ಬುಧವಾರ, ಏಪ್ರಿಲ್ 1, 2015

ಜಡಿಗೇನಹಳ್ಳಿಯಲ್ಲೊಂದು ಕಾಲಭೈರವ ಕ್ಷೇತ್ರ

ಹಿಂದಿನ  ಸಂಚಿಕೆಯೊಂದರಲ್ಲಿ ತಮಿಳುನಾಡಿನ ಅಧಿಯಮನ್ ಕೋಟೆಯ ಕಾಲಭೈರವ ದೇಗುಲದ ಬಗ್ಗೆ ಬರೆದಿದ್ದು ನೆನಪಿರಬಹುದು. ಅಲ್ಲಿ ನಡೆಯುವ ಆಚರಣೆಯನ್ನೇ ಹೋಲುವ ಮತ್ತೊಂದು ಕ್ಷೇತ್ರ ಕರ್ನಾಟಕದಲ್ಲಿದೆ ಎಂದು ಇತ್ತೀಚೆಗೆ ಟಿ.ವಿ. ವಾಹಿನಿಯ ವರದಿಯೊಂದರಿಂದ ತಿಳಿಯಿತು. ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಹೊಸಕೋಟೆ ತಾಲೂಕು, ಮಾಲೂರು ರಸ್ತೆಯ ಸಮೀಪದಲ್ಲಿರುವ ಗ್ರಾಮ ಜಡಿಗೇನಹಳ್ಳಿಯಲ್ಲಿದೆ. ಇದು ಜನರಿಗೆ ಬಹಳಕಾಲ ಅಪರಿಚಿತವಾಗಿಯೇ ಇತ್ತು. ಶಿಲ್ಪಕಲಾ ಕೆತ್ತನೆಗಳಿಲ್ಲದೆ,  ಅತ್ಯಂತ ಸರಳವಾದ   ಕಲ್ಲು ಮಂಟಪದಂತೆ ಕಾಣುವ ಈ ದೇಗುಲವನ್ನು ಅಲ್ಲಿ ಆಳುತ್ತಿದ್ದ ರಾಜರೋ, ಸಾಮಂತರೋ ತಮ್ಮ ದೈವಿಕ ನೆಲೆಯಾಗಿ ಸ್ಥಾಪಿಸಿದರೆಂದು ತಿಳಿಯಬಹುದು.

ಇಲ್ಲಿರುವ ಕಾಲಭೈರವನ ವಿಗ್ರಹದ ಬಲಭಾಗದಲ್ಲಿ ಇನ್ನೊಂದು ವಿಗ್ರಹವಿದ್ದು, ಅದೂ ಸಮಾನವಾಗಿ ಪೂಜೆಗೊಳ್ಳುತ್ತದೆ. ಆ ವಿಗ್ರಹವು ಮಾಳಮ್ಮ ದೇವಿಯದು ಎಂದು ಹೇಳುವರು. ಮಾಳಮ್ಮನೆಂಬ ಹೆಸರು ಭೈರವ ಸಂಬಂಧವಾದ ಜಾನಪದ ಕಥೆಗಳಲ್ಲಿ ಪ್ರಸ್ತಾಪಿತವಾಗಿದೆಯೆಂದು ಹಿಂದಿನ ಸಂಚಿಕೆಯಲ್ಲಿ ನಮೂದಿಸಲಾಗಿದೆ.  ಇಲ್ಲಿ ಪ್ರಚಲಿತವಿರುವ ಜಾನಪದ ಕಥೆಯಂತೆ ಒಂದಾನೊಂದು ದಿನ ಮಾಳಮ್ಮನು ಕಾಲಭೈರವನ ಗುಡಿಯನ್ನು ತನ್ನ ಮಗುವಿನೊಂದಿಗೆ ಪ್ರವೇಶಿಸಿದಳು. ಆದರೆ ಆಕೆ ಪುನಃ ಹಿಂತಿರುಗಿ ಬರಲೇ ಇಲ್ಲ. ವಿಚಲಿತರಾದ ಅವಳ ತಂದೆ, ಗುಡಿಯೊಳಗೆ ಬಂದು ನೋಡಿದಾಗ, ಮಗಳು ತನ್ನ ಮಗುವಿನ ಸಹಿತ ಶಿಲೆಯಾಗಿ ಕಾಲಭೈರವನ ಪಕ್ಕದಲ್ಲಿ ನಿಂತಿದ್ದಳು. ಆಗ ಕೇಳಿಬಂದ ಅಶರೀರವಾಣಿಯಂತೆ ತನ್ನನ್ನು ಹುಡುಕುವುದು ಅನವಶ್ಯಕವೆಂದೂ, ತಾನು ದೈವಸನ್ನಿಧಿಯಲ್ಲೇ ನೆಲೆ ನಿಂತಿರುವುದಾಗಿ ಐತಿಹ್ಯ. 

