಡಿಸೆಂಬರ್ 13, 2011

ಬೆಟ್ಟದ ನೆಲ್ಲಿಕಾಯಿ ಮತ್ತು ಸಮುದ್ರದ ಉಪ್ಪು


ಕಾಲಭೈರವ ಮತ್ತು ಕರೈನ್ ಲ್ಯಾಡ್ರೆಕ್‌





ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು !

ಕಾಲಭೈರವನ ಬಗ್ಗೆ ಅರಿಯಲು, ಬರೆಯಲೆಂದೇ ಈ ಬ್ಲಾಗ್ ಆರಂಭವಾಯಿತಲ್ಲವೆ. ಆ ಆಸಕ್ತಿ ನನ್ನಲ್ಲೇಕೆ ಮೂಡಿತು? ಮುಂದೆ ಹುಡುಕಿಕೊಂಡು ಹೋದಂತೆಲ್ಲ, ಅದು ನನ್ನನ್ನು ಎಲ್ಲೆಲ್ಲಿಗೆ ಕರೆದೊಯ್ದಿತು? ಎಂಬ ವಿಷಯಗಳ ಬಗ್ಗೆ ವಿವರ ಇಲ್ಲಿದೆ. ನಾನು ಕಾಲಭೈರವನತ್ತ ಆಕರ್ಷಿತನಾಗಲು ಆತ ನಮ್ಮ ಕುಲದೇವರೆಂಬ ಭಕ್ತಿ ಕಾರಣವೆಂದರೆ ನನಗೆ ನಾನೇ ಮೋಸ ಮಾಡಿಕೊಂಡಂತಾದೀತು. ನನ್ನ ಬಾಲ್ಯದಲ್ಲಿ ದೇವರುಗಳ ವರ್ಗೀಕರಣದ ಬಗ್ಗೆ ನನಗೇನೂ ತಿಳಿದಿರಲಿಲ್ಲ. ಬಹುತೇಕ ನಮ್ಮ ಆಸಕ್ತಿಯಲ್ಲಿ ಭೈರವನ ಬಗ್ಗೆ ಭಕ್ತಿ ಭಾವವೇ ಹೆಚ್ಚು. ಅದು ಸ್ವಾಭಾವಿಕವೂ ಕೂಡಹಿಂದೂ ಧರ್ಮದ ದೇವತೆಗಳ ಸಂಖ್ಯೆ ಮೂವತ್ತಮೂರು ಕೋಟಿಗಳೆನ್ನುವುದು ಪ್ರಚಲಿತ ಸಂಗತಿ. ಇಷ್ಟೊಂದು ಸಂಖ್ಯೆಗಳಲ್ಲಿರುವ ನಮ್ಮ ದೇವ ದೇವಿಯರ ಬಹಿರ್‌  ರೂಪಗಳು ಬೇರೆ ಬೇರೆಯಾದರೂ ದೈವವೆನ್ನುವುದು ಒಂದೇ ಎನ್ನುವುದು ಸರ್ವವಿದಿತಶೈವ, ವೈಷ್ಣವ ಪಂಥಗಳ ಬಗ್ಗೆ ಗೊತ್ತಿರಲಿಲ್ಲ. ಅದು ಎಲ್ಲರಿಗೂ ಹಾಗೆಯೇ. ದೇವನೊಬ್ಬ, ನಾಮ ಹಲವು. ದೇವರು ವಿವಿಧ ರೂಪಗಳಲ್ಲಿದ್ದರೂ, ಆತನಿಗೆ ಒಂದೇ ರೂಪ. ಇದನ್ನು ಎಲ್ಲ ಹಿರಿಯರೂ ಕಿರಿಯರಿಗೆ ತಿಳಿಸಿಯೇ ಇರುತ್ತಾರೆ. ಆದರೆ ಈ ಸಾಮಾನ್ಯೀಕರಣ ಸಾರ್ವತ್ರಿಕವಾಗುವುದಿಲ್ಲ. ಮುಂದೆ ಬೆಳೆದಂತೆಲ್ಲ, ವಿವಿಧ ಆಚಾರಗಳು, ಆಕಾರಗಳು, ಉತ್ಸವಗಳು, ಆಚರಣೆಗಳು ತೋರಲು ಆರಂಭವಾಗುತ್ತವೆ. ಆಗ ಭೇದ ಕಾಣಿಸಲು ಆರಂಭವಾಗುತ್ತದೆ. ಈ ವ್ಯತ್ಯಾಸಗಳು ಗೋಚರವಾದಂತೆ ಹಲವಾರು ಪಂಥಗಳ, ಆಚಾರ್ಯರ, ಸಿದ್ಧಾಂತಗಳ ಪರಿಚಯವಾಗುತ್ತ ಹೋಗುತ್ತದೆ. ಅದು ಬಾಲಕನನ್ನು ಚಿಂತಿಸುವಂತೆ ಪ್ರೇರಿಸುತ್ತದೆ. ಯುವಕನಾದಂತೆ ಹಲವು ಆಕರ್ಷಣೆಗಳು, ಅಗತ್ಯಗಳು, ಅನಿವಾರ್ಯತೆಗಳಿಂದಾಗಿ ಅವನ ಆಸ್ಥೆಗಳು ಚದುರಿಹೋಗುತ್ತವೆ. ಅದಕ್ಕೂ ಮುಂದೆ, ಸಾಂಸಾರಿಕ ಜೀವನದಲ್ಲಿ, ಹಿರಿಯರು ಆಚರಿಸುತ್ತ ಬಂದುದನ್ನು ಅಲ್ಲಲ್ಲಿ ಹ್ರಸ್ವಗೊಳಿಸಿಕೊಂಡು ಅಗತ್ಯವಿರುವಷ್ಟನ್ನು ಮಾತ್ರ ರೂಢಿಸಿಕೊಳ್ಳುತ್ತೇವೆ. ಮುಂದೆ ಅದೊಂದು ಕ್ರಮವೇ ಆಗಿಹೋಗಿ, ಅದನ್ನು ಮುಂದಿನ ಕಿರಿಯರು ಅನುಸರಿಸುತ್ತಾರೆ. ಇದು ಎಲ್ಲ ಕಾಲದಲ್ಲಿ ನಡೆದುಬಂದಿರುವ ಮಾರ್ಗ. ನಾನು ಕೂಡ ಇದಕ್ಕೆ ಹೊರತಾದವನೇನಲ್ಲ. ಆದರೆ ಹಿರಿಯರು ಬೆಳೆಸಿದ ಅಭ್ಯಾಸಕ್ರಮದ ಬಗ್ಗೆ ಚಿಂತನೆ ಮುಂದುವರೆದಂತೆ, ನನ್ನ ಆಸಕ್ತಿ, ಅಧ್ಯಯನಗಳು ಹೆಚ್ಚಿದಂತೆಲ್ಲ, ಅವು ಈ ವಿಷಯದ ಬಗ್ಗೆ ಹೊಸ ಬಾಗಿಲನ್ನೇ ತೆರೆಯಿತು. ಕಾಲಭೈರವನು ನನ್ನ ಮನೆದೇವರಾದ್ದರಿಂದ, ಆತನ ವಿವರಗಳನ್ನು ನಾನು ಸಂಗ್ರಹಿಸುವಂತಾದುದು ವಿಶೇಷವೇನಲ್ಲ. ಆದರೆ ಈ ದೇವನ ಬಗ್ಗೆ ವಿದೇಶೀಯರು ಮಾಡಿರುವ ಅಧ್ಯಯನವನ್ನು ಕಾಲಕ್ರಮದಲ್ಲಿ ಮುಂದೆ ನೋಡುತ್ತ ಬಂದಾಗ, ನನ್ನದಿನ್ನೂ ಅಂಬೆಗಾಲು ಎನ್ನಿಸಿದ್ದು ಸುಳ್ಳಲ್ಲ. ನಮ್ಮ ಅನೇಕ ಧಾರ್ಮಿಕ, ಸಾಮಾಜಿಕ ಚಿಂತನೆಗಳ ವಿಷಯದಲ್ಲಿ ಹೀಗೇ ಆಗಿದೆ. ಕಾಲಭೈರವನ ಬಗ್ಗೆ ನನ್ನ ಆಸ್ಥೆ ಮೊಳೆತುದೂ ಇಂತಹ ಒಂದು ಚಿಂತನೆಯಿಂದಲೇ.

