ಭಾನುವಾರ, ಅಕ್ಟೋಬರ್ 9, 2011


"ಭೈರವ  -  ಕಾಲಭೈರವ"

       ಭೈರವನೆಂಬ ಪದಕ್ಕೆ ಹಲವು ನಿಷ್ಪತ್ತಿಗಳಿವೆ.  ಈ ಶಬ್ದದ ಸಾಹಿತ್ಯಕ ಅರ್ಥವನ್ನಷ್ಟೇ ಬೆಂಬೆತ್ತಿ ಹೋದರೆ "ಭೈ" ಎಂಬ ಧಾತುವಿನಿಂದ "ಭಯ", "ಭೀತಿ" ಎಂದು ತಿಳಿಯಬಹುದು.  ಅದೇಕೆ ಭಯ - ಬೀತಿಗಳೆಂದರೆ - ಅತನು ಉಂಟುಮಾಡುವ "ರವ" ಅಥವಾ ಶಬ್ದ. ಭಯಂಕರ ಶಬ್ದವನ್ನು ಉತ್ಪತ್ತಿ ಮಾಡುವುದರಿಂದ ಅತ "ಭೈರವ".  ಕಾಶ್ಮೀ ರದ ಶೈವ ಪಂಥದಲ್ಲಿ ಇನ್ನೊಂದು ಬಗೆಯ ವಿವರಣೆ ದೊರಕುತ್ತದೆ.  ಅದರಂತೆ ಭ=ಭರಣ (ಸಾಕುವವನು, ಭರಿಸುವವನು), ರ=ನಿರ್ವಾಣ (ಮುಕ್ತಿದಾತ) , ವ=ವಮನ (ಸೃಷ್ಟಿಕಾರ್ಯ) ಎಂದಿದೆ. ಇದೆಲ್ಲ  ಏನೇ ಇದ್ದರೂ  ಭೈರವ ದೇವತೆಯ ಸ್ವಾರಸ್ಯವೆಂದರೆ, ಶಿವನ ಸಾತ್ವಿಕ ರೂಪಕ್ಕೆ ತದ್ವಿರುದ್ಧವಾದ ಉಗ್ರ ಸ್ವರೂಪ,  ಈ  ಉಗ್ರತೆಯಾದರೋ ಭಯಪಡಿಸುವ ಉದ್ದೇಶದಿಂದ ತಳೆದುದಲ್ಲ.  ಬದಲಾಗಿ ತಪ್ಪುಮಾಡಿದರನ್ನು ಶಿಕ್ಷಿಸುವ ರೂಪವಿದು.   ಇದಕ್ಕೆ ಪೂರಕವೆನ್ನುವಂತೆ ನೇಪಾಳದ ಹನೂಮಾನ್ ಧೋಕಾದಲ್ಲಿ ಇರುವ ಭೈರವ ಮಂದಿರವು  ಅಲ್ಲಿನ ನ್ಯಾಯಾಲಯವೆಂದೇ ಪ್ರಸಿದ್ಧವಾಗಿದೆ.  17ನೇ ಶತಮಾನದ ಈ ಮಂದಿರದಲ್ಲಿ 12 ಅಡಿ ಎತ್ತರದ ಭವ್ಯ ಭೈರವ ಮೂರ್ತಿಯಿದೆ.  ಈ ಭೈರವ ಮೂರ್ತಿಯೆದರು ಸುಳ್ಳಾಡಿದರೆ ಸಾವು ನಿಶ್ಚಯವೆಂಬ ನಂಬಿಕೆಯಿದೆ.  

ಭೈರವ ದೇವತೆಯ ಅವತರಣ ಕತೆಯಲ್ಲಿ ಬರುವಂತೆ ಆತನು ವಟುಕ ಭೈರವ ಅಥವಾ ಬಾಲ ಭೈರವ.  ಆದರೆ ಆತನು ಕಾಲಭೈರವನೆಂದು ಪ್ರಚುರಗೊಂಡಿದ್ದು ಹೇಗೆ ?