ಈ ದೇಗುಲ ಪ್ರಸಿದ್ಧಿಗೆ ಬರಲು ಕಾರಣರಾದವರು ಅಲ್ಲಿನ ಗ್ರಾಮಸ್ಥರೊಬ್ಬರು. ಅವರು ವೃತ್ತಿಯಿಂದ ಗಣಪತಿ ವಿಗ್ರಹಗಳ ತಯಾರಕರು. ಅವರಿಗೆ ದೈವಸಾಂಗತ್ಯ ಹತ್ತಿರದ ವಿಷಯವಾದ್ದರಿಂದ ತಮ್ಮ ಗ್ರಾಮದಲ್ಲಿರುವ ಈ ಮಂದಿರದ ಬಗ್ಗೆ ಆಸಕ್ತಿ ಮೂಡಿತು. ಅವರ ದೈವಭಕ್ತಿಯು ದೇವಕ್ಷೇತ್ರಗಳ ದರ್ಶನಕ್ಕೂ ಪ್ರೇರಣೆ ನೀಡಿದ್ದರಿಂದ ಹಲವಾರು ಮಂದಿರಗಳಿಗೆ ಹೋಗಲಾರಂಭಿಸಿದರಲ್ಲದೆ, ಅಲ್ಲಿನ ದೈವೀ ವಿಶೇಷಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಂಡರು. ಇಂಥ ಪ್ರವಾಸಗಳಲ್ಲಿ 
ಒಮ್ಮೆ ಅವರು ತಮಿಳು ನಾಡಿನಲ್ಲಿರುವ ಅಧಿ ಯಮನ್ ಕೋಟೆಯ ಕಾಲಭೈರವ ಮಂದಿರವನ್ನೂ ಸಂದರ್ಶಿಸಿದರು.  ಕುಂಬಳ ಕಾಯಿ ತಿರುಳು ತೆಗೆದು, ಕೆಂಪು ದಾರದ ಬತ್ತಿಯಿಂದ ಅದರಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ ಕಾಲಭೈರವನ ಸೇವೆ ಮಾಡುತ್ತಿದ್ದ ಪರಿ ಅವರನ್ನು ಆಕರ್ಷಿಸಿತು. ಜ್ಯೋತಿಷದಲ್ಲೂ ಪ್ರವೇಶವಿದ್ದ ಅವರು ಅಲ್ಲಿ ಬಳಸುತ್ತಿದ್ದ ವಸ್ತುಗಳು ಜ್ಯೌತಿಷ ವಿಷಯದಲ್ಲಿ ಯಾವ ಸಂಬಂಧ ಹೊಂದಿವೆ ಎಂದು ವಿಶ್ಲೇಷಿಸಿದರು. ಕುಂಬಳಕಾಯಿ, ಎಳ್ಳಿನ ಎಣ್ಣೆ ಮತ್ತು ಕೆಂಪು ಬತ್ತಿಗಳು ಅಲ್ಲಿ ಪ್ರಧಾನವಾಗಿದ್ದವು. ಎಳ್ಳೆಣ್ಣೆಯು ಶನಿಯನ್ನೂ, ಕೆಂಪು ದಾರವು ಕುಜನ ಸೂಚಕವಾಗಿರುವುದರಿಂದ, ನವಗ್ರಹಗಳಿಗೂ ಅಧಿಪತಿಯಾಗಿರುವ ಕಾಲಭೈರವನ ಪ್ರಭಾವವು ಇವುಗಳ ಮೇಲಿರುವುದೇ ಈ ಪೂಜಾ ವ್ಯವಸ್ಥೆಗೆ ಕಾರಣವೆಂದು ತರ್ಕಿಸಿ, ಅದನ್ನು ತಮ್ಮ ಊರಿನ ದೇವಾಲಯದಲ್ಲಿಯೂ ಜಾರಿಗೆ ತಂದರು. ಇದನ್ನು ಪ್ರತಿ ತಿಂಗಳ ಕೃಷ್ಣಪಕ್ಷದ ಅಷ್ಟಮಿಯಂದು ಆಚರಿಸಲಾಗುವುದು. ಮುಂದೆ ಈ ಪೂಜಾವಿಧಿಗಳಿಂದ ಸೂಕ್ತ ಪ್ರತಿಫಲ ದೊರೆಯಿತೆಂದೂ, ಜನರಿಗೆ ಅನೇಕ ಅನುಕೂಲಗಳು ಉಂಟಾದವೆಂದೂ ಇಲ್ಲಿನ ಜನರ ನಂಬಿಕೆ.


