ಗುರುವಾರ, ಜನವರಿ 1, 2015

ಈಶಾನಪಲ್ಲಿಯಲ್ಲೊಂದು ಬೃಹತ್ ಕಾಲಭೈರವ ಮಂದಿರ

    -o- ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು -o-    


  ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯ, ಸದಾಶಿವ ಮಂಡದಲ್ಲಿರುವ ಈಶಾನಪಲ್ಲಿಯ ಸಮೀಪ ರಾಮಾರೆಡ್ಡಿಯೆಂಬ ಕುಗ್ರಾಮವಿದೆ. ಅದರ ಹೆಸರೂ ಪ್ರಪಂಚಕ್ಕೆ ಇತ್ತೀಚಿನವರೆಗೂ  ತಿಳಿದಿರಲಿಲ್ಲ. ಕಾಲಭೈರವನಿಗೆ ಗುಡಿ ಕಟ್ಟಿ ಪೂಜಿಸುವ ಸಂಪ್ರದಾಯವೂ ಕಡಿಮೆ. ಈಶಾನ್ಯ ದಿಕ್ಕಿನ ರಕ್ಷಕನೆಂದು ಪ್ರಸಿದ್ಧವಾಗಿರುವ ಭೈರವನು ಇಲ್ಲಿ ಕಾಲಾಂತರದಿಂದ ಇದ್ದರೂ,  ಆತನಿಗೆ ಪೂಜೆ ಪುರಸ್ಕಾರಗಳು ಒಂದು ಕಾಲಕ್ಕೆ ಸಲ್ಲುತ್ತಿದ್ದಿರಬಹುದು. ಇದಕ್ಕೆ ಕುರುಹಾಗಿ ಇಂದಿಗೂ ಇಲ್ಲೊಂದು ಶಿವಮಂದಿರವಿದೆ. ಅಲ್ಲಿ ಗಣಪತಿ, ಶಿವಲಿಂಗ ಮತ್ತು ನಂದಿಗಳನ್ನು ಸ್ಥಾಪಿಸಲಾಗಿತ್ತು. ಈ ದೇವಾಲಯದ ರಕ್ಷಕನೆಂದು ಕಾಲಭೈರವನನ್ನು ಈಶಾನ್ಯದಿಕ್ಕಿನಲ್ಲಿ ಸ್ಥಾಪಿಸಲಾಗಿದ್ದು,  ಆತನಿಂದಾಗಿಯೇ ಈ ಗ್ರಾಮಕ್ಕೆ ಈಶಾನಪಲ್ಲಿಯೆಂಬ ಹೆಸರು ಬಂದಿತು.  ಈಗ ಶಿವಾಲಯ ಅನಾಥವಾಗಿದೆ. 
    ಮನುಷ್ಯ ದೈವಕೃಪೆಗೆ ಪಾತ್ರನಾಗಬೇಕೆಂದರೆ ಏನೆಲ್ಲ ವಿಧಿ ವಿಧಾನಗಳನ್ನು ಅನುಸರಿಸುತ್ತಾನೆ. ದೇವರಿಗೆ ಶಿಕ್ಷೆ ನೀಡಿಯಾದರೂ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳಲು ಹಿಂಜರಿಯಲಾರ. ಬರಗಾಲ ಬಂದಾಗ, ಕರ್ನಾಟಕದ ಕೆಲಭಾಗಗಳಲ್ಲಿ ಮಾರಮ್ಮ, ಚೌಡಮ್ಮ ಮುಂತಾದ ದೇವತೆಗಳಿರುವ  ಗುಡಿಗಳಲ್ಲಿ ದೇವರಿಗೆ ಮೆಣಸಿನ ಖಾರವನ್ನು ಅರೆದು ಹಚ್ಚುವ ಪದ್ಧತಿಯಿದೆ. ಇದು ಭಕ್ತರು ಅನುಭವಿಸುತ್ತಿರುವ ಉರಿ-ಸಂಕಟಗಳ ಸಂಕೇತ. ತಮಗಾದುದು ದೇವರಿಗೂ ತಲುಪಿ, ಅದಕ್ಕೆ ಪರಿಹಾರ ನೀಡಲಿ ಎಂಬುದು ಜನಪದದ ಆಶಯ. ಈಶಾನಪಲ್ಲಿಯಲ್ಲಿ ಕೂಡ ಇದೇ ತೆರೆನ ಆಚರಣೆ ರೂಢಿಯಲ್ಲಿದೆ. ಅಲ್ಲಿ ಮೆಣಸಿನ ಖಾರಕ್ಕೆ ಬದಲಾಗಿ ಹಸುವಿನ ಸಗಣಿಯನ್ನು ಕಾಲಭೈರವನ ವಿಗ್ರಹಕ್ಕೆ ಮಳೆಯಿಲ್ಲದಂತಾದಾಗ ಹಚ್ಚುವ ರೂಢಿಯಿದೆ. ಸಗಣಿಯ ವಾಸನೆಯನ್ನು ತಡೆಯಲಾಗದೇ, ತನ್ನನ್ನು ಸ್ವಚ್ಛಗೊಳಿಸಿಕೊಳ್ಳಲು ಭೈರವನು ಮಳೆ ತರಿಸಿ ತನ್ನ ಮೈಶುದ್ಧಿ ಮಾಡಿಕೊಳ್ಳುತ್ತಾನೆಂದು ಅಲ್ಲಿನ ಜನರ ನಂಬಿಕೆ. ಅದರಂತೆ ನಡೆದುದು ಇದೆ ಎಂದೂ ಹೇಳುವರು.