ನನ್ನ ಮನೆದೇವರು ವೆಂಕಟೇಶ್ವರನೋ, ಈಶ್ವರನೋ, ರಾಮನೋ ಆಗಿದ್ದಲ್ಲಿ, ಇಷ್ಟು ಕುತೂಹಲಕ್ಕೆ ಕಾರಣವಿರುತ್ತಿರಲಿಲ್ಲ. ಈ ಎಲ್ಲ ದೇವರ ಬಗ್ಗೆ ಸಾಕಷ್ಟು ಸಾಮಗ್ರಿ ಎಲ್ಲೆಡೆ ಲಭ್ಯವಿದೆ. ದೇಶಾದ್ಯಂತ ದೇವಾಲಯಗಳು, ಮಂದಿರಗಳಿವೆ, ಭಜನೆ, ಸ್ತೋತ್ರಗಳು, ಉತ್ಸವಗಳು ಸುತ್ತಲೂ ನಡೆಯುತ್ತವೆ. ಹೀಗಾಗಿ ಅವರ ಬಗ್ಗೆ ತಿಳಿಯಬೇಕೆನ್ನುವವನಿಗೆ ಯಾವ ಕಷ್ಟವೂ ಇರಲಾರದು. ಕಾಲಭೈರವನ ವಿಷಯದಲ್ಲಿ ಹೀಗಾಗಲಿಲ್ಲ. ಆತ ಉತ್ತರದವ, ದಕ್ಷಿಣ ಪ್ರಾಂತಕ್ಕೆ ಬರಬೇಕಾದರೆ, ಬಹಳ ಸಮಯವೇ ಹಿಡಿಯಿತು. ಅವನನ್ನ ಅಲ್ಪಸಂಖ್ಯಾತನೆನ್ನಲಾಗದಾದರೂ, ಅವನ ಭಕ್ತರಂತೂ ಅಲ್ಪಸಂಖ್ಯಾತರು. ಆತನಿಗೆ ಇಲ್ಲಿರುವ ಭಕ್ತರ ಸಂಖ್ಯೆ ಕಡಿಮೆ. ಲಭ್ಯವಿರುವಷ್ಟು ಸಾಹಿತ್ಯವನ್ನು ಆಧರಿಸಿ, ಅವನನ್ನು ಪೂಜಿಸಿದರು, ಅದೂ ದೊರೆಯಲಿಲ್ಲವೆಂದಾಗ ಶಿವಾರಾಧನೆಯ ಪಠ್ಯಗಳನ್ನೇ ಬಳಸಿದರು. ದೇವರೊಬ್ಬನೇ, ನಾಮ ಹಲವು, ನಿಜ. ಹಲವು ನಾಮಗಳೆಂದು ಹೇಳಿದವರು ನಾವೇ ಆಗಿರುವಾಗ, ಕೆಲವಾದರೂ ನಾಮಗಳನ್ನು ತಿಳಿದಿರಬೇಕಾದುದು ಅಗತ್ಯವಲ್ಲವೇ. ಇದರಿಂದಾಗಿ ಕಾಲಭೈರವನ ಬಗ್ಗೆ ಇರುವ ಸಾಹಿತ್ಯವನ್ನು ಹುಡುಕಾಡುವ ಅನಿವಾರ್ಯತೆ ಒದಗಿತು.

ಈ ಹಿಂದೆ ಕರೈನ್ ಲ್ಯಾಡ್ರೆಕ್‌ರ ಬಗ್ಗೆ ಬರೆದಿದ್ದೆ. ನನ್ನ ತಮ್ಮ ಚಿ. ರಾಮಚೆಂದಿರನು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಕರೈನ್ ಲ್ಯಾಡ್ರೆಕ್‌ರ ಪರಿಚಯವಾಯಿತು. ಅವನು ಬರೆದ ಪತ್ರಕ್ಕೆ ಕೂಡಲೇ ಉತ್ತರಿಸಿದ ಅವರು ಮುಂದೆ, ಅವನು ಕಾಲಭೈರವನ ಕುರಿತಾದ ಸಾಹಿತ್ಯದ ಬಗ್ಗೆ ಕೇಳಿದಾಗ ಕೋರಿಕೆಯನ್ನು ಮನ್ನಿಸಿ ಅವರು ೬೦-೭೦ ಪುಟಗಳಷ್ಟು ವಿಸ್ತಾರದ ಕಾಲಭೈರವನ ಕುರಿತಾದ ಸಾಹಿತ್ಯವನ್ನು ಕಳಿಸಿದ್ದಲ್ಲದೆ, ಆಯಾ ಸಹಸ್ರನಾಮಗಳು, ಶ್ಲೋಕಗಳು, ಕವಚಗಳು, ಸ್ತೋತ್ರಗಳು ಯಾವ ಕಾಲಘಟ್ಟದಲ್ಲಿ ಯಾರು ಇದನ್ನು ರಚಿಸಿದರೆಂಬ ಆಕರ ವಿವರಗಳನ್ನೂ ನೀಡಿದರು. ಅವರು ಅದನ್ನು ರೋಮನ್ ಇಂಗ್ಲಿಷ್‌ ಲಿಪಿಯಲ್ಲಿ ಬರೆದಿದ್ದರು. ಇದನ್ನು ಈಗ ಅವರ ಚಿತ್ರ ಮತ್ತು ಹೆಚ್ಚಿನ ವಿವರಗಳು ದೊರಕಿರುವುದರಿಂದ ಮತ್ತೆ ಅವರ ಬಗ್ಗೆ ಪ್ರಸ್ತಾಪಿಸುತ್ತಿರುವೆ.

ಲ್ಯಾಡ್ರೆಕ್ ಈ ದೇವರ ಬಗ್ಗೆಯೇ ಏಕೆ ಆಸ್ಥೆ ತಳೆದರೆಂಬ ಕುತೂಹಲವಿತ್ತು. ಒಂದರ್ಥದಲ್ಲಿ ಕಾಲಭೈರವನನ್ನು ಕುರಿತಾದ ನನ್ನ ಆಸಕ್ತಿಗೆ, ನನ್ನಂತೆಯೇ ಆಸಕ್ತಿ ಹೊಂದಿರುವ ಎಲ್ಲರಿಗೂ ಅವರು, ಈ ವಿಷಯದ ಬಗ್ಗೆ ಆಕರ ವ್ಯಕ್ತಿಕಾಲಭೈರವನ ವಿಷಯದಲ್ಲಿ ಲ್ಯಾಡ್ರೆಕ್‌ರಿಗೆ ಭಕ್ತಿಯೇನೂ ಇರಲಾರದು, ಆದರೆ  ಈ ದೈವದ ಬಗ್ಗೆ ಅವರಿಗೆ ಕುತೂಹಲವಿತ್ತು. ಅವರ ದೇಶದಲ್ಲಿ, ನಮ್ಮ ದೇಶದಲ್ಲಿ ಇರುವಂತೆಯೆ, ವಿಶ್ವವಿದ್ಯಾಲಯಗಳು ಯಾವುದಾದರೊಂದು ಅವರ ಆಸಕ್ತಿಯ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಲು ಅದಕ್ಕೆ ಬೇಕಿರುವ ಶಿಷ್ಯವೇತನ ಮತ್ತು ಇತರ ಅನುಕೂಲಗಳನ್ನು ಮಾಡಿಕೊಡುವ ಪದ್ಧತಿಯಿದೆ. ಅದರಂತೆ ಲ್ಯಾಡ್ರೆಕ್‌ ರು ಶಿವನ ಘೋರರೂಪವಾದ ಕಾಲಭೈರವನ ವಿಷಯದಲ್ಲಿ ಅಧ್ಯಯನಕ್ಕೆ ತೊಡಗಿದರು. ಕಾಲಭೈರವನ ಪ್ರತಿಮೆಗಳು, ವಿಗ್ರಹಗಳು ದಕ್ಷಿಣ ಭಾರತದಲ್ಲಿ ಹರಡಿದ ಕಾಲ ಮತ್ತು ಅದಕ್ಕೆ ಕಾರಣವಾಗಿರಬಹುದಾದ ಐತಿಹಾಸಿಕ ಅಂಶಗಳ ವಿಶ್ಲೇಷಣೆಗೆ ತೊಡಗಿದರು.  ಅವರು ಇರುವುದು ಪ್ಯಾರಿಸ್‌ನಲ್ಲಿ. ಅವರು ಇತಿಹಾಸದ ವಿದ್ಯಾರ್ಥಿ. ಪ್ಯಾರಿಸ್‌ನ ಸೋರ್ಬಾನ್‌ ವಿಶ್ವವಿದ್ಯಾಲಯದ ಕಲೆ, ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದಲ್ಲಿ ಭಾರತೀಯ ಕಲಾ ಇತಿಹಾಸದ ಪ್ರೊಫೆಸರರಾಗಿ ಕೆಲಸಮಾಡುತ್ತಾರೆಅವರು ಎಂ.. ಓದುತ್ತಿರುವಾಗ ಭಾರತೀಯ ಕಲಾ ಇತಿಹಾಸವನ್ನು ಆಯ್ಕೆ ಮಾಡಿಕೊಂಡರು. ಆಗ ಕಾಲಭೈರವನ ಉಗ್ರರೂಪ ಅವರನ್ನು ಆಕರ್ಷಿಸಿತು. ಏಕೆಂದರೆ ಮೃದು ಸ್ವಭಾವದ, ದೇವತಾ ಗುಣಗಳನ್ನು ಹೊಂದಿರುವ ಅನೇಕ ದೇವ-ದೇವಿಯರನ್ನು ಬಿಟ್ಟು, ಭಾರತದಲ್ಲಿ ದೇವರ ಉಗ್ರರೂಪವನ್ನು ಏಕೆ ಆರಾಧಿಸುತ್ತಾರೆ ಎಂಬ ಚಿಂತನೆ ಭೈರವನ ಅಧ್ಯಯನಕ್ಕೆ ಪ್ರೇರಣೆ ನೀಡಿತಂತೆ. ಅನೇಕ ಶಿಲ್ಪಿಗಳು, ಭೈರವನ ದೇವಮಂದಿರಗಳಲ್ಲಿ ಈ ಉಗ್ರರೂಪಕ್ಕೆ ಪ್ರಾತಿನಿಧ್ಯ ನೀಡಿರುವುದರ ವಿಶೇಷವೇನು ಎಂಬ ಅಂಶಗಳ ಜತೆಗೆ, ಈ ವಿಷಯವು ಸವಾಲು ಕೂಡ ಆಗಿತ್ತು. ಇದಕ್ಕೆಂದು ಅವರು ಅನೇಕ ಸಂಸ್ಕೃತ ಗ್ರಂಥಗಳನ್ನು, ಶಿಲ್ಪಗಳನ್ನು ಅಧ್ಯಯನಮಾಡಲು ಆರಂಭಿಸಿದರು. ಇಂಥ ಚಟುವಟಿಕೆಯ ಭಾಗವಾಗಿ ಅವರು ಹೊರತಂದಿರುವ ಸಹಸ್ರಪ್ರತಿಮಾವಳಿ ಎಂಬ ಸಿ.ಡಿ.ಯಲ್ಲಿ ದಕ್ಷಿಣ ಭಾರತದ ಎಲ್ಲ ಭೈರವನ ವಿಗ್ರಹಗಳು, ಅವು ಇರುವ ಸ್ಥಳಗಳ ವಿವರಗಳು, ಶಿಲ್ಪಶೈಲಿ, ಅವುಗಳನ್ನು ನಿರ್ಮಿಸಿದ ಕಾಲ, ಮುಂತಾಗಿ ಯಥೇಚ್ಛ ದಾಖಲೆಗಳು ದೊರೆಯುತ್ತವೆ. ಪಿ.ಎಚ್.ಡಿ. ಪದವಿಗೆಂದು ಅವರು ಮಾಡಿರುವ ಈ ಯೋಜನಾ ಕಾರ್ಯವು ಕಾಲಭೈರವನ ಆಸಕ್ತರಿಗೆ ಬೇಕಿರುವ ಎಲ್ಲ ಮಾಹಿತಿಗಳನ್ನೂ ಒದಗಿಸುತ್ತದೆ. ೨೦೧೦ರಲ್ಲಿ ಕಪಾಲ ಮತ್ತು ಖಡ್ಗ  : ದಕ್ಷಿಣ ಭಾರತದಲ್ಲಿ ಭೈರವನ ಪ್ರಾತಿನಿಧಿಕ ಅಂಶಗಳು (೮ರಿಂದ ೧೩ನೇ ಶತಮಾನಗಳಲ್ಲಿ) ಎಂಬ ವಿಷಯದ ಬಗ್ಗೆ ಪಿ.ಎಚ್.ಡಿ. ಯ ಪ್ರೌಢ ಪ್ರಬಂಧವನ್ನು ರಚಿಸಿ ಡಾಕ್ಟೋರೇಟ್ ಪದವಿಯನ್ನು ಪಡೆದ ಈಕೆ ಇದನ್ನು ಸ್ಪಾನಿಷ್ ಭಾಷೆಯಲ್ಲಿ ರಚಿಸಿರುವರು. ಇದೇ ಗ್ರಂಥದ ಇಂಗ್ಲಿಷ್ ಆವೃತ್ತಿ ಸದ್ಯದಲ್ಲೇ ಹೊರಬರಲಿದೆ. ನಾನು ಅದಕ್ಕಾಗಿ ಕಾಯುತ್ತಿದ್ದೇನೆ. ಇದೊಂದು ಗ್ರಂಥ ಹೊರಬಂದು ಕನ್ನಡದ ಓದುಗರನ್ನು ತಲುಪುವಂತಾದರೆ, ಕಾಲಭೈರವನ ಬಗೆಗಿನ ನಮ್ಮೆಲ್ಲರ ಹುಡುಕಾಟ ಕೊನೆಯಾಯಿತೆಂದು ಹೇಳಬಹುದು.