ಜಾನಪದ ಕಥಾನಕಗಳಿಂದ, ಭೈರವನ ಆರಾಧನೆಯಲ್ಲಿ ಕಂಡುಬರುವ ವಿವಿಧ ಆಚರಣೆಗಳು, ನಂಬಿಕೆಗಳು ತಿಳಿಸುವುದೇನೆಂದರೆ, ಮಾನವರೊಡನೆ ಆತನ  ಒಡನಾಟಗಳು ಶಿಷ್ಟ ದೇವತೆಗಳಿಗಿಂತ ಹೆಚ್ಚಿನದು.  
ಚಿತ್ರ-ಮಾಹಿತಿ ಕೃಪೆ - ಅಂತರ್ಜಾಲ 

ಮಂಗಳವಾರ, ಮಾರ್ಚ್ 3, 2015

“ಭೈರವ ನಾಣ್ಯ”ದ ಸುತ್ತಮುತ್ತ............... !

ಶೆಟ್ಟಿಕೆರೆ ಶ್ರೀ ಕಾಲಭೈರವ ಮಂದಿರದಲ್ಲಿ ನಡೆಯಲಿರುವ ಉತ್ಸವದ ಆಹ್ವಾನ ಪತ್ರಿಕೆ ಈಗಷ್ಟೇ ನನಗೆ ತಲುಪಿತು. ಇದರಲ್ಲಿ ಲಭ್ಯವಾದ ಈ ಮೇಲ್ ವಿಳಾಸಗಳಿಗೂ ಈ ಬ್ಲಾಗ್ ತಲುಪುವಂತಾಗುತ್ತಿರುವುದು ಸಂತೋಷದ ಸಂಗತಿ. ಆಸಕ್ತರು ಬ್ಲಾಗ್ ನಲ್ಲಿ ಪ್ರಕಟಿತವಾಗಿರುವ ಹಿಂದಿನ ಲೇಖನಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ವಿನಂತಿ. ಈ ವಿಷಯದ ಕುರಿತಾಗಿ ತಮ್ಮಲ್ಲಿ ಮಾಹಿತಿಗಳಿದ್ದಲ್ಲಿ ಬ್ಲಾಗ್ ನಲ್ಲಿ ಪ್ರಕಟಿಸುವ ಅವಕಾಶವಿದೆ. ನನ್ನ ಜಿ-ಮೇಲ್ ವಿಳಾಸಕ್ಕಾಗಲೀ, ದೂರವಾಣಿ ಸಂಖ್ಯೆ 99866 72483 ಯನ್ನಾಗಲೀ ಸಂಪರ್ಕಿಸಲು ಕೋರುತ್ತೇನೆ.
- ಶಂಕರ ಅಜ್ಜಂಪುರ
---------------------------------------------------------------------------------------------------------

ಇಟಗಿಯ ಮಹಾದೇವ ಮಂದಿರದ ಕಂಬವೊಂದರಲ್ಲಿ ಕಂಡುಬರುವ ಒಂದೂವರೆ ಅಡಿ ಎತ್ತರದ ಈ ಶಿಲ್ಪವು ಅತ್ಯಂತ
ರಮಣೀಯವಾಗಿದೆ. ಎಡಗಾಲನ್ನು ಒಡೆದುಹಾಕಲಾಗಿದೆ. ಇಂಥ ಅನೇಕ ರಚನೆಗಳು ಈ ದೇಗುಲದಲ್ಲಿವೆ.