        ಈ ವಿಷಯದಲ್ಲಿ ಅಂತರ್ಜಾಲದಲ್ಲಿ ಒಬ್ಬರು ತಮ್ಮ ಅನುಮಾನವನ್ನು ಹೀಗೆ ವ್ಯಕ್ತಪಡಿಸಿದ್ದಾರೆ.  ಭೈರವನು ತನಗೆ ಒದಗಿದ ಬ್ರಹ್ಮ ಹತ್ಯಾ ದೋಷವನ್ನು ಕಳೆದುಕೊಳ್ಳಲು ವ್ರತ ನಿಷ್ಠನಾಗಿ ಅಲೆದನು ಎನ್ನುವುದಕ್ಕೂ, ಕಾಲನೆಂಬ ಪ್ರತ್ಯಯವು ಅವನಿಗೆ ತಳುಕು ಹಾಕಿಕೊಡಿದ್ದಕ್ಕೂ ಎಲ್ಲಿಯ ಸಂಬಂಧ ಎಂದು ಪ್ರಶ್ನಿಸಿರುವರು. ಈ ಪ್ರಶ್ನೆಗೆ ಇನ್ನೋರ್ವರು ನೀಡಿರುವ ಸಮಾಧಾನ ಹೀಗಿದೆ. "ಸಂಸ್ಕೃತ ಶಬ್ದ "ಕಾಲ"  ಎನ್ನುವುದಕ್ಕೆ ಸಮಯ, ಯಮ ಹಾಗೂ ಕಪ್ಪು ಎಂಬೆಲ್ಲ ಅರ್ಥಗಳಿವೆ.  ಸಂದರ್ಭಾನುಸಾರ ಇದರ ಅನ್ವಯ ಮಾಡಿದಾಗ ಸೂಕ್ತ ಅರ್ಥಗಳು ದೊರೆಯುತ್ತವೆ ಅಲ್ಲದೆ ಭೈರವನ್ನು "ಮಹಾಕಾಲ" ಎಂದು ನಿರ್ದೇಶಿಸಲಾಗಿದೆ. ಈ ಪದವನ್ನು "ಕಡುಗಪ್ಪು" ಎಂದು ಅರ್ಥೈಸಬಹುದು.  ಹೀಗಾಗಿ ಕಾಲಭೈರವನೆಂದರೆ ಕಡುಗಪ್ಪು ಬಣ್ಣದ ಭೈರವ ಎಂದು ಗ್ರಹಿಸುವುದೇ ಸೂಕ್ತವೆನುವುದು ನನ್ನ ಅಭಿಮತ," ಎಂದು ತಿಳಿಸಿದ್ದಾರೆ.  ಈ ಚರ್ಚೆಗಳಲ್ಲಿ ತಾವು ನಂಬಿದ ದೇವನ ಆಂತರ್ಯವನ್ನು  ಅರಿಯಲು ನಡೆಸಿರುವ ಯತ್ನಗಳು ಮೆಚ್ಚುವಂತಿದೆಯಲ್ಲವೆ?


ಶಂಕರಾಚಾರ್ಯಕೃತ "ಕಾಲಭೈರವಾಷ್ಟಕ" ತುಂಬ ಜನಪ್ರಿಯ.  ಇದರ 8 ಶ್ಲೋಕಗಳಲ್ಲಿ ಎಲ್ಲಿಯೂ ಕಾಲನ/ಕಾಲದ ಪ್ರಸ್ತಾಪವಿಲ್ಲದಿವುದು ವಿಶೇಷ.  ಇದೇ ರೀತಿ ಮುಂದಿನ ಪ್ರಕಟಣೆಗಳಲ್ಲಿ ಬರಲಿರುವ ಸಾಹಿತ್ಯವನ್ನಿಷ್ಟು ಗಮನದಿಂದ ಅವಲೋಕಿಸಿ, ಅಲ್ಲಿ ಎಲ್ಲಿಯೂ ಕಾಲ ಅಥವಾ ಸಮಯವೆಂಬ ಅರ್ಥದಲ್ಲಿ ಭೈರವನ ಹೆಸರು ಬಳಕೆಯಾಗಿಲ್ಲ. ಆದರೂ ಭೈರವನು "ಕಾಲಭೈರವ"ನೆಂದೇ ಜನಪ್ರಿಯನಾಗಿರುವುದು ಮತ್ತೊಂದು ವಿಶೇಷ.

ಇಂಥದೇ ವಿಶೇಷವು ಆತನ ವಾಹನ ನಾಯಿಯನ್ನು ಕುರಿತಾಗಿದೆ.  ಆದನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