ಇದು ಲ್ಯಾಡ್ರೆಕ್‌ರ ಅಧ್ಯಯನಶೀಲತೆಗೆ ಸಾಕ್ಷಿ. ಅವರೇನೂ ಈ ಎಲ್ಲ ಸ್ತೋತ್ರಗಳನ್ನೋ, ಸಹಸ್ರನಾಮಗಳನ್ನೋ ಬರೆದವರಲ್ಲ. ಅದೆಲ್ಲವೂ ನಮ್ಮ ದೇಶದಲ್ಲೇ ಇದ್ದವು. ನಾವು ಯಾರೂ ಆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದೆ, ಅವುಗಳ ಬಗ್ಗೆ ಹುಡುಕಾಟ ನಡೆಸದೆ, ನಮ್ಮ ಕೈಯಳವಿನಲ್ಲಿ ದೊರತಷ್ಟಕ್ಕೆ ಮಾತ್ರ ತೃಪ್ತಿ ಪಟ್ಟೆವು. ಹೀಗಾಗಿ ಅವನ್ನು ಬೇರೆ ಯಾರೋ ದೇಶದವರು, ಯಾವುದೋ ಉದ್ದೇಶಕ್ಕೆಂದು ಬೆಳಕಿಗೆ ತಂದಾಗ ಅವರ ಬಗ್ಗೆ ಅಭಿಮಾನ ತಳೆದೆವು. ವಿದೇಶೀಯರಾಗಿ ಅವರಿಗೆ ಇದು ಸಾಧ್ಯವಾಯಿತೇ ಎಂದು ಆಶ್ಚರ್ಯಪಟ್ಟೆವು, ಅವರ ಅಧ್ಯಯನಶೀಲತೆ ಕಂಡು ಬೆರಗಾದೆವು. ಒಬ್ಬ ಹಿಂದೂ ದೇವತೆಯ ಬಗ್ಗೆ ಹಿಂದೂಗಳಿಗೆ ತಿಳಿದಿರುವುದೇ ಕಡಿಮೆ, ವಿದೇಶೀಯರು ಹಠಹಿಡಿದು ಮಾಡಿದ ಸಾಧನೆಯಿದು ಎಂಬ ಪ್ರಶಂಸೆಗೆ ಲ್ಯಾಡ್ರೆಕ್‌ರೇನೂ ಕಾಯುತ್ತಿಲ್ಲ. ಆದರೆ ಅವರಂತೆ ಅಧ್ಯಯನವನ್ನು ಕೈಗೊಂಡು, ಅದರ ಆಂತರ್ಯವನ್ನೆಲ್ಲ ಶೋಧಿಸಿ ತೆಗೆಯಲು ಬೇಕಾದ ಸಮಯ, ಆಸಕ್ತಿ, ಅನುಕೂಲತೆಗಳು ನಮಗಿಲ್ಲವೆನ್ನುವುದೇ ಸರಿಯಾದ ಮಾತಿರಬಹುದು. ಹೀಗಾಗಿಯೇ ಕಾಲಭೈರವನ ಕುರಿತಾಗಿ ಇರುವ ಸಾಹಿತ್ಯ ತೀರ ಕಡಿಮೆಯೆನ್ನಬೇಕು. ಬಹುತೇಕ ಕಾಲಭೈರವನ ದೇವಾಲಯಗಳಲ್ಲಿ, ಶಂಕರಾಚಾರ್ಯ ವಿರಚಿತ ಕಾಲಭೈರವಾಷ್ಟಕವೊಂದನ್ನು ಹೊರತು ಪಡಿಸಿದರೆ, ಬೇರೆ ಅಷ್ಟೋತ್ತರಗಳಾಗಲೀ, ಸಹಸ್ರನಾಮಗಳಾಗಲೀ ಪ್ರಚಲಿತವಿಲ್ಲ. ಇದಕ್ಕೆ ಪರ್ಯಾಯವಾಗಿ ಶಿವಾಷ್ಟೋತ್ತರವನ್ನು ಹೇಳುವುದು ರೂಢಿಯಲ್ಲಿದೆ.