 
    17 ಅಡಿ ಎತ್ತರದ ಈ ಬೃಹತ್ ಶಿಲಾಮೂರ್ತಿ ಸಂಪೂರ್ಣ ನಗ್ನವಾಗಿದ್ದು, ಶೂಲ, ಡಮರು, ಖಡ್ಗ ಮತ್ತು ಬ್ರಹ್ಮಕಪಾಲವನ್ನು ಹಿಡಿದಿರುವಂತೆ ಕಡೆಯಲಾಗಿದೆ. ಇದು ರಾಮಾರೆಡ್ಡಿ ಗ್ರಾಮದ ಸಮೀಪದ ರಾವಿಚೆಟ್ಟು ಎಂಬ ಗ್ರಾಮದಲ್ಲಿತ್ತು.  ಅದಕ್ಕೆ ಮೊದಲಿನಿಂದ ಗುಡಿ ಇರಲಿಲ್ಲ. ನಂತರ ಅದನ್ನು ಇಲ್ಲಿಗೆ ತಂದು ಶಿವಾಲಯದ ಎದುರಿಗೆ ದೊಡ್ಡ ದೇವಾಲಯವನ್ನು ನಿರ್ಮಿಸಿ ಅಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಜನರು ತಮ್ಮ ಹರಕೆ ತೀರಿಸಲು ಸಿಪ್ಪೆಯಿರುವ ತೆಂಗಿನ ಕಾಯಿಗಳನ್ನು ಬಣ್ಣ ಬಣ್ಣದ ಬಟ್ಟೆಗಳಲ್ಲಿ ಕಟ್ಟಿ, ಅವುಗಳನ್ನು ದೇವಾಲಯದ ಆವರಣದಲ್ಲಿ ತೂಗುಹಾಕುವ ಸಂಪ್ರದಾಯವಿದೆ. ಮೊದಲಿಗೆ ಅಷ್ಟೇನೂ ಪ್ರಸಿದ್ಧವಾಗಿರದ ಈ ಮಂದಿರಕ್ಕೆ ಆಂಧ್ರದ ಕರೀಮ್ ನಗರ, ಅದಿಲಾಬಾದ್, ಹೈದ್ರಾಬಾದ್ಗಳಿಂದ ಅಲ್ಲದೆ ಕರ್ನಾಟಕ, ಮಹಾರಾಷ್ಟ್ರಗಳಿಂದಲೂ ಭಕ್ತರು ಬರುತ್ತಾರೆ. 
* * * * * * *

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