ಇತ್ತೀಚೆಗೆ ಅಂತರ್ಜಾಲದಲ್ಲಿ ಅಲೆಯಲ್ಲಿ ತೇಲುತ್ತಿರುವಾಗ ಭೈರವನ ಹೆಸರಿರುವ ಬಂಗಾರದ ನಾಣ್ಯಗಳು ಚಾಲ್ತಿಯಲಿದ್ದವು ಎಂದು ತಿಳಿಯಿತು. ಅದರ ಎಳೆಗಳನ್ನು ಹಿಡಿದು ಹೊರಟಾಗ ಸಂಗ್ರಹವಾದ ವಿವರಗಳು ಇಲ್ಲಿವೆ.
ದಕ್ಷಿಣ ಭಾರತದಲ್ಲಿ ದೊರೆತ ನಾಣ್ಯದ ಬಗ್ಗೆ ಅದರ ಸಂಗ್ರಾಹಕರು ಹೀಗೆ ಹೇಳಿಕೊಂಡಿದ್ದಾರೆ :
 "ನನಗೆ 11 ರಿಂದ 13ನೇ ಶತಮಾನಕ್ಕೆ ಸೇರಿರಬಹುದಾದ ಒಂದು ಬಂಗಾರದ ನಾಣ್ಯ ದೊರೆಯಿತು. ಅದರ ಮೇಲೆ ತೆಲುಗು-ಕನ್ನಡ ಮಿಶ್ರಿತ ಲಿಪಿಯಲ್ಲಿ ಭೈರವ ಎಂದು ಬರೆಯಲಾಗಿದೆ. ಈ ನಾಣ್ಯವು ಭುಜಬಲರೆಂದು ಕರೆದುಕೊಳ್ಳುತ್ತಿದ್ದ ತೆಲುಗಿನ ಚೋಳರಾಜರಿಗೆ ಸೇರಿರಬಹುದೆಂದು ನನ್ನ ಅನುಮಾನ. ಅಲ್ಲದೆ ಇದರಲ್ಲಿರುವ ಭೈರವ ಎಂಬ ಪದಕ್ಕೆ ಶಿವನೆಂಬ ಅರ್ಥವಲ್ಲದೆ ಬೇರೇನಾದರೂ ಅರ್ಥಗಳಿದ್ದರೆ ಅದನ್ನು ತಿಳಿದವರು ನನಗೆ ವಿವರಿಸಲು ಕೋರುತ್ತೇನೆ" ಎಂದು ಬರೆದಿದ್ದರು.
ಈ ವಿಷಯದ ಬಗ್ಗೆ ಅಷ್ಟೇ ಆಸ್ಥೆಯುಳ್ಳ ಸಜ್ಜನರೊಬ್ಬರು ಬರೆದ ಉತ್ತರ ಹೀಗಿದೆ :
"ಭೈರವ ನೆಂಬ ಪದಕ್ಕೆ ಶಿವನೆಂಬ ಅರ್ಥವಲ್ಲದೆ ಬೇರೊಂದು ಅರ್ಥವೂ ಇದೆ. ಒಂದೂವರೆ ಲಕ್ಷವರ್ಷಗಳ ಹಿಂದೆಯೂ ಭಾರತದಲ್ಲಿ ಶೈವ ಪಂಥ ಪ್ರಚಲಿತವಿತ್ತು. ಭೈರವ ಪಂಥಕ್ಕೆ ತನ್ನದೇ ವಿಶಿಷ್ಠ ಸಂಪ್ರದಾಯ, ಸಿದ್ಧಾಂತ ಹಾಗೂ ಆಚರಣೆಗಳಿವೆ. ಅದರ ಉಪಾಸಕರನ್ನು ಭೈರವರೆಂದೇ ಸಂಬೋಧಿಸಲಾಗುತ್ತಿತ್ತು. ಅಂತೆಯೇ ಭೈರವೀ ಯೋಗಿನಿಯರೂ ಇದ್ದರು. ತಮಿಳುನಾಡಿನಲ್ಲಿ ಒಂದು ಕಾಲಕ್ಕೆ ಇವರ ಸಂಖ್ಯೆ ಗಣನೀಯವಾಗಿತ್ತು. ಕಾಳಾಮುಖರು, ಪಾಶುಪತರು, ಮಹಾವಿರಾಧಿಗಳ ಜತೆ ಇವರ ಸಂಪರ್ಕವಿತ್ತು.
ಪೆರಿಯಪುರಾಣವು ತಮಿಳಿನ ಪುರಾತನ ಗ್ರಂಥ. ಅದರಲ್ಲಿ "ಸಿರುತ್ತೊಂಡ ನಾಯನಾರ್ ಪುರಾಣ"ವೆಂಬ ಅಧ್ಯಾಯದಲ್ಲಿ ಶಿವನು ಭೈರವ ಪಂಥಕ್ಕೆ ಸೇರಿದವನೆನ್ನಲು ಉಲ್ಲೇಖಿಸಿರುವ ಪಾಠದ ಸಾಲುಗಳು ಹೀಗಿವೆ :
              ತುಡಿ ಸೇರ್ ಕರತ್ತು ಬಯಿರವರ್ |
              ಪೆರಿಯ ಬಯಿರವ ಕೋಲಪ್ಪೆರುಮಾನ್ ||
              ಪರಿವು ಕಂಡ ಬಯಿರವರುಮ್ |
              ಪೆರಿಯ ಬಯಿರವತ್ತೊಂಡರ್ ||
