ಮಂಗಳವಾರ, ಜೂನ್ 2, 2015

ಸೀತಿ ಬೆಟ್ಟದ ಕಾಲಭೈರವ ಮಂದಿರ

ಸೀತಿ ಬೆಟ್ಟದ ವಿಹಂಗಮ ದೃಶ್ಯ
ಸೀತಿ ಬೆಟ್ಟದ ಕಾಲಭೈರವ ಮಂದಿರ
   ಭಾರತೀಯ ಪುರಾಣಗಳಲ್ಲಿ ಅನೇಕ ಮಿಥ್ಯೆಗಳಿವೆ. ಅದಕ್ಕೆ ಕೋಲಾರದ ಸೀತಿ ಬೆಟ್ಟ ಕೂಡ ಹೊರತಲ್ಲ. ಈ ದೇಗುಲವು ಬೆಟ್ಟದ ಮೇಲೆ ಇದ್ದು, ಅದಕ್ಕೊಂದು ಆಸಕ್ತಿದಾಯಕ ಕಥೆ ಕೂಡ ಸೇರಿಕೊಂಡಿದೆ. ಭಸ್ಮಾಸುರನ ತೀವ್ರ ತಪಸ್ಸಿನಿಂದ ಸಂತೃಪ್ತನಾದ ಶಿವ ಅವನಿಗೆ ತನ್ನ ಆಯ್ಕೆಯ ವರವೊಂದನ್ನು ಕೇಳಲು ಹೇಳಿದ. ಆನಂದ ತುಂದಿಲನಾದ ಭಸ್ಮಾಸುರ ತಾನು ಯಾರನ್ನೂ ಬೂದಿ ಮಾಡುವ ಶಕ್ತಿ ಕೊಡು ಎಂದು ಕೇಳಿದ. ಶಿವನೇನೋ ವರ ನೀಡಿದ. ತಕ್ಷಣವೇ ಅಲ್ಲಿಂದ ಓಡಿಹೋದ. ಏಕೆಂದರೆ ತಾನು ನೀಡಿದ ವರ ಪ್ರಯೋಗ ತನ್ನ ಮೇಲೇ ಆಗಬಹುದೆಂಬ ಶಂಕೆ ಅವನದು. ಭಸ್ಮಾಸುರನ ಸಂಹಾರಕ್ಕೆಂದು ವಿಷ್ಣು ಮೋಹಿನಿಯ ರೂಪ ತಳೆದು ಆತನನ್ನು ನಿಗ್ರಹಿಸುವ ಉಪಾಯ ಹೂಡಿದ. ಇಲ್ಲಿಯವರೆಗಿನ ಕಥೆ ನಮಗೆ ತಿಳಿದಿರುವುದೇ. ಆದರೆ ಸೀತಿ ಬೆಟ್ಟದ ಭೈರವನಿಗೆ ಸಂಬಂಧಿಸಿದಂತೆ ಮುಂದಿನ ಸ್ವಾರಸ್ಯ ಹೀಗಿದೆ.  
  ದುರದೃಷ್ಟವಶಾತ್ ಭಸ್ಮಾಸುರನಿಗೆ ನೆರವು ನೀಡಿದ ಒಬ್ಬ ರೈತ ಶಿವನ ಕೋಪಕ್ಕೆ ತುತ್ತಾದ. ಅವನಿಗೆ ದಾರಿದ್ರ್ಯ ಬರಲೆಂದು ಶಿವ ಶಪಿಸಿದ. ಆಗ ರೈತ ಶಿವನ ಮತ್ತೊಂದು ರೂಪವೇ ಆದ ಕಾಲಭೈರವನನ್ನು ಸ್ಮರಿಸಿ, ತನಗೆ ಬಂದೊದಗಿದ ಕಷ್ಟವನ್ನು ಪರಿಹರಿಸಬೇಕೆಂದು ಬೇಡಿದ. ಆಗ ಕಾಲಭೈರವನ ಮಾತಿನಂತೆ, ರೈತ ತನ್ನ ಹೆಬ್ಬೆರಳನ್ನು ಶಿವನಿಗೆ ಅರ್ಪಿಸಲು ತಿಳಿಸಿದ. ರೈತ ಅದನ್ನೂ ಅನುಸರಿಸಿದ. ಇಲ್ಲಿ ಮಹಾಭಾರತದ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಕೇಳಿ ಪಡೆದ ಕಥೆ ನೆನಪಾದೀತು. ಇದು ಪಾರಂಪರಿಕವಾಗಿ ಮುಂದುವರೆದು, ಆ ರೈತನ ಪೀಳಿಗೆಯವರು ಮುಂದೆ ತಮ್ಮ ಹೆಬ್ಬೆರಳನ್ನು ಶಿವನಿಗೆ ಅರ್ಪಿಸುವುದನ್ನು ರೂಢಿಸಿಕೊಂಡರು. ಹೀಗಾಗಿ ಅವರ ವಂಶದವರಿಗೆ ಬೆರಳು ಕೊಡುವ ಒಕ್ಕಲಿಗರು ಎಂದೇ ಹೆಸರಾಯಿತು.