ಭೈರವಪಂಥವನ್ನು ನಾಥಪಂಥವೆಂದೂ ಕರೆಯುವರು. ಇದು ಇತಿಹಾಸದ ಕಾಲಘಟ್ಟದಲ್ಲಿ ಪ್ರಮುಖವಾಗಿದ್ದ ದಿನಗಳಿದ್ದವು. ಬಹುಶಃ ಶೈವ ಮತ್ತು ವೈಷ್ಣವ ಪಂಥಗಳ ನಡುವೆ ಜಟಾಪಟಿ ನಡೆಯುತ್ತಿದ್ದ ಕಾಲಕ್ಕೆ, ತಾವು ಉಗ್ರದೇವತೆಯ ಆರಾಧಕರಾಗಿರುವುದರಿಂದ  ಭೈರವ ಪಂಥದ ಮೂಲಕ ತಮ್ಮದೇ ಪ್ರಬಲಗುಂಪು ಎಂಬ ಭಾವನೆಯನ್ನೂ ಮೂಡಿಸಿರುವ ಸಾಧ್ಯತೆಗಳಿವೆ. ಇದಕ್ಕೆ ಉದಾಹರಣೆಯಾಗಿ ಶಿವರಹಸ್ಯವೆಂಬ ಗ್ರಂಥದ ಶಿವಗೌರೀ ಸಂವಾದದಲ್ಲಿ ಉಲ್ಲೇಖಿತವಾಗಿರುವ ಕಾಶೀ ಮಾಹಾತ್ಮ್ಯದ ೧೧ನೇ ಅಧ್ಯಾಯದಲ್ಲಿ ಕಾಲಭೈರವ ಮಾಹಾತ್ಮ್ಯವೆಂಬ ಅಧ್ಯಾಯವಿದೆ. ಅದರಲ್ಲಿ  ಪ್ರಸ್ತಾಪಿತವಾಗಿರುವ ಕಾಲಭೈರವ ಸಹಸ್ರನಾಮಾವಳಿಯ ಸಾಹಿತ್ಯವನ್ನಿಷ್ಟು ಗಮನಿಸಬಹುದು. ಇದರಲ್ಲಿ ಕೆಲವು ಶ್ಲೋಕಗಳು ಹೀಗಿದೆ.

        ಸಾಂಬೋ ಪ್ರಸಿದ್ಧ ದೇವೇಶ ಕ್ಲೇಶಂ ದೂರೀ ಕುರುಷ್ವಮೇ |
        ಅಶೈವಂ ಸಂಹಾರಸ್ಯಮೇನಮಧರ್ಮಸ್ಯ ಪ್ರವರ್ತಕಮ್ || ೪೪ ||

        ಅಧರ್ಮವದ್ಧ್ಯಾ ಸರ್ವೇಪಿ ಯಾಸ್ಯಂತಿ ನರಕಮ್ ಧ್ರುವಮ್ |
        ಕೃಪಾಲುರಸಿ ದೇವೇಶ ವಿಧಿಮೇನಂ ವಿನಾಶಯ || ೪೫ ||

        ಅಶೈವಂ ದುರಾಚಾರಃ ಸ್ಥಾಪನೀಯೋ ನ ಸರ್ವಥಾ |
        ಅಶೈವಂ ಶಿಕ್ಷಾ ಕರ್ತವ್ಯಾ ದೇವೇಶಸ್ಯ ಪುರಾಂತಕ || ೪೬ ||

ಅರ್ಥವೆಂದರೆ ಶೈವನಲ್ಲದವನನ್ನು ನಾಶಮಾಡು ಎಂಬ ಬೋಧೆ ಅಲ್ಲಿದೆಈ ಪರಿಸ್ಥಿತಿ ಕೂಡ ಹಾಗೆಯೇ ಉಳಿಯಲಿಲ್ಲ.  ಕಾಲ ಬದಲಾದಂತೆ ಚಿಂತನೆಗಳೂ ಬದಲಾಗಿರುವುದನ್ನು ನಾವು ಅದೇ ರೂಪದ ಶ್ಲೋಕಗಳಲ್ಲಿ ಕಾಣುತ್ತೇವೆ

        ಶಿವಾಯ ವಿಷ್ಣು ರೂಪಾಯ ಶಿವರೂಪಾಯ ವಿಷ್ಣವೇ |
        ಶಿವಶ್ಚ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ ||  

        ಯಥಾ ಶಿವ ಮಯಂ ವಿಷ್ಣುಃ ಏವಂ ವಿಷ್ಣು ಮಯಂ ಶಿವಃ |
        ಯಥಾಂತರ ನ ಪಶ್ಯಾಮಿ ತಥಾಮೇ ಸ್ವಸ್ತಿರಾಯುಷಿ ||
 
ಶೈವ ವೈಷ್ಣವ ಪಂಥಗಳ ನಡುವಣ ಹೋರಾಟ ಅರ್ಥಹೀನ, ಹರಿ-ಹರರಿಬ್ಬರೂ ಬೇರೆಯಲ್ಲ  ಎಂಬ ತಿಳುವಳಿಕೆ ಬಂದ ಕಾಲಕ್ಕೆ ಇಂಥ ಶ್ಲೋಕಗಳು ರಚಿತವಾದವು. ಇದೇ ಕಾರಣಕ್ಕೆ ನಾನು ಇಂಥ ಅಂಶಗಳಿಲ್ಲದ ಒಂದು ಸಹಸ್ರನಾಮವನ್ನು ಸಂಗ್ರಹಿಸಿದೆನೇ ವಿನಾ, ಭೇದ ಭಾವವನ್ನು ತೋರುವಂಥ ಸಾಹಿತ್ಯವನ್ನು ಆದರಿಸಲಿಲ್ಲ.