ಮಹಾನ್ ಸಾಧಕರಾಗಿದ್ದ ಭೈರವರು, ರಾಜಗುರುಗಳೂ ಆಗಿದ್ದರು. ಮಲಯ ದ್ವೀಪದಲ್ಲಿ ಇವರು ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಈ ಪ್ರಾಂತದಲ್ಲಿ ಶೈವಾರಾಧನೆ ಮತ್ತು ಶಕ್ತಿಪಂಥಗಳು ಉತ್ತುಂಗಕ್ಕೆ ತಲುಪಿದ್ದವು. ಇಂದಿನ ಮಲಯ ಮಾಂತ್ರಿಕರ ವಾಮಾಚಾರ ಪದ್ಧತಿ, ಅಚರಣೆಗಳಲ್ಲಿ ಭೈರವರ ಪ್ರಭಾವವನ್ನು ಗುರುತಿಸಬಹುದು.
ಭೈರವ ಪಂಥವನ್ನು ಅನುಸರಿಸುತ್ತಿದ್ದ ರಾಜರ ಹೆಸರಿನ ಮುಂದೆ ಭೈರವ ಎಂಬ ಪದ ಪ್ರತ್ಯಯವಿರುತ್ತಿತ್ತು. ಅವರು ತಮ್ಮ ನಾಣ್ಯಗಳಲ್ಲಿ ಖಟ್ವಾಂಗ – ಎಂದರೆ ತಲೆಬುರುಡೆಯ ಹಿಡಿಕೆಯಿರುವ ದಂಡವನ್ನು ಚಿತ್ರಿಸಿರುತ್ತಿದ್ದರು.
ಕೆಲವೊಂದು ಸ್ಥಳನಾಮಗಳಲ್ಲಿ ಭೈರವನ ಹೆಸರು ಸೇರಿಹೋಗಿ, ಈಗ ಅಪಭ್ರಂಶಗೊಂಡಿರುವ ಉದಾಹರಣೆಗಳಿವೆ. ಇಂದು ಈರೋಡ್ ಎಂದು ಪ್ರಸಿದ್ಧವಾಗಿರುವ ಸ್ಥಳನಾಮ ಇಂಥ ಪ್ರಭಾವದಿಂದಲೇ ಉಂಟಾಗಿದೆ. ಹಿಂದೆ ಅಲ್ಲಿ ಇರು ಒಟ್ಟೀಶ್ವರರ್ ಎಂಬ ಶಿವ ದೇವಾಲಯವಿತ್ತು. ಅದೇ ಅಪಭ್ರಂಶಗೊಂಡು ಇರೊಟ್ಟು, ಇರೊಡು, ಈರೋಡು ಎಂದಾಯಿತು.
ಇಂದಿಗೂ ಭೈರವರು ಇರುವಂತೆಯೇ ಭೈರವಿಯರೂ ಭಾರತದ ಹಲವು ಭಾಗಗಳಲ್ಲಿ ಇದ್ದಾರೆ. ಅವರೆಲ್ಲರ ಸಂಗಾತಿ ನಾಯಿ. ಭೈರವ ಗಾಯತ್ರಿಯಲ್ಲಿ "ಶ್ವಾನ ಧ್ವಜಾಯ ವಿದ್ಮಹೇ" ಎಂದು ವರ್ಣಿಸಲಾಗಿದೆ.
ನಾಣ್ಯಗಳ ವಿಷಯಕ್ಕೆ ಬಂದರೆ, ಅಂಥ ನಾಣ್ಯಗಳು ಆಂಧ್ರದ ಗೋದಾವರೀ, ನೆಲ್ಲೂರು ಜಿಲ್ಲೆಗಳಲ್ಲಿ ದೊರೆತ ಉದಾಹರಣೆಗಳಿವೆ. ಕನಿಷ್ಠ ಎರಡು ಜಾಗಗಳಲ್ಲಿಯಾದರೂ "ಶ್ರೀ" ಎಂದು ನಮೂದಿಸಿರುವುದು ಕಂಡುಬರುತ್ತದೆ.
ಡಾ. ಪರಮೇಶ್ವರೀ ಲಾಲ್ ಗುಪ್ತರು "ಕಾಯಿನ್ಸ್" ಎಂಬ ಗ್ರಂಥ ರಚಿಸಿದ್ದಾರೆ. ಅದರಲ್ಲಿ 192 ರಿಂದ 203 ಪುಟಗಳಲ್ಲಿ ಇವುಗಳ ವಿವರಣೆ ದೊರೆಯುತ್ತದೆ. ಅವುಗಳನ್ನು ತೆಲುಗು ಚಾಲುಕ್ಯರ ಅಡಿಯಲ್ಲಿ ಹೆಸರಿಸಲಾಗಿದೆ. ವೆಂಗಿ ಚಾಲುಕ್ಯರ ಅಥವಾ ತೆಲುಗು ಚಾಲುಕ್ಯರ ನಾಣ್ಯಗಳಲ್ಲಿ ವರಾಹದ ಚಿಹ್ನೆ ಕಂಡುಬರುವುದು ಸಾಮಾನ್ಯ. ಅದರೆ ತ್ರಿಕೋಣ ಚಿಹ್ನೆಯನ್ನು ದೇವಾಲಯದ ಗೋಪುರದ ಸಂಕೇತವೆಂದು ತುಂಬ ಮಂದಿ ತಿಳಿಯುತ್ತಾರೆ. ವಾಸ್ತವವೆಂದರೆ ಅದು ಬಾಣದ ಮೊನೆ ಎಂದು ಗ್ರಹಿಸುವುದೇ ಸೂಕ್ತ".

