ಮಂಗಳವಾರ, ಮಾರ್ಚ್ 3, 2015

“ಭೈರವ ನಾಣ್ಯ”ದ ಸುತ್ತಮುತ್ತ............... !

ಶೆಟ್ಟಿಕೆರೆ ಶ್ರೀ ಕಾಲಭೈರವ ಮಂದಿರದಲ್ಲಿ ನಡೆಯಲಿರುವ ಉತ್ಸವದ ಆಹ್ವಾನ ಪತ್ರಿಕೆ ಈಗಷ್ಟೇ ನನಗೆ ತಲುಪಿತು. ಇದರಲ್ಲಿ ಲಭ್ಯವಾದ ಈ ಮೇಲ್ ವಿಳಾಸಗಳಿಗೂ ಈ ಬ್ಲಾಗ್ ತಲುಪುವಂತಾಗುತ್ತಿರುವುದು ಸಂತೋಷದ ಸಂಗತಿ. ಆಸಕ್ತರು ಬ್ಲಾಗ್ ನಲ್ಲಿ ಪ್ರಕಟಿತವಾಗಿರುವ ಹಿಂದಿನ ಲೇಖನಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ವಿನಂತಿ. ಈ ವಿಷಯದ ಕುರಿತಾಗಿ ತಮ್ಮಲ್ಲಿ ಮಾಹಿತಿಗಳಿದ್ದಲ್ಲಿ ಬ್ಲಾಗ್ ನಲ್ಲಿ ಪ್ರಕಟಿಸುವ ಅವಕಾಶವಿದೆ. ನನ್ನ ಜಿ-ಮೇಲ್ ವಿಳಾಸಕ್ಕಾಗಲೀ, ದೂರವಾಣಿ ಸಂಖ್ಯೆ 99866 72483 ಯನ್ನಾಗಲೀ ಸಂಪರ್ಕಿಸಲು ಕೋರುತ್ತೇನೆ.
- ಶಂಕರ ಅಜ್ಜಂಪುರ
---------------------------------------------------------------------------------------------------------

ಇಟಗಿಯ ಮಹಾದೇವ ಮಂದಿರದ ಕಂಬವೊಂದರಲ್ಲಿ ಕಂಡುಬರುವ ಒಂದೂವರೆ ಅಡಿ ಎತ್ತರದ ಈ ಶಿಲ್ಪವು ಅತ್ಯಂತ
ರಮಣೀಯವಾಗಿದೆ. ಎಡಗಾಲನ್ನು ಒಡೆದುಹಾಕಲಾಗಿದೆ. ಇಂಥ ಅನೇಕ ರಚನೆಗಳು ಈ ದೇಗುಲದಲ್ಲಿವೆ.