ನಾನು ಹೋದೆಡೆಯಲ್ಲಿ ದೊರಕುವ ಕಾಲಭೈರವನ ಚಿತ್ರಗಳನ್ನು ಸಂಗ್ರಹಿಸುವುದು ನನ್ನ ಅಭ್ಯಾಸವೇ ಆಯಿತು. ಇತ್ತೀಚೆಗೆ ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲೂಕಿನ ಇಟಗಿಯ ಮಹಾಮಾಯೀ ಮಂದಿರವನ್ನು ಸಂದರ್ಶಿಸುತ್ತಿದ್ದಾಗ, ಅಲ್ಲೊಂದು ತೀರ ಅಪರೂಪದ ವಿಗ್ರಹ ಕಾಣಿಸಿತು. ಅದರ ಬಗ್ಗೆ ಈಗಾಗಲೇ ಪ್ರಸ್ತಾಪಿಸಿರುವೆನಾದರೂ, ಈ ಚಿತ್ರವನ್ನು ಲ್ಯಾಡ್ರೆಕ್‌ರಿಗೆ ತಲುಪಿಸಿದಾಗ, ಅವರಿಂದ ಬಂದ ಪ್ರತಿಕ್ರಿಯೆಯನ್ನು ಇಲ್ಲಿ ನಮೂದಿಸುತ್ತಿರುವೆ. ಅವರು ಹೇಳಿದರು. "ನಿಜಕ್ಕೂ ಇದೊಂದು ಅಪರೂಪದ ವಿಗ್ರಹವೇ ಸರಿ.  ನನಗೆ ತಿಳಿದಂತೆ ಆದಿಚುಂಚನಗಿರಿಯಲ್ಲಿ ನೂತನವಾಗಿ ನಿರ್ಮಿತವಾಗಿರುವ ಮಂದಿರದಲ್ಲಿ ಬೆಳ್ಳಿಯಲ್ಲಿ ಮಾಡಿರುವ ಒಂದು ವಿಗ್ರಹವಿದೆ. ಅಲ್ಲಿ ಕಾಲಭೈರವನನ್ನು ಕುದುರೆಯ ಮೇಲೆ ಕುಳ್ಳಿರಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ನನಗೆ ಈ ಬಗ್ಗೆ ತಿಳಿದಿರಲಿಲ್ಲ. ಈ ವಿಗ್ರಹಕ್ಕೆ ಒಂದು ವಿಶೇಷವಿದೆ. ಏನೆಂದರೆ ಇದು ಮಣಿ ಮತ್ತು ಮಲ್ಲಾಸುರರೆಂಬ ರಕ್ಕಸರನ್ನು ಕೊಲ್ಲಲು ಖಂಡೋಬಾ ಅಥವಾ ಮೈಲಾರನೆಂಬ ಶಿವನರೂಪದಲ್ಲಿ ಕಾಣಿಸುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಮೈಲಾರೇಶ್ವರ ಆರಾಧನೆ ನಡೆಯುತ್ತದೆ. ಇವನನ್ನು ಮಾರ್ತಾಂಡ ಭೈರವನೆಂದೂ ಅಶ್ವಾರೋಹಿಯಾದ ಯೋಧನಂತೆ ಚಿತ್ರಿಸಲಾಗಿರುವುದು ಕಂಡುಬರುತ್ತದೆ. ಇಟಗಿಯ ವಿಗ್ರಹದಲ್ಲಿ ಕಂಡುಬರುವಂತೆ ಕುದುರೆಯ ಕಾಲುಗಳು ರಾಕ್ಷಸರ ತಲೆಗಳನ್ನು ಮೆಟ್ಟಿರುವಂತೆ, ಕೆಲವೊಮ್ಮೆ ಆತನನ್ನು ನಾಯಿಗಳು  ಸುತ್ತುವರೆದಿರುವಂತೆ ಚಿತ್ರಿಸಲಾಗಿರುತ್ತದೆ. ಅದರಲ್ಲೂ ಕಾಲಭೈರವನ ಲಕ್ಷಣಗಳಾದ ಖಡ್ಗ, ಡಮರು, ಶೂಲ, ಕಪಾಲಗಳನ್ನು ಹೊಂದಿರುವನು".

ಹೀಗೇ ಇನ್ನೊಂದು ಪ್ರಸಂಗ. ಈ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿರುವ ಕಾಲಭೈರವ ಧ್ಯಾನಶ್ಲೋಕವನ್ನು ಅವರಿಗೆ ಕಳಿಸಿ, ಈ ವಿವರಣೆಗೆ ಹೊಂದುವ ಶಿಲ್ಪಗಳಿವೆಯೇ ಎಂದು ಕೇಳಿದ್ದೆ. ಆಗ ಅವರಿಂದ ಬಂದ ಉತ್ತರವೂ ಆಸಕ್ತಿದಾಯಕವಾಗಿತ್ತು. ಅವರು ಬರೆದಿದ್ದರು. "ನೀವು ಕಳಿಸಿರುವ ಶ್ಲೋಕದ ಅನ್ವಯ ಇರಬಹುದಾದ ಚಿತ್ರಗಳಿಗೆಂದು ಶೋಧಿಸಿದೆ. ಆಶ್ಚರ್ಯವೆಂದರೆ ಅಂಥ ಯಾವುದೇ ಶಿಲ್ಪಗಳು ದೊರೆತಿಲ್ಲ. ಆದರೆ ನಾಯಿ/ನಾಯಿಗಳು ಆತನ ಸಮೀಪವಿರುವ ಕೆಲವು ಚಿತ್ರಗಳನ್ನು ಕಳಿಸಿರುವೆ. ಇಲ್ಲಿರುವ ಎರಡು ಶಿಲ್ಪಗಳು ಹೊಯ್ಸಳರ ಕಾಲದವು. ಅವುಗಳಲ್ಲಿ ಒಂದು ಹಳೇಬೀಡಿನ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲದಲ್ಲಿದ್ದರೆ, ಮತ್ತೊಂದು ಬೇಲೂರಿನ ಚನ್ನಕೇಶವ ದೇವಾಲಯದಲ್ಲಿದೆ. ಮೂರನೆಯ ಚಿತ್ರವು ಆಂಧ್ರಪ್ರದೇಶದ ಪುಷ್ಪಗಿರಿಯ ವೈದ್ಯನಾಥ ಮಂದಿರದಲ್ಲಿದೆ".

ಲ್ಯಾಡ್ರೆಕ್‌ರಿಂದ ಇಷ್ಟು ವಿಪುಲ ಸಾಹಿತ್ಯವನ್ನು ಪಡೆದ ನಂತರ, ಇವೆಲ್ಲವನ್ನೂ ಕನ್ನಡಲಿಪಿಯಲ್ಲಿ ಬರೆದು, ಕಂಪ್ಯೂಟರ್‌ಗೆ ಅಳವಡಿಸಿ, ಕಾಲಭೈರವ ಪೂಜಾ ವಿಧಾನವೆಂಬ ಪುಸ್ತಕವನ್ನು ರೂಪಿಸಿದೆ. ಇದರಲ್ಲಿ ನಾಲ್ಕು ಅಷ್ಟೋತ್ತರಗಳು, ಒಂದು ಸಹಸ್ರನಾಮ, ಕ್ಷಮಾಪರಾಧ ಸ್ತೋತ್ರ, ಸ್ವರ್ಣಾಕರ್ಷಣ ಭೈರವ ಸ್ತೋತ್ರ, ಭೈರವ ಕವಚ ಮುಂತಾಗಿ ೧೦ ಸ್ತುತಿಗಳನ್ನು ಸಂಗ್ರಹಿಸಲಾಗಿದೆ. ಇದರ ಪುಟಗಳನ್ನು ಮುಂದಿನ ಸಂಚಿಕೆಗಳಲ್ಲಿ ಕ್ರಮವಾಗಿ ಪ್ರಕಟಿಸುವ ಇರಾದೆಯಿದೆ. ಆಸಕ್ತರು ಸಂಗ್ರಹಿಸಿಕೊಂಡು ಭೈರವ ಪೂಜೆಯನ್ನು ಕ್ರಮಬದ್ಧವಾಗಿ ಮಾಡುವಂತಾಗಲಿ ಎಂಬುದು ಆಶಯ.