* * * * * * *
ಮಾಹಿತಿ ಕೃಪೆ - ಅಂತರ್ಜಾಲ 


ಗುರುವಾರ, ಜನವರಿ 1, 2015

ಈಶಾನಪಲ್ಲಿಯಲ್ಲೊಂದು ಬೃಹತ್ ಕಾಲಭೈರವ ಮಂದಿರ

    -o- ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು -o-    


  ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯ, ಸದಾಶಿವ ಮಂಡದಲ್ಲಿರುವ ಈಶಾನಪಲ್ಲಿಯ ಸಮೀಪ ರಾಮಾರೆಡ್ಡಿಯೆಂಬ ಕುಗ್ರಾಮವಿದೆ. ಅದರ ಹೆಸರೂ ಪ್ರಪಂಚಕ್ಕೆ ಇತ್ತೀಚಿನವರೆಗೂ  ತಿಳಿದಿರಲಿಲ್ಲ. ಕಾಲಭೈರವನಿಗೆ ಗುಡಿ ಕಟ್ಟಿ ಪೂಜಿಸುವ ಸಂಪ್ರದಾಯವೂ ಕಡಿಮೆ. ಈಶಾನ್ಯ ದಿಕ್ಕಿನ ರಕ್ಷಕನೆಂದು ಪ್ರಸಿದ್ಧವಾಗಿರುವ ಭೈರವನು ಇಲ್ಲಿ ಕಾಲಾಂತರದಿಂದ ಇದ್ದರೂ,  ಆತನಿಗೆ ಪೂಜೆ ಪುರಸ್ಕಾರಗಳು ಒಂದು ಕಾಲಕ್ಕೆ ಸಲ್ಲುತ್ತಿದ್ದಿರಬಹುದು. ಇದಕ್ಕೆ ಕುರುಹಾಗಿ ಇಂದಿಗೂ ಇಲ್ಲೊಂದು ಶಿವಮಂದಿರವಿದೆ. ಅಲ್ಲಿ ಗಣಪತಿ, ಶಿವಲಿಂಗ ಮತ್ತು ನಂದಿಗಳನ್ನು ಸ್ಥಾಪಿಸಲಾಗಿತ್ತು. ಈ ದೇವಾಲಯದ ರಕ್ಷಕನೆಂದು ಕಾಲಭೈರವನನ್ನು ಈಶಾನ್ಯದಿಕ್ಕಿನಲ್ಲಿ ಸ್ಥಾಪಿಸಲಾಗಿದ್ದು,  ಆತನಿಂದಾಗಿಯೇ ಈ ಗ್ರಾಮಕ್ಕೆ ಈಶಾನಪಲ್ಲಿಯೆಂಬ ಹೆಸರು ಬಂದಿತು.  ಈಗ ಶಿವಾಲಯ ಅನಾಥವಾಗಿದೆ. 
    ಮನುಷ್ಯ ದೈವಕೃಪೆಗೆ ಪಾತ್ರನಾಗಬೇಕೆಂದರೆ ಏನೆಲ್ಲ ವಿಧಿ ವಿಧಾನಗಳನ್ನು ಅನುಸರಿಸುತ್ತಾನೆ. ದೇವರಿಗೆ ಶಿಕ್ಷೆ ನೀಡಿಯಾದರೂ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳಲು ಹಿಂಜರಿಯಲಾರ. ಬರಗಾಲ ಬಂದಾಗ, ಕರ್ನಾಟಕದ ಕೆಲಭಾಗಗಳಲ್ಲಿ ಮಾರಮ್ಮ, ಚೌಡಮ್ಮ ಮುಂತಾದ ದೇವತೆಗಳಿರುವ  ಗುಡಿಗಳಲ್ಲಿ ದೇವರಿಗೆ ಮೆಣಸಿನ ಖಾರವನ್ನು ಅರೆದು