ಇತ್ತೀಚೆಗೆ ಅಂತರ್ಜಾಲದಲ್ಲಿ ಅಲೆಯಲ್ಲಿ ತೇಲುತ್ತಿರುವಾಗ ಭೈರವನ ಹೆಸರಿರುವ ಬಂಗಾರದ ನಾಣ್ಯಗಳು ಚಾಲ್ತಿಯಲಿದ್ದವು ಎಂದು ತಿಳಿಯಿತು. ಅದರ ಎಳೆಗಳನ್ನು ಹಿಡಿದು ಹೊರಟಾಗ ಸಂಗ್ರಹವಾದ ವಿವರಗಳು ಇಲ್ಲಿವೆ.
ದಕ್ಷಿಣ ಭಾರತದಲ್ಲಿ ದೊರೆತ ನಾಣ್ಯದ ಬಗ್ಗೆ ಅದರ ಸಂಗ್ರಾಹಕರು ಹೀಗೆ ಹೇಳಿಕೊಂಡಿದ್ದಾರೆ :
 "ನನಗೆ 11 ರಿಂದ 13ನೇ ಶತಮಾನಕ್ಕೆ ಸೇರಿರಬಹುದಾದ ಒಂದು ಬಂಗಾರದ ನಾಣ್ಯ ದೊರೆಯಿತು. ಅದರ ಮೇಲೆ ತೆಲುಗು-ಕನ್ನಡ ಮಿಶ್ರಿತ ಲಿಪಿಯಲ್ಲಿ ಭೈರವ ಎಂದು ಬರೆಯಲಾಗಿದೆ. ಈ ನಾಣ್ಯವು ಭುಜಬಲರೆಂದು ಕರೆದುಕೊಳ್ಳುತ್ತಿದ್ದ ತೆಲುಗಿನ ಚೋಳರಾಜರಿಗೆ ಸೇರಿರಬಹುದೆಂದು ನನ್ನ ಅನುಮಾನ. ಅಲ್ಲದೆ ಇದರಲ್ಲಿರುವ ಭೈರವ ಎಂಬ ಪದಕ್ಕೆ ಶಿವನೆಂಬ ಅರ್ಥವಲ್ಲದೆ ಬೇರೇನಾದರೂ ಅರ್ಥಗಳಿದ್ದರೆ ಅದನ್ನು ತಿಳಿದವರು ನನಗೆ ವಿವರಿಸಲು ಕೋರುತ್ತೇನೆ" ಎಂದು ಬರೆದಿದ್ದರು.
ಈ ವಿಷಯದ ಬಗ್ಗೆ ಅಷ್ಟೇ ಆಸ್ಥೆಯುಳ್ಳ ಸಜ್ಜನರೊಬ್ಬರು ಬರೆದ ಉತ್ತರ ಹೀಗಿದೆ :
"ಭೈರವ ನೆಂಬ ಪದಕ್ಕೆ ಶಿವನೆಂಬ ಅರ್ಥವಲ್ಲದೆ ಬೇರೊಂದು ಅರ್ಥವೂ ಇದೆ. ಒಂದೂವರೆ ಲಕ್ಷವರ್ಷಗಳ ಹಿಂದೆಯೂ ಭಾರತದಲ್ಲಿ ಶೈವ ಪಂಥ ಪ್ರಚಲಿತವಿತ್ತು. ಭೈರವ ಪಂಥಕ್ಕೆ ತನ್ನದೇ ವಿಶಿಷ್ಠ ಸಂಪ್ರದಾಯ, ಸಿದ್ಧಾಂತ ಹಾಗೂ ಆಚರಣೆಗಳಿವೆ. ಅದರ ಉಪಾಸಕರನ್ನು ಭೈರವರೆಂದೇ ಸಂಬೋಧಿಸಲಾಗುತ್ತಿತ್ತು. ಅಂತೆಯೇ ಭೈರವೀ ಯೋಗಿನಿಯರೂ ಇದ್ದರು. ತಮಿಳುನಾಡಿನಲ್ಲಿ ಒಂದು ಕಾಲಕ್ಕೆ ಇವರ ಸಂಖ್ಯೆ ಗಣನೀಯವಾಗಿತ್ತು. ಕಾಳಾಮುಖರು, ಪಾಶುಪತರು, ಮಹಾವಿರಾಧಿಗಳ ಜತೆ ಇವರ ಸಂಪರ್ಕವಿತ್ತು.
ಪೆರಿಯಪುರಾಣವು ತಮಿಳಿನ ಪುರಾತನ ಗ್ರಂಥ. ಅದರಲ್ಲಿ "ಸಿರುತ್ತೊಂಡ ನಾಯನಾರ್ ಪುರಾಣ"ವೆಂಬ ಅಧ್ಯಾಯದಲ್ಲಿ ಶಿವನು ಭೈರವ ಪಂಥಕ್ಕೆ ಸೇರಿದವನೆನ್ನಲು ಉಲ್ಲೇಖಿಸಿರುವ ಪಾಠದ ಸಾಲುಗಳು ಹೀಗಿವೆ :
              ತುಡಿ ಸೇರ್ ಕರತ್ತು ಬಯಿರವರ್ |
              ಪೆರಿಯ ಬಯಿರವ ಕೋಲಪ್ಪೆರುಮಾನ್ ||
              ಪರಿವು ಕಂಡ ಬಯಿರವರುಮ್ |
              ಪೆರಿಯ ಬಯಿರವತ್ತೊಂಡರ್ ||