* * * * * * *


ಭಾನುವಾರ, ನವೆಂಬರ್ 27, 2011

"ಭೈರವ ದೇವರ ಅವತರಣ"


ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ "ಭೈರವ ದೇವರ ಅವತರಣ". ಈ ವಿಷಯದ ಬಗ್ಗೆ ಅನೇಕ ಕಥಾನಕಗಳು ಪ್ರಚಲಿತವಿದೆಯಾದರೂ, ಇಲ್ಲಿರುವ ಬರಹವನ್ನು ವಾರಾಣಸಿಯ ದೇಹಾತ್ ಪ್ರಕಾಶನ ಸಂಸ್ಥೆಯವರು ಪ್ರಕಟಿಸಿರುವ "ಭೈರವ ಪೂಜಾ ವಿಧಾನ" ಗ್ರಂಥದಿಂದ ಆಯ್ದುಕೊಳ್ಳಲಾಗಿದೆ. ಇತರ ಕಥಾನಕಗಳಲ್ಲೂ ಹೆಚ್ಚು ಕಡಿಮೆ ಇದೇ ಅಂಶಗಳು ಪ್ರಸ್ತಾಪಿತವಾಗಿದ್ದು, ಅಲ್ಲಲ್ಲಿ ಅಲ್ಪ ಸ್ಪಲ್ಪ ಬದಲಾವಣೆಗಳು ಕಂಡುಬರುತ್ತವೆ. ಏನಿದ್ದರೂ ಪುರಾಣ ಕಥಾನಕಗಳು ಜನರ ಬಾಯಿಂದ ಬಾಯಿಗೆ ಹರಿದು ಬರುವಾಗ ಇಂತಹ ವ್ಯತ್ಯಾಸಗಳು ಸ್ವಾಭಾವಿಕ. ನಮ್ಮ ಅನೇಕ ಶಿಲ್ಪಗಳಲ್ಲಿ, ಚಿತ್ರಗಳಲ್ಲಿ  ಬ್ರಹ್ಮನು ಚತುರ್ಮುಖನಾಗಿಯೇ ಚಿತ್ರಿತನಾಗಿರುವನಷ್ಟೇ. ಆದರೆ ವಸ್ತುಸ್ಥಿತಿ ಹಾಗಿಲ್ಲ.  ತಾನೇ ಅತಿ ಶ್ರೇಷ್ಠನೆಂದು ಬ್ರಹ್ಮನಂಥ ಪಿತಾಮಹನೇ ಗಳಹಲು ಆರಂಭಿಸಿದಾಗ,ಪಂಚಮುಖನಾದ ಆತನು ಅನಿವಾರ್ಯವಾಗಿ ತನ್ನ ಒಂದು ಶಿರವನ್ನು ಕಳೆದುಕೊಂಡು ಚತುರ್ಮುಖ ಬ್ರಹ್ಮನಾದನು. ಈ ಕಾರಣದಿಂದ ಕಾಲಭೈರವನ ಉತ್ಪತ್ತಿಯೂ ಆಯಿತು. ಇದರಲ್ಲಿ ಅಹಂಕಾರವು ಯಾರಿಗೂ ಸಲ್ಲದೆಂಬ ಒಂದು ನೀತಿಯೂ ಇದೆ. ವಿಸ್ತೃತ ಬರಹ ನಿಮ್ಮ ಮುಂದಿದೆ. ಓದಿ.







ಮಂಗಳವಾರ, ನವೆಂಬರ್ 1, 2011

"ಭಿಭ್ರಾಣಂ ಶುನಕಾರೂಢಂ........."



"ಭಿಭ್ರಾಣಂ ಶುನಕಾರೂಢಂ........."

ಈಗಾಗಲೇ ಪ್ರಸ್ತಾಪಿಸಿರುವಂತೆ, ಕಾಲಭೈರವ ಶುನಕಾರೂಢ, ಎಂದರೆ, ನಾಯಿಯನ್ನು ವಾಹನವಾಗಿ ಉಳ್ಳವ.  ಮೊತ್ತ ಮೊದಲು, ನಮ್ಮ ಕುಲದೇವತೆ ನನ್ನನ್ನು ಆಕರ್ಷಿಸಲಿಲ್ಲ, ಬದಲಾಗಿ ಚಿಕ್ಕಂದಿನಲ್ಲಿ ಆತನ ಅಚ್ಚ ಬಿಳಿಯ ವಾಹನ "ನಾಯಿ"  ನನ್ನ ಗಮನ ಸೆಳೆಯಿತಂದರೆ ಅದು ಸ್ವಾಭಾವಿವೂ ಇರಬಹುದು. ದೊಡ್ಡ ಗಾತ್ರದ ಗೋಲ್ಡನ್ ರಿಟ್ರೀವರ್ ಹೋಲುವ ಈ ಬಿಳಿಯ ನಾಯಿಯ ಜೋಲು ಕಿವಿಗಳು, ಸೂಕ್ಷ್ಮ ಕಣ್ಣುಗಳು ಮತ್ತು ಮನುಷ್ಯನನ್ನು ಹೊರಬಲ್ಲ ಅದರ ತ್ರಾಣವನ್ನು ಕಲಾವಿದರು ಸಮರ್ಥವಾಗಿ ಚಿತ್ರಿಸಿದ್ದಾರೆ. ಈ ಚಿತ್ರವನ್ನು ಹಿಂದೆ ಪ್ರಕಟಿಸಲಾಗಿದೆ.


ನಮ್ಮ ಪುರಾಣಕತೆಗಳಲ್ಲಿ ನಾಯಿಯ ಪ್ರಸ್ತಾಪ ಅನೇಕ ಸಂದರ್ಭಗಳಲ್ಲಿ ಬಂದಿದೆ.  ಮಹಾಭಾರತದಲ್ಲಿ ಧರ್ಮರಾಯ ವೃಷೋತ್ಸರ್ಗ ಮಾಡುವ ಕಾಲಕ್ಕೆ ಆತನನ್ನು ಹಿಂಬಾಲಿಸಿದ್ದು ಒಂದು ನಾಯಿ.  ದತ್ತಾತ್ರೇಯನ ಚಿತ್ರದಲ್ಲಿ ಆತನು ಹಸುವೊಂದಕ್ಕೆ ಒರಗಿ ನಿಂತಿದ್ದರೆ, ಬಳಿಯಲ್ಲಿ ನಾಲ್ಕು ನಾಯಿಗಳು ಸುತ್ತಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ನಾಲ್ಕು ನಾಯಿಗಳು, ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತದೆ ಎಂದೂ ಹೇಳಲಾಗಿದೆ.


ಕಾಲಭೈರವ ಧ್ಯಾನ ಶ್ಲೋಕವನ್ನು ಇಲ್ಲಿ ಇನ್ನೊಮ್ಮೆ ಅರ್ಥ ಸಹಿತ ನೀಡಿದ್ದೇನೆ. ಕಾಲಭೈರವನ ಆರಾಧಕರು ಇದನ್ನು  ಮಕ್ಕಳಿಗೂ ಕಲಿಸುವಂತಾಗಲಿ ಎನ್ನುವುದು ಆಶಯ.