ಹಚ್ಚುವ ಪದ್ಧತಿಯಿದೆ. ಇದು ಭಕ್ತರು ಅನುಭವಿಸುತ್ತಿರುವ ಉರಿ-ಸಂಕಟಗಳ ಸಂಕೇತ. ತಮಗಾದುದು ದೇವರಿಗೂ ತಲುಪಿ, ಅದಕ್ಕೆ ಪರಿಹಾರ ನೀಡಲಿ ಎಂಬುದು ಜನಪದದ ಆಶಯ. ಈಶಾನಪಲ್ಲಿಯಲ್ಲಿ ಕೂಡ ಇದೇ ತೆರೆನ ಆಚರಣೆ ರೂಢಿಯಲ್ಲಿದೆ. ಅಲ್ಲಿ ಮೆಣಸಿನ ಖಾರಕ್ಕೆ ಬದಲಾಗಿ ಹಸುವಿನ ಸಗಣಿಯನ್ನು ಕಾಲಭೈರವನ ವಿಗ್ರಹಕ್ಕೆ ಮಳೆಯಿಲ್ಲದಂತಾದಾಗ ಹಚ್ಚುವ ರೂಢಿಯಿದೆ. ಸಗಣಿಯ ವಾಸನೆಯನ್ನು ತಡೆಯಲಾಗದೇ, ತನ್ನನ್ನು ಸ್ವಚ್ಛಗೊಳಿಸಿಕೊಳ್ಳಲು ಭೈರವನು ಮಳೆ ತರಿಸಿ ತನ್ನ ಮೈಶುದ್ಧಿ ಮಾಡಿಕೊಳ್ಳುತ್ತಾನೆಂದು ಅಲ್ಲಿನ ಜನರ ನಂಬಿಕೆ. ಅದರಂತೆ ನಡೆದುದು ಇದೆ ಎಂದೂ ಹೇಳುವರು.


 
    17 ಅಡಿ ಎತ್ತರದ ಈ ಬೃಹತ್ ಶಿಲಾಮೂರ್ತಿ ಸಂಪೂರ್ಣ ನಗ್ನವಾಗಿದ್ದು, ಶೂಲ, ಡಮರು, ಖಡ್ಗ ಮತ್ತು ಬ್ರಹ್ಮಕಪಾಲವನ್ನು ಹಿಡಿದಿರುವಂತೆ ಕಡೆಯಲಾಗಿದೆ. ಇದು ರಾಮಾರೆಡ್ಡಿ ಗ್ರಾಮದ ಸಮೀಪದ ರಾವಿಚೆಟ್ಟು ಎಂಬ ಗ್ರಾಮದಲ್ಲಿತ್ತು.  ಅದಕ್ಕೆ ಮೊದಲಿನಿಂದ ಗುಡಿ ಇರಲಿಲ್ಲ. ನಂತರ ಅದನ್ನು ಇಲ್ಲಿಗೆ ತಂದು ಶಿವಾಲಯದ ಎದುರಿಗೆ ದೊಡ್ಡ ದೇವಾಲಯವನ್ನು ನಿರ್ಮಿಸಿ ಅಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಜನರು ತಮ್ಮ ಹರಕೆ ತೀರಿಸಲು ಸಿಪ್ಪೆಯಿರುವ ತೆಂಗಿನ ಕಾಯಿಗಳನ್ನು ಬಣ್ಣ ಬಣ್ಣದ ಬಟ್ಟೆಗಳಲ್ಲಿ ಕಟ್ಟಿ, ಅವುಗಳನ್ನು ದೇವಾಲಯದ ಆವರಣದಲ್ಲಿ ತೂಗುಹಾಕುವ ಸಂಪ್ರದಾಯವಿದೆ. ಮೊದಲಿಗೆ ಅಷ್ಟೇನೂ ಪ್ರಸಿದ್ಧವಾಗಿರದ ಈ ಮಂದಿರಕ್ಕೆ ಆಂಧ್ರದ ಕರೀಮ್ ನಗರ, ಅದಿಲಾಬಾದ್, ಹೈದ್ರಾಬಾದ್ಗಳಿಂದ ಅಲ್ಲದೆ ಕರ್ನಾಟಕ, ಮಹಾರಾಷ್ಟ್ರಗಳಿಂದಲೂ ಭಕ್ತರು ಬರುತ್ತಾರೆ. 
* * * * * * *