   ಸೀತಿ ಬೆಟ್ಟದ ಎದುರಿಗೆ ಇರುವ ಬೆಟ್ಟವನ್ನು ಭಸ್ಮಾಸುರನ ಬೆಟ್ಟವೆಂದೇ ಕರೆಯುವರು. ಅನೇಕರು ಹೇಳುವಂತೆ, ಈ ಬೆಟ್ಟದ ಮೇಲೆ ಬಿದ್ದ ಮಳೆಯ ನೀರು ನೆಲವನ್ನು ತಲುಪದೇ, ಅಲ್ಲಿರುವ ಬೂದಿಯಲ್ಲೇ ಇಂಗಿಹೋಗುತ್ತದಂತೆ.
ತೀರ ಸರಳ ರಚನೆಯ, ದ್ರಾವಿಡ ಶೈಲಿಯ ಈ ಮಂದಿರದಲ್ಲಿ ಎರಡು ಪ್ರವೇಶದ್ವಾರಗಳನ್ನು ಹೊಂದಿರುವ ಮುಖ ಮಂಟಪ, ಒಂಭತ್ತು ಕಂಭಗಳುಳ್ಳ ನವರಂಗ ಹಾಗೂ ಗರ್ಭಗುಡಿಗಳಿವೆ. ನವರಂಗದ ಮೇಲ್ಭಾಗದ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ಸುಂದರ ಕೆತ್ತನೆಯಿದೆ. ಸುತ್ತುವರೆದ ಕಂಭಗಳನ್ನು ಲೇತ್ ತಂತ್ರಜ್ಞಾನ ಬಳಸಿ ಸುಂದರವಾಗಿ ಕಡೆಯಲಾಗಿದೆ.ದೇವಾಲಯದ ಎರಡನೇ ಭಾಗದಲ್ಲಿ ಚಿಕ್ಕ ಗುಡಿಗಳಿದ್ದು, ಅಲ್ಲಿ ಶ್ರೀಪತೀಶ್ವರ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

   ಏಕೆಂದರೆ ಶಿವನು ಭಸ್ಮಾಸುರನಿಂದ ಅಡಗಿಕೊಳ್ಳಲು ಗುಹೆಯ ಮರೆಯನ್ನು ಆಶ್ರಯಿಸಿದನೆಂಬ ಕಲ್ಪನೆಯು ಸಾಕಾರವಾಗುವಂತೆ ಕಾಣುವ ಈ ಮಂದಿರವನ್ನು ಗುಹೆಯ ರೀತಿಯಲ್ಲಿ ಉದ್ದೇಶ ಪೂರ್ವಕವಾಗಿ ರೂಪಿಸಲಾಗಿದೆ.

ಸಮೀಪದಲ್ಲೇ ಕಂಡು ಬರುವ ಇತರ ಚಿಕ್ಕ ದೇಗುಲಗಳಲ್ಲಿ ಪಾರ್ವತಿ, ಗಣೇಶ, ಸುಬ್ರಹ್ಮಣ್ಯ ಮತ್ತು ಚಾಮುಂಡೇಶ್ವರಿಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಕಾಲಭೈರವನ ದೇಗುಲಗಳಲ್ಲಿ ಕಂಡುಬರುವಂತೆ ಇಲ್ಲಿಯೂ ಚಂಡಿಕೇಶ್ವರನನ್ನು ವಿಗ್ರಹದ ಬದಲಾಗಿ ರೇಖಾಚಿತ್ರದ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಪುರಾತನ ಬ್ರಾಹ್ಮೀ ಲಿಪಿಯಿಂದ ಪ್ರೇರಿತವಾದ ಗ್ರಂಥ ಭಾಷೆಯೆನ್ನುವ ಅಕ್ಷರಗಳಲ್ಲಿ ಬರೆದ ಅಪರೂಪದ ಶಾಸನವಿದೆಯಾದರೂ, ಇದನ್ನು ಇದುವರೆಗೆ ಯಾರೂ ಅಧ್ಯಯನ ಮಾಡುವ ಗೋಜಿಗೆ ಹೋಗಿಲ್ಲ. ಹಾಗೊಮ್ಮೆ ಯಾರಾದರೂ ಆಸಕ್ತಿಯಿಂದ ಮಾಡುವಂತಾದರೆ, ಈ ದೇಗುಲದ ಬಗೆಗೆ ಇನ್ನಷ್ಟು ಪ್ರಮುಖ ಮಾಹಿತಿಗಳು ದೊರೆಯಬಹುದು.
* * * * * * *

ಮಾಹಿತಿ ಕೃಪೆ : ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