ಕರಕಲಿತ ಕಪಾಲೀ, ಕುಂಡಲೀ ದಂಡಪಾಣಿ |
(ಕರದಲ್ಲಿ ಕಪಾಲವನ್ನು ಹಿಡಿದಿರುವ, ಕಿವಿಗಳಿಗೆ ಕುಂಡಲಗಳನ್ನು ಧರಿಸಿ, ಕೈಯಲ್ಲಿ ದಂಡವನ್ನು ಹಿಡಿದಿರುವ)

ತರುಣ ತಿಮಿರ ನೀಲೋ, ವ್ಯಾಲಯಜ್ಞೋಪವೀತಿ ||
(ಆತನ ಬಣ್ಣ ಮುಸ್ಸಂಜೆಯ ಕತ್ತಲಿನ ನೀಲಿಯ ಬಣ್ಣ, ಸರ್ಪದ ಜನಿವಾರವನ್ನು ಧರಿಸಿರುವ)

ಕೃತ ಸಮಯ ಪರ್ಯಾ ವಿಘ್ನವಿಚ್ಛೇದ ಹೇತುಃ |
(ನಿಶ್ಚಿತ ಸಮಯದಲ್ಲಿ ವಿಘ್ನಗಳನ್ನು ನಿವಾರಿಸಲು ಕಾರಣವಾಗುವ)

ಜಯತು ವಟುಕನಾಥಃ ಸಿದ್ಧಿದಃ ಸಾಧಕಾನಾಂ ||
(ಸಾಧಕರಿಗೆ ಒಲಿಯುವಂಥ ವಟು ಸ್ವರೂಪಿಯಾದ ಕಾಲಭೈರವನಿಗೆ ಜಯವಾಗಲಿ)

ಅದೇ ರೀತಿ ಮತ್ತೊಂದು ಪ್ರಚಲಿತ ಧ್ಯಾನ ಶ್ಲೋಕ ಹೀಗಿದೆ :


ನಗ್ನ ರೂಪಂ ತ್ರಿನೇತ್ರಂ ಚ ಸರ್ಪಾಭರಣ ಭೂಷಿತಮ್ |
(ಈತನು ನಗ್ನರೂಪಿ, ಮೂರು ಕಣ್ಣುಗಳುಳ್ಳವ, ಸರ್ಪಗಳನ್ನು ಆಭರಣಗಳನ್ನಾಗಿ ಧರಿಸಿರುವನು)

ರತ್ನ ಕುಂಡಲ ಸಂಯುಕ್ತಂ ಶಿರೋಮಾಲಾ ವಿಭೂಷಿತಂ |
(ಕಿವಿಗೆ ರತ್ನ ಕುಂಡಲಗಳನ್ನು ಧರಿಸಿ, ರುಂಡಮಾಲೆಗಳಿಂದ ಸುಶೋಭಿತನಾಗಿರುವವನು)

ಖಡ್ಗಂ ಶೂಲಂ ಕಪಾಲಂ ಚ ಡಮರುಂ ಭೀಮ ದಂಷ್ಟ್ರಕಂ |
(ಕೈಗಳಲ್ಲಿ ಖಡ್ಗ, ಶೂಲ, ಕಪಾಲ ಮತ್ತು ಡಮರುಗಳನ್ನು ಧರಿಸಿರುವ ಈತನು ಭೀಮ ಬಲವುಳ್ಳವನು)

ಭಿಭ್ರಾಣಂ ಶುನಕಾರೂಢಂ ಕ್ಷೇತ್ರಪಾಲಂ ಅಹಂ ಭಜೇ ||
(ನಾಯಿಯನ್ನು ವಾಹನವಾಗಿ ಹೊಂದಿ ಅದರ ಮೇಲೆ ಕುಳಿತಿರುವ ಕ್ಷೇತ್ರಪಾಲನನ್ನು ನಾನು ಭಜಿಸುತ್ತೇನೆ.

ಈ ವರೆಗೆ ಪ್ರಕಟವಾಗಿರುವ ಕಾಲಭೈರವ ಶಿಲ್ಪಗಳನ್ನು ಗಮನಿಸಿ. ಈ ಎಲ್ಲ ಶಿಲ್ಪಗಳಲ್ಲೂ ಮೇಲೆ ನೀಡಿರುವ ವಿವರಗಳು ಕಂಡುಬರುತ್ತವೆ. ಇದನ್ನು ಧ್ಯಾನಶ್ಲೋಕ ಎಂದು ಹೇಳಲಾಗಿದ್ದು, ಇದರ ಅನ್ವಯವೇ ಶಿಲ್ಪಿಗಳು ಕಾಲಭೈರವನನ್ನು ಕಂಡರಿಸಿರುವುದು ಗೋಚರಿಸುತ್ತದೆ.  ಸ್ವಾರಸ್ಯದ ಸಂಗತಿಯೆಂದರೆ ವಿಪುಲ ಸಾಹಿತ್ಯನನ್ನು ಹೊಂದಿರುವ ಈ ದೇವನ ಇತರ ಸ್ತುತಿಗಳಲ್ಲಿ ಎಲ್ಲಿಯೂ ಆತನು ಶುನಕಾರೂಢನೆಂದು ಹೇಳಲಾಗಿಲ್ಲ ! ಇದೊಂದು ಶ್ಲೋಕದಲ್ಲಿ ಮಾತ್ರ ಈ ವಿವರಣೆ ಇದ್ದು,  ನಾವು ಕಾಣುವ ಬಹುತೇಕ ಭೈರವ ವಿಗ್ರಹಗಳಲ್ಲಿ ಕಾಣಿಸಿರುವ ನಾಯಿಯು, ಆತನ ಕರದಲ್ಲಿರುವ ತಲೆಬುರುಡೆಯಿಂದ ಸೋರುತ್ತಿರುವ ರಕ್ತವನ್ನು ನೆಕ್ಕಲು ಹವಣಿಸುತ್ತಿರುವಂತೆ ಮಾತ್ರ ಚಿತ್ರಿಸಲಾಗಿದೆಯೇ ವಿನಾ, ನಾಯಿಯ ಮೇಲೆ ಕುಳಿತಿರುವಂಥ ಶಿಲ್ಪಗಳಾಗಲೀ, ಚಿತ್ರಗಳಾಗಲೀ ತೀರ ವಿರಳವೆಂದೇ ಕಾಣುತ್ತದೆ.  ಏನಿದ್ದರೂ ಕಾಲಭೈರವ ಮತ್ತು ನಾಯಿಗಳ ಸಾಂಗತ್ಯವಂತೂ ಎಲ್ಲೆಡೆ ಕಂಡುಬರುತ್ತಿದೆಯೆನ್ನಲು ಅಡ್ಡಿಯಿಲ್ಲ.

* * * * * * *