ಮಹಾನ್ ಸಾಧಕರಾಗಿದ್ದ ಭೈರವರು, ರಾಜಗುರುಗಳೂ ಆಗಿದ್ದರು. ಮಲಯ ದ್ವೀಪದಲ್ಲಿ ಇವರು ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಈ ಪ್ರಾಂತದಲ್ಲಿ ಶೈವಾರಾಧನೆ ಮತ್ತು ಶಕ್ತಿಪಂಥಗಳು ಉತ್ತುಂಗಕ್ಕೆ ತಲುಪಿದ್ದವು. ಇಂದಿನ ಮಲಯ ಮಾಂತ್ರಿಕರ ವಾಮಾಚಾರ ಪದ್ಧತಿ, ಅಚರಣೆಗಳಲ್ಲಿ ಭೈರವರ ಪ್ರಭಾವವನ್ನು ಗುರುತಿಸಬಹುದು.
ಭೈರವ ಪಂಥವನ್ನು ಅನುಸರಿಸುತ್ತಿದ್ದ ರಾಜರ ಹೆಸರಿನ ಮುಂದೆ ಭೈರವ ಎಂಬ ಪದ ಪ್ರತ್ಯಯವಿರುತ್ತಿತ್ತು. ಅವರು ತಮ್ಮ ನಾಣ್ಯಗಳಲ್ಲಿ ಖಟ್ವಾಂಗ – ಎಂದರೆ ತಲೆಬುರುಡೆಯ ಹಿಡಿಕೆಯಿರುವ ದಂಡವನ್ನು ಚಿತ್ರಿಸಿರುತ್ತಿದ್ದರು.
ಕೆಲವೊಂದು ಸ್ಥಳನಾಮಗಳಲ್ಲಿ ಭೈರವನ ಹೆಸರು ಸೇರಿಹೋಗಿ, ಈಗ ಅಪಭ್ರಂಶಗೊಂಡಿರುವ ಉದಾಹರಣೆಗಳಿವೆ. ಇಂದು ಈರೋಡ್ ಎಂದು ಪ್ರಸಿದ್ಧವಾಗಿರುವ ಸ್ಥಳನಾಮ ಇಂಥ ಪ್ರಭಾವದಿಂದಲೇ ಉಂಟಾಗಿದೆ. ಹಿಂದೆ ಅಲ್ಲಿ ಇರು ಒಟ್ಟೀಶ್ವರರ್ ಎಂಬ ಶಿವ ದೇವಾಲಯವಿತ್ತು. ಅದೇ ಅಪಭ್ರಂಶಗೊಂಡು ಇರೊಟ್ಟು, ಇರೊಡು, ಈರೋಡು ಎಂದಾಯಿತು.
ಇಂದಿಗೂ ಭೈರವರು ಇರುವಂತೆಯೇ ಭೈರವಿಯರೂ ಭಾರತದ ಹಲವು ಭಾಗಗಳಲ್ಲಿ ಇದ್ದಾರೆ. ಅವರೆಲ್ಲರ ಸಂಗಾತಿ ನಾಯಿ. ಭೈರವ ಗಾಯತ್ರಿಯಲ್ಲಿ "ಶ್ವಾನ ಧ್ವಜಾಯ ವಿದ್ಮಹೇ" ಎಂದು ವರ್ಣಿಸಲಾಗಿದೆ.
ನಾಣ್ಯಗಳ ವಿಷಯಕ್ಕೆ ಬಂದರೆ, ಅಂಥ ನಾಣ್ಯಗಳು ಆಂಧ್ರದ ಗೋದಾವರೀ, ನೆಲ್ಲೂರು ಜಿಲ್ಲೆಗಳಲ್ಲಿ ದೊರೆತ ಉದಾಹರಣೆಗಳಿವೆ. ಕನಿಷ್ಠ ಎರಡು ಜಾಗಗಳಲ್ಲಿಯಾದರೂ "ಶ್ರೀ" ಎಂದು ನಮೂದಿಸಿರುವುದು ಕಂಡುಬರುತ್ತದೆ.
ಡಾ. ಪರಮೇಶ್ವರೀ ಲಾಲ್ ಗುಪ್ತರು "ಕಾಯಿನ್ಸ್" ಎಂಬ ಗ್ರಂಥ ರಚಿಸಿದ್ದಾರೆ. ಅದರಲ್ಲಿ 192 ರಿಂದ 203 ಪುಟಗಳಲ್ಲಿ ಇವುಗಳ ವಿವರಣೆ ದೊರೆಯುತ್ತದೆ. ಅವುಗಳನ್ನು ತೆಲುಗು ಚಾಲುಕ್ಯರ ಅಡಿಯಲ್ಲಿ ಹೆಸರಿಸಲಾಗಿದೆ. ವೆಂಗಿ ಚಾಲುಕ್ಯರ ಅಥವಾ ತೆಲುಗು ಚಾಲುಕ್ಯರ ನಾಣ್ಯಗಳಲ್ಲಿ ವರಾಹದ ಚಿಹ್ನೆ ಕಂಡುಬರುವುದು ಸಾಮಾನ್ಯ. ಅದರೆ ತ್ರಿಕೋಣ ಚಿಹ್ನೆಯನ್ನು ದೇವಾಲಯದ ಗೋಪುರದ ಸಂಕೇತವೆಂದು ತುಂಬ ಮಂದಿ ತಿಳಿಯುತ್ತಾರೆ. ವಾಸ್ತವವೆಂದರೆ ಅದು ಬಾಣದ ಮೊನೆ ಎಂದು ಗ್ರಹಿಸುವುದೇ ಸೂಕ್ತ".

* * * * * * *
ಮಾಹಿತಿ ಕೃಪೆ - ಅಂತರ್ಜಾಲ