ಸೋಮವಾರ, ಡಿಸೆಂಬರ್ 1, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - ೮

ಆತ್ಮೀಯ ಓದುಗರೇ,


ಡಿಸೆಂಬರ್   ತಿಂಗಳ ಈ ಸಂಚಿಕೆಯಲ್ಲಿ

ಶ್ರೀ ಕಾಲಭೈರವ ಪೂಜಾ ವಿಧಾನ, 
ಭಾಗ - ೮

ಇದರೊಂದಿಗೆ ಕಾಲಭೈರವ ಪೂಜಾ ವಿಧಾನದ ಕೊನೆಯ ಕಂತು ಪ್ರಕಟವಾದಂತಾಗಿದೆ. 
ಆಸಕ್ತರು ಇವುಗಳನ್ನು ಸಂಗ್ರಹಿಸಿ ಪೂಜಾ ಕಾರ್ಯದಲ್ಲಿ ಬಳಸಿಕೊಳ್ಳಬಹುದು.





ಶನಿವಾರ, ನವೆಂಬರ್ 1, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 6

ಆತ್ಮೀಯ ಓದುಗರೇ,


ನವೆಂಬರ್   ತಿಂಗಳ ಈ ಸಂಚಿಕೆಯಲ್ಲಿ

ಶ್ರೀ ಕಾಲಭೈರವ ಪೂಜಾ ವಿಧಾನ, 
ಭಾಗ - 6

ಈ ಲೇಖನವಿದೆ, ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ.

(ಕಣ್ತಪ್ಪಿನಿಂದ ಈ ಭಾಗವು ಪ್ರಕಟವಾಗಿರಲಿಲ್ಲ. ಅದನ್ನೀಗ ಪ್ರಕಟಿಸಲಾಗಿದೆ. )  






ಬುಧವಾರ, ಅಕ್ಟೋಬರ್ 1, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 7

ಆತ್ಮೀಯ ಓದುಗರೇ,

ಎಲ್ಲರಿಗೂ ದಸರಾ - ದೀಪಾವಳಿಯ ಶುಭಾಶಯಗಳು 

ಅಕ್ಟೋಬರ್  ತಿಂಗಳ ಈ ಸಂಚಿಕೆಯಲ್ಲಿ

ಶ್ರೀ ಕಾಲಭೈರವ ಪೂಜಾ ವಿಧಾನ, 
ಭಾಗ - ೭

ಈ ಲೇಖನವಿದೆ, ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ.







ಬುಧವಾರ, ಆಗಸ್ಟ್ 6, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - ೫

ಆತ್ಮೀಯ ಓದುಗರೇ,


2014 ಜೂನ್, ಅಗಸ್ಟ್, ಸೆಪ್ಟೆಂಬರ್ ತಿಂಗಳ ಸಂಚಿಕೆಗಳೊಂದರಲ್ಲಿ ಪ್ರಕಟವಾಗಿರಬೇಕಿದ್ದ

"ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 5"

ಈ ಲೇಖನವಿದೆ, ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ.
ಇದರೊಂದಿಗೆ ಕಾಲಭೈರವ ಪೂಜಾ ವಿಧಾನದ ಎಲ್ಲ ಪುಟಗಳೂ ಪ್ರಕಟವಾದಂತಾಗಿದ್ದು, ಇವುಗಳನ್ನು ಮುದ್ರಿಸಿಕೊಂಡರೆ ಪುಸ್ತಕ ರೂಪ ಸಿದ್ಧವಾಗುತ್ತದೆ. ಆಸಕ್ತರು ಬಳಸಿಕೊಳ್ಳಲೆಂಬುದು ಆಶಯ.