ಮಂಗಳವಾರ, ಜನವರಿ 1, 2013

ಹೀಗೊಬ್ಬ ಭೈರವ ಭಕ್ತ


ಆತ್ಮೀಯ ಓದುಗರೆಲ್ಲರಿಗೂ ನೂತನ ವರ್ಷದ ಶುಭಾಶಯಗಳು 


ಸಿದ್ಧರಾಮಪುರದ ಕಾಲಭೈರವ ಮಂದಿರ



ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಬುಕ್ಕರಾಯಸಮುದ್ರ ಮಂಡಲದಲ್ಲಿ ಒಂದು ಪುಟ್ಟ ಗ್ರಾಮವಿದೆ. ಅದರ ಹೆಸರು ಸಿದ್ಧರಾಮಪುರ. ಅಲ್ಲಿ ಒಂದು ಭೈರವನ ಚಿಕ್ಕ ದೇವಾಲಯವಿದೆ. ಅದು ತನ್ನ ಐತಿಹಾಸಿಕತೆಯಿಂದಲಾಗಲೀ, ಶಿಲ್ಪಕಲಾವೈಭವದಿಂದಾಗಲೀ ಪ್ರಸಿದ್ಧವಾಗಲಿಲ್ಲ. ಬದಲಾಗಿ ಭೈರವನ ಪರಮ ಭಕ್ತನೊಬ್ಬ ಮಾಡಿದ ಸಾಧನೆ ಮತ್ತು ಅವರ ಜನೋಪಯೋಗೀ ಕೆಲಸಗಳಿಂದ ಅದೀಗ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಇದರ ನಿರ್ಮಾತೃ ಇದೇ ಗ್ರಾಮದ ನಿವಾಸಿಯಾಗಿದ್ದ ಶ್ರೀ ತಿಪ್ಪಲೂರು ಪೆದ್ದ ವೆಂಕಟರೆಡ್ಡಿ. ಅವರು ಭೈರವನ ಪರಮಭಕ್ತರಾಗಿದ್ದರು. ಭೈರವನ ಸಾಧಕರು ಪಡೆದ ಫಲಗಳು ಸಾಮಾಜಿಕವಾಗಿ ಮಾತ್ರವಲ್ಲದೆ, ಮೂಕಪಶುಗಳ ನೆರವಿಗೆ ಹೇಗೆ ಒದಗಿ ಬಂದಿತೆನ್ನುವುದನ್ನು ಹೇಳುವ ಉದ್ದೇಶದಿಂದ ಇಲ್ಲಿ ಆ ಬಗ್ಗೆ ಒಂದು ಪ್ರಸ್ತಾಪವಿದೆ. ಭೈರವನ ಬಗ್ಗೆ ಅಪಾರ ಶ್ರದ್ಧೆ ಗೌರವಗಳನ್ನು ಹೊಂದಿದ್ದ ಅವರಿಗೆ ಭೈರವನ ಕೃಪೆಯಾಗಿತ್ತೆಂದು ಇಲ್ಲಿನ ಹಲವು ನಿವಾಸಿಗಳು ನಂಬಿದ್ದಾರೆ. ಅದರಂತೆ ಪೆದ್ದ ವೆಂಕಟರೆಡ್ಡಿಯವರ ಜೀವನದಲ್ಲಿ ನಡೆದ ಅನೇಕ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ. 


ರೆಡ್ಡಿಯವರು ಪಶುವೈದ್ಯವನ್ನು ಅರಿತಿದ್ದರು. ಅವರದು ಆಯುರ್ವೇದ ಪದ್ಧತಿ. ತಮ್ಮ ಗ್ರಾಮದ ಆಸುಪಾಸಿನಲ್ಲಿ ಯಾವುದೇ ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದರೂ, ಅವುಗಳನ್ನು ಸೂಕ್ತವಾಗಿ ಉಪಚರಿಸುತ್ತಿದ್ದರು. ಇದಕ್ಕೆಂದು ಅವರು ಪಡೆಯುತ್ತಿದ್ದ ಸಂಭಾವನೆಯೆಂದರೆ ಒಂದು ತೆಂಗಿನ ಕಾಯಿಯ ಬೆಲೆ ಮಾತ್ರ. ಅದನ್ನೂ ಅವರು ಭೈರವನ ನಿವೇದನೆಗೆಂದೇ ಬಳಸುತ್ತಿದ್ದರು. ತಮ್ಮ ಅಲೌಕಿಕ ಸಾಧನೆಯಿಂದಾಗಿ ಅವರಿಗೆ ಎಲ್ಲ ಪಶುಗಳ ರೋಗಗಳು ತಾನಾಗಿಯೇ ತಿಳಿಯುತ್ತಿತ್ತು. ಅವುಗಳ ವೇದನೆಯನ್ನು ನಿವಾರಿಸಲು ಗಂಟೆಗಟ್ಟಲೆ ಸಾಧನೆ ಮಾಡಿ ಶಕ್ತಿಯನ್ನು ಪಡೆಯುತ್ತಿದ್ದರು. ಅದೆಲ್ಲದರ ಮೂಲ ಶಕ್ತಿ ಭೈರವನೇ ಎಂದು ನಂಬಿದ್ದರು. ಶ್ರೀ ರೆಡ್ಡಿಯವರು ತಮ್ಮ ತೊಂಭತ್ತನೆಯ ವಯಸ್ಸಿನಲ್ಲಿ ತೀರಿಕೊಂಡರು. ಅವರ ಸಮಾಧಿಯನ್ನು ದೇವಾಲಯದ ಸಮೀಪವೇ ನಿರ್ಮಿಸಿ, ಯೋಗಿಗಳು, ಸನ್ಯಾಸಿಗಳಿಗೆ ನಡೆಸುವ ಮರಣೋತ್ತರ ವಿಧಿಗಳನ್ನು ಆಚರಿಸಿ, ಗೌರವ ಸಲ್ಲಿಸಲಾಯಿತು. ಗ್ರಾಮದ ಹೊರವಲಯದಲ್ಲಿ ಕಳೆದ ೨೯ರ ಏಪ್ರಿಲ್‌ನಲ್ಲಿ ಇಲ್ಲಿದ್ದ ಭೈರವನ ಚಿಕ್ಕ ಗುಡಿಯನ್ನು ಪುನರ್ ನಿರ್ಮಾಣಗೊಳಿಸಿ ಲೋಕಾರ್ಪಣೆ ಮಾಡಲಾಯಿತು. 

* * * * * * *

1 ಕಾಮೆಂಟ್‌: